ಹರೆಯದ ಹೆಣ್ಣು ಮಕ್ಕಳಿಗೆ ದೊಡ್ಡಮ್ಮನ ಪತ್ರ
– ವೀಣಾ ಹೇಮಂತ್ ಗೌಡ ಪಾಟೀಲ್.
ಪ್ರೀತಿಯ ಪುಟ್ಟಿ,
ಹೇಗಿದ್ದೀಯಾ? ನೀನು ಬಿಡು ಹಾಡಿ, ಕುಣಿದು, ನಲಿದಾಡಿಕೊಂಡು ಓಡಾಡುತ್ತೀಯ… ನಿನ್ನ ವಯಸ್ಸೆ ಹಾಗೆ ಅಲ್ವಾ.ನಾವೂ ನಿನ್ನ ಹಾಗೆ ಇದ್ವಿ ಅಂತ ಹೇಳಿದ್ರೆ ಖಂಡಿತವಾಗಿಯೂ ನಿನಗೆ ನಂಬಿಕೆ ಬರಲ್ಲ. ಇರ್ಲಿ ಬಿಡು. ನಿನ್ನನ್ನು ನಂಬಿಸಿ ಏನು ಮಾಡಲಿ.
ನಿನ್ನೆ ನಿನ್ನ ಅಮ್ಮ ನನಗೆ ಕರೆ ಮಾಡಿ ನಿನ್ನ ಜೊತೆ ಸ್ವಲ್ಪ ಮಾತಾಡು ಅಂತ ಹೇಳಿದ್ಲು. ಅದೇನೋ ನೀನು ಫ್ರೆಂಡ್ಸ್ ಜೊತೆ ನ್ಯೂ ಇಯರ್ ಪಾರ್ಟಿಗೆ ಹೋಗ್ಬೇಕು ಅಂತ ಹಠ ಮಾಡ್ತಾ ಇದ್ದೀಯಾ ಅಂತ.
ನಿಜ…ಬದುಕಿನ ಈ ಘಟ್ಟದಲ್ಲಿ ನಿನಗೆ ಕಣ್ಣಿಗೆ ಕಂಡದ್ದೆಲ್ಲವೂ ಬಣ್ಣ ಬಣ್ಣವಾಗಿ ತೋರುತ್ತದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ… ನದಿಯಾಚೆಗೆ ಎಲ್ಲವೂ ಹಸಿರು ಎಂದು ನಿನಗನ್ನಿಸಿದರೆ ಅದು ನಿನ್ನ ತಪ್ಪಲ್ಲ.. ನಿನ್ನ ವಯಸ್ಸಿನದು. ಕಣ್ಣಿಗೆ ಕಂಡದ್ದನ್ನೆಲ್ಲ ಕೊಳ್ಳುವ ಬಯಕೆ, ಮನೆಯಲ್ಲಿ ಮಾಡಿದ ಪೌಷ್ಟಿಕ ಆಹಾರಕ್ಕಿಂತ ಹೊರಗಿನ ತಿನಿಸುಗಳ ಮೇಲೆ ಹೆಚ್ಚಿನ ಆಸಕ್ತಿ, ನನಗೆ ಬೇಕಾದಂತೆ ನಾನು ಇರಬೇಕು ಎಂಬ ಆಸೆ, ಹರೆಯಕ್ಕೆ ಬಂದಿದ್ದೇನೆ ಎಂಬ ಭಾವದಲ್ಲಿ ನನಗೆ ಸ್ವತಂತ್ರ ಬೇಡವೇ ಎಂಬ ಆಕ್ರೋಶ ಎಲ್ಲವೂ ಈ ವಯಸ್ಸಿನಲ್ಲಿ ಸಹಜ.
ಆದರೆ ಬದುಕು ಇದೆಲ್ಲದಕ್ಕಿಂತಲೂ ದೊಡ್ಡದು ಪುಟ್ಟಿ. ಕಾಲ ಅದೆಷ್ಟೇ ಮುಂದುವರಿದರೂ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಲ್ಲಿ ನೋಡುವುದಾದರೆ ನಮ್ಮ ಹುಷಾರಿನಲ್ಲಿ ನಾವಿರಬೇಕು.
ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿದ ಪುಟ್ಟ ಯುವತಿಯನ್ನು ವೇಶ್ಯಾವಾಟಿಕೆಗೆ ಮಾರಿದವರು ಯಾವುದೇ ಸಾಕ್ಷಿ ಇಲ್ಲದೆ ಹೊರಗೆ ತಿರುಗುತ್ತಿದ್ದಾರೆ. ತಮ್ಮೊಂದಿಗೆ ಓದುತ್ತಿದ್ದ ಯುವತಿಯನ್ನು ಬರ್ಬರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿ ಸುಟ್ಟು ಹಾಕಿದ ಘಟನೆಗಳು ನಮ್ಮ ಕಣ್ಣ ಮುಂದಿವೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಅರಿಯದ ಮುಗ್ಧ ವಯಸ್ತಿನಲ್ಲಿ ತನ್ನನ್ನು ಪ್ರೀತಿಸಿದ ಬಾಲೆಯ ಕೈಗೊಂದು ಮಗುವನ್ನು ಕೊಟ್ಟು ಆಕೆಯ ಭವಿಷ್ಯವನ್ನು ಗಾಢ ಅಂಧಕಾರದಲ್ಲಿ ಮುಳುಗಿಸಿದ ಮುಗ್ಧ ಬಾಲಕರೂ ಇದ್ದಾರೆ. ಗಂಡು-ಹೆಣ್ಣು ಸಮಾನರು ನಿಜ..ಆದರೆ ಗಂಡು ಹೆಣ್ಣಿನ ನಡುವಿನ ಆಕರ್ಷಣೆಗೆ ಬಲಿಯಾಗುವುದು ಹೆಣ್ಣೇ.
9ನೇ ತರಗತಿ ಓದುತ್ತಿರುವ ಆ ಪುಟ್ಟ ಬಾಲೆಯನ್ನು ಆಸ್ಪತ್ರೆಗೆ ಕರೆ ತಂದ ಪಾಲಕರಿಗೆ ಆಘಾತ ಕಾದಿತ್ತು… ಇನ್ನು ಎಳಸುತನ ಮಾಸಿರದ ಆ ಪುಟ್ಟ ಬಾಲಕಿ ತಾಯಿಯಾಗಲಿದ್ದಳು. ಅಬಾರ್ಷನ್ ಮಾಡಿಸಲು ಸಮಯ ಮೀರಿ ಹೋಗಿತ್ತು. ಈ ವಿಷಯ ಆಕೆಯನ್ನು ತಪಾಸಣೆ ಮಾಡಿದ ವೈದ್ಯರ ಮೂಲಕ ಕಾನೂನು ತಜ್ಞರ ಬಳಿ ಬಂದಾಗ ಆಕೆಯ ಈ ಸ್ಥಿತಿಗೆ ಕಾರಣವಾದ ಯುವಕನ ಮೇಲೆ ಪೊಲೀಸ್ ಸ್ಟೇಷನ್ನಲ್ಲಿ ಕೇಸನ್ನು ದಾಖಲಿಸಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆ ತಂದರು. ತನ್ನನ್ನು ಯಾವ ಕಾರಣಕ್ಕೆ ಕರೆತರಲಾಗಿದೆ ಎಂಬುದನ್ನು ಕೂಡ ಅರಿಯದ ಆ ಬಾಲಕ ಚಡಪಡಿಸುತ್ತಿದ್ದು ನನ್ನನ್ನು ಯಾವಾಗ ಕಳುಹಿಸಿ ಕೊಡುತ್ತೀರಿ ಎಂದು ವಕೀಲರನ್ನು ಕೇಳುತ್ತಿದ್ದ. ಪೋಕ್ಸೋ ಕಾಯ್ದೆಯ ಕುರಿತು ನಿನಗೆ ಗೊತ್ತಿರಬಹುದು… ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಷುಯಲ್ ಅಫೆನ್ಸಸ್. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಈ ಕಾಯ್ದೆಯ ಅಡಿಯಲ್ಲಿ ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಲೈಂಗಿಕತೆ ಎಂದರೇನು? ಎಂದೇ ಅರಿವಿಲ್ಲದ ಆ ಮಕ್ಕಳು ಈ ಅಪರಾಧಕ್ಕೆ ಗುರಿಯಾಗಿದ್ದು ಶಿಕ್ಷೆಯನ್ನು ಮಾತ್ರ ಆ ಬಾಲಕಿ ಅನುಭವಿಸುತ್ತಿದ್ದಳು. ಅರಿಯದ ವಯಸ್ಸಿನ ಹರೆಯದ ಹುಮ್ಮಸ್ಸಿನಲ್ಲಿ ಜರುಗಿದ ಪ್ರಮಾದ ಅವರಿಬ್ಬರ ಬದುಕನ್ನು ಬಲಿ ತೆಗೆದುಕೊಂಡಿತ್ತು….. ಆಕೆಯ ಮುಂದಿನ ಬದುಕು ಅಂಧಕಾರದ ತೊಟ್ಟಿಲಲ್ಲಿ ತೂಗುತ್ತಿತ್ತು.
ಒಳ್ಳೆಯ ಮತ್ತು ಕೆಟ್ಟ ಸ್ಪರ್ಶಗಳ ಕುರಿತು ನಿನಗೆ ಅರಿವಿದ್ದರೆ ಸಾಲದು… ಅಂತಹ ಸಂದರ್ಭಗಳು ನಿನಗೆ ಒದಗದಂತೆ ನಿನ್ನ ಪಾಲಕರ ರಕ್ಷಾ ಕವಚ ನಿನ್ನ ಮೇಲಿರುವುದು ನಿನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದು ನಿನಗನ್ನಿಸಿದರೆ ಅದು ನಿನ್ನ ತಪ್ಪಲ್ಲ.
ಹೆಣ್ಣು ಮಕ್ಕಳ ದೇಹ ಪವಿತ್ರವಾದ ಗರ್ಭಗುಡಿಯಂತೆ… ಮನಸ್ಸು ದೇವರ ವಿಗ್ರಹದಂತೆ. ಗರ್ಭಗುಡಿಯನ್ನು ಪ್ರವೇಶಿಸಲು ಎಲ್ಲರಿಗೂ ಅನುಮತಿ ಇರುವುದಿಲ್ಲ ಅಲ್ಲವೇ?…ಇರಬಾರದು ಕೂಡ. ಅಂತೆಯೇ ನಿಮ್ಮ ದೇಹವೆಂಬ ಗರ್ಭಗುಡಿಯಲ್ಲಿ ಮನಸ್ಸೆಂಬ ವಿಗ್ರಹವನ್ನು ಯಾರ್ಯಾರೋ ಮುಟ್ಟಿ ಮಲಿನಗೊಳಿಸಬಾರದು ಎಂಬ ಎಚ್ಚರ ನಿನಗಿರಲಿ.
ಅಯ್ಯೋ ಆಂಟಿ!..ಫ್ರೆಂಡ್ಸ್ ಜೊತೆ ಹೊರಗಡೆ ಹೋಗಿ ಸೆಲಬ್ರೆಟ್ ಮಾಡ್ತೀನಿ ಅಂದ್ರೆ ಇಷ್ಟೆಲ್ಲಾ ಹೇಳ್ತೀರಾ ಅಂತ ನಿನಗೆ ಅನ್ನಿಸಬಹುದು.. ನಿಜ ಯು ಆರ್ ನಾಟ್ ರಾಂಗ್?
ಚಿಕ್ಕವಳಿದ್ದಾಗ ನಿನ್ನನ್ನು ಪಾರ್ಕ್ ನಲ್ಲಿ ಆಟ ಆಡಲು ಬಿಟ್ಟು ನಿನ್ನಮ್ಮ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ ಕೂತಾಗ ಕೂಡ ಅದೆಷ್ಟೇ ಆಟದಲ್ಲಿ ನೀನು ಮಗ್ನಳಾಗಿದ್ದರೂ ಅರೆಕ್ಷಣ ಒಬ್ಬರನ್ನೊಬ್ಬರು ಕಾಣದೆ ಹೋದಾಗ ಪರಿತಪಿಸುತ್ತೀರಿ. ಅಮ್ಮನ ಕಣ್ಣ ನಿಲುಕಿನಲ್ಲಿ ಇರಬೇಕೆಂದು ಬಯಸುತ್ತಿದ್ದ ನೀನು ಇದೀಗ ಅಮ್ಮನಿಂದ ದೂರವಾಗಿ ಸ್ವತಂತ್ರವಾಗಿ ಹೋಗಬೇಕೆಂದು ಬಯಸುತ್ತಿರುವುದು ಎಷ್ಟರಮಟ್ಟಿಗೆ ಸರಿ… ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಬಹಳ ವ್ಯತ್ಯಾಸವಿದೆ. ಸಮಾಜ ಒಪ್ಪುವ ರೀತಿಯಲ್ಲಿ ನನ್ನಿಷ್ಟದ ಬದುಕನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯಕ್ಕೂ, ‘ನನ್ನ ಜೀವನ ನನ್ನ ಹಕ್ಕು’ ಎಂದು ಬೇಕುಬೇಕಾದಂತೆ ಬದುಕುವ ಸ್ವೇಚ್ಛೆಗೂ ಬಹಳಷ್ಟು ವ್ಯತ್ಯಾಸವಿದೆ.
ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುವ ಗಾಳಿಪಟಕ್ಕೆ ಕಣ್ಣಿಗೆ ಕಾಣಿಸದ ಒಂದು ತೆಳುವಾದ ದಾರದ ಎಳೆ (ಸೂತ್ರ) ಮತ್ತು ಬಾಲಂಗೋಚಿಗಳು ರಕ್ಷಾ ಕವಚದಂತೆ ಕಾಯುತ್ತವೆ. ಕೇವಲ ಕಾಗದ ಮತ್ತು ಕಡ್ಡಿಗಳ ಸಹಾಯದಿಂದ ತಯಾರಿಸುವ ಒಂದು ಪುಟ್ಟ ಗಾಳಿಪಟಕ್ಕೆ ಅಷ್ಟೆಲ್ಲ ರಕ್ಷಣೆ ನೀಡುವ ನಾವು ಅರಿಯದ ನಮ್ಮ ಪುಟ್ಟ ಕಂದಮ್ಮಗಳ ಕುರಿತು ಕಳವಳಿಸಬಾರದೇ? ಹೇಳು.
ಅಷ್ಟಕ್ಕೂ ಹೋಗಲೇಬೇಕೆಂದಿದ್ದರೆ… ನಿನ್ನಪ್ಪ ಅಮ್ಮನನ್ನು ಒಪ್ಪಿಸಿ ಸರಿಯಾದ ಮತ್ತು ಸುರಕ್ಷಿತವಾದ, ನಗರದ ಒಳ ವಲಯದಲ್ಲಿ, ಮನೆಗೆ ಅತ್ಯಂತ ಹತ್ತಿರದಲ್ಲಿರುವ ಪೊಲೀಸ್ ಇಲಾಖೆಯ ನಿಗರಾಣಿಯಲ್ಲಿರುವ ಪಾರ್ಟಿ ಹಾಲ್ಗಳಲ್ಲಿ ಅಧಿಕೃತವಾಗಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಭಾಗಿಯಾಗು ( ಸಾಧ್ಯವಾದರೆ ಪಾಲಕರನ್ನು ಕರೆದುಕೊಂಡು )
ನಿನ್ನ ಈ ವಯಸ್ಸಿನಲ್ಲಿ ನೀನು ಓದು, ವಿದ್ಯಾಭ್ಯಾಸದ ಕಡೆ ಗಮನ ಕೊಡು. ಒಳ್ಳೆಯ ವಿದ್ಯಾಭ್ಯಾಸ ನಿನ್ನ ಬದುಕಿನ ಗುರಿಗಳನ್ನು ತಲುಪಲು ನಿನಗೆ ಸಹಾಯಕ.
ಯೌವನದ ಕೆಲ ವರುಷಗಳು ನಿನ್ನ ಮನಸ್ಸಿನ ಹತೋಟಿ ತಪ್ಪಿ ನೀನು ನಡೆದರೆ ಅದಕ್ಕೆ ಜೀವನವಿಡಿ ತಪ್ಪುಕಂದಾಯ ಕಟ್ಟಬೇಕಾದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ತಮ್ಮ ಕುಟುಂಬಗಳಿಂದ ಮನೆಯಿಂದ ಸಾಕಷ್ಟು ದೂರದಲ್ಲಿರುವ ಬೇರೆಯವರ ಸ್ವಚ್ಛಂದ ಜೀವನಗಳನ್ನು ನೋಡಿ ಭ್ರಮೆಗೆ ಒಳಗಾಗಬೇಡ…. ಅವರ ಪಾಲಕರಿಗೂ ಕೂಡ ಈ ವಿಷಯ l ಗೊತ್ತಿರುವುದಿಲ್ಲ. ಗೊತ್ತಿದ್ದರೆ ಅವರು ಕೂಡ ತಮ್ಮ ಮಕ್ಕಳನ್ನು ಬಿಡುವುದಿಲ್ಲ.
ಸರಿಯಾದ ಹಾದಿಯಲ್ಲಿ ಸಾಗಲು ಬಹಳಷ್ಟು ಧೈರ್ಯ ಬೇಕು..ತಪ್ಪು ಹಾದಿಗಳಲ್ಲಿ ಇರುವಷ್ಟು ಆಕರ್ಷಣೆ ಒಳ್ಳೆಯ ಹಾದಿಯಲ್ಲಿ ಇರುವುದಿಲ್ಲ. ಆಯ್ಕೆ ನಿನಗೆ ಬಿಟ್ಟದ್ದು. ನನ್ನ ಮಾತುಗಳ ಹಿಂದಿನ ಕಾಳಜಿ, ನಿನ್ನ ತಾಯಿಯ ಕಳಕಳಿ ನಿನಗೆ ಅರಿವಾದಲ್ಲಿ ನಾನು ಈ ಪತ್ರ ಬರೆದದ್ದಕ್ಕೂ ಸಾರ್ಥಕ.
ಇಂತಿ ನಿನ್ನ ಪ್ರೀತಿಯ ದೊಡ್ಡಮ್ಮ .
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.