Oplus_131072

 

a collage of a bus crash

” ಕುರ್ರ್ s….! ದಢ್ ..! ಧಡಲ್ ..! ” ಅನ್ನೋ ಭೀಕರ ಶಬ್ದಕ್ಕೆ  ‘ಬುಸ್ಸಕನೆ’ ಎದ್ದು ಬೆಚ್ಚಿ ಬಿದ್ದ ಆನಂದರಾಯರು ಕನವರಿಸುತ್ತಾ ಕುಳಿತು ಬಿಟ್ಟರು. ಎದೆ ಒಂದೇ ಸವನೆ ‘ ಧಡಧಡ’ ಹೊಡೆದುಕೊಳ್ಳತೊಡಗಿತ್ತು.
ಅಮವಾಸ್ಯೆಯ ದಿನವಾಗಿದ್ದರಿಂದ ಸುತ್ತಲೆಲ್ಲ ಕತ್ತಲು ಕವಿದಿತ್ತು. ” ಇದೇನು ದೆವ್ವಗಳ ಶಬ್ದವೋ !
ಏನ ಕತೆಯೋ ಏನೋ !ಹೀಗೆಕಾಯಿತ್ತು ? ಅಂತ ತನ್ನಲ್ಲೆ ತಾನು ಪ್ರಶ್ನಿಸಿಕೊಂಡರು.ಆದರೂ ಭಯ ಹೋಗಲಿಲ್ಲ. ಎದೆಯ ಬಡಿತ ಮತ್ತೆ ಮತ್ತೆ ಹೊಡೆದುಕೊಳ್ಳುತ್ತಲೆ ಇತ್ತು.ವಿದ್ಯುತ್ ದೀಪಗಳು ಆರಿದರಿಂದ ಮನೆತುಂಬ ಕತ್ತಲು ಆವರಿಸಿದೆ. ಮಲಗಿರುವ ಹಾಸಿಗೆಯ ತಲೆದಿಂಬು ಕೆಳಗಿಟ್ಟಿದ ಬೀಡಿ ತಗೊಂಡು ಕಡ್ಡಿ ಗೀರಿ ಒಂದ್ ದಮ್ಮ ಎಳೆದು ‘ ಉಫ್’ ಅಂತ ಹೊಗೆ ಹೊರಬಿಡುತ್ತಿದಂತೆ ಮನೆಯ ಉತ್ತರದ ದಿಕ್ಕಿನ ರಸ್ತೆಯ ಕಡೆಗೆ ಜನರ ಆಕ್ರಂದನ ಕೇಳಿ ಬರತೊಡಗಿತು.
” ಇದೇನು ಇಷ್ಟೊತ್ತಿನಲ್ಲಿ ಅಳುವ ಶಬ್ದ ? ಅಂತ ಭಯಗೊಂಡ ರಾಯರು ಬೀಡಿ ತುದಿಯ ಮಂದ ಬೇಳಕಿನಡಿಯಲ್ಲಿ ಕೈ ಗಡಿಯಾರ ನೋಡಿದರು.ಸಮಯ ಮಧ್ಯರಾತ್ರಿ ಒಂದುವರೆಯಾಗಿತ್ತು.
ಹಾ ! ಇಷ್ಟೊತ್ತಿನಲ್ಲಿ ಏನಿದು ಶಬ್ದ ? ಯಾರ ಅಳು ? ಅಂತ ತಿಳಿದುಕೊಳ್ಳುವ ಕುತೂಹಲ ಒಂದೆಡೆಯಾದರೆ ಇದೇನು ದೆವ್ವ- ಭೂತವೋ ? ಎನ್ನುವ ಭಯ ಮತ್ತೊಂದೆಡೆ ಕಾಡತೊಡಗಿತ್ತು.ಯಾಕೆಂದರೆ ಆನಂದರಾಯರಿಗೆ
ದೆವ್ವ- ಭೂತಗಳೆಂದರೆ ಮೊದಲಿನಿಂದಲೂ ತುಂಬ ಭಯ.ಹಾಗಾಗಿ ಅಮವಾಸ್ಯೆ ಇರುವುದರಿಂದ ಮನಸ್ಸಿನಲ್ಲಿ ಎನೆಲ್ಲ ವಿಚಾರಗಳು ಬಂದು ಹೋದವು. ಆದರೆ ಆ ಅಳುವ ವ್ಯಕ್ತಿಯ ರೋಧನ ಮುಗಿಲು ಮುಟ್ಟಿತ್ತು. ಏನಾಗಿರಬಹುದು ? ಯಾಕಿಷ್ಟು ಶೋಕ ? ಅಂತ ಧೈರ್ಯ ತಂದುಕೊಂಡ ರಾಯರು ಮನೆಯ ಅಂಗಳದಲ್ಲಿ ನಿಂತು ಉತ್ತರ ದಿಕ್ಕಿನ NH9 ರಸ್ತೆಯ ಕಡೆಗ ದೃಷ್ಟಿ ಹಾಯಿಸಿದರು.ಅಲ್ಲಿ ಒಂದು ತುಂಬಾ ಭೀಕರ ಅಪಘಾತವಾದ ದೃಶ್ಯ ಕಾಣಿಸಿತು. ಆ ರಸ್ತೆಯುದ್ದಕ್ಕೂ   ಸಂಚರಿಸುವ ವಾಹನಗಳ ಹೆಡ್ ಲೈಟ್ ಬೆಳಕಿನಲ್ಲಿ ಈ ಅಪಘಾತದ ದೃಶ್ಯ ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ ಅಲ್ಲಿ ಸಂಚರಿಸುತ್ತಿರುವ ಯಾವ ವಾಹನವು ನಿಲ್ಲುತ್ತಿಲ್ಲ. ಎಲ್ಲ ವಾಹನಗಳು ಆ ಸ್ಥಳದಿಂದ ಮಗ್ಗುಲು ಸರಿದು ವೇಗವಾಗಿ ಸಂಚರಿಸುತ್ತಿದ್ದವು. ಆ
ಅಪಘಾತವಾದ ವಾಹನಗಳಲ್ಲಿ ಸಿಲುಕಿದವರ ಸಂಕಟ ಹೇಳತಿರದು.
ಅವರು ತಮ್ಮ ಜೀವ ಉಳಿಸಿಕೊಳ್ಳಲು ವಿಲವಿಲನೆ ಒದ್ದಾಡುತ್ತಾ ಅತ್ತು ಕರೆದು ಯಾರಾದರೂ ಸಹಾಯಕ್ಕೆ ಬರುತ್ತಾರೆಂದು ಅಳುತ್ತಾ ಚಿರುತ್ತಿದ್ದರು. ಇದನ್ನೆಲ್ಲ ದೂರದಿಂದಲೇ ಗಮನಿಸಿದ ರಾಯರ ಹೃದಯದಲ್ಲಿ ಮರುಕ ಉಂಟಾಗಿತ್ತು.
ರಾಯರ ಮನೆ ಊರ ಹೊರಗಿನ ಕೊನೆಯ ಮನೆಯಾಗಿರುವುದ‌ರಿಂದ ಅಲ್ಲಿ ನಡೆದ ಅಪಘಾತದ ಶಬ್ದ ಇವರಿಗೆ ಮಾತ್ರ ಕೆಳಿಸಿತ್ತು.ಇವರ ಮನೆಯಿಂದ ಒಂದೆರಡು ಪರ್ಲಾಂಗ್ ದಷ್ಟು ದೂರದಲ್ಲಿ ಆಗಿದ ಈ ಅಪಘಾತ ಹೈದರಾಬಾದ್ ಕಡೆಯಿಂದ ಬರುವ ಕ್ರೂಜರ್ ಗೆ ಮುಂಬಯಿ ಕಡೆಯಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಕ್ರೂಜರ್ ನುಚ್ಚು ನೂರಾಗಿದೆ.ಅದನ್ನು ದೂರದಿಂದಲೇ ಗಮನಿಸಿದ ರಾಯರು ಹತ್ತಿರ ಹೋಗಿ ನೋಡಿ ಬರೊಣವೆಂದು ನಿರ್ಧರಿಸಿದರು.
ಈಗ ದೆವ್ವ ಭೂತಗಳ ಕಲ್ಪನೆ ಅವರ ಮನಸ್ಸಿನಿಂದ ದೂರ ಸರಿದಂತೆ ತೋರಿತ್ತು. ಅವರಲ್ಲಿ ಮಾನವೀಯ ಹೃದಯ ಮಿಡಿಯತೊಡಗಿತ್ತು.
ಮನೆಯಲ್ಲಿ ಇರುವ ಟಾರ್ಚ ತಗೊಂಡು ಅದಕ್ಕೆ ಎವರೆಡ್ಡಿ ಸೆಲ್ಲುಗಳು ಸೇರಿಸಿ ಬೆಳಕು ಹಾಕಿಕೊಂಡು ಆ ರಸ್ತೆಯ ಕಡೆಗೆ ಹೆಜ್ಜೆ ಹಾಕಿದರು.
ರಾಯರು ಹತ್ತು ವರ್ಷದ ಹಿಂದೆ ತನ್ನ ಪ್ರೀತಿಯ ಹೆಂಡತಿ
ಕಮಲಮ್ಮನವರನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದರು.ಆದರೂ ಒಬ್ಬ ಮಗನಿರುವುದರಿಂದ ಆತನಿಗೆ ಮದುವೆ ಮಾಡಿ ಸೊಸೆಯನ್ನು ತಂದು ಮೊಮ್ಮಕ್ಕಳನ್ನು ಕಂಡಿದರು. ಈಗ ಅವರು ಮಗನ ಆಶ್ರಯದಲ್ಲೆ ಇರುವುದರಿಂದ ವೃದ್ಧಾಪ್ಯ ಜೀವನ ಸುಖಕರವಾಗಿತ್ತು.
” ಇವತ್ತು ಮಗಾ ಬೇರೆ ಊರಲಿಲ್ಲ. ಹೈದರಾಬಾದಿಗೆ ‘ದುಕಾನ್ ಸಾಮಾನು’ ತರತ್ತಿನಂತ ಹೋದವನು ಇನ್ನೂ ಇಷ್ಟೊತ್ತಾದ್ರೂ ಮನೆಗೆ ಬಂದಿಲ್ಲ.
‘ಎಷ್ಟೊತ್ತಾದರೂ ಮನೆಗೆ ವಾಪಾಸು ಬರತ್ತಿನಿ ‘ ಅಂತ ಹೇಳಿ ಹೋದವನು ಇನ್ನೂ ಬರದೆ ಇರೊದು ಅವರಿಗೆ ಚಿಂತೆಯಾಗಿತ್ತು.
ಮೊಮ್ಮಕ್ಕಳು ಸೊಸೆಯೊಂದಿಗೆ ಮನೆಯಲ್ಲಿ ಗಾಢವಾಗಿ ನಿದ್ರಿಸುತ್ತಿದ್ದಾರೆ.
ಇರಲಿ.  ನಿದ್ದೆ ಮಾಡಲಿ.
ಈ ಅಪಘಾತ ಸುದ್ದಿ ಅವರಿಗ್ಯಾಕೆ ? ನಾನೆ ಅತ್ತ ಕಡೆ ಹೋಗಿ ನೋಡಿಕೊಂಡು ಬಂದ್ರೆ ಸಾಕು.
ಪಾಪ! ಅದ್ಯಾರೋ ಎನೋ ! ನೋವಿನಿಂದ ಒಂದೇ ಸವನೆ ಚಿರುತ್ತಿದ್ದಾನೆ. ರಾಯರು ಅಲ್ಲಿಗೆ ಹೋಗಿ‌ ನೋಡಿ ಬರೊಣ ಅಂತ ನಡೆದೆ ಬಿಟ್ಟರು.
ಈ ಕರಾಳ ಅಮವಾಸ್ಯೆಯ ಕತ್ತಲಲ್ಲಿ ವಾಹನಗಳು ಸಾಕಷ್ಟು ಸಂಚರಿಸುತಿದ್ದರೂ ಡಿಕ್ಕಿ ಹೊಡೆದ ಸ್ಥಳದಲ್ಲಿ ಯಾವ ವಾಹನವು ನಿಲ್ಲುತ್ತಿರಲಿಲ್ಲ. ಅವರು ದೂರದಿಂದಲೇ ಕಿಟಕಿಯಿಂದ ಇಣುಕಿ ನೋಡುತ್ತಾ ಮುಂದೆ ಸಾಗುತ್ತಿದ್ದರು.ಅಂತೂ ರಾಯರು ಆ ಸ್ಥಳಕ್ಕೆ ಧೈರ್ಯದಿಂದ ಒಬ್ಬರೆ ಬಂದರು. ಆದರೆ ಏನು ಮಾಡುವುದು ? ಈಗಾಗಲೇ ಈ ಅಪಘಾತದಲ್ಲಿ ಸಾಕಷ್ಟು ಜನರ ಪ್ರಾಣಪಕ್ಷಿಗಳು ಹಾರಿಹೋಗಿದ್ದವು. ಕ್ರೂಜರ್ ನಲ್ಲಿನ ಎಲ್ಲ ಜನರ ದೇಹಗಳು ನುಚ್ಚು ನೂರಾಗಿ ಸತ್ತು ಹೋಗಿದ್ದರು.
ಲಾರಿಯ ಚಾಲಕ ಹಾಗೂ ಕ್ಲೀನರ್ ಅವರಿಗೆ ಭೀಕರವಾಗಿ ಗಾಯವಾಗಿದ್ದರಿಂದ ಅವರು ಲಾರಿಯ ಕ್ಯಾಬಿನೊಳಗೆ ಸಿಲುಕಿಕೊಂಡು ಕೈ ಕಾಲು ಮುಸಡಿ ಮುರಿದುಕೊಂಡು ಏಳಲು ಆಗದೆ ಜೀವ ಉಳಿಸಿಕೊಳ್ಳುಲು ಹೋರಾಡುತ್ತಾ ಚಿರುತ್ತಿದ್ದರು. ಅವರ ಆ ಆಕ್ರಂದನೆಗೆ ಓಡಿ ಬಂದ ರಾಯರು ಆ ಸಮಯದಲ್ಲಿ ಏನು ಮಾಡಲು ಸಾಧ್ಯವಾಗದೆ ಅಸಾಯಕರಾಗಿ ಒಮ್ಮೆ ಬೆಚ್ಚಿ ಬಿದ್ದರು.ಇಂತಹ ಕತ್ತಲ ರಾತ್ರಿಯಲ್ಲಿ ಒಬ್ಬರೆ ಮುಟ್ಟಿ ಹೇಗೆ ಸಹಾಯ ಮಾಡುವುದು ? ಎಲ್ಲರ ದೇಹಗಳು ರಕ್ತದ ಮಡುವಿನಲ್ಲಿ ಮುಳುಗಿ ಹೋಗಿದ್ದವು. ಇದನ್ನು ನೋಡಿದ ರಾಯರ ಹೃದಯ ಗಟ್ಟಿಯಾಗಲಿಲ್ಲ.
ಬದಲಾಗಿ ತುಂಬ ಮರುಕ ಪಟ್ಟಿತ್ತು.
ಕ್ರೋಜರ್ ನೊಳಗಿನ ಎಲ್ಲ ಹತ್ತಾರು ಜನರು ನೂಚ್ಚು ನೂರಾಗಿ ಸತ್ತು ಬಿದ್ದಿದ್ದರು.ಅವರ ಹೆಣಗಳ ಮೇಲೆ ಟಾರ್ಚ್ ನಿಂದ ಬೆಳಕು ಹಾಕಿದರು. ಒಂದು ಹೆಣದ ತಲೆ ಪೊರ್ತಿ ನುಚ್ಚು ನೂರಾಗಿ ಬರಿ ದೇಹ ಮಾತ್ರ ಉಳಿದಿತ್ತು. ತಲೆ ಗುರುತು ಸಿಗದಂತೆ ಇರೊ ಆ ಹೆಣದ ಕೊರಳಲ್ಲಿ ಒಂದು ಬಂಗಾರದ ಚೈನು ಮತ್ತೆ ಕೈಯಲೊಂದು  ಬೆಲೆಬಾಳುವ ಎಚ್.ಎಮ್.ಟಿ. ಗಡಿಯಾರ ಇದ್ದಿದ್ದು ಕಂಡಿತ್ತು. ಅದನ್ನು ನೋಡಿದ ರಾಯರು ” ದಿನ ಬೆಳಗಾದರೆ ಯಾರಾದರೂ ಬಂದು ಈ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಪಾಪ ! ನಾನೆ ತೆಗೆದುಕೊಂಡು ಮುಂಜಾನೆ ಅವರ ವಾರಾಸುದಾರರಿಗೆ ಕೊಟ್ಟರಾಯ್ತು ” ಅಂತ ರಕ್ತ ಮೆತ್ತಿದ ಆ ಹೆಣದ ಮೇಲಿನ ಚೈನು  ಗಡಿಯಾರ ತೆಗೆದುಕೊಂಡಿದ್ದ. ಆಗ ನೋವಿನಿಂದ ಲಾರಿ ಡ್ರೈವರ್ ಮತ್ತು ಕ್ಲೀನರ ಅವರ ಧ್ವನಿಗಳು ಈಗ ಅಡಗಿಹೋಗಿದ್ದವು.ಅಂದ್ರೆ ಅವರು ಇಹಲೋಕ ತ್ಯಜಿಸಿದರು.
ಈಗ ಅಲ್ಲಿ ಬರಿ ಸ್ಮಶಾನ ಮೌನ.
ಎಲ್ಲಾ ಹೆಣಗಳು. ಆ ಹೆಣಗಳ ಮಧ್ಯೆ ಅಸಾಯಕರಾಗಿ ನಿಂತಿದ್ದ ರಾಯರಿಗೆ ಈಗ ತುಸು ಭಯವಾಗತೊಡಗಿತ್ತು.ಒಡನೆ ಅಲ್ಲಿಂದ ಮನೆಯ ಕಡೆಗೆ ಹೆಜ್ಜೆ ಹಾಕಿದರು.
ತುಂಬಾ ವಯೋವೃದ್ಧರಾದ ರಾಯರು ಈ ಘಟನೆಯಲ್ಲಿ ಯಾರಿಗೂ ಸಹಾಯ ಮಾಡದೆ ಕತ್ತಲೆಯಲ್ಲಿ ಭಯದ ವಾತಾವರಣ ಇದ್ದರೂ ಧೈರ್ಯ ತಂದುಕೊಂಡು ಆ ಶವದ ಮೇಲಿನ ಚಿನ್ನದ ಸರ ಮತ್ತು ಗಡಿಯಾರ ಇನ್ನೊಬ್ಬರ ಪಾಲಾಗಬಾರದು.ಮುಂಜಾನೆ ಅದು ಇಂತಹ ಹೆಣದ ಮೇಲೆ ಇತ್ತು ಅಂತ ಹೇಳಿ ಅವರ ವಾರಾಸುದಾರರಿಗೆ ಪೋಲಿಸರ ಮೂಲಕ ಕೊಟ್ಟರಾಯಿತೆಂದು ಏನೇನೋ ಯೋಚಿಸುತ್ತಾ ಆ ಸರ ಮತ್ತು ಗಡಿಯಾರ ತೆಗೆದುಕೊಂಡು ಬಂದರು.
ರಾಯರು ಮಧ್ಯೆ ರಾತ್ರಿಯಲ್ಲಿ ಆ ಅಪಘಾತ ಸ್ಥಳಕ್ಕೆ ಹೋಗಿ ಬಂದು ಮತ್ತೆ ಮಲಗಬೇಕು ಅಂತ ಹಾಸಿಗೆಯಲ್ಲಿ ಬಿದ್ದು ಕೊಳ್ಳವ ಮೊದಲೇ ಆ ಹೆಣದ ಮೇಲಿನಿಂದ ತಂದ ಆ ಸಾಮಾನುಗಳನ್ನು ಎದುರು ಮನೆಯ ಮಾಡದೊಳಗೆ ಇಟ್ಟು ಮಲಗಿಕೊಂಡರು.ಸಮಯ ಮೂರುವರೆಯಾಗಿತ್ತು ಆದರೂ ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಆ ದೃಶ್ಯ ಕಣ್ಣಮುಂದೆ ಬರತೊಡಗಿದವು. ರಕ್ತ ಸಿಕ್ತವಾದ ದೇಹಗಳು, ಯುವಕ ಯುವತಿಯರ ದೇಹಗಳು ಕಣ್ ಮುಂದೆ ಬರತೊಡಗಿದವು. ವಯಸ್ಕ ದಂಪತಿಗಳ ಹೆಣಗಳು ಬಾಯಿ ತೆರೆದು ಕಣ್ಣು ತೆರೆದು ಜೀವ ಬಿಟ್ಟಿದ್ದು  ಒಮ್ಮೆ ಭಯ
ಹುಟ್ಟಿಸುವಂತಿತ್ತು.ಅಲ್ಲೊಂದು ಕೈ ಕಾಲು ಮುರಿದುಕೊಂಡು ಸೊಂಟ ಛಿದ್ರ ವಾದ ಹೆಣ.ತಲೆ ನುಚ್ಚು ಗುಚ್ಚಾದ ಹೆಣ ಒಂದೇ ಎರಡೇ ಸುಮಾರು ಹತ್ತಾರು ಹೆಣಗಳ ರಾಶಿ.ಅದು ರಜಾಕಾರರ ಹಾವಳಿಯಲ್ಲಿ ಗೋರ್ಟಾದ ಹತ್ಯಾಕಾಂಡದಂತೆ ತೋರುತಿತ್ತು.
ರಾಯರಿಗೆ ಟಾಚ್೯ನ ಬೆಳಕಿನಲ್ಲಿ ನೋಡಿದ ಬಿಂಬ ಮತ್ತೆ ಮತ್ತೆ ನೆನಪಾಗತೊಡಗಿದವು.ನಿದ್ರೆ ಬಾರದೆ ಮಗ್ಗಲು ಹೊರಳಿದರು.

 

ಪಾಪ ! ಆ ಲಾರಿ ಡ್ರೈವರ್ ಮತ್ತು ಕ್ಲೀನರ್ ಗಳ ಆಕ್ರಂದನ ಕೇಳಿದರೂ ನನಗೆ ಸಹಾಯ ಮಾಡಲಾಗಲಿಲ್ಲ.
ಪಾಪ! ಪ್ರಾಣ ಬಿಡುವಾಗ ಅವರಿಗೇಷ್ಟು ನೋವಾಯಿತ್ತೊ ಏನೋ ! ನಾನು ಹೋದ ಮೇಲೆಯೇ ಅವರು ಉಸಿರು ನಿಲ್ಲಿಸಿದರು. ಇದನ್ನೆಲ್ಲ ನೋಡಿದ ದಾರಿಹೊಕ ವಾಹನ ಸವಾರರು ಯಾರೊಬ್ಬರು ಸ್ಥಳದಲ್ಲಿ ನಿಂತು ಸಹಾಯಕ್ಕೆ ಬರಲಿಲ್ಲ. ನಾನಾದ್ರೂ ಪೊಲೀಸ್ ರಿಗೆ ಮಾಹಿತಿ ಒದಗಿಸೋಣ ಅಂದ್ರೆ ನನ್ನಲ್ಲಿ ಇವತ್ತು ಮೊಬೈಲ್ ಬೇರೆ ಇರಲಿಲ್ಲ. ಅದು ಮಗ ರಮೇಶ್ ತೆಗೆದುಕೊಂಡು ಹೋಗಿದ್ದ.ಮನೆಯಲ್ಲಿ ಇರೋದೆ ಅದೊಂದೆ ಮೊಬೈಲ್ “ಅಂತ ಏಕಾಂಗಿಯಾಗಿ ವಿಚಾರ ಮಾಡತೊಡಗಿದರು.
” ಛೇ ! ನಿದ್ರೆ ಬೇರೆ ಬರುತ್ತಿಲ್ಲ ” ಅಂತ ಮತ್ತೆ ಮಗ್ಗುಲು ಎಡಗಡೆಗೆ ಹೊರಳಿಸಿದರು.
ಈ ಅಪಘಾತವಾದಾಗ ಊರಲ್ಲಿ ಯಾರಿಗಾದರೂ ಹೇಳಬೇಕೆಂದರೆ ನಮ್ಮ ಮನೆ  ಊರು ಬಿಟ್ಟು ತೀರ ಹೊರಗಡೆಯಿದೆ ಅಂತ ಸುಮ್ಮನಾದೆ. ಸಮಯದ ಕುದುರೆ ಓಡತೊಡಗಿತ್ತು. ಈಗ ಎದ್ದು ಹೋಗಿ ಊರ ಜನರಿಗೆ ಹೇಳೊಣವೆಂದರೆ ಆ ಸ್ಥಳದಲ್ಲಿ ಈಗ ಯಾರೊಬ್ಬರೂ ಬದುಕುಳಿದಿಲ್ಲವಲ್ಲ ?
ಇರಲಿ ! ನಾಳೆ ಪೊಲೀಸ್ರು ತಾನೆ ಬಂದು ಎಲ್ಲ ಹೆಣಗಳ ವಿಲೇವಾರಿ ಮಾಡ್ತಾರೆ ” ಅಂತ ಯೋಚಿಸುತ್ತಾ ಮಲಗಿರುವಾಗ ನಸುಕಿನಲ್ಲಿ ಚಳಿ ಬಿಡುತ್ತಿರುವುದರಿಂದ ರಾಯರು ಕಂಬಳಿ ಹೊದ್ದುಕೊಂಡು ಮಲಗಿದರು.
ಬೆಳಿಗ್ಗೆ ಸೂರ್ಯ ಉದಯಿಸಿ ನೆತ್ತಿ ಮೇಲೆ ಬಂದಿದ್ದ ಆದ್ರೂ ಮಾವ ಇನ್ನೂ ಮಲಗೆ ಇದ್ದಾರೆ ಯಾಕೆ ? ಇವರು ದಿನಾ ಬೆಳಿಗ್ಗೆ ನಾಲ್ಕೈದಕ್ಕೆ ಎದ್ದು ವಾಕ್ ಗೆ ಹೋಗಿ ಯೋಗ ಧ್ಯಾನ ಮಾಡೋರು ಇವತ್ತು ಇಷ್ಟೊತ್ತಾದರೂ ಇನ್ನೂ ಮಲಗಿಯೆ ಇದ್ದಾರಲ್ಲ ? ಏನಾಗಿರಬೇಕು ಇವರಿಗೆ ? ಅಂತ ಸೊಸೆ ಕಲಾವತಿ ದಿನನಿತ್ಯದ ಕೆಲ್ಸ ಕಾರ್ಯಗಳನ್ನು ಮಾಡುತ್ತಾ ಮಾವ ಮಲಗಿರುವ ಕೋಣೆಯ ಬಾಗಿಲು ಮೆಲ್ಲಗೆ ನೂಕಿದಳು.ಬಾಗಿಲಿಗೆ ಚಿಲಕ ಹಾಕದೆ ಇರುವುದರಿಂದ ಅದು ತೆರೆದುಕೊಂಡಿತು.
ಮಾವ ಇನ್ನೂ ಮಂಚದ ಮೇಲೆ ಮಲಗಿ ಗಾಢ ನಿದ್ರೆಯಲ್ಲಿ ವಿರಮಿಸುತ್ತಿದ್ದರು.
” ಮಾವ ! ಏಳ್ರೀ ! ಎಷ್ಟೋತ್ತು ಮಲಗಿದ್ದಿರಿ ಇವತ್ತು ? ಎಳಿ ಬೆಳಗಾಗಿದೆ ” ಅಂತ ಹೇಳುತ್ತಾ ಅವರ ತಲೆಯ ಮೇಲಿನ ಗೊಡೆಯ ಮಾಡದೊಳಗೆ ಇಟ್ಟಿದ ಆ ಚಿನ್ನದ ಸರ ಮತ್ತು ಗಡಿಯಾರ ನೋಡಿ ಆಚರ್ಯ ಚಕಿತರಾಗಿ
” ಮಾವ ! ಏಳ್ರೀ ! ಇಲ್ನೋಡಿ ” ಅಂತ ಗಟ್ಟಿ ಧ್ವನಿಯಲ್ಲಿ ಹೇಳಿದಾಗ ರಾಯರು ಒಮ್ಮೆ ಕಣ್ಣು ಬಿಟ್ಟು ನೋಡಿದರು.
” ಮಾವ ! ಇದು ನಿಮ್ಮ ಮಗನ ಗಡಿಯಾರ ಮತ್ತು ಕೊರಳಲ್ಲಿನ  ಚೈನು ಇಲ್ಲಿ ಹೇಗೆ ಬಂತ್ತು ? ಅವರು ನಿನ್ನೆ ಹೈದರಾಬಾದಿಗೆ ಹೋದವರು ರಾತ್ರಿ ಯಾವಾಗ ಬಂದ್ರು ? ” ಅಂತ ಸೊಸೆ ಹೇಳುತ್ತಿದಂತೆ ಆನಂದರಾಯರಿಗೆ ಸಿಡಿಲು ಬಡಿದಂತಾಗಿ ಮಲಗಿದ ಮಂಚದ ಕೆಳಗೆ ಕುಸಿದು ಬಿದ್ದರು.ಕಲಾವತಿಯ ಕೈಗೆ ಆ ಗಡಿಯಾರ ಮತ್ತು ಚೈನಿನ ರಕ್ತದ ಕಲೆ ಮೆತ್ತಿಕೊಂಡಿತ್ತು.

             – ಮಚ್ಚೇಂದ್ರ ಪಿ ಅಣಕಲ್

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *