Oplus_131072

   ಫಲಿತಾಂಶದ ಸುತ್ತ. (ಕತೆ)

  

ಕಾಕ, ಏ ಕಾಕ ” ಅಂತ ಹೊರಗಿಂದ ಕೇಳಿ ಬಂದ ದನಿಗಿ ಒಳಗಿಂದಲೇ `ಓ’ ಅಂತ ಹೊರ‍್ಗ ಬಂದು “ಏನಪ್ಪ ರಾಜು, ಒಳಗ ಬಾ, ಹೊರ‍್ಗ ನಿಂತ್ಯಾಕ್ ಕರಿಲಿಕ್ ಹತ್ತಿದಿ?” ಅಂದಳು ಮಾದೇವಿ. “ಸಣ್ಣವೋ! ಕಾಕ ಇಲ್ಲೇನು?” ಅಂತ ರಾಜು ಮತ್ತೆ ಕೇಳಿದ “ಇಲ್ಲಪ್ಪ! ಅವ್ರು ಬೆಳಗಾದ್ರ ಸಾಕ್, ಗೌಡ್ರ ಮನಿಗಿ ದುಡ್ಯಾಕ್ ಹೋಗ್ಬೇಕು. ಇಯಾಳತನ ಮನ್ಯಾಗ ಇದ್ರ ನಮ್ಮಂಥೋರ  ಹ್ವಾಟ್ಟಿ ಹ್ಯಾಂಗ ತುಂಬತ್ತದ? ಹ್ಞೂಂ ಯಾಕಪ್ಪ! ಏನ ದಂಧ್ಯಾ ಅದ? ಅಂತ ಪ್ರಶ್ನಿಸಿದಳು.”ಯಾಕಿಲ್ಲ ಸಣ್ಣವೋ! ಇವತ್ತ ಹತ್ತನೇ ರಿಜೇಲ್ಟ್ ಎಲ್ಲಾ ಶಾಲಿಗಿ ಹಚ್ಚತ್ತಾರಂತ ಅದಕ್ ರಾಮು ಹಿನ್ನಾ ಬಾಂಬೆಯಿಂದ ಬಂದಿಲೇನು?””ಹಿನ್ನಾ ಬಂದಿಲ್ಲಪ್ಪ! ನಾವೂನು ದ್ಯಾವ್ರ ಹಾದಿ ನೋಡಿದಾಂಗ ಹಗ್ಲೂ ರಾತ್ರಿ ಅವ್ನ ಚಿಂತ್ಯಾಗ ಕಾಯ್ತಾ ಇದ್ವಿ. ಇರಾಕ ಒಬ್ಬ ಮಗಾ ಇದ್ದಿ ಸುಟ್ಯಾಗ ಉಂಡು ಮನ್ಯಾಗ ಇರಪ್ಪ ಅಂದ್ರ ಅದ್ಯಾವನೋ ಕೆರಿಮನಿ ಮಂಜ್ಯಾನ ಜೋತ್ಗಿ ಹೇಳ್ದೆ-ಕೇಳ್ದೆ ಬಾಂಬೆಗೆ ಹೋಗ ಬಿಟ್ಟಾನ ನೋಡಪ್ಪ. ಹುಟ್ ಹಿಡ್ದು ಯಾವುರಿಗಿ ಹೋದಾವಲ್ಲ. ಬಂದಾವಲ್ಲ. ಅಲ್ಲಿ ಹ್ಯಾಂಗ್ ಇರ‍್ತಾನೋ! ಏನೋ! ಒಂದ್ ಜರಾ ಹಸಿವಿ ಆದ್ರ ತಡ್ಯಾವಲ್ಲ. ಅಲ್ಲಿ ಒಬ್ನೆ ಹ್ಯಾಂಗ್ ಮಾಡ್ಕೊಂಡ ತಿಂತಾನೋ ಏನೋ! ಮೈಯಾಗಿನ ಅರಭೀ ಒಂದಿನ ಒಗಿಲಿಲ್ಲಂದ್ರ ರಂಪಾನೆ ಮಾಡ್ತಿದ್ದ. ಅಲ್ಲಿ ಹೋಗಿ ಹ್ಯಾಂಗ್ ದಂಧಾ ಮಾಡ್ಕೊಂಡ್ ಬರ‍್ತಾನೋ ಏನೋ! ಬ್ಯಾಡ ಬ್ಯಾಡ ಅಂದ್ರು ಹೇಳದೆ-ಕೇಳ್ದೆ ಹೋಗ್ಯಾನ” ಅಂತ ಮಾದೇವಿ ಹಿರಿ ಭಾವನ್ ಮಗನ ಮುಂದ ಹೇಳಿ ರಾಮೂನ ನೆಂಪ ಮಾಡ್ಕೊಂಡು ಕಣ್ಣೀರ ಕಪಾಳ್ಕ ತಂದ್ಳು. “ಇರ‍್ಲಿ ಬಿಡು ಸಣ್ಣವ್ವ! ಬಾಂಬೆಗಿ ಹೋದ್ರೆ ಅಳ್ತಾರೇನು? ನೀ ರಾಮು ಎಂಥಾವ ಹನಾ ಅಂತ ಇನ್ನೂ ಅರ್ಥ ಮಾಡ್ಕೊಂಡಿಲ್ಲ. ಅವಾ ಹೋಗಾಗ್ ನಂಗ್ ಏನ ಹೇಳ್ಯಾನ ಗೊತ್ತಾ?””ಏನ ಹೇಳ್ಯಾನಪ್ಪ ರಾಜು ನಮ್ಮಗ. ನಮ್ಗೇನೂ ಹೇಳಿಲ್ಲ. ನಿಂಗೇನ್ ಹೇಳ್ಯಾನ ಹೇಳಪ್ಪ” ಅಂತ ಅವಸರದಿಂದ ಕೇಳಿದ್ಳು.”ಅವಾ 10ನೇ ಪರೀಕ್ಷೆದಾಗ ಪಾಸ್ ಆದ್ರ ಕಾಲೇಜ್ ಮಾಡ್ಲಿಕ್ ರೊಕ್ಕ ಬೇಕಲ್ಲ? ಕಾಲೇಜದಾಗ ಡೋನಿಷನ್ ಅಂತ ಸಾವಿರಾರ್ ರುಪೈ ಕೇಳ್ತಾರಂತ. ಅದ್ಕ ಅವ ಆ ಡೊನೇಷನ್ ಜಮಾ ಮಾಡ್ಕೊಂಡ ಬರ‍್ತಿನಂತ ನಂಗ ಹೇಳಿ ಹೋಗ್ಯಾನ” ಅಂತ ರಾಜು ನುಡಿದ.”ಹ್ಞೂಂ! ಏನ್ ಮಾಡ್ಕೊಂಡ್ ಬರ‍್ತಾನೋ ಯಾನೋ! ಆ ದ್ಯಾರ‍್ಗೆ ಗೋತ್” ಅಂತ ನಿಟ್ಟುಸಿರೆಳೆದಳು. “ಸಣ್ಣವ್ವ! ಇವತ್ತ ಹತ್ತನೇ ರಿಜಲ್ಟ್ ತಿಳಿಲಾತಾವ. ನಾ ರಿಜೇಲ್ಟ್ ನೋಡ್ಲಿಕ್ ಮುಡಬಿಗಿ ನಡದಿನಿ” ಅಂದ ರಾಜು.”ಏ, ಮಗಾ ನಮ್ ರಾಮೂನ್ದೂ ನಂಬರ್ ಬಂದದ ಇಲ್ಲಾ ಜರಾ, ನೋಡ್ಕೊಂಡ್ ಬಾರೋ! ನಿಂಗ್ ಪುಣ್ಯ ಬರ‍್ತದ್” ಅಂತ ಮಾದೇವಿ ಆಸೆಗಣ್ಣಿಂದ ನೋಡುತ ನುಡಿದಳು.”ಆಯಿತ್ತು ಸಣ್ಣವ್ವ! ಆದರ… ಅವ್ನ ನಂಬರ್ ನಂಗೊತಿಲ್ಲ. ಅವ್ನ ನಂಬರ್ ಇದ್ರೆ ಕೊಡು ನೋಡ್ಕೊಂಡು ಬಂದ ಹೇಳ್ತಿನಿ” ಅಂದ.”ಅವ್ನ ನಂಬರೇನೋ ನಂಗೋತ್ತಿಲ್ಲ! ಅವ್ನ ಕಾಪ್ಯಾಗ ಏನೋ ಇಡ್ತಿನಿ. ಯಾರಿಗಾದ್ರೂ ನೋಡ್ಕೊಂಡ್ ಬರ‍್ಲಿಕ್ ಹೇಳು”ಅಂತ ಅಂದಿದ್ದ. ಜರಾ, ಇರಾ ಮಗಾ” ಅಂತ ರಾಮುನ ಶಾಲಿ ಬ್ಯಾಗು ತಂದು ಅವನ ಮುಂದಿಟ್ಟಳು.”ಹ್ಞಾ! ಸಣ್ಣವ್ವ ರಾಮುನ ನಂಬರ್ ಸಿಕ್ತು. ನಾ ಈ ನಂಬರ್ ನೋಡ್ಕೊಂಡ ಬಂದಿ ಹೇಳ್ತಿನಿ” ಅಂತ ಅಲ್ಲಿಂದ ಹೊರಟುಹೋದ.                             -2-ಅದೊಂದು ಸರಕಾರಿ ಪ್ರೌಢಶಾಲೆ. ಶಾಲೆಯ ಆವರಣ ತುಂಬೆಲ್ಲ ವಿದ್ಯಾರ್ಥಿಗಳ ಜಾತ್ರೆ. ಅಲ್ಲಿ ಕೆಲವರು ನಗುತ್ತಿದ್ದರೆ ಮತ್ತೆ ಕೆಲವರು ಮಾರಿ ಸಪ್ಪಗ ಮಾಡ್ಕೊಂಡು ಹೋಗ್ತಿದ್ದರು. ಇದನ್ನು ನೋಡ್ತಿದ್ದ ರಾಜು ತಂದ್ ಹ್ಯಾಂಗ್ ಆಗ್ತದೋ ಅಂತ ಒಳಗ ಚಿಂತಿಸ್ತಾನೆ ಇದ್ದ. ಹಾಗೆ ಸೀದಾ ನೋಟಿಸ್ ಬೋರ್ಡಿಗಿ ಹಾಕಿದ ಫಲಿತಾಂಶದ ಕಡಿಗಿ ಹೋದ. ಅಲ್ಲಿ ವಿದ್ಯಾರ್ಥಿಗಳು ಜೇನು ಹುಳದಂತೆ ಮುಕುರಿದ್ದರು. ಇವನು ಅದರಲ್ಲೊಬ್ಬ ಹುಳುವಾದ. ಅವ್ನಿಗಿ ಎದೆ ‘ಡವಡವ’ ಅಂತಿತ್ತು. ಮೇಲಿಂದ ಕೆಳಗಿನ ತನಾ ಎಲ್ಲಾ ನೋಡ್ತಾ ನಿಂತ. ಒಂದ್ ಸಲ, ಎಡ್ಡ ಸಲ, ಮೂರ್ ಸಲ ನೋಡ್ದ. ಆದ್ರ ಎಲ್ಲೂ ಅವ್ನ ನಂಬರ್ ಕಾಣಿಸಲಿಲ್ಲ. ಒಮ್ಗೆ ಸಿಡಿಲು ಬಡಿದಂಗಾತು. ನೀರಾಸೆನಾಗಿ ರಾಮುನ ನಂಬರ್ ಹುಡುಕಿದ. ಫಸ್ಟಕ್ಲಾಸ್‌ನ್ಯಾಗ ಇದ್ದಿದ್ದು ನೋಡಿ ಅವ್ನ ಹೊಟ್ಟೆ ಉರಿಲಾಕ್ ಹತ್ತಿತ್ತು. ಕಾಕನ ಮಗಾ ಫಸ್ಟಕ್ಲಾಸ್‌ನಾಗ ಪಾಸ್ ಆಗ್ಯಾನ ಅಂದ್ರ ಇವ್ನಿಗಿ `ಇನಸಲ್ಟ್” ಆದಾಂಗಾತು. ಊರಾಗ ಫೇಲ್ ಅಂತ ಹೇಳ್ಕೊಂಡ್ ಹೋದ್ರ ನನ್ ಕಿಮ್ಮತ್ ಏನೂ ಉಳೆಲ್ಲ ಅದಕ್ ಹ್ಯಾಂಗರ ಮಾಡ್ಬೇಕು. ಏನರ ಮಾಡ್ಬೇಕು. ನಾನು ಚೋಲೋ ಅನಸ್ಕೋಬೇಕು” ಅಂತ ಸ್ವೀಟ್ ಅಂಗಡಿಗಿ ಹೋಗಿ ಒಂದ್ ಕಿಲೋ ಪೇಡಾ ತಗೊಂಡು ಮನಿಗಿ ಬಂದ. ಊರಾಗ  “ನಾ ಫಸ್ಟಕ್ಲಾಸ್‌ನ್ಯಾಗ ಪಾಸಾಗಿನಿ” ಅಂತ ಮನಿ ಮನಿ ತಿರ‍್ಗಿ ಪೇಡಾ ಹಂಚತೊಡಗಿದ. ಹಾಗೆ ಮುಂದೂಕ ಕಾಕನ ಮನಿಗೂ ಬಂದು “ಸಣ್ಣವೋ!” ವೋ! ಸಣ್ಣವೋ! ಅಂತ ಬಾಗಲಾಗ ನಿಂತು ಕೂಗಿದಾಗ ” ಏನ ಮಗಾ!” ಅಂತ ಮಾದೇವಿ ಒಳಗಿನಿಂದ ಧಾವಿಸಿ ಬಂದಳು.”ಸಣ್ಣವೋ! ನಂದು ಫಸ್ಟಕ್ಲಾಸ್‌ನಾಗ ರಿಜೇಲ್ಟ್ ಬಂದದ್ ಅದಕ್ಕ..” ಅಂತ ಮುಂದುವರೆಸುತ್ತಿದ್ದಂತೆ ಅವ್ನ ಮಾತ ಅರ್ಧಕ್ಕೆ ನಿಲ್ಸಿ “ಮತ್ ನಮ್ ರಾಮೂನ್ದೂ? ಅಂತ ಪ್ರಶ್ನಿಸಿದಳು.”ಸಣ್ಣವ್ವ! ರಾಮೂ ಒಂದ್ ವಿಷ್ಯದಾಗ ಫೇಲ್ ಆಗ್ಯಾನ” ಅಂತ ಈರ್ಷೆ ಪಟಗೊಂಡು ಸುಳ್ಳು ಹೇಳಿದ. ಈ ಮಾತ ಖರೆ ಅನಸಿ ಕುಂಟ ಕಾಲಾಗ ಮುಳ್ಳು ಚುಚ್ಚಿದಂಗಾತು.                               -3-ಹೊತ್ತ ಮುಣಗಿ ಕತ್ತಲಾಗ್ತಿತ್ತು. ಶಿವಪ್ಪ ಗೌಡ್ರ ಹೊಲಕ್ ಹೋಗಿ ದುಡ್ದು ಮನ್ಗಿ ಬರ‍್ತಿದಾಂಗ ಅವ್ನ ಹೆಣತಿ ಮಾಧವಿ ಮಾರಿ ಸಪ್ಪಗ ಮಡ್ಕೋಂಡು ಕಂಬಕೋರಗಿ ಕುಂತಿದ್ಳು. ಆಕಿನ ಕಣ್ಣಾಗಿನ ನೀರ್ ತನ್ ತಾನೆ ಕಾಲ್ವೆಗಳಾಂಗ ಹರಿತ್ತಾ ಇದ್ದವು. ಅವ್ಳು ಈ ರೀತಿ ದುಃಖ ಪಡಾದು ನೋಡಿ ಶಿವಪ್ಪಗ ಏನೂ ಅರ್ಥನೆ ಆಗಲಿಲ್ಲ. ಅವಾ ” ಏ !. ಯಾಕಗಽಽ ಕಣ್ಣಾಗ ನೀರು? ಮಗಾ ಬಾಂಬೈಗಿ ಹೋದಾಂತ ದಿನಾ ಚಿಂತಿ ಮಾಡಿ ಸೊರ‍್ಗಿ ಹೋಗ್ತಿ ಏನ ? ” ಅವಾ ಇವತ್ತಿಲ್ಲ ನಾಳಿಗಿ ಬಂದೇ ಬರ‍್ತಾನ. ಅವ್ನ ಬಗ್ಗೆ ಚಿಂತಿ ಮಾಡ್ತಾ ಅಳ್ಕೋತ ಕುಂತ್ರ ಹ್ಯಾಂಗ್ ಹುಚ್ಚಿ? ಬಾ . ” ಅಂತ ಶಿವಪ್ಪ ನುಡಿತಿದಂತೆ ಮಾದೇವಿ ಕಣ್ಣೀರ ಹನಿ ಸೇರಗಿನಿಂದ ಒರಸ್ಕೋತ  “ರೀ…!  ನಮ್ ರಾಮೂ ಹತ್ತನೇ ಪರೀಕ್ಷೆದಾಗ ಫೇಲ್ ಆಗ್ಯಾನಂರ‍್ರಿ…!” ಅಂತ ಹೇಳಿದ್ಳು. ಈ ಮಾತ ಕೇಳಿದ ಶಿವಪ್ಪಗೂ ಭಾಳ ನೋವಾತು. ಆ ನೋವಿನಾಗ ಹಸಿದ  ಹೊಟ್ಟೆಗೂ ಊಟ ಬ್ಯಾಡ ಆಗಿತ್ತು.”ಏನ್ರಿ! ನಮ್ ರಾಮೂ ಆ ಮಂಜ್ಯಾನ ಸಂಗ್ತಿ ಮಾಡಿ ಕೆಟ್ಟ ಹೋದ್ನು ನೋಡ್ರಿ! ಬಾಂಬೈಗಿ ಬೇರೆ ಹೋಗ್ಯಾನ ಅಲ್ಲಿ ಏನ್ ಮಾಡ್ಕೊಂಡ ಬರ‍್ತಾನೋ ಯಾನೋ! ಹೂಂ, ಏಳ್ರೀ ನಂಗಾರ, ಹಸಿವಿಲ್ಲ. ನೀವ್ ಉಣ್ರೀ ” ಅಂತ ಎದ್ದು ಪತಿಗೆ ಊಟ ಬಡಿಸುತ್ತಿದ್ದಳು.”ನಂಗೂ ಹಸಿವಿಲ್ಲ. ನಿಂಗ್ ಹಸಿವಿಲ್ಲ ಅಂದ್ರೆ ನಾ ಒಬ್ಬಾವ್ ಹ್ಯಾಂಗ್ ಉಳ್ಳಿ? ನಿನ್ ಮಾತಿನರ್ಥ ನಂಗ್ ಅರ್ಥ ಆತು. ನಂಗೂ ಊಟ ಬ್ಯಾಡ” ಅಂತ ಶಿವಪ್ಪ ಕಂಬಳಿ ಹೊದ್ದುಕೊಂಡು ಹಾಂಗೆ ಕಂಬಕ್ಕೊರಗಿ ಕುಂತುಬಿಟ್ಟ. ಮಗಾ ಫೇಲಾದ ಸುದ್ದಿ ತಲ್ಯಾಗ ಮತ್ ಮತ್ ಚೂಜಿ ಚುಚ್ಚಿದಾಂಗ ಚುಚ್ತಾ ಇತ್ತು. ಮತ್ತೊಂದ ಕಡೆ ಮಂಜ್ಯಾನ ಮ್ಯಾಲ ಸಿಟ್ಟ ಬ್ಯಾರೆ ಬರ‍್ತಾ ಇತ್ತು.                                 -4-ರಾತ್ರಿ ಒಂಬತ್ ಗಂಟ್ಟೆ ಆಗ್ಯಾದ ಊಟದ ಯಾಳಿ ಮಿರ‍್ತಾ ಇತ್ತು. ಆಗ ಅದೇ ಟೈಮಿಗಿ ಬರೋ ಬಸ್ಸು “ಬರ‍್ರು…ರು ” ಅಂತ ಊರೋಳಗ ಬಂತು. ಬಾಂಬೆಗಿ ಹೋದ ಪಾರಗೋಳು ಬಸ್ಸಿನಿಂದ ಇಳಿದರು. ರಾಮೂನು ಖುಷಿಲೇ ನಕ್ಕೊತ ಮನಿಗಿ ಬಂದು ಬಾಗಲಾಗ ನಿಂತು”ಅವ್ವಾ ! ” ಅಂತ ಕರು ಅಂಬ್ಯಾ ! ಅನ್ನೋಹಾಂಗ್ ತನ್ ಅವ್ವಗ ಕೂಗಿದ. ಬಾಗಿಲು ತೆರೆದದ ಯಾರೂ ಓಗೊಡುತ್ತಿರಲಿಲ್ಲ. ಆದರೂ ಮತ್ತೊಮ್ಮೆ ಅದೇ ಶಬ್ದದಿಂದ ಕೂಗಿದ. ಈಗ್ಲೂ ಇಲ್ಲ. “ಅವ್ವಾ! ಅಪ್ಪಾ!” ಅಂತ ಕೂಗಿದ. ಅವನ ಕೂಗಿಗೆ ಚಪ್ಪರ ಮನ್ಯಾಗಿಂದ ಪ್ರತಿಧ್ವನಿ ಕೂಡ ಕೇಳಿ ಬರ‍್ಲಿಲ್ಲ. ಆಗ ಅವನೆ ಸೀದಾ ಒಳಗ ಹೋದ. ಅವನ ಅವ್ವ , ಅಪ್ಪ ಕಂಬಕ್ಕೊರಗಿ ಮೌನವಾಗಿ ಕುಂತ ಬಿಟ್ಟಿದ್ರು. ಅವರ ಆ ಸ್ಥಿತಿ ನೋಡಿ “ಅವಾ !  ನೀವ್ಯಾಕ ಹಿಂಗ್ ಕುಂತಿರಿ….ಏನಾಗ್ಯಾದ ? ಮಾತು ಯಾಕ್  ಆಡಾಲಾಗಿರಿ? ” ಅಂತ ಗಾಬರಿಯಿಂದ ಪ್ರಶ್ನಿಸಿದ.”ಹ್ಞೂಂ! ನೀ ಒಬ್ನೆ ಮಗಾ ಅಂತ ಗಿಣಿ ಸಾಕಿದಾಂಗ್ ಸಾಕಿ, ಓದಿಸ್ಬೇಕು. ಬ್ಹಾಳ್ ಓದ್ಸಬೇಕು. ದೋಡ್ ಸಾಬ್ ಮಾಡ್ಬೇಕು” ಅಂತೆಲ್ಲ ಕನಸ್ಸಿನ ಗೋಪುರ ಕಟ್ಟಿದೇವು. ಆದರ…! ಅದು ನೀ ಕೆಡವಿ ಬಿಟ್ಟೆ” ಅಂತ ಮಾದೇವಿ ಮೌನ ಒಡೆದು ಮಾತಾಡಿದಳು. “ಹಾಂಗಂದ್ರ ನಾ ಏನ ಮಾಡಿನಮ್ಮಾ? ನಾ ಹೇಳ್ದೆ ಬಾಂಬೈಗಿ ಹೋಗಿದ್ದು ತಪ್ಪಾ? ಇಲ್ನೋಡು ನಾ ಬಾಂಬೆದಾಗ ಗೌಂಡೆರ್ ಕೈದಾಗ ಕೆಲ್ಸ ಮಾಡಿ ಐದ ಸಾವಿರ್ ರುಪೈ ಜಮಾ ಮಾಡ್ಕೊಂಡ ಬಂದಿನಿ” ಯಾಕಂದ್ರ ನಾ ಪಾಸ್ ಆದ್ರ ಕಾಲೇಜದಾಗ ಡೊನೇಷನ್ ಅಂತ ಬ್ಹಾಳ ರೊಕ್ಕ ಕೇಳ್ತಾರಂತ. ಅದ್ಕ ನೀಮ್‌ಗ್ಯಾಕ್ ಕಷ್ಟ ಅಂತ ನಾ ಕೆಲ್ಸ ಮಾಡ್ಲಿಕ್ ಹೋಗಿದ್ದು. ಇದರಾಗೇ ನಾ ಕಾಲೇಜ್ ಮಾಡ್ತಿನಿ. ಮತ್ ಪುಸ್ತಕ್, ಪೆನ್ನು, ಕಾಪಿಗೋಳ್ ತಗೋತ್ತಿನಿ. ಬಸ್‌ ಪಾಸ್ ತೆಗ್ದು ದಿನಾ ಬಸವಕಲ್ಯಾಣ ಕಾಲೇಜಕ್ಕ ಹೋಗಿ ಬರ‍್ತಿನಿ. ಇಲ್ನೋಡವ್ವಾ! ನಿಂಗ ಚಂದಾದ ಒಂದ್ ಸೀರಿನೂ ತಂದಿನಿ. ಮತ್ ಅಪ್ಪಗ ಒಂದು ದೋತ್ತರ, ಅಂಗಿ, ಟೋಪಿ, ಕಾಲಾಗ ಇಬ್ರಿಗೂ ಎಡ್ಡ ಜೋಡ ಕೊಲ್ಹಾಪುರಿ ಚಪ್ಲಿ ತಂದಿನಿ ” ಅಂತ ರಾಮೂ ಖುಷಿಲಿಂದ ಬಾಂಬೆಯಿಂದ ತಂದ ಸಾಮಾನು ತೆಗ್ದು ಅಪ್ಪ ಅವ್ವನ ಮುಂದ್ ಇಡುತ್ತಿದ್ದ.”ನಿನ್ ರೊಕ್ಕ ನಿನ್ ಸಾಮಾನ್, ಏನೂ ಬ್ಯಾಡ ನಮ್ಗ. ನಿನ್ ಮನ್ಸಿಗಿ ಬಂದಾಂಗ ಮಾಡ್ತಾ ಇದ್ದಿ ಮಾಡು. ಅಲ್ಲೋ ! ಆ ನಿಮ್ ದೊಡ್ಡಪ್ಪನ  ಮಗಾ ರಾಜುನ ನೋಡು. ಫಸ್ಟಕ್ಲಾಸನಾಗ ಪಾಸಾಗ್ಯನ. ನಿಂಗೇನು ಧಾಡಿ ಫೇಲಾಗಿದಿಯಲ್ಲೋ?” ಅಂತ ಶಿವಪ್ಪ ಬೈಯತೊಡಗಿದ.”ನಿನ್ ಸಲ್ಯಾಕ್ ನಿಮ್ಮಪ್ಪ ಹಗ್ಲು-ರಾತ್ರಿ ಗೌಡ್ರ ಹೊಲ್ದಾಗ ದುಡ್ದು ದುಡ್ದು ಬಾಡ್ಗಿ ಎತ್ ಆಗ್ಯಾನ. ನೀ ಮಾತ್ರ ಫೇಲಾಗಿ ಮಂದ್ಯಾಗ ನಮ್ ಮಾನಾನೆ ಕಳ್ದೆಲ್ಲೋ? ” ಅಂತ ಮಾದೇವಿ ಕೂಡ ಮಗನಿಗಿ ಆ ಹೊತ್ತು ‘ಗೋಳ್’  ಹೊಡೆದಳು. ರಾಮೂಗ ಮನ್ಯಾಗ ಅವ್ವ ಅಪ್ಪ ಬೈದರ ಅಷ್ಟೇನೂ ಪೆಟ್ಟಾಗಲಿಲ್ಲ. ಆದ್ರ ಇಡಿ ವರ್ಷ ಟ್ಯೂಷನ್ ಇಟ್ಟು ಬ್ಹಾಳ ಕಷ್ಟ ತೊಂಡು ಓದ ಬರೆದ್ರು `ಫೇಲ್’  ಅಂಬೋ ಮಾತ ಕೇಳಿ ಅವ್ನಿಗಿ ಈ ಜೀವನವೇ ಬ್ಯಾಸರೆನಿಸಿತ್ತು. ಹೊತ್ತಹೊಂಟ್ರ ದೊಸ್ತ್ರಿಗಿ ಮಾರಿ ಹ್ಯಾಂಗ್ ತೋರಸ್ಲಿ?” ಅಂತ ನಾಚ್ಕಿ ಪಟ್ಟಕ್ಕೊಂಡು “ಇನ್ ಇಲ್ಲಿ ಇರಾದೆ ಬ್ಯಾಡಂತ ರಾತೋ ರಾತ್ರಿ ಎಲ್ರಿಗೂ ನಿದ್ದಿ ಹತ್ತಿದಾಗ ಇವನೊಬ್ಬನೆ ಎದ್ದು ಬುದ್ಧನಂಗ ಆ ಅಮವಾಸೆಯ ಕತ್ತಲೊಳಗೆ ಹೊರಟೆ ಬಿಟ್ಟ.ಕೋಳಿ ಕೂಗಿ ಬೆಳಗಾದ್ರು ರಾಮು ತನ್ ರೂಮಿಂದ ಏಳಲಿಲ್ಲಂತ ಮಾದೇವಿ ಮತ್ ‘ವಟವಟ’ ಬೈಕೊತ “ಏ ರಾಮು ಏಳೋ ! ಸೂರ್ಯ ನೆತ್ತಿಮ್ಯಾಗ ಬರೋತನಕ ಹಿನ್ನಾ ಮಲಕೊಂಡ್ರೆ ಹ್ಯಾಂಗೋ   ನಿಮ್ಮಪ್ಪನ ಜೊತ್ಗಿ ದಂಧಾಕ್ಕಾದ್ರೂ ಹೋಗು. ಸಾಕ್ ನೀ ಸಾಲಿ ಕಲ್ಯಾದು…” ಅಂತ ಅನಕೋತ ರಾಮು ಮಲಗಿದ ರೂಮಿಗೆ ಬಂದ್ ನೋಡಿದ್ರ ಅಲ್ಲಿ ರಾಮೂ ಇರ‍್ಲಿಲ್ಲ. ರ‍್ರೀ ! ನಮ್ ರಾಮು ಕಾಣ್ತಿಲ್ಲ ರ‍್ರೀ.!” ಅಂತ ಗಾಬರಿಯಾಗಿ ಮಾದೇವಿ ಶಿವಪ್ಪಗ ಹೇಳಿದ್ಳು.”ರಾತ್ರಿ ಬೈದಿದಕ್ ಅವಾ ಆ ಕೆರಿಮನಿ ಮಂಜ್ಯಾನ ಮನಿಗಿ ಹೋಗಿರಬೇಕ ನೋಡ” ಅಂತ ಶಿವಪ್ಪ ತನ್ನ ಹೆಂಡ್ತಿಗಿ ಮಂಜ್ಯಾನ ಮನಿಗಿ ಕಳಿಸಿದ.                                      -6-“ಏ ತಮ್ಮಾ ಮಂಜು, ನಮ್ ರಾಮು ಕಾಣ್ತಿಲ್ಲ. ನಿಮ್ಮನಿಗಿ ಬಂದಾನೇನೋ! ರಾತ್ರಿ ಅವ್ನಿಗಿ ಫೇಲ್ ಆಗಿದಕ್ಕ ಜರಾ ಬೈದ್ವಿ. ಮನಸ್ಸಿಗ ಹಚ್ಚಕೊಂಡ ಹೋಗ್ಯಾನೋ ಏನೋ!” ಅಂತ ಮಾದೇವಿ ಕಣ್ಣೀರು ತಂದು ಅಳುತ್ತಿದ್ದಳು.”ಅತ್ತೆ ರಾಮು ಫೇಲಾಗಿಲ್ಲ. ಇಡಿ ಶಾಲೆಗೆ ಫಸ್ಟಕ್ಲಾಸನಾಗ ಪಾಸಾಗ್ಯಾನ” ಅಂದ.”ಅಲ್ಲ, ನಿನ್ನೆ ಆ ರಾಜು ರಾಮು ಫೇಲಾಗ್ಯಾನ ಅಂತ ಹೇಳಿದ ಈಗ ನೋಡಿದ್ರೆ ಪಾಸಾಗ್ಯನ ಅಂತ ಹೇಳತ್ತಿದ್ದಿ ಅಂದ್ಯಾಂಗೆ ?””ಅತ್ತೆ ,ಆ ರಾಜು ಹೊಟ್ಟೆ ಕಿಚ್ಚಿನಿಂದ ಸುಳ್ ಹೇಳಿರಬೇಕು. “ಕೇಳಿದರೂ ಸುಳ್ಳಾಗಬಹುದು. ನೋಡಿದರೂ ಸುಳ್ಳಾಗಬಹುದು ನಿಧಾನಕ್ಕೆ ಯೋಚಿಸಿದಾಗ ನೀಜವು ತಿಳಿವುದು” ಅಂತ ಹಾಡೆ ಇದೆಯಲ್ಲ.ಇಲ್ನೋಡು “ರಾಮು ಶೇಕಡಾ 95 ರಷ್ಟು ಅಂಕಗಳು ತೆಗೆದುಕೊಂಡು ಫಸ್ಟಕ್ಲಾಸ್‌ನಲ್ಲಿ ಪಾಸ್ ಆದದಷ್ಟೇಯಲ್ಲದೆ ಇಡಿ ಶಾಲೆಗೆ ಕೀರ್ತಿ ತಂದಿದ್ದಾನೆ” ಅಂತ ಮುಡಬಿ ಶಾಲಿ ಹೆಡ್ ಮಾಸ್ಟರು ಮತ್ತು ಶಿಕ್ಷಕರು ಇವನಿಗಿ “ಶುಭ ಹಾರೈಕೆಗಳು” ಅಂತ ಪೇಪರನಾಗ ಸುದ್ದಿ ಕೊಡಶ್ಯಾರ. ಇಲ್ನೋಡತ್ತೆ ನಿನ್ ಮಗಾ ರಾಮೂನ ಫೋಟೊ ಹ್ಯಾಂಗ ನಗ್ತಾನ” ಅಂತ ಪೇಪರದಾಗ ಬಂದ ಫೋಟೊ ವರದಿ ತೋರಿಸಿದ್ದ. ಈ ಮಾತ ಕೇಳಿ ಮಾದೇವಿಗಿ ಬ್ಹಾಳ ಸಂತೋಷನೆ ಆತು. ಆದ್ರ “ಮಗಾ ಎಲ್ಲಿ ಹೋದ್ನೂ”ಅಂತ ಚಿಂತಿ ಬ್ಯಾರೆ ಕಾಡತಿತ್ತು. ಶಿವಪ್ಪ ಮಾದೇವಿ, ಮಂಜು ಮೂವರು ಊರ ತುಂಬೆಲ್ಲ ಹುಡುಕಿದರು. ಎಲ್ಲೂ ಪತ್ತೆಯಾಗಲಿಲ್ಲ.ಶರಣನಗರ ಕಿಣಗಿ ಗ್ರಾಮದ ಇತಿಹಾಸದಾಗ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಅಂದ್ರ ಇವ ಒಬ್ಬನೆ ” ಅಂತ ಊರಾಗಿನ ಮಂದಿ ಪೇಪರ ಓದುತ ಆಲ ಗಿಡದ ಕಟ್ಟೆ ಮೇಲೆ ಕುಳಿತು ಮಾತಾಡ್ತಿದ್ದರು. ಆದ್ರ! ರಾಮೂ ಮಾತ್ರ ಮುಲ್ಲಾಮಾರಿ ನದಿಯಲ್ಲಿ ಬಿದ್ದು ಹೆಣವಾಗಿ ತೇಲಿ ನಿಂತಿದ್ದ. ಇತ್ತ ಪತ್ರಿಕೆಯಲ್ಲಿ ಆ ಹೆಣಕ್ಕೆ ಅಣಕಿಸುವಂತೆ ಅವನ ಫೋಟೊ ಮುಗುಳ್ನಗತಿತ್ತು.

           – ಮಚ್ಚೇಂದ್ರ ಪಿ. ಅಣಕಲ್.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *