ಇತ್ತೀಚಿನ ದಿನಗಳಲ್ಲಿ ಮಳೆ ಬೆಳೆ ಸಮಯಕ್ಕೆ ಸರಿಯಾಗಿ ಆಗಿದೆ ಇರುವುದರಿಂದ ಹಳ್ಳಿಯಲ್ಲಿ ರೈತರು ಕಂಗೆಟ್ಟು ಹೋಗಿದರು.ಬಿತ್ತಿದ್ದು ಬೆಳೆದುಕೊಳ್ಳಲು ಆಗದೆ ಬರದ ಬಿಸಿಲಿಗೆ ಬೆಳೆಗಳು ಬಾಡಿ ಹೋಗಿದ್ದರಿಂದ ದವಸ-ಧಾನ್ಯಗಳು ಬೆಳೆಯದೆ ತಿನ್ನುವ ಅನ್ನಕ್ಕೆ ಬೆಂಕಿ ಬಿದ್ದಂತಾಗಿ ಅವು ಸುಟ್ಟು ಹೋಗಿದವು.ಆ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಮಳೆ ಸರಿಯಾಗಿ ಬಿಳದೆ ಇರುವುದರಿಂದ ರಾಜ್ಯ ಸರ್ಕಾರ ಎಲ್ಲ ತಾಲೂಕುಗಳಿಗೆ ಬರಗಾಲ‌ ಘೋಷಣೆ ಮಾಡಿತು. ಬೆಳೆ ಕಳೆದುಕೊಂಡವರಿಗೆ ಎಕ್ಕರೆಗೆ ಇತ್ತಿಷ್ಟು ಅಂತ ಪರಿಹಾರ ನಿಧಿ ಬಿಡುಗಡೆ ಮಾಡಿತು. ಆದ್ರೆ ಆ ಹಣ ಬಂದು ರೈತರ ಖಾತೆಗಳಿಗೆ ಜಮಾ ಆಗೊದು ಯಾವಾಗೋ ? ಅಂತ ಕೆಲವರು ಬ್ಯಾಂಕಿಗೆ ಅಲೆದಾಡಿ ಬೆಸತ್ತಿದರು. ಅವರಿಗೆ ಬದುಕು ಸಾಗಿಸುವುದೇ ತುಂಬ ದುಸ್ಥರವಾಗಿತ್ತು.ಇಂತಹ ಪರಿಸ್ಥಿತಿಯಲ್ಲಿ ದನಕರುಗಳಿಗೆ ಮೇವು ನೀರಿಲ್ಲದೆ ಅವು ಬಳಲಿ ಸಾಯತೊಡಗಿದವು.
ಗ್ರಾಮ ಪಂಚಾಯತಿಗಳಲ್ಲಿ ‘ಉದ್ಯೋಗ ಖಾತ್ರಿ’ಯೋಜನೆ ಇದ್ದರು ಅದು ಹೆಸರಿಗೆ ಮಾತ್ರ.
ಪಂಚಾಯತಿ ಚುನಾವಣೆಯಲ್ಲಿ ಆರಿಸಿ ಬಂದವರು ಯಾರಿಗೂ ಕೆಲ್ಸ ಕೊಡಿಸದೆ ಯಂತ್ರಗಳಿಂದ ಕಾಮಗಾರಿ ಮಾಡಿಸಿ ತಮಗೆ ಬೇಕಾದವರ ಕಾರ್ಡು ಪಡೆದು ಅವರ ಖಾತೆಗಳಿಗೆ ಬಿಲ್ಲು  ಪಾವತಿಸಿ ಹಣ ಲಪಟಾಯಿಸುವ ಈ ವಂಚಕರಿಗೆ ಹೇಳೊರು ಕೇಳೊರು ಯಾರು ಇಲ್ಲದಂತಾಗಿತ್ತು.ಇಂತಹ ಪರಿಸ್ಥಿತಿಯಲ್ಲಿ ಧ್ವನಿ ಇಲ್ಲದ ದಲಿತ‌ ಜನಾಂಗ ಊರಿಗೆ ಊರು ಹೊಟ್ಟೆ ತಿಪ್ಲಿಗಾಗಿ ಕೆಲ್ಸ ಅರಸಿಕೊಂಡು ಜನ ಮುಂಬೈ ಪುಣೆಗೆ  ಗುಳೆ ಹೊರಟಿತು. ಅವರು  ಕಟ್ಟಡ ಕಾಮಗಾರಿಗೋ ! ಡಾಂಬಾರು ಕೆಲ್ಸಕ್ಕೋ ! ಅಂತ ಹೊದ್ರೆ ಹೆಣ್ಣು ಮಕ್ಳು ಕಸ ಮುಸರಿ ತಿಕ್ಕುವ, ಬಟ್ಟೆ ಬರೆ ತೊಳೆಯುವ, ಮನೆ ಕೆಲ್ಸಕಂತ ಹೊದ್ರೆ ಇನ್ನೂ ಕೆಲವರು ಕಂಪನಿಗಳಲ್ಲಿ ದುಡಿಯುವುದಾಗಿ ಹೇಳಿಕೊಂಡು ಊರು ಖಾಲಿ ಮಾಡಿದರು.
ಇವರನ್ನೆಲ್ಲ ‘ಮೊಕಾದಂ ‘ ಅನ್ನೋ ಶಿವಾನಂದ ಏಜೆಂಟ್ ಕರೆದುಕೊಂಡು ಹೋಗಿದ .ಆದ್ರೆ ಗ್ರಾಮದಲ್ಲಿ ತೀರ ಬಡತನದಲ್ಲಿದ್ದ ರಂಗಪ್ಪನ ಕುಟುಂಬ ಮಾತ್ರ ವಲಸೆ ಹೋಗದೆ ಹಾಗೆ ಉಳಿದುಕೊಂಡಿತ್ತು .
ಆತನೂ ಕೂಡ ಈ ಊರು ಬಿಟ್ಟು ಬೇರೆ ಊರಿಗೆ ವಲಸೆ ಹೋಗಬೇಕೆಂದು ಒಮ್ಮೆ ನಿರ್ಧರಿಸಿದ.ಆದ್ರೆ ಅವ್ನ ಹೆಂಡ್ತಿ ಸುಬ್ಬವ್ವ ಇದ್ಕೆ ಒಪ್ಪಲಿಲ್ಲ. ಕಾರಣ ಇವರಿಗೆ ಮನೆತುಂಬ ಮಕ್ಳು ಇರೋದರಿಂದ ಊರು ಬಿಡುವುದು ಕಷ್ಟವಾಗಿತ್ತು. ಇವ್ರಿಗೆ ಮಕ್ಳು ಆರು ಗಂಡು ಐದು ಹೆಣ್ಣು ಒಟ್ಟು ಹನ್ನೊಂದು ಇದರರ್ಥ ‘ಡಜನ್’ ಲೆಕ್ಕಕ್ಕೆ ಒಂದ್ ಕಮ್ಮಿ ಅಷ್ಟೇ. ಇಷ್ಟು ಮಕ್ಕಳಿಗೆ ಜನ್ಮ ನೀಡಿದರಿಂದ ಸಂಸಾರದ ಜಂಜಾಟ ಜಾಸ್ತಿಯಾಗಿದಂತಿತ್ತು.ಮನೆಯಲ್ಲಿ ಎಲ್ಲ ಮಕ್ಕಳು ಕುಂತು ತಿನ್ನೊರೆ ಅವ್ರಿಗೆ ದಿನಾ ತಂದು ಹಾಕೊದು  ಈ ಬರಗಾಲದಲ್ಲಿ ಸಾಕು ಸಾಕಾಗಿ ಹೋಗಿತ್ತು.ಕೆಲ್ಸ ಚೆನ್ನಾಗಿದ್ದ ಕಾಲದಲ್ಲಿ ಹೇಗೋ ವರ್ಷಾನುವರ್ಷ ಚನ್ನಾಗಿಯೆ ಸಾಗುತ್ತಿದ್ದ ಬದುಕಿನ ಬಂಡಿ ಈ ವರ್ಷ ಬರ ಬಿದ್ದಿದರಿಂದ ತಿನ್ನೋ ಅನ್ನಕ್ಕೂ ಆ ದ್ಯಾವ್ರೆ ಕಲ್ಲು ಹಾಕಿದಂಗಾಗಿತ್ತು.
ರಂಗಪ್ಪನು ದಿನ ಬೆಳಗಾದ್ರೆ ಬದುಕುವುದು ಹೇಗೆ ?  ಅಂತ ಒಳಗೊಳಗೆ ಕುದಿ ಮಾಡತೊಡಗಿದ.
ಇಂತಹ ಪರಿಸ್ಥಿತಿಯಲ್ಲಿ ಊರು ಬಿಟ್ಟು ಗುಳೆ ಹೋಗೊದು ಅಂದ್ರೆ ? ಹೊದ್ರು ಇಷ್ಟು ಮಕ್ಕಳಿಗೆ ತಗೊಂಡು ಹ್ಯಾಂಗ್ ಹೋಗೊದು ?  ಅಲ್ಲಿ ಇರೊಕ್ಕೆ  ಇಷ್ಟು ಮಕ್ಳಿರೊ ನಮ್ಗೆ ಕಡಿಮೆ ಬೆಲೆಯಲ್ಲಿ ಮನೆನಾದ್ರೂ ಯಾರ್ ಕೊಡ್ತಾರೆ ? ಹಾಗೊಂದ್ ವೇಳೆ  ಹೊದ್ರೆ ಊರಲ್ಲಿ ಶಾಲೆ ಕಲಿಯುತ್ತಿರುವ ಮಕ್ಕಳ ಶಿಕ್ಷಣ ಹಾಳಾಗುವುದಲ್ವೇ ? ಬೇಡ ಬೇಡ ಮಕ್ಕಳ ಕಲಿಕೆಗೆ ಭಂಗ ತರೊದು ಬೇಡ.” ಅಂತ ಆತ ಒಂದಕಡೆ ವಿಚಾರ ಮಾಡತೊಡಗಿದ.
” ಎಂತಹ ಕಷ್ಟ ಬಂದ್ರು ಇಲ್ಲೆ ಎನಾದ್ರು ಕೆಲ್ಸ ಮಾಡಿ ಬದುಕಬೇಕು.ಒಂದ್ ಹೊತ್ತು ಗಂಜಿನಾದ್ರೂ ಕುಡಿದು
ದಿನ ದೂಡಬೇಕು ” ಅಂತ ನಿರ್ಧರಿಸಿದ.
ಅಷ್ಟೊತ್ತಿನಲ್ಲಿ ಗೌಡ್ರ ಮನೆ ಹೆಂಡಿ ಬಳೆಯುವ ಕೆಲ್ಸಕೆಂದು ಹೋದ ಸುಬ್ಬವ್ವ ಇವತ್ತು ಬೇಗ ಬಂದದ್ದು ನೋಡಿ ರಂಗಪ್ಪ ” ಯಾಕೆ ಸುಬ್ಬು , ಗೌಡ್ರ ಮನೆಗೆ ಹೋಗಿಲವೋ ? ಅಂತ ಕೇಳಿದ.
” ಇಲ್ಲ ರ್ರೀ ! ಇವತ್ತಿಂದ ಗೌಡ್ರ ಮನ್ಯಾಗ ಕೆಲ್ಸ ಇಲ್ಲ.ಗೌಡ್ತಿ ಎಲ್ಲಾದ್ರೂ ಬೇರೆ ಕಡೆ ಕೆಲ್ಸ ಹುಡ್ಕೊ ಅಂತ ಹೇಳಿ ವಾಪಾಸು ಕಳಿಸಿದಳು.ಅದ್ಕ ನಾ ಅಲ್ಲೇನು ಕೆಲ್ಸ ಮಾಡ್ದೆ ಬಂದು ಬಿಟ್ಟೆ.” ಅಂತ  ನಿರಾಸೆಯಿಂದ ಹೇಳಿದಳು.
ಸುಬ್ಬವ್ವ ಊರ ಗೌಡ್ರ ಮನಿಯಾಗ ಹೆಂಡಿ ಬಳಿಯುವ ಕೆಲ್ಸ ಮಾಡ್ತಿದ್ದಳು.ಬರ ಬಿದ್ದಿದ್ದರಿಂದ ಊರಲ್ಲಿ ದನಕರುಗಳಿಗೆ ಮೇವು ನೀರಿನ ಕೊರತೆಯಾಗಿ ಅವು ಸತ್ತು ಹೊಗುತ್ತಿದ್ದವು.ಇದನ್ನು ನೋಡಿದ ಗೌಡ ತಮ್ ಮನ್ಯಾಗಿನ ದನಕರುಗಳಿಗೆ ಹಸಿವು ನೀರಿನ ಕೊರತೆಯಾಗಿ ಸಾಯಬಾರದೆಂದು ಅವುಗಳಿಗೆ ಬಸವಕಲ್ಯಾಣ ಎಂಬ ಪಟ್ಟಣಕ್ಕೆ ಒಯ್ದು ನೀರಾವರಿ ತೋಟ  ಇರುವ ರೈತನಿಗೆ ಕಡಿಮೆ ಬೆಲೆಗೆ ಮಾರಿಬಂದಿದ್ದನು.
ಹಾಗಾಗಿ ಎತ್ತು  ಗೋವುಗಳಿಲ್ಲದ ಗೌಡ್ರ ದೊಡ್ಡಿಯಲ್ಲಿ   ಸುಬ್ಬವ್ವಳಿಗೆ ಕೆಲ್ಸ ಇಲ್ಲದಂತಾಗಿತ್ತು. ಈ ಮಾತನ್ನು ಕೇಳಿದ ರಂಗಪ್ಪನಿಗೆ ಬರ ಎಂಬ ಬರೆಯ ಮೇಲೆ ಮತ್ತೊಂದು ಬರೆ ಎಳೆದಂತಾಗಿತ್ತು. ಆತನು ಕೆಲ್ಸವಿದ್ರೆ ಊರಲ್ಲಿ ಕೂಲಿ-ನಾಲಿ ಮಾಡಿಯಾದ್ರು ಬದುಕುವವ ಆದ್ರೆ ಅದು ಇಲ್ಲದಂತಾಗಿರುವುದರಿಂದ ತುಂಬ ಚಿಂಚಿತನಾಗಿದ್ದ.
ತನಗೂ ತನ್ನ ಹೆಂಡ್ತಿಗೂ ಕೆಲ್ಸ ಇಲ್ಲ ಅಂದ್ರೆ ಬದುಕುವುದೇ ! ದೊಡ್ಡ ಸಮಸ್ಯೆಯಾಗಿ ಕಾಡಿತ್ತು.
” ಯಾಕ್ರೀ ! ಒಬ್ರೇ ಕುಂತು ಏನೋ ಆಳವಾದ ಇಚಾರ್ ಮಾಡ್ತಿದಂಗ ಕಾಣ್ತಿದೆ ? ಎನ್ ಚಿಂತಿ ಮಾಡ್ಲಾಕತ್ತಿರಿ ? ಊರಲ್ಲಿ ಎಲ್ಲಾದ್ರೂ ಕೆಲ್ಸ ಹುಡ್ಕೊಂಡು ಹೋಗಬಾರದೆ ? ಸುಮ್ನೆ ಹಿಂಗ್ ಕುಂತ್ರೆ ಹ್ಯಾಂಗ್ ? ಮನಿ ತುಂಬ ಮಕ್ಳು ಬ್ಯಾರೆ ಹಸುದ್ ಕುಂತಾವೆ.ಅವ್ಕೆ ಉಡೊಕ್ಕೆ ಬಟ್ಟಿ ಇಲ್ಲ.ತಿನ್ನೊಕ್ಕೆ ಹೊಟ್ಟೆಗೆ ಹಿಟ್ಟಿಲ್ಲ.ಅಂತದ್ರಲ್ಲಿ ನಿಮ್ಗೆ ಈ ಚಿಂತಿ ಬ್ಯಾರೆ ಹೋಗಿ ಎಲ್ಲಾದ್ರು ಕೆಲ್ಸ ಹುಡ್ಕೊಂಡು ಬರಬಾರದೆ ? ” ಅಂತ ಆಕೆ ವಟಗುಟ್ಟತೊಡಗಿದಳು.
” ಅಂದ್ರೆ ನಂಗೆ ಮುಂಬಯಿ ಪುಣೆಗೆ ಹೋಗು ಅಂತ್ತಿಯಾ ? ” ಅಂತ ದುರುಗುಟ್ಟಿದ ರಂಗಪ್ಪ.
” ಊರಿಗೆ ಊರೆ ,ಊರು ಬಿಟ್ಟು  ಹೋದ ಮ್ಯಾಲೆ ಇಲ್ಲಿ ನಮ್ದೇನು ಕೆಲ್ಸ ? ನಡ್ರೀ ! ನಾವು ಹೋಗೊಣ.ಬೇಕಾದ್ರೆ ನಾನು ನಿಮ್ಮ ಜೋತೆ ಬರತ್ತಿನಿ.” ಅಂತ ಸುಬ್ಬವ್ವ  ಗಂಡನಿಗೆ ಬೆಂಬಲಿಸುವಂತೆ ಹೇಳಿದಳು.
” ಖರೆ ಅದಾ,ಸುಬ್ಬು ನೀನೇನೊ ಮುಂಬೈ ಪುಣೆಗೆ ಹೋಗೊಣ ಅಂತಿಯ ಆದ್ರೆ ಇಷ್ಟು ಮಕ್ಳು ತಗೊಂಡು ಹ್ಯಾಂಗ್ ಹೋಗೊದು ” ಅಂತ ರಂಗಪ್ಪ ಹೇಳ್ತಿದಂತ
ಸುಬ್ಬವ್ವ  ” ಅದ್ಕೆ ನಾ ಆವಾಗ್ಲೆ ಬಡ್ಕೊಂಡೆ ಇಷ್ಟು ಮಕ್ಳು ಬೇಡ ಅಂತ.ಎಷ್ಟು ಹೇಳಿದ್ರು ನೀವು ಕೇಳಲಿಲ್ಲವಲ್ಲ ? ಈಗ ನೋಡಿ ಬದುಕು ಹ್ಯಾಂಗ್ ಮೂರಾಬಟ್ಟೆ ಆಗಿ ಹೋಗಿದೆ .ಅದ್ಕೇನೆ ಸರ್ಕಾದೊರು ಕಾನೂನು ಮಾಡಿದ್ದು ”ಒಂದು ಬೇಕು. ಎರಡು ಸಾಕು ” ಅಂತ.ನಾನೂ ಹೇಳ್ದೆ
”   ಆರತಿಗೊಂದು ಕಿರುತಿಗೊಂದು ಒಂದ್ ಗಂಡು ಮತ್ತೊಂದು ಹೆಣ್ಣು ಹುಟ್ಟಿದ ಮ್ಯಾಲೆ ಮಕ್ಳು ಸಾಕು ” ಅಂತ   ನೀವು ಕೇಳಲೆ ಇಲ್ಲ.
” ಮಕ್ಕಳಿರಬೇಕವ್ವಾ ! ಮನೆತುಂಬ ” ಅಂತ ಆ ಹಳೆ ಕಾಲದ ಶಾಸ್ತ್ರ ಪುರಾಣ ಹೇಳಿ ಹೇಳಿ ನನ್ ತಲೆ ತಿಂದು ಇಷ್ಟು ಮಕ್ಳು ಮಾಡಿದ್ದು. ಈಗ ನೋಡಿ ಕಾಲ ಹ್ಯಾಂಗ್ ಬಂದು ಬಿಡ್ತು. ಮಳೆ ಯಾವಾಗ ಬರತ್ತಾದೋ ಯಾನೋ ! ” ಅಂತ ಆಕೆ ಬೆಸತ್ತು ಮುಗಿಲು ನೋಡಿದಳು.
” ಏ ! ಸುಮ್ಕಿರು !
ಮಳೆ ಬಂದೆ ಬರತ್ತದೆ.
ಮಳೆ ಬರದೆ ಏನ್ ಇಷ್ಟೇ ಇರೋಕಾಗುತ್ತಾ ?
ನೋಡ್ತಾ ಇರು. ಮಳೆ ಮತ್ತೆ
ಬರತ್ತದೆ ” ಅಂತ ರಂಗಪ್ಪ ಭರವಸೆಯ ಮಾತನಾಡಿದ.
” ಅಲ್ಲಾ‌ ರ್ರೀ ! ಒಂದ್ ವಿಷ್ಯ ಹೇಳೊದೆ ಮರೆತು ಬಿಟ್ಟಿದೆ. ಅದೇನಂದ್ರೆ ಊರಲ್ಲಿನ ಮಠದ ಕಟ್ಟಡ ಕಾಮಗಾರಿ ನಡಿತ್ತಾ ಇದೆ.ಅದೇನೋ ಸರ್ಕಾರದೊರು ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡ್ಯಾರಂತ ಆ ದುಡ್ಡಲ್ಲಿ ಸ್ವಾಮೇರು ಹೊಸ ಗುಡಿ ಕಟ್ಲಾಕೆ ಸುರು ಮಾಡ್ಯಾರಂತ ಗೊತ್ತಾತು.
ಅಲ್ಲೇನ್ರಾ ಹೋಗಿ ಕೆಲ್ಸ ಕೇಳಿ.
ಉಪ್ಪಾರಗೊಳ ಕೈಯಾಗ ಗೌಂಡಿ ಕೆಲ್ಸನಾದ್ರೂ ಮಾಡ್ರಿ.
ಒಂದ್ ಹೊತ್ತು ಗಂಜಿಗಾದ್ರೂ ಆಶ್ರಯ ಆಗ್ತದೆ ” ಅಂತ ಸುಬ್ಬವ್ವ ಮತ್ತೆ ಗಂಡನ ತಲೆ ತುಂಬಿದಳು.
” ಹೌದಾ ! ಹಾಗಾದ್ರೆ ನಾ ಕೆಲ್ಸಕ್ಕೆ ಯಾರನ್ನು ಕೇಳೊದು ? ಯಾರು ನನಗೆ ಕೆಲ್ಸಕ್ಕೆ ಸೇರಿಸ್ಕೊತ್ತಾರೆ ? ಅಂತ ಪ್ರಶ್ನೆಸಿದ.
” ಒಂದು ಮಾತು ಆ ಸ್ವಾಮೇರ್ ಭಂಟ ಸುಬ್ರಮಣ್ಯ ಅದಾನಲ್ಲ ? ಅವ್ನಿಗೆ ಕೇಳಿ.  ಮಠದ ಎಲ್ಲಾ ಕಾರಬಾರ್ ಅವ್ನ ಕೈಯಾಗೆ ಅದಾ ಅಂತ ಜನ ಮಾತಾಡ್ತಾರೆ.”
” ಹಾಗಾದ್ರೆ ಇದು ಒಳ್ಳೆಯದೆ ಆಯ್ತು. ಸದ್ಯ ಊರಲ್ಲಿ ಕೂಲಿ ಕೆಲ್ಸ ಮಾಡೊರು ಯಾರು ಇಲ್ಲ.
ಎಲ್ಲ  ಜನ ಊರು ಬಿಟ್ಟಿದ್ದಾರೆ. ಇಲ್ಲಿರೋದೆ ನಾನು ಮಾತ್ರ. ನಂಗೆ ಕೆಲ್ಸ ಕೇಳಿದರೆ ಅವ್ರು ಇಲ್ಲ ಅಂತಾರೆಯೆ ? ” ಅಂತ ರಂಗಪ್ಪ ಎದ್ದು ದೊತ್ತರದ ನಿಲುಗಿ ಟೊಂಕಕ್ಕೆ ಸಿಗುಸಿಕೊಳ್ಳುತ್ತಾ ಬಾಗಿಲಲ್ಲಿನ ಊಂಗುಟ್ ಕಡಿದ ಹಳೆ ಚಪ್ಪಲಿ ಹಾಕೊಂಡು ಮಠದ ಹಾದಿ ಹಿಡಿದ.
ಅದು ಈ ಗ್ರಾಮದಲ್ಲಿ ಇರೊದು ದೊಡ್ಡ ಮಠ ಅದಕ್ಕೆ ‘ಕರಿಚೋಳ ಮಠ ‘ ಅಂತ ಹೆಸರು. ಇದು ನಾಡಿನಾದ್ಯಂತ ಚಿರಪರಿಚಿತವಾಗಿದ್ದರಿಂದ ಈ ಮಠಕ್ಕೆ ಅಪಾರ ಭಕ್ತ ಸಮೂಹವಿದೆ.ಇದರ ಈಗಿನ ಉತ್ತರಾಧಿಕಾರಿಯೇ ಮಹಾವೀರ ಸ್ವಾಮಿಗಳು. ಅವರನ್ನು ಸಾಕ್ಷಾತ್ ನಡೆದಾಡುವ ದೇವರು ಅಂತ ಜನ ನಂಬಿದ್ದಾರೆ. ಹಾಗಿರುವಾಗ
‘ಈ ದ್ಯಾವ್ರು  ನಂಗೆ ಕೈ ಬಿಡ್ತಾನೆಯೆ ? ಅಂತ ಯೋಚಿಸುತ್ತಾ ರಂಗಪ್ಪ ಮಠ ತಲುಪಿದ.
ಆಗಿನ ಮಡೆಯಪ್ಪನವರ ಸರ್ಕಾರ ಮಠಕ್ಕೆ ಎರಡು ಕೋಟಿ ಹಣ ಬಿಡುಗಡೆ ಮಾಡಿದ್ದರಿಂದ ಅಲ್ಲೊಂದು ಸುಂದರವಾದ ದೇವಾಲಯ ಕಟ್ಟಲು ಸ್ವಾಮಿಗಳು ಪ್ಲಾನ್ ಮಾಡಿದರು.ಅದರ ತಳಪಾಯದ ಕೆಲ್ಸ ನಡೆಯುತ್ತಿತ್ತು.

ಎಂದೂ ಮೈ ಬಗ್ಗಿಸಿ ದುಡಿಯದೆ ಹತ್ತಾರು
ಆಳು- ಕಾಳುಗಳನ್ನು ಇಟ್ಟುಕೊಂಡ ಊರ ಗೌಡರೆ ಅಲ್ಲಿ ಸ್ವತ:ಗುದ್ದಲಿ ಹಿಡಿದು  ಅಗೆಯತೊಡಗಿದರು.
ಮತ್ತೆ ಊರ ಕುಲಕರ್ಣಿ, ಗೌಡ್ರ ಗುದ್ದಲಿಗೆ ಬರುವ ಮಣ್ಣು ಎಳೆದು ಸಲ್ಕಿಯಿಂದ  ಬುಟ್ಟಿ ತುಂಬಿ ಮಾಲಿಪಾಟೀಲ್ ಮರೆಪ್ಪನ ಕೈಗೆ ಎಸೆಯುತ್ತಿದ್ದ.ಆತ ಅದನ್ನು ಕ್ಯಾಚ್ ಹಿಡಿದು ಪಾಯದ ಪಕ್ಕಕ್ಕೆ ಎಸೆಯತೊಡಗಿದ. ಊರಲ್ಲಿನ ಇನ್ನೂ ಕೆಲವು ಹತ್ತಾರು ಜನ ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡತೊಡಗಿದರು.
ದಿನಾ ಬೆಳಗಾದ್ರೆ ಬಿಳಿ ಬಿಳಿ ಬಟ್ಟೆ ಉಟ್ಕೊಂಡು ಲಿಡರ್ ತರಹ ತಿರುಗಾಡುವ ಈ ಗೌಡ್ರು,ಕುಲಕರ್ಣಿ, ಮಾಲಿಪಾಟೀಲ್ ,ಇತರೆ ಮೇಲ್ಜಾತಿ ಜನ ಇವತ್ತು ಕೂಲಿಗಳ ತರಹ ಕೆಲ್ಸ ಮಾಡ್ತಿರುವುದು ನೋಡಿದ ರಂಗಪ್ಪನಿಗೆ ಆಚರ್ಯವಾಗಿತ್ತು.
ಅಷ್ಟರಲ್ಲಿ ಹಿಂದಿನಿಂದ ಓಡಿ ಬಂದ ಹೆಂಡ್ತಿ ಸುಬ್ಬವ್ವನನ್ನು ಕಂಡು
” ನೀನು ಯಾಕೆ ಬಂದೆ ? ಅಂತ ಕೇಳಿದ .
” ಇಲ್ಲಾ ರ್ರೀ ! ಕೆಲ್ಸ ಸಿಕ್ಕರೆ ನಾನು ನಿಮ್ ಜೋತ್ಗೆ ಕೂಲಿ ಮಾಡಿದ್ರೆ ಚನ್ನಾಗಲ್ವೆ ? ನೀವೊಬ್ಬರೆ ದುಡಿದ್ರೆ ಸಂಸಾರಕ್ಕೆ  ಸಾಲ್ತದೆಯೇ ?
ನಾನು ನಿಮ್ಮೊಂದಿಗೆ ಕೆಲ್ಸಕ್ಕೆ ಸೇರಕ್ಕೊಬಹುದಲ್ಲ ?
ಇಬ್ರು ದುಡಿದ್ರೆ ಈ ನಮ್ಮ ಸಂಸಾರದ ನೌಕೆ ಚಂದಾಗಿ ಸಾಗಬಹುದು ” ಅಂತ ಆಕೆ ಒಮ್ಮೆ ಗಂಡನ ಮುಖ ನೋಡಿ ಮಠದ ಕಡೆಗೆ ದೃಷ್ಟಿ ತಾಗಿ ಮತ್ತೆ ಆಕೆ
” ರ್ರೀ ! ಅಲ್ಲಿ ನೋಡ್ರಿ ! ನಮ್ ಗೌಡ್ರು ಗುದ್ದಲಿ ಹಿಡಿದು ಹ್ಯಾಂಗ್ ಕೆದರುತ್ತಿದ್ದಾರೆ ” ಅಂತ  ಮಠದ ಕಡೆಗೆ ಕೈ ಮಾಡಿ ತೋರಿಸಿದಳು.ಇದನ್ನೆಲ್ಲ ದೂರದಿಂದಲೇ ಗಮನಿಸಿದ ರಂಗಪ್ಪ ಏನೂ ಅರ್ಥವಾಗದವನಂತೆ ಮೌನ ತಾಳಿದ.
” ಊರಲ್ಲಿ ದೊಡ್ಡ ಸಾಹುಕಾರನಾದ  ಸೂರಪ್ಪಗೌಡರಿಗೆ ಇಂತಹ ಕೂಲಿ ಕೆಲ್ಸ ಮಾಡುವ ಪರಿಸ್ಥಿತಿ ಬಂತೆ ? ಮಾಲಿಪಾಟೀಲ್, ಈ ಕುಲಕರ್ಣಿ ಇವರಿಗೆಲ್ಲ ಬರಗಾಲ ಇಂತಹ ಗತಿ ತಂದೊದಗಿತ್ತೆ ?
ಅರೆ ! ಈ ಬರ ಅನ್ನೋದು ಊರ ಗೌಡ್ರಿಗೂ ಇಂತಹ  ಸಂಕಷ್ಟಕ್ಕೆ ಸಿಲುಕಿಸಿದೆ ಅಂದ್ರೆ ನಮ್ಮಂಥವರ ಪಾಡೇನು ? ಅಂತ ಯೋಚಿಸುತ್ತಾ ಹೆಂಡ್ತಿ ಕಡೆಗೆ ತಿರುಗಿ.
” ನೋಡು ಸುಬ್ಬು , ಕಾಲ ಅನ್ನೊದು ಎಂಥೆಂತವರನ್ನು ಹ್ಯಾಂಗೆಂಗೋ ಆಟ ಆಡಿಸ್ತಿದೆ ಅನ್ನೊದಕ್ಕೆ ಇದೇ ಸಾಕ್ಷಿ. ಸಪ್ತ ದೇಶದ ಒಡೆಯನಾದ ಹರಿಶ್ಚಂದ್ರನಿಗೂ ಒಂದು ಕಾಲದಲ್ಲಿ ಹೆಣ ಸುಡುವ ಕಾಯಕ ಒದಗಿ ಬರಲಿಲ್ಲವೇ ?
ಹಾಗೆ ಈ ಸಾವ್ಕಾರರಿಗೆ ಇಂತಹ ಕೂಲಿ ಮಾಡುವ ಕಷ್ಟ ಬಂದದೊದಗಿದೆ ಅಂತ ಕಾಣ್ತದೆ ”
” ಹೌದು, ಕಾಲ ಚಕ್ರ ಎಲ್ಲರಿಗೂ ಹೆಂಗೆಂಗೋ ಆಟ ಆಡಿಸ್ತದೆ ” ಅಂತ ಸುಬ್ಬವ್ವ ಗಂಡನೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಮಠದೆಡೆಗೆ ಹೆಜ್ಜೆ ಹಾಕಿದಳು.
ಇವರ ಬರುವಿಕೆಯನ್ನು ದೂರದಿಂದಲೇ ಗಮನಿಸಿದ  ಸ್ವಾಮಿಗಳ ಶಿಷ್ಯ ಸುಬ್ರಹ್ಮಣ್ಯ ಇವರು ಹತ್ತಿರ ಬರುತ್ತಿದಂತೆ
” ಏನೂ ! ಈ ಕಡೆ ಗಂಡ-ಹೆಂಡ್ತಿ ತೋಲ್ ಖುಷಿಯಿಂದ ಬರತ್ತಿದ್ದಿರಿ ? ಅಂತ ಕೇಳಿದ.
” ಏನಿಲ್ಲ ಅರ್ಚಕರೆ ! ಬರಗಾಲ‌ ಬಿದ್ಧು ಮನೆಯಲ್ಲಿ ತಿನ್ನೊಕೆ ಅನ್ನವಿಲ್ಲ. ಉಡೊಕೆ ಬಟ್ಟೆಯಿಲ್ಲ.
ದಿನದೂಡುವುದೇ ಕಷ್ಟವಾಗಿದೆ.ಊರ ತುಂಬ ಕೆಲ್ಸಕ್ಕಾಗಿ ಅಲೆದು ಅಲೆದು ಸಾಕಾಗಿದೆ . ಹಾಗಾಗಿ ಯಾರು ಕೆಲ್ಸವಿಲ್ಲದೆ ಕೂಲಿಗೆ ಸೇರಿಸಿಕೊಳ್ಳುತ್ತಿಲ್ಲವಾದ್ದರಿಂದ ಊರಲ್ಲಿನ ನಮ್ಮ ದಲಿತ ಕೇರಿಯ ಜನ ಬಾಂಬೆ ಪುಣೆಗೆ  ವಲಸೆ ಹೋದ್ರು  ನಾವೂ ಹೋಗಬೇಕು ಅಂದು ಕೊಂಡ್ವಿ ಆದ್ರೆ ಜಾಸ್ತಿ ಮಕ್ಳಿರುವ ನಮ್ಗೆ ಊರ ಬಿಟ್ಟು ಹೋಗೋದಾದ್ರೂ ಹೇಗೆ ? ಅಂತ ಯೋಚಿಸ್ತಾ ಇರುವಾಗ
ನಮ್ ದ್ಯಾವ್ರ ಮಠದಲ್ಲಿ ಕೆಲ್ಸ ಇದೆಯಂತ ತಿಳಿದು ನಿಮ್ಮನೆ ಕೇಳೋವಾ ಅಂತ ಹುಡ್ಕೊಂಡು ಬರತ್ತಾ ಇದ್ವಿ ” ಅಂತ ಹೇಳ್ತಿದಂತೆ ಆ ಸುಬ್ರಹ್ಮಣ್ಯ ಕೆಂಡಮಂಡಲವಾಗಿ ಅವರನ್ನು ಸುಟ್ಟು ಬಿಡುವಂತೆ ಒಂದೇ ಸವನೆ ಕೆಂಗಣ್ಣಿನಿಂದ  ನೋಡಿದ.
” ಅರ್ಚಕರೆ ! ನಮ್ ದ್ಯಾವ್ರು ಮಂಠದಲ್ಲಿ ಗರ್ಭಗುಡಿ ಕಟ್ಟಿಸ್ತಾ ಇದ್ರಿಯಂತೆ ಅದ್ರ ತಳಪಾಯ ಕಟ್ಟಡಕ್ಕೆ ಯಾರು ಸಿಗದೆ ಇರೊದರಿಂದ ಊರ ಗೌಡ್ರು ಕುಲಕರ್ಣೆರು ಕೈಲಿಂದ ಮಾಡಸ್ತಿದ್ದಿರಲ್ಲಾ ?
ಯಾಕೆ ನಾನು ಕೆಲ್ಸ ಮಾಡಕ್ಕಿಲ್ವಾ ? ಈ ಕೆಲ್ಸ ನಂಗೆ ಕೊಡಿ .
ನಾ ನನ್ ಹೆಂಡ್ತಿ ಇಬ್ರು ಹ್ಯಾಂಗ್ ಕೆದರಿ ಹಾಕ್ತಿವಿ ನೊಡ್ತಾ ಇರಿ ” ಅಂತ ಆಸೆಗಣ್ಣಿಂದ ನುಡಿದ ರಂಗಪ್ಪ.
ಈ ಮಾತು ಕೇಳಿದ ಸುಬ್ರಹ್ಮಣ್ಯನಿಗೆ ಕೋಪ ನೆತ್ತಿಗೆರಿತ್ತು.
” ಏನೂ ! ನಿಮ್ಗೆ ಬುದ್ಧಿ ಇದೆಯೆ ? ಈ ಪವಿತ್ರ ಕೆಲ್ಸಕ್ಕೆ ನೀವೂ ಗುದ್ದಲಿ ತೊಡುವುದೇ ?
ಛೇ ! ಛೇ! ಶಾಂತಂ. ಪಾಪಂ ! ಶಾಂತಂ. ಪಾಪಂ !  ” ಅಂತ ಎರಡು ಗಲ್ಲ ಗಲ್ಲ ಬಡಿದುಕೊಂಡನು.
” ಯಾಕೆ ಅರ್ಚಕರೆ ! ನಮ್ಮಿಂದ ಅಂತಹದೇನಾಗಿದೆ ?
ನಾವೂ ಮನುಷ್ಯರಲ್ಲವೇ ?
ನಾವೂ ದೇವರ ಭಕ್ತರಲ್ಲವೇ ? ” ಎಂದು ರಂಗಪ್ಪ ಹೇಳುತ್ತಿದಂತೆ
” ಛೇ ! ನಡ್ರೀ ಇಲ್ಲಿಂದ.
ನಿಮ್ಮಂಥ ದರಿದ್ರ ಜನರಿಂದ ಮೈಲಿಗೆ ಆಗಬಾರದಂತಲೆ ನಾವೂ ಊರ ಗೌಡ್ರು, ಕುಲಕರ್ಣಿಯವರ ಕೈಲಿಂದ ಬೇಕೂ ಅಂತಲೆ ತಳಪಾಯ ತೋಡಿಸುತ್ತಿರುವುದು. ಈ ಮಠದ ಗರ್ಭಗುಡಿ ನಾವೂ ಮೇಲ್ವರ್ಗದವರಿಂದಲೆ  ಕಟ್ಟಿಸ್ತಾ ಇರೋದು.ಯಾವ ಹೊಲೆಯಾರ್ ಮಾದಿಗರನ್ನು ನಾವು ಕೆಲ್ಸಕ್ಕೆ ಸೇರಿಸಿಕೊಳ್ತಾ ಇಲ್ಲ. ಈ ಕೆಲ್ಸ ಮುಗಿಯುವವರೆಗೂ ನೀವು ಯಾರು ಒಂದ್ ಚಿಂಪು ಕೂಡ ಇಲ್ಲಿ ಬಂದು ಮುಟ್ಟುವ ಹಾಗಿಲ್ಲ.ಈ ಪವಿತ್ರವಾದ ಕೆಲ್ಸ ನಿಮ್ಮಂಥವರಿಗೆ ಕೊಟ್ಟು ಅಪವಿತ್ರಗೊಳಿಸುವುದೆ ? ಛೇ ! ಮೊದ್ಲು ಇಲ್ಲಿಂದ ಜಾಗ ಖಾಲಿ ಮಾಡಿ ” ಅಂತ ಬೈಯತೊಡಗಿದ.
ರಂಗಪ್ಪನ ಮೈಯಲ್ಲಿ ರಕ್ತ ಕುದಿಯತೊಡಗಿತ್ತು.
ಸುಬ್ಬವ್ವ ಅರ್ಚಕರ ಮಾತಿಗೆ ಅವಮಾನಿತಳಾಗಿ ತಲೆ ತಗ್ಗಿಸಿದಳು.
” ಏನ್, ಜನಾನೋ ಏನೋ ! ದೇವರ ಪವಿತ್ರ ಕಾರ್ಯಕ್ಕೂ ಈ ಮಾಂಸ ತಿನ್ನೊರು ಮೈಲಿಗೆ ಮಾಡ್ಲಿಕೆ ಬರತ್ತಾರೆ ” ಅಂತ ಸುಬ್ರಹ್ಮಣ್ಯ ವಟಗುಟ್ಟುತ್ತಾ ಇರುವಾಗ  ಅದು ಗೌಡ ಸೂರಪ್ಪನ ಕಿವಿಗೆ ಬಿದ್ದು ನಿನ್ನೆ ದಿನ ದಾಬಾದಲ್ಲಿ ಮಾಂಸ ತಿಂದಿದ್ದು ನೆನಪಾಗಿದ್ದರಿಂದ ಆ ಮಾತು ಅವನ ಮನಸ್ಸಿಗೆ ಈಟಿಯಂತೆ ನಾಟಿತ್ತು.
ಕುಲಕರ್ಣಿಯು ಕೂಡ ಭಯ ಭೀತನಾಗಿ ಒಮ್ಮೆ ಗೌಡ್ರ ಮುಖ ನೋಡಿ ನಕ್ಕ.ಅವನ ನಗುವಿಗೆ ಮಾಲಿ ಪಾಟೀಲ್ ಗಹಗಹಿಸಿ ನಗತೊಡಗಿದ .ಅಲ್ಲಿ ಕೆಲ್ಸಕ್ಕೆ ಸೇರಿದ ಹತ್ತಾರು ಜನ ಒಬ್ಬರನೊಬ್ಬರು ಮುಖನೋಡಿ ಒಮ್ಮೆ ‘ ಕಿಸ್ಸಕನೆ ‘ ನಕ್ಕು ಗುದ್ದಲಿ ಹೊಡೆಯತೊಡಗಿದರು.
ರಂಗಪ್ಪನ ತಲೆಯಲ್ಲಿ ಈಗ ಒಂದೇ ವಿಚಾರ ಮುಂಬೈಗೆ ಮಕ್ಕಳ ಸಮೇತ ‘ಗುಳೆ’ ಹೋಗೊದು.
ಸುಬ್ಬವ್ವನು ಹೇಳಿದಳು ” ರ್ರೀ ! ಕೂಲಿ ಕೆಲ್ಸ ಮಾಡೋಕೆ ಮುಂಬೈಗಿಂತ ಪುಣೆ ಚನ್ನಾಗಿದೆ ಅಂತೆ ”  ಆಕೆ ಗಂಡನೊಂದಿಗೆ ಮಕ್ಕಳ ಗಂಟು ಮೂಟೆ ಕಟ್ಟಿಕೊಂಡು ಇಡಿ ಕುಟುಂಬ ಸಮೆತ ‘ಗುಳೆ ‘ ಹೊರಟರು.

      – ಮಚ್ಚೇಂದ್ರ ಪಿ ಅಣಕಲ್.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *