Oplus_131072

ಕಾರಂಜಾ ನದಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿ.

ಅಶ್ವಜೀತ ದಂಡಿನ ಬೀದರ.

 

ಭಾರತ ದೇಶ ಕೃಷಿ ಪ್ರಧಾನವಾದ ದೇಶವಾಗಿದೆ. ನಮ್ಮ ರೈತನೆ ಈ ದೇಶದ ಬೆನ್ನೆಲುಬು. ಹಾಗಾಗಿ ರೈತನ ಏಳಿಗೆಯೇ ದೇಶದ ಏಳಿಗೆಯಾಗಿದೆ.
” ನಾವು ಎಂದೆಂದಿಗೂ ರೈತನ ಪರವಾಗಿದ್ದೇವ ರೈತನ ಅಭಿವೃದ್ಧಿಯ ನಮ್ಮ ಧ್ಯೇಯ ” ಎಂದು ಉದ್ದುದ್ದವಾಗಿ ಭಾಷಣ ಬಿಗಿಯುವ ರಾಜಕೀಯ ನಾಯಕರು, ಸರ್ಕಾರಗಳು ಈ ರೈತರಿಗಾಗಿ ಏನು ಮಾಡಿವೆ.? ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡದೆ ಟ್ಯಾಕ್ಸ್ ಹಾಕಿ ರೈತರ ಶೋಷಣೆ ಮಾಡುತ್ತಿದ್ದಾರೆ. ಯಾವುದೇ ಸರ್ಕಾರ ಬಂದರು ಕೂಡ ರೈತರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಪ್ರತಿ ದಿನ ರೈತರು ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡು ಆರ್ಥಿಕವಾಗಿ ದುರ್ಬಲರಾಗಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಅತ್ಮ ಹತ್ಯೆ ಮಾಡಿಕ್ಕೊಳ್ಳುತ್ತಿದ್ದಾರೆ.

ಹೀಗೆ ರೈತರು ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಾಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಆಡುತ್ತಾರೆ. ಮಾಧ್ಯಮದ ಮುಂದೆ ಬಂದು ಮೊಸಳೆ ಕಣ್ಣೀರು ಸುರಿಸಿ ನಾವು ರೈತ ಪರ ಎಂದು ಪದೇ ಪದೇ ಹೇಳಿಕೊಳ್ಳುತ್ತಾರೆ.
ಆದರೆ ಸಂವಿಧಾನದ ಮೂಲ ಅಂಶವನ್ನು ಅರಿಯದೆ ಅಧಿಕಾರದ ಹಣ ಬಲದಿಂದ ಬಂಡವಾಳಶಾಹಿ ಪರವಾಗಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ ಈ ಸರ್ಕಾರಗಳು

ಇಂತಹುದೇ ಒಂದು ಕೃಷಿ ಕಾಯ್ದೆಯಿಂದಾಗಿ
ದೆಹಲಿ ನಗರದಲ್ಲಿ ವರ್ಷನು ಗಟ್ಟಲೆ ಕೊರೆಯುವ ಚಳಿಗೆ, ಸುರಿಯುವ ಮಳಿಗೆ, ಸುಡುವ ಬಿಸಿಲಿಗೆ ರಸ್ತೆಯ ಮೇಲೆ ಕುಳಿತು ಪ್ರತಿಭಟಿಸಿದ ರೈತರ ಚಿಂತಾಜನಕ ಸ್ಥಿತಿಯನ್ನು ಇಡಿ ಜಗತ್ತೇ ನೋಡಿದೆ. ಅಷ್ಟೇ ಅಲ್ಲದೆ ಪ್ರತಿಭಟನೆ ನಿರಂತರ ರೈತರ ಮೇಲೆ ಗುಂಡು ಹಾರಿಸಿ ಮತ್ತು ಟ್ಯಾಕ್ಟರ್ ಓಡಿಸಿ ಕೊಲೆ ಮಾಡಿರುವುದು ಸಹ ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ನಿಜಾಮ ಸರ್ಕಾರದ ವಿರುದ್ಧ ಭೂ ಮಾಲಿಕತ್ವವನ್ನು ರದ್ದುಗೊಳಿಸಿ ಸಾಗುವಳಿ ಮಾಡುವವನಿಗೆ ಭೂಮಿ ಕೊಡಬೇಕೆಂದು ಬಿ.ಶ್ಯಾಮಸುಂದರ ಮತ್ತು ಬಿ.ಎಸ್.ವೆಂಕಟರಾವ್ ಅವರು ದಂಗೆ ಎದ್ದು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬಡ ಜನರಿಗೆ ಇನಾಮಿ ಮತ್ತು ಹಂಡಳ್ಳಿ ಎಂಬ ಹೆಸರಿನಲ್ಲಿ ಭೂಮಿ ಕೊಡಿಸಿದರು, ಇಂತಹ ಜಮೀನುಗಳಿಗೆ ಇವತ್ತಿಗೂ ಕೂಡ ನಮ್ಮ ಬೀದರ ಜಿಲ್ಲೆಯಲ್ಲಿ ಇನ್ನಮತ್ತಿ ಹೊಲ(ಇನಮಿ ಜಮೀನು) ಮತ್ತು ಹಂಡೊಳ್ಳಿಗಳು ಎಂದು ಕರೆಯುತ್ತಾರೆ.

ಬಿ.ಶ್ಯಾಮಸುಂದರ ಮತ್ತು ಬಿ.ಎಸ್.ವೆಂಕಟರಾವ್ ಅವರ ಕೃಪೆಯಿಂದ ಭೂಮಿ ಇಲ್ಲದವರು ತುಂಡು ಭೂಮಿ ಹೊಂದುವಂತಾಗಿತ್ತು. ಆದರೆ, ನಮ್ಮ ಬೀದರ ಜಿಲ್ಲೆಯ ಕಾರಂಜಾ ಯೋಚನೆಯಲ್ಲಿ ಇಂತಹ ಸಾವಿರಾರು ಎಕ್ಕರೆ ಭೂಮಿ ನೀರಲ್ಲಿ ಮುಳುಗಿ ಹೋಗಿದೆ. ಕಾರಂಜಾ ಡ್ಯಾಂ ನಿರ್ಮಿಸಿ ಇಲ್ಲಿಗೆ ಸುಮಾರು ೩೫ ವರ್ಷಗಳೇ ಕಳೆದವು. ಕಾರಂಜಾ ಯೋಚನೆಯಲ್ಲಿ ಜಮೀನು ಕಳೆದುಕೊಂಡ ೨೮ ಹಳ್ಳಿಯ ನೂರಾರು ರೈತ ಕುಟುಂಬಗಳು ಬೀದಿಗೆ ಬಂದಿವೆ. ಇಲ್ಲಿಯವರೆಗೆ ಬಂದ ಸರ್ಕಾರಗಳು ಈ ಸಂತ್ರಸ್ತರಿಗೆ ಮುಖಕ್ಕೆ ಬೆಣ್ಣೆ ವರೆಸುವ ನಾಟಕ ಮಾಡಿದೆ ಹೊರತು ವೈಜ್ಞಾನಿಕವಾಗಿ ಪರಿಹಾರ ನೀಡಿಲ್ಲ. ಮತ್ತು ಬಸವಕಲ್ಯಾಣ ತಾಲೂಕಿನ ಮುಲ್ಲಾಮಾರಿ ನದಿಯಲ್ಲಿ ಶರಣನಗರ,ಕಿನ್ನಿವಾಡಿ,ಖೇರ್ಡಾ(ಬಿ) ಮಶಾಳತಾಂಡಾ ಹಂದ್ಯಾಳ ತಾಂಡಾ ಧನ್ನೂರ (ಆರ್) ಗ್ರಾಮಗಳ ಜನರ 1500 ಎಕರೆ ಮುಳುಗಡೆಯಾಗಿದ್ದು ಇವರಿಗೂ ಸೂಕ್ತ ಪರಿಹಾರ ನೀಡಿಲ್ಲ.

ನಾನು ಚಿಕ್ಕವನಿದ್ದಾಗಿನಿಂದ ಹಿಡಿದು ನೋಡುತ್ತಿರುವೆ. ಕಾರಂಜಾ ಸಂತ್ರಸ್ತರು ರಾಜ್ಯಮಟ್ಟದಲ್ಲಿ ಜಿಲ್ಲಾಮಟ್ಟದಲ್ಲಿ ತಾಲೂಕ ಮಟ್ಟದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಮನವಿ ಪತ್ರಗಳನ್ನು ಸಲ್ಲಿಸುತ ಬರುತ್ತಿದ್ದಾರೆ. ಇವರ ಮನವಿಗೆ ಯಾವ ಸರ್ಕಾರವಾಗಲಿ ಯಾವ ನೇತಾರರುಗಳಾಗಲಿ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತು ಜಮೀನು ಕಳೆದುಕೊಂಡ ರೈತರು 2022 ಸೆಪ್ಟೆಂಬರ್ ತಿಂಗಳಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡರು. ಅಂದಿನಿಂದ ಇಂದಿನ ವರೆಗೆ ಸುಮಾರು ಎರಡುವರೆ ವರ್ಷಗಳು ಕಳೆದಿವೆ. ಅಂದರೆ ಬರೋಬರಿ 892 ದಿನಗಳು ಆದರೂ ಸಹ ಸರಕಾರ ಇವರ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ.

ಹಿಂದಿನ ಜನತಾ ಸರ್ಕಾರ ಬಿಜೆಪಿ ಸರ್ಕಾರವು ಸಹ ಕಾರಂಜಾ ಯೋಚನೆಯಲ್ಲಿ ಜಮೀನು ಕಳೆದುಕೊಂಡ ರೈತರ ಕುರಿತು ಜಾಣ ಮರೆವು ತೋರಿತು. ಈಗ ಬಂದ ಕಾಂಗ್ರೆಸ್ ಸರ್ಕಾರವು ಸಹ ಅದೇ ದಾರಿಯಲ್ಲಿ ಮುನ್ನುಗ್ಗುತಿದೆ.

ರೈತ ದುಡಿದರೆ ಮಾತ್ರ ಹೊಟ್ಟೆಗೆ ಅನ್ನ ಸಿಗುವುದು ಎಂಬ ಮಾತು ಎಲ್ಲರಿಗೂ ಗೊತ್ತಿದ್ದರೂ ಸಹ ಇಲ್ಲಿ ರೈತನಿಗೆ ಯಾರು ಧ್ವನಿ ಯಾಗುತ್ತಿಲ್ಲ. ರೈತರ ನೋವು ಇಲ್ಲಿ ಯಾರಿಗೂ ಅರ್ಥವಾಗುತ್ತಿಲ್ಲ. ರೈತನ ಸಮಸ್ಯೆಗೆ ರೈತನೇ ಹೋರಾಡಬೇಕಾದಂತ ದುಸ್ಥಿತಿ ನಮ್ಮ ಭಾರತದಲ್ಲಿ ನಿರ್ಮಾಣವಾಗಿದೆ. ಪ್ರಗತಿಪರರು, ಸಾಹಿತಿಗಳು ಹೋರಾಟಗಾರರು ಯಾರೊಬ್ಬರೂ ಈ ರೈತರ ಹೋರಾಟಕ್ಕೆ ಜೊತೆಯಾಗದಿರುವುದು ಬೇಸರದ ಸಂಗತಿಯಾಗಿದೆ.

ಸಾರ್ವಜನಿಕ ವೇದಿಕೆಯ ಮೇಲೆ ನಿಂತು ತಾಸು ಗಟ್ಟಲೆ ರೈತರ ಕುರಿತು ಭಾಷಣಗಳು ಕೊರೆವ ಸಾಹಿತಿಗಳೆ ಈ ಕಾರಂಜಾ ಯೋಚನೆಯಲ್ಲಿ ಜಮೀನು ಕಳೆದುಕೊಂಡ ರೈತರು ಸುಮಾರು ಎರಡುವರೆ ವರ್ಷಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಯಾಕೆ ರೈತರು ನಿಮ್ಮ ಗಮನಕ್ಕೆ ಬರಲಿಲ್ಲವೇ.? ಯಾಕೆಂದರೆ ಇಲ್ಲಿಯವರೆಗೆ ಯಾವೊಬ್ಬ ಸಾಹಿತಿಯೋ‌ ಈ ಕಾರಂಜಾ ಸಂತ್ರಸ್ತ ರೈತರನ್ನು ಬೆಂಬಲಿಸಿ ಬರೆದದ್ದು ನಾ ಕಾಣಲಿಲ್ಲ. ಯಾಕೆ ಇವರ ನೋವು ನಿಮಗೆ ಕಾಣಿಸುತ್ತಿಲ್ಲವೇ.? ಈಗಲೂ ಕಾಲ ಮಿಂಚಿಲ್ಲ ಬನ್ನಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸೋಣ.

ಮಾನ್ಯ ಉಸ್ತುವಾರಿ ಸಚಿವರೇ ಈ ಕಾರಂಜಾ ಯೋಚನೆಯಲ್ಲಿ ಜಮೀನು ಕಳೆದುಕೊಂಡ ರೈತರು ಸುಮಾರು ೮೯೨ ದಿನಗಳಿಂದ ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ನಿಮ್ಮ ಗಮನಕ್ಕೆ ಬರಲಿಲ್ಲವೇ. ರೈತರ ವಿಷಯದಲ್ಲಿ ಯಾಕೆ ಇಷ್ಟೊಂದು ನಿರ್ಲಕ್ಷ.?

ನಿಮ್ಮ ಸರಕಾರದ ಮೇಲಿನ ಭರವಸೆ ಕಳೆದುಕೊಂಡು ನೊಂದ ರೈತರು ಸಾಮೂಹಿಕ ಆತ್ಮಹತ್ಯೆ ಮುಂದಾಗಿರುವುದು ನೋಡಿ ಮನಸ್ಸಿಗೆ ತುಂಬಾ ನೋವಾಯ್ತು. ಇಲ್ಲಿಯವರೆಗೆ ಒಟ್ಟು ನಾಲ್ಕು ಜನ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರೆ. ಅವರ ಜೀವಕ್ಕೆ ಏನಾದರು ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ.? ಅವರ ಕುಟುಂಬದ ಪರಿಸ್ಥಿತಿ ಏನಾಗಬೇಡ.? ದಯವಿಟ್ಟು ಅನಾಹುತ ಸಂಭವಿಸುವ ಮೊದಲು ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರಿಗೆ ವೈಜ್ಞಾನಿಕವಾದ ಪರಿಹಾರ ಒದಗಿಸಿ ಕೋಡುವರೆ ?

ಅಶ್ವಜೀತ ದಂಡಿನ
ಮಾಳೆಗಾಂವ , ಬೀದರ

 

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *