Oplus_131072

ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಕ.

 

ಡಾ.ಸಂಜೀವಕುಮಾರ ಅತಿವಾಳೆ. ಬೀದರ

 

ಮಕ್ಕಳಿಗೆ ತಂದೆ ಬಾಲ್ಯದೊಳಕ್ಕರಗಳ
ವಿದ್ಯೆಗಳ ನಂಪಿದಿರ್ದೊಡೆ ಕೋರದಂ
ಲಕ್ಕಧನ ಮಿರಲು ಕಡೆಗೂ
ಚಿಕ್ಕಂದಿನ ವಿದ್ಯೆ ಹೊರಗು ಚೂಡಾರತ್ನಾ”

– ಚೂಡಾಮಣಿ ಸಂಸ್ಕೃತ ಕವಿ,

ಹಣ ಗೌಣ, ಆದರೆ ಚಿಕ್ಕಂದಿನಲ್ಲಿ ಪಡೆದ ವಿದ್ಯೆ ಕಡೆ ತನಕ
ಆ ವ್ಯಕ್ತಿಯನ್ನು ರಕ್ಷಿಸುತ್ತದೆ” ಎಂದು ಹೇಳಿ ಶಿಕ್ಷಣದ ಮಹತ್ವವನ್ನು ಮೆರೆದಿದ್ದಾನೆ. ಶಿಕ್ಷಣವು ಮಾನವನಿಗೆ ಅತಿ ಅವಶ್ಯಕವಾದ ವಸ್ತುವಾಗಿದೆ. ಶಿಕ್ಷಣವಿಲ್ಲದವ ಪಶುವಿಗೆ ಸಮಾನನಾಗಿದ್ದಾನೆ. ತನ್ನನ್ನು ತಾನು ಅರಿತುಕೊಳ್ಳಲು, ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು,

ಬದುಕನ್ನು ಸುಗಮವಾಗಿ ಸಾಗಿಸಿಕೊಂಡು ಹೋಗಲು ಶಿಕ್ಷಣವು ಅತ್ಯಂತ ಮಹತ್ವಪೂರ್ಣವಾದ ಅಂಶವಾಗಿದೆ. ಅದರಲ್ಲಿ ಇಂದು ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಸಾಕಷ್ಟಿದೆ. ಗುಣಾತ್ಮಕತೆಯು ಶಿಕ್ಷಣದ ಒಂದು ವಿಶೇಷವಾದ ಗುಣವಾಗಿ ಪರಿಗಣಿಸಲ್ಪಟ್ಟಿದೆ. ಇಂದಿನ ಶಿಕ್ಷಣದಲ್ಲಿ

ಗುಣಮಟ್ಟ ಸಾಧನೆಯೇ ಗುರಿಯಾಗಿದೆ. ಗುಣಾತ್ಮಕತೆ ಬಗ್ಗೆ ಚಿಂತನೆಗೈದಾಗ ಹೀಗೆ ಅರ್ಥಮಾಡಿಕೊಳ್ಳಬಹುದು. ಬೌದ್ದಿಕತೆ, ವಿಚಾರಶೀಲತೆ, ಸೃಜನಶೀಲತೆ, ಗ್ರಹಿಕಾ
ಸಾಮರ್ಥ್ಯ ಹಾಗೂ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಸ್ಪಷ್ಟವಾಗಿ ಕಲ್ಪನೆ ಹೊಂದುವ ಸಾಮರ್ಥ್ಯ ಅಮೂರ್ತವಾದವುಗಳನ್ನು ಸ್ಪುಟವಾಗಿ ಗ್ರಹಿಸುವ ಶಕ್ತಿ, ಚಿಂತನಶೀಲತೆ, ವೈಜ್ಞಾನಿಕತೆ ಮೈಗೂಡಿಸಿಕೊಳ್ಳುವುದು ಇವುಗಳ ಮೊತ್ತವೇ ಗುಣಾತ್ಮಕ ಶಿಕ್ಷಣ. ಮಗುವು ಶಿಕ್ಷಣವನ್ನು ಆನಂದದಾಯಕವಾಗಿ ಸುಗಮವಾಗಿ ಕಲಿಯುವಲ್ಲಿ ಗುಣಾತ್ಮಕ ಶಿಕ್ಷಣ ಪೂರಕ ಪ್ರೇರಣೆಯಾಗಿದೆ. ಶಿಕ್ಷಣದ ಆಂತರಿಕ ಮೌಲ್ಯಗಳನ್ನು ಅಂತರ್ಗತ ಗೊಳಿಸಿ ಕೊಳ್ಳುವುದೇ ಗುಣಾತ್ಮಕತೆ. ಶಿಕ್ಷಣದಲ್ಲಿ ಗುಣಮಟ್ಟ ಬರಬೇಕಾದರೆ ಕಲಿಸುವ ಶಿಕ್ಷಕರು ಸಮರ್ಥರು, ಸರ್ವ ಸಾಮರ್ಥ್ಯಗಳನ್ನು ಅರಿತವರು ಆಗಿರಬೇಕು. ಅವರು ಶಿಕ್ಷಣದಲ್ಲಿನ ಹೊಸ ಅವಿಷ್ಕಾರಗಳನ್ನು ಪರಿಕಲ್ಪನೆಗಳನ್ನು, ಹೊಸದಾದ ತಾಂತ್ರಿಕತೆಯನ್ನು ಅರಿತುಕೊಂಡು ಮಕ್ಕಳಿಗೆ ಬೋಧಿಸಬೇಕು ಹಾಗೂ ಸುಲಭವಾದ ಬೋಧನ ಉಪಕರಣಗಳನ್ನು ಪೀಠೋಪಕರಣಗಳ ಸಹಾಯದಿಂದ
ಬೋಧನೆ ಮಾಡಿದ್ದಾದರೆ ಶಿಕ್ಷಣದಲ್ಲಿ ಗುಣಾತ್ಮಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಗುಣಾತ್ಮಕ ಶಿಕ್ಷಣವು ಇಂದಿನ ಶಿಕ್ಷಣದ ಕೇಂದ್ರ ಬಿಂದುವಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಸವಾಲುಗಳಿಗೆ, ಆಶೋತ್ತರಗಳಿಗೆ ಸ್ಪಂದಿಸುವಂತಹ ಶಿಕ್ಷಣ ನೀಡಲು
ಸ್ವಾತಂತ್ರ್ಯ ಭಾರತದಲ್ಲಿ ಸರ್ಕಾರವು ಹಲವಾರು ಶೈಕ್ಷಣಿಕ ಆಯೋಗಗಳು ರಚನೆಯ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈ ಆಯೋಗಗಳು ಶಿಕ್ಷಣದ ಗುಣಮಟ್ಟ
ಸುಧಾರಣೆಯ ಹೊಸ ಆಯಾಮಗಳ ಬಗ್ಗೆ ಸಮರ್ಥವಾದ ಸಲಹೆ ಸೂಚನೆಗಳನ್ನು ನೀಡಿ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪ್ರೇರಕವಾಗಿದೆ.

ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ವೈಜ್ಞಾನಿಕ, ಔದ್ಯೋಗಿಕ ಆಯಾಮಗಳ ಹಿನ್ನೆಲೆಯಲ್ಲಿ ಪಠ್ಯವಸ್ತು ಇರಬೇಕು. ಶಿಕ್ಷಣವನ್ನು ಸಾಮಾಜಿಕ ಮತ್ತು
ನೈತಿಕ ಮೌಲ್ಯಗಳ ಬೆಳವಣಿಗೆಯ ಶಕ್ತಿಯುತ ಸಾಧನವನ್ನಾಗಿ ಮಾಡಬೇಕು. ನಮ್ಮ ಜನರ ಐಕ್ಯತೆ ಮತ್ತು ಅಖಂಡತೆಯನ್ನು ಪ್ರವರ್ಧಿಸುವಂತಹ ಶಿಕ್ಷಣ ದೊರೆಯಬೇಕು.

ಪ್ರಾಮಾಣಿಕತೆ, ಸತ್ಯಸಂಧತೆ, ವೈಜ್ಞಾನಿಕ ದೃಷ್ಟಿ ಧೈರ್ಯ, ತಾಳ್ಮೆ, ದೇಶಾಭಿಮಾನ ಮೊದಲಾದ ಸಾರ್ವತ್ರಿಕ ಮೌಲ್ಯಗಳನ್ನು ಬೆಳೆಸುವಂತಹ ಶಿಕ್ಷಣವು ದಯಾಪರ ಮಾನವ ಸಮಾಜವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಶಿಕ್ಷಣದ ಗುಣಮಟ್ಟ ಕುಸಿಯಲು
ಪ್ರಮುಖ್ಯವಾಗಿ ಮೂವರು ಕಾರಣರೆಂದೆನಿಸುತ್ತಾರೆ. ಅವರೆಂದರೆ ಶಿಕ್ಷಕ, ಪಾಲಕ ಮತ್ತು ಬಾಲಕ. ಎಲ್ಲರೂ ಶಿಕ್ಷಕರಾಗಬಹುದು. ಆದರೆ ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳ ಮನ ಗೆಲ್ಲುವುದು, ಗುಣಾತ್ಮಕ ಶಿಕ್ಷಣ ಕೊಡುವುದು ಪ್ರಯತ್ನಶೀಲರಿಗೆ ಮಾತ್ರ ಸಾಧ್ಯ.

ಶಾಲೆಯಲ್ಲಾಗುವ ಕೆಲಸದ ಶ್ರೇಷ್ಠತೆಯು ಶಿಕ್ಷಕನ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಅಂತೆಯೇ “ಶಿಕ್ಷಕನು ಮನುಷ್ಯನ ಉದಾತ್ತ ರಾಷ್ಟ್ರದ ನಿರ್ಮಾಪಕರು, ಶಿಕ್ಷಕರು ಮನುಷ್ಯನ ಉದಾತ್ತ ಜೀವನದ ಶಿಲ್ಪಿ” ಎಂದು ಹೇಳಿದ ಫಿಂಗರ್ ಮಾತಿನ ಸತ್ಯಾಸತ್ಯತೆಯನ್ನು
ಅರಿಯಬಹುದು.

ಒಟ್ಟಿನಲ್ಲಿ ” ತುತ್ತು ತಪ್ಪಿದರೆ ತೂಕ ತಪ್ಪಿತು” ಎಂಬಂತೆ ಶಿಕ್ಷಕ ಪಾಲಕ- ಬಾಲಕ ಈ ಮೂವರಲ್ಲಿ ಒಬ್ಬರ ಜವಾಬ್ದಾರಿ, ಕ್ರಿಯಾಶೀಲತೆ ಕುಂಠಿತಗೊಂಡರೆ ಇಡೀ ಶಿಕ್ಷಣ ಕ್ಷೇತ್ರವೇ ಕಲುಷಿತ. ತಮ್ಮ ತಮ್ಮ ಕೆಲಸಗಳನ್ನು, ಕರ್ತವ್ಯಗಳನ್ನು ಚಾಚೂ ತಪ್ಪದೇ ನಿರ್ವಹಿಸಿದರೆ ಶಿಕ್ಷಣದ ಗುಣಮಟ್ಟ ಕುಸಿಯಲು ಸಾಧ್ಯವಿಲ್ಲ. ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿಯು ರಾಷ್ಟ್ರೀಯ ಏಕತೆಗಾಗಿ ಸಮಾನತೆಗಾಗಿ,
ಸಮಾನರೂಪದ ಶಿಕ್ಷಣ ವ್ಯವಸ್ಥೆಗಾಗಿ ಹಾಗೂ ಶಿಕ್ಷಣದಲ್ಲಿ ಹೊಸ ಹೊಸ ಸಂಶೋಧನೆ ಹಾಗೂ ಗುಣಾತ್ಮಕತೆಯ ಅಭಿವೃದ್ಧಿಗೆ ಮೂಲಾಧಾರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಶಿಕ್ಷಣವು ಶಿಶುಕೇಂದ್ರೀತ ಹಾಗೂ ಚಟುವಟಿಕೆ ಆಧಾರಿತ ಬೋಧನೆಯಾಗಿ ಮಕ್ಕಳಲ್ಲಿ ಕಲಿಕೆಯು ದೃಢೀಕೃತವಾಗಿ ಆಗಲು ಶಿಕ್ಷಕರಿಗೆ ಹೊಸ ರೀತಿಯ ಬೋಧನಾ
ತರಬೇತಿಗಳನ್ನು ಇಲಾಖೆಯ ವತಿಯಿಂದ ನೀಡಲಾಗುತ್ತಿದೆ. ಇಂದು ಗುಣಾತ್ಮಕ ಶಿಕ್ಷಣವು ಶಿಕ್ಷಣ ಕ್ಷೇತ್ರದ ಪ್ರಥಮ ಆದ್ಯತೆಯಾಗಿದೆ. ಈ ದಿಸೆಯಲ್ಲಿ ರಾಷ್ಟ್ರೀಯ ಶಿಕ್ಷಕ
ಶಿಕ್ಷಣ ಮಂಡಳಿಯನ್ನು 1995 ರಲ್ಲಿ ಸ್ಥಾಪಿಸಲಾಗಿದೆ. ಇಂದು ಕಂಪ್ಯೂಟರ್ ಆಧಾರಿತ ಶಿಕ್ಷಣ ಮಹತ್ವ ಪಡೆದುಕೊಂಡಿದೆ. ಮಾಹಿತಿ ತಂತ್ರಜ್ಞಾನವನ್ನು ಬಳಸಿ ಜೊತೆಗೆ ವಿವಿಧ ಸಮೂಹ ಮಾಧ್ಯಮಗಳ ಸಹಾಯದೊಂದಿಗೆ ಬೋಧನೆ ಮಾಡುವ ಮೂಲಕ
ಶಿಕ್ಷಣದಲ್ಲಿ ಗುಣಾತ್ಮಕತೆಯು ಅಭಿವೃದ್ಧಿಯಾಗುವಂತೆ ಕಾಯ್ದುಕೊಂಡು ಬರಲಾಗುತ್ತಿದೆ.

ಇಂದಿನ ನವ ಸಹಸ್ರಮಾನದಲ್ಲಿ ನಾಗಾಲೋಟದಲ್ಲಿ ಸಾಗಿ ಮುನ್ನಡೆ ಸಾಧಿಸುತ್ತಿರುವ ಜಗತ್ತಿನೊಡನೆ ಹಾಗೂ ನವ ಜನಾಂಗದ ಪ್ರಶ್ನೆಗಳಿಗೆ ಶಿಕ್ಷಕ ಸ್ಪಂದಿಸಬೇಕಾಗಿದೆ. ಈ
ರೀತಿ ಸ್ಪಂದಿಸುವಲ್ಲಿ ಶಿಕ್ಷಕರಿಗೆ ಶಿಕ್ಷಕ ವೃತ್ತಿ ನಿಜಕ್ಕೂ ಸವಾಲೆನಿಸಿದೆ. ಈ ನವ ಯುಗದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕ ವೃತ್ತಿ ನಿಜಕ್ಕೂ ಸವಾಲೆನಿಸಿದೆ. ಈ ನವ ಯುಗದ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕ ಶೈಕ್ಷಣಿಕವಾಗಿ ಹಾಗೂ ತಾಂತ್ರಿಕವಾಗಿ ಸುಸಜ್ಜಿತಗೊಂಡು ಶಿಕ್ಷಕ ವೃತ್ತಿಯನ್ನು ಪ್ರವೇಶಿಸಬೇಕಾಗಿದೆ.

ಮಾನವೀಯ ಮೌಲ್ಯವನ್ನು ಆಧಾರ ಮಾಡಿಕೊಂಡು ಸಮರ್ಥ ಶಿಕ್ಷಕರನ್ನು ತರಬೇತಿಗೊಳಿಸಿದಲ್ಲಿ ಮಾತ್ರ ಭಾರತದ ಭವಿಷ್ಯತ್ತು ಭವ್ಯವಾಗಿ ಬೆಳಗಲು ಸಾಧ್ಯ.
ಇಲ್ಲಿವರೆಗೆ  “ಶಿಕ್ಷಣದಲ್ಲಿ ಗುಣಾತ್ಮಕತೆ-ಆ ನಿಟ್ಟಿನಲ್ಲಿ
ಶಿಕ್ಷಕನ ಪಾತ್ರ”  ಕುರಿತು ಚಿಂತನೆ ಮಾಡಲಾಗಿದೆ.

ಶಿಕ್ಷಕ:

ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಯೆ ಶ್ರೀ ಗುರುವೇ ನಮಃ”
ಎಂದು ಆದಿಶಂಕರಾಚಾರ್ಯರ ಶ್ಲೋಕ ಒಂದು ಗುರುವಿನ ಮಹತ್ವವನ್ನು ಹೇಳುತ್ತದೆ.

ಶಿಕ್ಷಕ ಎಂದರೆ ಗುರು. ಆದ್ದರಿಂದಲೇ ನಮ್ಮ ಭಾರತೀಯ ಪರಂಪರೆಯಲ್ಲಿ ಗುರುವನ್ನು ಉನ್ನತವಾದ ಸ್ಥಾನದಲ್ಲಿ ಕಂಡಿದ್ದಾರೆ. ಒಂದು ದೇಶವು ಸದೃಢವಾಗಿ ಬೆಳೆಯ ಬೇಕಾದರೆ ಆ ದೇಶದಲ್ಲಿನ ಶಿಕ್ಷಕರು ಸದೃಢವಾಗಿರಬೇಕು. ಶಿಕ್ಷಕರು ರಾಷ್ಟ್ರದ ನಿರ್ಮಾಪಕರು. ದೇಶದ ಅಭಿವೃದ್ಧಿಯಲ್ಲಿ
ಶಿಕ್ಷಕರ ಶ್ರಮ ಸಾಕಷ್ಟಿರುತ್ತದೆ. ಮಕ್ಕಳಿಗೆ ಒಳ್ಳೆಯ ತತ್ವಜ್ಞಾನಿಯಾಗಿ, ಗೆಳೆಯರಾಗಿ, ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುವವರು ಶಿಕ್ಷಕರು ಶಿಸ್ತು, ಕ್ಷೇಮ, ಕರ್ತವ್ಯಗಳ ಸಂಗಮವಾಗಿದ್ದಾರೆ ಶಿಕ್ಷಕರು,

ಮಕ್ಕಳಲ್ಲಿ ಸರಿಯಾಗಿ ಮೌಲ್ಯಗಳನ್ನು ಬೆಳೆಯುವಂತೆ
ಮಾಡುವುದು, ಅವರು ಸರ್ವಾಂಗೀಣವಾಗಿ ಬೆಳವಣಿಗೆ ಯಾಗುವಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣವಾಗಿದೆ.
ಶಾಲೆಗೆ ಬರುವುದಕ್ಕಿಂತ ಮುಂಚೆ ಮಕ್ಕಳು ಮಣ್ಣಿನ ಮುದ್ದೆಯಂತಿರುತ್ತಾರೆ.

ಶಿಕ್ಷಕರು ಅಂತಹ ಮಣ್ಣಿನ ಮುದ್ದೆಗೆ ಅಕ್ಷರಜ್ಞಾನ ಧಾರೆಯೆರೆದು ಸುಂದರವಾದ ಮೂರ್ತಿಯಾಗಿ ನಿರ್ಮಾಣ ಮಾಡುತ್ತಾರೆ. ಒಳ್ಳೆಯ ವ್ಯಕ್ತಿತ್ವ ನಿರ್ಮಾಣವಾಗಬೇಕಾದರೆ
ಒಳ್ಳೆಯ ಶಿಕ್ಷಕರಿಂದ ದೊರೆತ ಶಿಕ್ಷಣವೇ ಮುಖ್ಯವಾಗಿದೆ. ಮಕ್ಕಳಿಗೆ ಶ್ರೀಮಂತ ಭಾರತೀಯ ಪರಂಪರೆಯ ಪರಿಚಯ ಮಾಡಿಸಬೇಕು. ಅದರ ಪರಿಚಯ ಮೊದಲು ಶಿಕ್ಷಕರಿಗೆ
ಆಗಬೇಕು. ಇಂದು ರಾಷ್ಟ್ರಭಕ್ತಿ, ನಿಷ್ಠತೆಯುಳ್ಳ ಶಿಕ್ಷಕರ ಸೇವೆ ಅತಿ ಅವಶ್ಯಕವಾಗಿದೆ.

ರಾಷ್ಟ್ರವು ಸರಿಯಾದ ಪಥದಲ್ಲಿ ನಡೆಯುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಂಡು ಮಕ್ಕಳಿಗೆ ಧಾರೆಯೆರೆಯಬೇಕು. ಪರಿಶ್ರಮವಹಿಸಿ ಆಧುನಿಕ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಗುಣಾತ್ಮಕವಾದ ಶಿಕ್ಷಣವನ್ನು ನೀಡುವಂತಾಗ ಬೇಕು ಅಂದಾಗ ಮಾತ್ರ ಶಿಕ್ಷಕರಿಗೂ ಆತ್ಮ ಸಂತೃಪ್ತಿ ಯಾಗುತ್ತದೆ.

ಸಮಾಜವೂ ಗೌರವ ಭಾವದಿಂದ ಕಾಣುವಂತಾಗುತ್ತದೆ.
ನಮ್ಮ ಎಲ್ಲ ಪ್ರಾರ್ಥನೆಗಳನ್ನು ದೇವರ ತನಕ ತಲುಪಿಸುವ ಕಾರ್ಯ ಸಾಧಕನೇ ಈ ಶಿಕ್ಷಕ. ನಾವು ಜ್ಞಾನ ದರ್ಶನವನ್ನು ಪಡೆಯಬೇಕೆಂದರೆ ಈ ಗುರು ಎಂಬ ದ್ವಾರದ ಮೂಲಕ ವಾಗಿಯೇ ಹೋಗಬೇಕಾಗುತ್ತದೆ. ಆದ್ದರಿಂದಲೇ ಆಧುನಿಕ ಭಾರತದ ವೀರ ಸನ್ಯಾಸಿ ಎನಿಸಿಕೊಂಡಿರುವ ಆಧ್ಯಾತ್ಮಿಕ ಗುರು ವಿವೇಕಾನಂದರು ಗುರುವನ್ನು
ಒಂದು ವಿಶಿಷ್ಟವಾದ ಶಕ್ತಿ” ಎಂದು ಬಣ್ಣಿಸಿದ್ದಾರೆ. ಭಾರತದ ಶ್ರೇಷ್ಠ ಗುರು, ಆದರ್ಶ ಶಿಕ್ಷಕರಾಗಿ ಮೆರೆದ ಡಾ. ರಾಧಾಕೃಷ್ಣನ್‌ರವರು ಶಿಕ್ಷಕ ವೃತ್ತಿಗೊಂದು ಮೌಲ್ಯ
ತಂದು ಕೊಟ್ಟಿದ್ದಾರೆ. ಅವರ ವಿಚಾರಧಾರೆಯ ಮೇಲೆ ಇಂದಿನ ಶಿಕ್ಷಕರು ನಡೆಯಬೇಕಾದದ್ದು ಅತಿ ಅವಶ್ಯಕವಾಗಿದೆ ಅಂದಾಗಲೇ ಅವರಿಗೆ ನಾವು ಸಲ್ಲಿಸುವ
ಗೌರವ. ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಘೋಷಿಸಿದಕ್ಕೂ ಸಾರ್ಥಕವಾಗುತ್ತದೆ.

ಡಾ.ಸಂಜೀವಕುಮಾರ ಅತಿವಾಳೆ ಬೀದರ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *