ಹೊಸತನದ ಬೆರಗು ನೀಡಲಿ ಇನ್ನಷ್ಟು ಮೆರುಗು.
2025 ರ ನವ ವರ್ಷಕ್ಕೆ ಕಾಲಿಡಲು ಹೊರಟಿರುವ ನವ ಮನಸ್ಸುಗಳಿಗೆ ಈ ಹೊಸ ವರುಷವು ಇನ್ನಷ್ಟು ಬೆರಗು, ಹೊನಲು, ಸಂತಸ, ಸಂಭ್ರಮ ತರಲಿ. ಪ್ರತಿ ದಿನದಂತೆ ಈ ದಿನವೂ. ಅದೆ ಬೆಳಗ್ಗಿನ ನಿತ್ಯ ಕರ್ಮ, ಅದೇ ಆವೇಗದ ಜೀವನದ ಓಟ. ಅವಸರದ ಲಗುಬಗೆಯ ನಿತ್ಯ ಕಾಯಕ. ಭಾರತೀಯರನ್ನು ಹೊರತು ಪಡಿಸಿ ಉಳಿದೆಲ್ಲಾ ದೇಶಗಳಲ್ಲಿ ಜನವರಿ ಒಂದನೆ ತಾರೀಖು ಹೊಸ ವರ್ಷದ ಆಚರಣೆ.
ನಮ್ಮಲ್ಲೂ ಎಲ್ಲದರಲ್ಲೂ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಮಿಂದೇಳುವ ಮನಸ್ಸುಗಳಿಗೆ ಬರವಿಲ್ಲ. ಎಲ್ಲಾ ಸಂಭ್ರಮವನ್ನು ವಿಪರೀತವಾಗಿ ರಂಜಿಸಲ್ಪಡುವ, ಅರ್ಥಹೀನ ಆಚರಣೆಗಳಿಗೆ ಕಮ್ಮಿ ಇಲ್ಲ. ಇಡೀ ರಾತ್ರಿ ಕ್ಲಬ್ಬು ಪಬ್ಬುಗಳ ಅಬ್ಬರದ ಸಂಗೀತದಲ್ಲಿ ಯುವ ಮನಸ್ಸುಗಳ ಬೊಬ್ಬೆಯೊಳಗೆ ನಮ್ಮ ಸನಾತನ ಸಂಸ್ಕ್ರತಿಯೆಂಬ ಸುಂದರ ಸುಮವು ಬಾಡಿ ಬಸವಳಿದು ತೊಟ್ಟು ಕಳಚಿ ಧರೆಗುರುಳುತ್ತಿದೆ.
ಯುಗಾದಿಯಂದು ಸೂರ್ಯನು ತನ್ನ ದಿಶೆಯನ್ನು ಬದಲಿಸಿ, ಗಿಡ ಗಂಟಿಗಳಲ್ಲಿ ಹೊಸ ತಳಿರು ಚಿಗುರಿ ನವ ಉತ್ಸಾಹದಿಂದ ತರು ಲತೆಗಳು ಕಂಗೊಳಿಸುವಾಗ ಮನಸ್ಸು ಹೊಸತನದ ಹರುಷಕ್ಕೆ ತೆರೆದುಕೊಳ್ಳುತ್ತದೆ. ಸೂರ್ಯನ ಎಳೆಯ ರಶ್ಮಿಯ ಬೆರಗಿನಲ್ಲಿ, ಪ್ರಕೃತಿ ಮಡಿಲಿನಲ್ಲಿ ಆಗಷ್ಟೆ ಬಿರಿದ ಹೂವುಗಳು ಹೊಸ ಚೈತನ್ಯ ತುಂಬುತ್ತವೆ.
ದೀರ್ಘಕಾಲದ ಚಳಿಗೆ ಬೆಚ್ಚಗೆ ಹೊದ್ದು ಮಲಗಿದ್ದ ಭೂ ಮಾತೆ ತಾಯಿಯ ಬೆಚ್ಚನೆಯ ತೆಕ್ಕೆಯಲ್ಲಿ ಸುಂದರ ಸ್ವಪ್ನದ ಸೊಬಗನ್ನು ಉಂಡು ನಿದ್ದೆ ಮುಗಿಸಿ ಎದ್ದ ಮುದ್ದು ಕಂದನಂತೆ ಭಾಸವಾಗುತ್ತದೆ.
ಹೊಸ ಬಗೆಯಲ್ಲಿ ತೆರೆದುಕೊಂಡ ವಸುಂಧರೆಯು ಹೊಸ ಹುರುಪನ್ನು ಮೂಡಿಸಿ ಸುಕೋಮಲ ಸ್ಪರ್ಶದಿಂದ ಜೀವ ಸಂಕುಲವನ್ನು ಬಡಿದು ಎಬ್ಬಿಸಿ ಸ್ವಾಗತಿಸುವ ಪರಿಯ ಎಂತಹ ಕಲ್ಲು ಹೃದಯವನ್ನು ಕರಗಿಸಬಲ್ಲದು. ನಮ್ಮ ಹೊಸತನದೊಂದಿಗೆ ಪ್ರಕೃತಿಯೂ ವಿನೂತನವಾಗಿ ಸಿಂಗರಿಸಿಕೊಂಡರೆ ಅದೆಷ್ಟು ಸುಂದರ. ಹೀಗೆ ನಮಗೆ ಯುಗಾದಿಯೇ ಹೊಸ ವರ್ಷ ಎಂಬ ಗರ್ವವೂ ಜೊತೆಗಿರೆ ನಮ್ಮ ಸನಾತನ ಸಂಸ್ಕ್ರತಿಯೂ ಇನ್ನಷ್ಟು ದಿನ ಉಳಿದೀತು.
ಹೊಸತನದ ಸಡಗರವು ನಮಗೆ ಇನ್ನಷ್ಟು ಉತ್ಸಾಹವನ್ನು ಮೂಡಿಸಬಲ್ಲದು. ಆದರೆ ಆ ಉತ್ಸಾಹವನ್ನು ಇನ್ನಷ್ಟು ದಿನ ಕಾಪಿಡುವ ಹೊಣೆಯೂ ನಮ್ಮದೆ. ಪಾಶ್ಚಿಮಾತ್ಯ ಸಂಸ್ಕ್ರತಿಯಲ್ಲಿ ಹೊಸ ವರ್ಷಕ್ಕೆ ಹೊಸ ರೆಸಲ್ಯೂಷನ್ ತೆಗೆದುಕೊಳ್ಳುವ ಪದ್ದತಿಯೂ ಇದೆ. ರೆಸಲ್ಯೂಷನ್ ಗಳನ್ನು ಸದಾ ನೆನಪಿಟ್ಟುಕೊಂಡು ಬೇರೆಯವರಿಗೆ ಪುಕಸಟ್ಟೆಯಾಗಿ ಕೊಡುವ ಸಲಹೆಗಳಲ್ಲಿ ಕೆಲವಷ್ಟನ್ನಾದರೂ ನಾವು ಅಳವಡಿಸಿಕೊಂಡರೆ ಜೀವನದ ಹುಡುಕಾಟಕ್ಕೆ ಒಂದು ನಿಲ್ದಾಣ ಸಿಕ್ಕಂತೆ.
ಜೀವನವೆಂಬ ಅನಿಶ್ಚಿತ ಪಯಣದಲ್ಲಿ ಯಾರ ಕೊನೆಯ ಕ್ಷಣ ಯಾವಾಗ ಬಂದೀತೊ ಹೇಳಲಾಗದು. ಇದು ನಮ್ಮದಲ್ಲ, ನನಗೆ ಇದರ ಗೊಡವೆಯೂ ಬೇಡ ಎಂಬ ಉದಾಸೀನತೆಯೂ ಸದಾ ಸಲ್ಲ. ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಕಲೆ ನಮಗೆ ತಿಳಿದಿದ್ದರೆ ಸಾಕು. ನಮ್ಮಿಂದ ಇನ್ನೊಂದು ಮುಖದಲ್ಲಿ ಮುಗುಳ್ನೆಗೆ ಮೂಡಿದರೆ ಸಾಕಲ್ಲವೆ. ಹಾಗಾಗಿ ಹೊಸ ವರ್ಷದ ಆಚರಣೆಯು ಒಂದು ಮಿತಿಯಲ್ಲಿರಲಿ. ನಮ್ಮಿಂದ ಒಂದು ಚೂರು ಕಸ ಭೂ ತಾಯಿಯ ಒಡಲಿಗೆ ಸೇರದಿರಲಿ.
ನಮ್ಮ ಬಜೆಟನ್ನು ನಮ್ಮ ಖರ್ಚು ಮೀರದಂತೆ ಯೋಚಿಸುವ ಯೋಜಿಸುವ ಅಗತ್ಯವಿದೆ. ಚಿಕ್ಕ ಪುಟ್ಟ ಖುಷಿಯನ್ನು ಅನಂದಿಸುವ ಪುಟ್ಟ ಕಂದನ ಮನಸ್ಸು ನಮ್ಮ ಜೊತೆಗಿರಲಿ. ಪುಟ್ಟ ಸಂಭ್ರಮಕ್ಕೆ ಗರಿ ಬಿಚ್ಚಿ ಕುಣಿಯುವ ಮಯೂರದ ತೆರದಿ ಎಲ್ಲಾ ಎಲ್ಲೆಗಳನ್ನು ಮೀರಿ ಕುಣಿಯಬೇಕಿದೆ. ಅವರಿವರ ಚಿಂತೆ ಸಲ್ಲ.
ಬಾಳೆಂಬ ಬುತ್ತಿಯ ತುತ್ತನ್ನು ಹಂಚಿದಷ್ಟು ಸುಖ. ತಾನು ತನ್ನದು ಮಾತ್ರ ಎಂಬ ಭಾವದಿಂದ ದುಃಖ. ಆಚರಿಸುವ ಸಂಭ್ರಮಿಸುವ ನವ ಮನಸ್ಸು ನಮ್ಮದಾಗಲಿ. ಮತ್ತೊಮ್ಮೆ ಈ ವರ್ಷದಲ್ಲಿ ಕಲಿತ ಪಾಠಗಳ ಅನುಭವದ ಮೂಸೆಯಲ್ಲಿ ಮಿಂದೆದ್ದು ಪುನೀತರಾಗೋಣ. ಇನ್ನಷ್ಟು ಮತ್ತಷ್ಟು ಒಳಿತಿನೆಡೆಗೆ ಕ್ರಮಿಸೋಣ.ಸಂಭ್ರಮದ ಖುಷಿಗೆ ನಮ್ಮದು ಅವರದ್ದು ಎಂಬ ಚೌಕಟ್ಟು ಹಾಕದಿರೋಣ. ಎಲ್ಲಾ ಕಡೆಯಿಂದಲೂ ಹೊಸ ಸಂಭ್ರಮವು ನವ ಮನಸ್ಸುಗಳ ಸದನದ ಕದ ತಟ್ಟಲಿ.
– ವಿಮಲ ಆದರ್ಶ ಹೆಬ್ರಿ ಉಡುಪಿ.