ಮೌನವೇ ಲೇಸು.
ಒಂದು ಹಾವು ವಿಶ್ರಾಂತಿ ಪಡೆಯಲು ಮರದ ಹತ್ತಿರವಿದ್ದ ಹುತ್ತದ ಕಡೆ ಹೋಗುತ್ತಿತ್ತು. ಮರ ಕತ್ತರಿಸಲು ಬಂದವರು ಕೆಲಸ ಮುಗಿಸಿ ಹೋಗುವಾಗ ಗರಗಸವನ್ನು ಮರದ ಹತ್ತಿರವೇ ಬಿಟ್ಟು ಹೋಗಿದ್ದರು. ಹರಿದು ಹೋಗುತ್ತಿದ್ದ ಹಾವಿಗೆ ಗರಗಸ ಇರುವುದು ತಿಳಿಯಲಿಲ್ಲ. ಅದರ ಮೇಲೆ ಹೋಯಿತು. ಆದರೆ ಗರಗಸದ ಹರಿತದಿಂದ ಅದರ ಚರ್ಮ ಕಿತ್ತು ಹೋಗಿ ರಕ್ತ ಬಂದಿತು ಮತ್ತು ಅದರ ಮೈ ತುಂಬಾ ಗಾಯ ಆಯಿತು. ಯಾರೋ ತನಗೆ ಹಾನಿ ಮಾಡಲು ಬಂದಿದ್ದಾರೆ ಎಂದು ತಿರುಗಿ ಹೆಡೆಯೆತ್ತಿ ಬುಸುಗುಡುತ್ತಾ ಎದುರಿಗೆ ಕಂಡ ಗರಗಸವನ್ನು ಗಟ್ಟಿಯಾಗಿ ಕಚ್ಚಿತು. ಆದರೆ ಕಚ್ಚಿದ ಬಲಪ್ರಯೋಗಕ್ಕೆ ಅದರ ಬಾಯೊಳಗೆಲ್ಲಾ ರಕ್ತ ಬಂದು ಮತ್ತಷ್ಟು ಗಾಯವಾಯಿತು. ಇಷ್ಟಾಗಿಯೂ ಅದಕ್ಕೆ ಯಾರು ಏನು ಮಾಡುತ್ತಿದ್ದಾರೆ, ತನಗೆ ಯಾಕೆ ಗಾಯಗುತ್ತಿದೆ, ಅದಕ್ಕೆ ಗೊತ್ತಾಗುತ್ತಿಲ್ಲ, ” ತನಗೆ ಯಾರೋ ಹಿಂಸೆ ಮಾಡುತ್ತಿದ್ದಾರೆ ” ಎಂದು ಕೊಂಡು ಅದಕ್ಕೆ ಮತ್ತಷ್ಟು ಸಿಟ್ಟು ಬಂದು ಕ್ರೋಧ ಹೆಚ್ಚಾಯಿತು.
ಸುಮ್ಮನಿರದ ಹಾವು ಗರಗಸವನ್ನು ನಾಶ ಮಾಡಬೇಕೆಂದು ಆ ಗರಗಸದ ಮೇಲೆ ತನ್ನ ದೇಹವನ್ನು ಸುತ್ತುತ್ತಾ ಹೋಯಿತು. ಗರಗಸದಿಂದಲೇ ಅದರ ಜೀವಕ್ಕೆ ಹಾನಿಯಾಗುತ್ತಿದೆ ಎಂಬುದು ಇನ್ನೂ ಅದಕ್ಕೆ ಅರ್ಥವಾಗಲಿಲ್ಲ. ಅದು ತನ್ನ ಶತ್ರುವಿನ ಉಸಿರನ್ನು ಬಿಗಿಯಾಗಿ ಹಿಡಿಯುತ್ತೇನೆ ಎಂದು ಗರಗಸವನ್ನು ಬಿಗಿಯಾಗಿ ಸುತ್ತುತ್ತಾ ಹೋಯಿತು. ಹಾವು ಗರಗಸಕ್ಕೆ ಬಿಗಿಯಾಗಿ ಸುತ್ತಿದಷ್ಟು ಗರಗಸ ಅದರ ದೇಹವನ್ನು ತುಂಡು ತುಂಡಾಗಿ, ಕತ್ತರಿಸುತ್ತಾ ಹೋಯಿತು, ಕಾರಣವೇ ಇಲ್ಲದೆ
ತನ್ನಷ್ಟಕ್ಕೆ ತಪ್ಪು ತಿಳಿದುಕೊಂಡ ಹಾವು ತನ್ನನ್ನು ತಾನೇ ನಾಶ ಮಾಡಿಕೊಂಡಿತು.ಅದಕ್ಕೆ ಉಪಯೋಗವಿಲ್ಲದ ಗರಗಸದಿಂದ ಹಾವು ತನ್ನ ಪ್ರಾಣ ಕಳೆದುಕೊಂಡಿತು.
ಇದೊಂದು ಸಂಗತಿ. ಆದರೆ ಹಲವರ ಜೀವನದಲ್ಲೂ ನಡೆಯುತ್ತದೆ. ಮೂರನೇಯವರು, ಆಡಿದ ಕೊಂಕು ನುಡಿ, ವ್ಯಂಗ್ಯ ಮಾತು ಕೇಳಿದಾಗ ಕೋಪ ಸಹಜವಾಗಿಯೇ ಕೆರಳುತ್ತದೆ. ಮತ್ತೊಬ್ಬರನ್ನು ಹಂಗಿಸಿ, ಅಣಕಿಸಿ ಮಾತನಾಡಿ ಅವರ ಮನಸ್ಸಿಗೆ ನೋವು ಆಗಿದ್ದನ್ನು ಕಂಡು ಸಂತೋಷ ಪಡುವ ಜನರು ಇರುತ್ತಾರೆ. ಅವರ ಮನಸ್ಥಿತಿಯೇ ಹಾಗೆ ಎಂದು ಅರ್ಥೈಸಿಕೊಳ್ಳದೆ, ಯಾರು ಮೂರನೆ ವ್ಯಕ್ತಿ ಆಡಿದ ಮಾತುಗಳಿಂದ ಮನಸ್ಸಿಗೆ ನೋವಾಗಿ ಅವರೊಡನೆ ವಾದ ಮಾಡಿ, ಕೂಗಾಡಿ, ಜಗಳವಾಡಲು ಹೋದರೆ, ಜಗಳ ಆಡಿದವರೇ ಹೈರಾಣಾಗುತ್ತಾರೆ. ಕೆಣಕಿದವರು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ನುಣುಚಿಕೊಳ್ಳುತ್ತಾ ರೆ. ಹೀಗೆ ಸುಮ್ಮನೆ ಕಾಲು ಕೆರೆದು ಬರುವವರನ್ನು ನಿರ್ಲಕ್ಷ ಮಾಡಿದರೆ ಕೆಣಕುವವರು ಮತ್ತೆ ಬರುವುದಿಲ್ಲ. ಬುದ್ಧಿಯನ್ನು ಕೈಗೆ ತೆಗೆದುಕೊಳ್ಳದೆ ಅವರ ವಿರುದ್ಧ ಸೆಣಸಾಡಲು ನಿಂತರೆ, ಭಗವಂತ ಕೊಟ್ಟ ನೆಮ್ಮದಿಯ ಜೀವನವನ್ನು ಕೈಯಾರೆ ರಾಡಿ ಮಾಡಿ ಕೊಂಡಂತೆ. ಇಂಥ ಕ್ಷುಲ್ಲಕ ಸಮಸ್ಯೆಗಳನ್ನು ದೂರ ಮಾಡಲು ಇರುವ ಉಪಾಯ ಎಂದರೆ ತಾಳ್ಮೆಯಿಂದ ಕಾದು ನೋಡಿದರೆ ಎಲ್ಲವೂ ಶೂನ್ಯ ಎನಿಸುತ್ತದೆ.
– ಆಶಾ ನಾಗಭೂಷಣ.