ಸಾವಿರದ ನೋವುಗಳು.
ಊರ ಕೇರಿಯ ಒಳಗೆ
ಮುಗ್ಧ ಬಾಲೆಯರ ಬೇಟೆ !
ಮುಖದಲಿ ಸಭ್ಯರ ಮುಖವಾಡ ಧರಿಸಿ
ದೇವರು ದಿಂಡಿರ ಹೆಸರು ಹೇಳಿ ಹೆದರಿಸಿ
ಮಾತು ಕೇಳದಿರೆ ಊರಿಗೆ ಕೇಡೆಂದು ಬೆದರಿಸಿ
ಮಸಲತ್ತು ಮಾಡಿಸಿ ಅಮಾಯಕರ ಅಂಜಿಸಿ
ನಗುವರು ವಂಚಕರು ಗಹಿ ಗಹಿಸಿ!
ಬಾಲ್ಯ ಮುಗಿಯುವ ಮುನ್ನವೇ
ಬಾಲೆಯರಿಗೆ ಬಸವಿ ಪಟ್ಟ ಕಟ್ಟುವ ನೀಚರು!
ಮನಸ್ಸು ಮಾಗುವ ಮುನ್ನವೇ
ಮುಕ್ಕುವ ಕಟುಕ ಮನಸ್ಸಿನ ರಕ್ಕಸರು!
ಕತ್ತಲಾದರೆ ಇವರದು ಕಳ್ಳ ಬೆಕ್ಕಿನ ನಡಿಗೆ
ಮುಟ್ಟಿಸಿಕೊಳ್ಳದ ಮಡಿವಂತರು ಸಾಗುವರು
ಮುಟ್ಟಿಸಿಕೊಳ್ಳಲು ಅಮಾಯಕರ ಮನೆಗೆ
ನಾಚಿಕೆ ಆಗದು ಇವರ ನೀಚ ಮನಸ್ಸಿಗೆ!
ಸಭ್ಯರು ಬೆತ್ತಲಾದರು ಮರೆತು ಮಡಿ ಮೈಲಿಗೆ
ಕಾಮದ ಅಮಲು ಇಳಿದರೆ
ಮರಳಿ ಮತ್ತದೇ ಸಜ್ಜನರ ಸೋಗು!
ರಾತ್ರಿ ಮುಟ್ಟಿಸಿಕೊಂಡವಳು
ಬೆಳಗಾದರೆ ಅಸ್ಪೃಶ್ಯಳು!!
ಇವರ ಪಾಪದ ಪಿಂಡ ಹೊತ್ತು
ಒಂಬತ್ತು ತಿಂಗಳು ತಿರುಗಿದರೇನು ಬಂತು !
ಸಾವಿರ ನೋವುಗಳನುಂಡು
ಹೆತ್ತರೂ ಅದು ತಂದೆ ಹೆಸರಿರದ ಮಗು!
ಸಾವು ಬಂದರೆ ಜೀವ ಉಳಿಯದು
ಒಡಲಾಳದ ನೋವು ಎಂದಿಗೂ ಅಳಿಯದು
ಬಿಟ್ಟು ಹೋಗಬೇಕಿದೆ ಮುಂದಿನ ಪೀಳಿಗೆಗೆ
ಬಳುವಳಿಯಾಗಿ ಎದೆಯಾಳದ ನೋವುಗಳು!
ಸತ್ತ ಭಾವನೆಗಳ ಜೊತೆಗೆ ಬದುಕಿ ಜೀವನ
ಕ್ಷಣ ಕ್ಷಣಕೂ ನೋವು
ಸಾಯದೇ ಜೀವಂತವಾಗಿವೆ
ಸಾವಿರ ನೋವುಗಳು!
ಸಾವಿರದ ನೋವುಗಳು!!
– ಬಸವರಾಜ ದಯಾಸಾಗರ.
ಕವಿ ಪರಿಚಯ:

ಸಾಹಿತಿ ಬಸವರಾಜ ದಯಾಸಾಗರ ರವರು ವಿಜಯಪುರ
ಜಿಲ್ಲೆ ಇಂಡಿ ತಾಲ್ಲೂಕಿನ ನಿಂಬಾಳ ಗ್ರಾಮದವರು. ಬಿ.ಎ ಪದವಿಧರರಾದ ಇವರು ಬೀದರ ಜಿಲ್ಲೆಯ ಹುಮನಾಬಾದಿನ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಉಪಗೃಹದ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಕಾಲ ಬೆಂಗಳೂರಿನ ‘ಮಾರ್ಧನಿ’ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾಗಿ ಸೇವೆಸಲ್ಲಿಸಿದ್ದು,ಕತೆ ಕವನ ಲೇಖನ ಬರೆದು ಕವಿ, ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. `ಅಪರೂಪದ ಸಾಹಿತಿ ಎಂ.ಜಿ.ದೇಶಪಾಂಡೆ` (ವ್ಯಕ್ತಿ ಪರಿಚಯ) ‘ಸಾವಿರದ ನೋವುಗಳು (ಕವನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. . ಇವರ ಬರಹಗಳು ನಾಡಿನ ಹಲವಾರು ಕನ್ನಡ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಕಸಾಪ ಸೇರಿದಂತೆ ಇತ್ಯಾದಿ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಕೃಷಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.