ದಾಸ ಶ್ರೇಷ್ಠ ಕನಕದಾಸರು.
…………………………..
ಹರಿದಾಸ ಸಾಹಿತ್ಯ ಪರಂಪರೆಗೆ
ಕನಕದಾಸರದು ಅಪಾರ ಕೊಡುಗೆ
‘ಸಂತಕವಿ’ ಎಂಬ ಹೆಗ್ಗಳಿಕೆ
ಇವರದು ಶ್ರೇಷ್ಠ ಧೀಮಂತಿಕೆ.
ತಿರುಪತಿ ತಿಮ್ಮಪ್ಪನ ವರದಾನವಿವರು
ಬೀರಪ್ಪ, ಬಚ್ಚಮ್ಮ ದಂಪತಿಗಳ ಸುತರು
ವ್ಯಾಸರಾಯರ ನೆಚ್ಚಿನ ಶಿಷ್ಯರಿವರು
ಸಕಲ ವಿದ್ಯಾ ಪಾರಂಗತರಾಗಿ ಮೆರೆದರು.
ಕಾಗಿನೆಲೆಯ ಶ್ರೀ ಆದಿಕೇಶವ
ಕನಕದಾಸರಿಗೆ ಆರಾಧ್ಯ ದೈವ
ತಳೆದರು ಭಕ್ತಿ, ವೈರಾಗ್ಯ ಭಾವ
ಶ್ರೀ ಕೃಷ್ಣನೆಂದರೆ ಇವರಿಗೆ ಜೀವ.
ಬುವಿಯಲಿ ಇರುವ ಮನುಜರಿಗೆಲ್ಲ
ಕುಲದ ನೆಲೆಯನು ತಿಳಿಸಿದ ಮಹಿಮರು
ಉಡುಪಿಯ ಕೃಷ್ಣನ ಮಹಿಮೆಯ ಪೊಗಳಿ
ಭಕ್ತಿ ಪಂಥವನು ಎತ್ತಿ ಹಿಡಿದವರು.
ಕನಕನ ಭಕ್ತಿಗೆ ಒಲಿದ ಶ್ರೀ ಕೃಷ್ಣನು
ಅವನೆಡೆ ತಿರುಗಿ ದರುಶನವಿತ್ತನು
ಕೃಷ್ಣ ಮಠದಲಿ ಪುಣ್ಯ ಸ್ಥಳವಿದು
ಕನಕನ ಕಿಂಡಿಯೆಂದ್ಹೆಸರು ಪಡೆದಿಹುದು.
‘ಹರಿಭಕ್ತಿಸಾರ’, ‘ರಾಮಧಾನ್ಯ ಚರಿತೆ’
‘ಮೋಹನ ತರಂಗಿಣಿ’, ‘ನಳ ಚರಿತ್ರೆ’
ಕಾವ್ಯ,ಕೀರ್ತನೆಗಳ ಮಹಾ ಸಂಗಮ
ಕನ್ನಡ ಸಾಹಿತ್ಯಕಿವರ ಸೇವೆ ಅನುಪಮ.
ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು
ಕನಕದಾಸ, ಪುರಂದರ ದಾಸರು
ಇವರ ಅನನ್ಯ ಸೇವೆಗೆ ಎಲ್ಲರು
ಭಕ್ತಿಭಾವದಲಿ ಬಾಗಿ ನಮಿಸುವರು.
🙏🙏🙏🙏🙏🙏🙏🙏
– ಜಿ.ಎಸ್.ಗಾಯತ್ರಿ.
ಶಿಕ್ಷಕಿ.
ಬಾಪೂಜಿ ಶಾಲೆ.
ಹರಿಹರ.