ಮುನಿಶ್ರೇಷ್ಠ
ಪ್ರಚೇತಸೇನನ ಅಚ್ಚುಮೆಚ್ಚಿನ ಮಗನಾಗಿ
ಜನಿಸಿಹರು ವಾಲ್ಮೀಕಿ ಮಹರ್ಷಿ ರತ್ನಾಕರರಾಗಿ
ಕ್ರೌಂಚ ಪಕ್ಷಿಯ ವಧೆ ಕಂಡು ಕ್ರೋಧಿತರಾಗಿ
ಶಾಪವಿತ್ತರು ಬೇಟೆಗಾರನಿಗಾಗ ಗದ್ಗದಿತರಾಗಿ
ಶ್ಲೋಕ ಹೊಮ್ಮಿತು ತಮಸಾ ನದಿಯ ತೀರದಲಿ
ರಚಿಸಿದರು ರಾಮಾಯಣ ಏಳು ಖಂಡಗಳಲಿ
ಇಪ್ಪತ್ನಾಲ್ಕು ಸಹಸ್ರ ಶ್ಲೋಕ ನಲಿದಿವೆ ಕಾವ್ಯದಲಿ
ನಾಲ್ಕುಲಕ್ಷದೆರಡು ಪದಗಳು ಅಪ್ಪಿವೆ ಗ್ರಂಥದಲಿ
ಮಾತಾ ಪಿತ್ರರ ಸೇವಾ ಪರಿ ಹುದುಗಿದೆಯಿದರಲಿ
ಸಹೋದರ ಬಾಂಧವ್ಯಗಳು ಮೂಡಿವೆ ಅಕ್ಷದಲಿ
ಗುರು ಶಿಷ್ಯರ ಸಂಬಂಧಕೆ ರಾಮ ಹನುಮರಿಲಿ
ಸೀತೆಯ ಅಪಹರಿಸಿ ರಾವಣನಾದ ದುಷ್ಟನಿಲಿ
ಲವ ಕುಶರು ಪಡೆದರು ಅಪರಿಮಿತ ನೀತಿ ಶಿಕ್ಷಣ
ಅಶ್ವಮೇಧ ಯಾಗಕೆ ಹಾಕಿದರವರು ಕಡಿವಾಣ
ಉಲಿದು ಮಹಾಕಾವ್ಯ ಬೀರಿದರವರು ಸುಜ್ಞಾನ
ತಟ್ಟಿತು ಚಪ್ಪಾಳೆ ಋಷಿಮುನಿಗಳ ಸಭಾಂಗಣ
ಇತ್ತರು ಆದಿಕವಿ ನ್ಯಾಯ ನೀತಿ ಶಿಸ್ತು ಸಂಯಮ
ಬದುಕಲಿ ಅಳವಡಿಸಿರೆ ಬಾಳಾಗುವುದು ಉತ್ತಮ
ಧರೆಯ ಮಹಾಕಾವ್ಯ ಬರೆದ ಋಷಿಗೆ ಪ್ರಣಾಮ
ನಿತ್ಯ ನಾಲಿಗೆ ನುಡಿಯಲಿ ಮುನಿ ಶ್ರೇಷ್ಠರ ನಾಮ.
– ಮಾಣಿಕ ನೇಳಗಿ ತಾಳಮಡಗಿ.ಬೀದರ
ಕವಿ ಪರಿಚಯ:

ಸಾಹಿತಿ ಮಾಣಿಕ ನೇಳಗಿ ಯವರು ಬೀದರ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದವರು. ಬಿ.ಎ. ಎಂ.ಎ ಕನ್ನಡ ಪದವಿಧರರಾಗಿದ್ದು, 1999ರಿಂದ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ ಇವರು ಈಗ ಬೀದರ ಜಿಲ್ಲೆಯಲ್ಲಿ ಸಹಾಯಕ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.’ ಬದಲಾಗೋಣ. ಭರವಸೆ,ದಾಂಪತ್ಯ ಸವಿ, ಹರಿತವಾಗಲಿ (ಕವನ ಸಂಕಲನ) ‘ಬವಣೆ’ ‘ಗಾಂಧಿಜಿಗೆ ನಮನ‘ (ಹನಿಗವನ) ‘ರುಕ್ಕಿಣಿಯ ಆತುರ’ (ಕಥಾಸಂಕಲನ) ‘ಸಂಕೀರ್ಣ‘ (ಲೇಖನ) ‘ಮಾನವಿಯತೆ‘ (ಚಿಂತನ) ಎಂಬ ಕೃತಿಗಳು ಬರೆದಿದ್ದಾರೆ. ಇವರಿಗೆ ‘ಧರಿರತ್ನ ಪ್ರಶಸ್ತಿ, ಕುವೆಂಪು ಸಿರಿ ಪ್ರಶಸ್ತಿ, ಸೃಜನ ಕವಿ ರತ್ನ ಪ್ರಶಸ್ತಿ,ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.