ಕಾಯಕ ಯೋಗಿಗಳು. (ಪುಸ್ತಕ ಪರಿಚಯ)
ಭಾಲ್ಕಿ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಶತಾಯು ಪರಮ ಪೂಜ್ಯ ಲಿಂಗೈಕ್ಯ ಡಾಕ್ಟರ್ ಚನ್ನಬಸವ ಪಟ್ಟದ್ದೇವರ 135 ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತ್ತು. ಕಾರ್ಯಕ್ರಮವು ಯಶಸ್ವಿಯಾಗಿ ಸಾಗಿದ್ದು ಬಹಳ ಖುಷಿ ತಂದಿದೆ.ಇನ್ನು ಈ ಕಾರ್ಯಕ್ರಮದಲ್ಲಿ ಕಾಯಕ ಯೋಗಿಗಳು ಎನ್ನುವ ಕೃತಿ ಲೋಕಾರ್ಪಣೆಗೊಂಡಿರುವುದು ಬಹಳ ಸಂತೋಷದ ಸಂಗತಿಯಾಗಿದೆ.ಈ ಸಂದರ್ಭದಲ್ಲಿ ಪರಮ ಪೂಜ್ಯ ಗುರುಬಸವ ಪಟ್ಟದ್ದೇವರು ಈ ಕೃತಿ ನನ್ನ ಕೈಗೆ ಇಟ್ಟರು.
ಈ ಕೃತಿಯನ್ನು ಬರೆದವರು ಕಲ್ಯಾಣ ಕರ್ನಾಟಕ ಭಾಗದ ಭಾವೈಕ್ಯತೆಯ ಬರಹಗಾರರಂದೆ ಪ್ರಸಿದ್ಧಿ ಪಡೆದ
,ಪತ್ರಕರ್ತರು, ಪ್ರಗತಿಪರ ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಸಾಂಸ್ಕೃತಿಕ ಸಂಘಟಕರು ಹಾಗೆಯೇ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಪರಿಸರ ಸಂರಕ್ಷಣೆಯ ರಾಜ್ಯ ಕಾರ್ಯದರ್ಶಿಯವರಾದ ಶರಣ ಸಂಗಮೇಶ್ ಎನ್ ಜವಾದಿ ಯವರು ಈ ಕೃತಿಯನ್ನು ನಾಡಿಗೆ ಧಾರೆಯೆರೆದಿದ್ದಾರೆ.
ಇವರು ಈ ಭಾಗದ ಪತ್ರಕರ್ತರಾಗಿ ಸಾಹಿತ್ಯಗಾರರಾಗಿ ಹೋರಾಟಗಾರರಾಗಿ ಅನೇಕ ಕೆಲಸಗಳು ಅಚ್ಚುಕಟ್ಟಾಗಿ ಮಾಡಿರುವ ಶ್ರೇಯಸ್ಸು ಇವರದು. ಇನ್ನು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದಂತಹ ವಿಶಿಷ್ಟ ರೀತಿಯ ಛಾಪು ಮೂಡಿಸಿದ್ದಾರೆ. ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಅಷ್ಟೇ ಅರ್ಥಪೂರ್ಣವಾಗಿ ಲೇಖನಗಳು ಬರೆಯುತ್ತಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟಣೆ ಗೊಂಡಿರುವುದು ಇವರ ಸಾಹಿತ್ಯ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಒಂದು “ಕಾಯಕ ಯೋಗಿಗಳು” ಕೃತಿಯಲ್ಲಿ ಒಟ್ಟು 23 ಬಿಡಿ ಬರಹಗಳ ಗುಚ್ಛವು ಕಾಣಬಹುದಾಗಿದೆ.
ಬಸವಾದಿ ಶರಣರಿಂದ ಹಿಡಿದು ಈಗಿನ ಮಠಾಧೀಶರ ಬಗೆಯೂ ಲೇಖನಗಳು ಬರೆದಿದ್ದಾರೆ.ಸಾಂಸ್ಕೃತಿಕ ನಾಯಕ ಬಸವಣ್ಣನವರು,ವಿಶ್ವ ಸಂತ ಸ್ವಾಮಿ ವಿವೇಕಾನಂದರು, ವಚನ ಸಂಶೋಧನೆಯ ಪಿತಾಮಹ ಡಾ. ಫ. ಗು. ಹಳ್ಳಕಟ್ಟಿ, ನಿರಂಜನ ಶಿವಶರಣ ಹರ್ಡೇಕರ್ ಮಂಜಪ್ಪನವರು, ಸಂಗೀತ ಲೋಕದ ಧ್ರುವತಾರೆ ಪಂಡಿತ ಪುಟ್ಟರಾಜ ಗವಾಯಿಗಳವರು, ದಿವ್ಯ ಚೇತನ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರು, ಮಾನವ ಕುಲದ ಗುರು ಕನ್ನಡ ಮಠದ ಡಾ.ಚೆನ್ನಬಸವ ಪಟ್ಟದ್ವೇವರು, ತ್ರಿವಿಧ ದಾಸೋಹಿ ಸಿದ್ದಗಂಗೆಯ ಶ್ರೀ ಶಿವಕುಮಾರ್ ಸ್ವಾಮೀಜಿ,ಸಮನ್ವಯ ಸಿದ್ಧಾಂತಿ ತೋಂಟದಾರ್ಯ ಶ್ರೀ ಗಳು, ಭಾವೈಕ್ಯತೆಯ ಸಂತ ಡಾ.ಬಸವ ಲಿಂಗ ಪಟ್ಟದ್ದೇವರು,
ಸಜ್ಜನ ಶ್ರೀ ಚನ್ನವೀರ ಶಿವಾಚಾರ್ಯರು, ಸಾಮಾಜೋದಾರಿಕ ಮಹಾಪುರುಷರಾದರೆ ವೈಚಾರಿಕ ಚಿಂತನಯ ಡಾ.ಎಚ್. ನರಸಿಂಹಯ್ಯನವರು , ವಿಶ್ವಮಾನವ ಈ ಯಾತ್ರೆಯು ಸಂದೇಶ ಸಾರಿದ ಮಹಾಮೇರು ಕುವೆಂಪುರವರು, ರಾಜಕೀಯ ಸನ್ಯಾಸಿ ಅಟಲ್ ಬಿಹಾರಿ ವಾಜಪೇಯಿಯವರು , ಭವ್ಯ ಭಾರತದ ಸರ್ದಾರ್ ವಲ್ಲಭಭಾಯ್ ಪಟೇಲರು,ಧಿಮಂತ ಚೇತನ ರಾಜಕಾರಣಿ ಜೆ.ಎಚ್.ಪಟೇಲರು,
ಅನಾಥರ ಬಂಧು ಪೂಜ್ಯ ದಾವಲ್ ಮಲಿಕ್ ಅಜ್ಜರವರ ಬದುಕು ಹಾಗೂ ಇವರೆಲ್ಲರ ಸೇವಾ ಕೈಂಕರ್ಯಗಳ ಕುರಿತು ವಿಸ್ತೃತವಾಗಿ ವಿವರಿಸಿದ್ದಾರೆ.
ಜನಮಾನಸಕ್ಕೆ ಇವರೆಲ್ಲರ ಆದರ್ಶ ಜೀವನದ ಸಂದೇಶಗಳನ್ನು ತಿಳಿಸುವ ಕೆಲಸ ಮಾಡಿರುವ ಶ್ರೇಯಸ್ಸು ಸಂಗಮೇಶ ಎನ್ ಜವಾದಿಯವರಿಗೆ ಸಲ್ಲುತ್ತದೆ.ಸಾಧಕರ ಜೀವನ ಕುರಿತು ಹೊಸತನವನ್ನು ಈ ಒಂದು ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ. ಸಾಧಕರ ಸೇವೆಗಳು ಸರ್ವರಿಗೂ ಪ್ರೇರಣೆ ದಾಯಕವಾಗಲಿ ಎಂಬುದೇ ಇವರ ಅಂತರಂಗದ ಕಳಕಳಿಯಾಗಿದೆ ಎಂಬುದು ಈ ಕೃತಿ ಓದಿದಾಗ ತಿಳಿದು ಬರುತ್ತದೆ.
ಸಂಗಮೇಶ್ ಜವಾದಿಯವರು ಪ್ರಮಾಣಿಕ ಪ್ರಯತ್ನ ಮಾಡಿದಾರೆ ಎಂದೆ ಹೇಳಬಹುದು. ಕಸುವಿನಹಳ್ಳಿ ಪಬ್ಲಿಕೇಷನ್ಸ್ ಪ್ರಕಾಶಕರಾದರೆ, ಅಚ್ಚುಕಟ್ಟಾಗಿ ರಾಘವೇಂದ್ರ ಪ್ರಿಂಟರ್ಸ್ ಬೆಂಗಳೂರು ಮುದ್ರಣ ಮಾಡಿರುತ್ತಾರೆ. ಮುದ್ರಣ 2024 ರಲ್ಲಿ ಆಗಿದ್ದು, ಒಟ್ಟು 156 ಪುಟಗಳ ಕೃತಿ ಇದಾಗಿದೆ.
ಈ ಕೃತಿಗೆ ಬೆನ್ನುಡಿ ಡಾ.ರಘುಶಂಖ ಭಾತಂಬ್ರಾ ಅವರು ಬರೆದಿರುತ್ತಾರೆ.ಹಾಗೂ ಮುನ್ನುಡಿಯನ್ನು ರಾಮದುರ್ಗದ ಪ್ರೊ.ಸಿದ್ದಣ್ಣ ಲಂಗೋಟಿ ಶರಣರು (ಚಾಂದಕವಠೆ) ತುಂಬ ಮಾರ್ಮಿಕವಾಗಿ ಬರೆದಿರುತ್ತಾರೆ. ಸರ್ವರೂ ಈ ಕೃತಿಯನ್ನು ಓದಬೇಕು. ಓದಿದಾಗಲೇ ಈ ಕೃತಿಯ ಸಂದೇಶ ಹಾಗೂ ಕೃತಿಯಲ್ಲಿ ಬರುವ ಸಾಧಕರ ಸೇವೆಗಳು ನಮ್ಮೆಲ್ಲರಿಗೂ ಅರ್ಥವಾಗುತ್ತದೆ. ಆದಾಗಲೇ ನಮ್ಮ ಜೀವನ ಪಾವನ ವಾಗುತ್ತದೆ ಎಂಬುದು ನಮ್ಮ ಸದಾಶಯ.
ಲೇಖಕರು:ಸಂಗಮೇಶ ಎನ್.ಜವಾದಿ
ಪ್ರಕಾಶಕರು: ಕೆಸುವಿನ ಹಳ್ಳಿ ಪಬ್ಲಿಕೇಷನ್ಸ ಬೆಂಗಳೂರು
ಮುದ್ರಣ:2024
ಪುಟಗಳು 156
ಬೆಲೆ:200
– ಸಂಗಮೇಶ್ವರ ಎಸ್ ಮುರ್ಕೆ
ಹೊಳೆಸಮುದ್ರ, ಸಾಹಿತಿ, ಪತ್ರಕರ್ತ,
ತಾಲೂಕು ಕಮಲನಗರ.