ಅಕ್ಷರದವ್ವ ಸಾವಿತ್ರಿಬಾಯಿ ಫುಲೆ.
– ಅಶ್ವಜೀತ ದಂಡಿನ ಬೀದರ.
ಕ್ರಿ.ಪೂ. 185 ರಲ್ಲಿ ಪುಷ್ಯಮಿತ್ರ ಸುಂಗನ ಆಸ್ಥಾನದ ಪಂಡಿತನಾದ, ಸುಮತಿ ಭಾರ್ಗವನೆಂಬ ಒಬ್ಬ ಆರ್ಯ ಋಷಿ ಬರೆದ ‘ಮನಸ್ಪೃತಿಯಂಬ’ ತಾರತಮ್ಯ ನೀತಿ ಬರಿತಾ ಸಂವಿಧಾನದಿಂದಾಗಿ ವಿದ್ಯೆ, ಆಸ್ತಿ, ಅಧಿಕಾರ ನಿಷೇಧಿಸಲಾಯಿತು. ಒಂದು ವೇಳೆ ‘ಶೂದ್ರರು ವಿದ್ಯೆ ಕಲಿತರೆ, ಅವನ ತುಂಡುತುಂಡಾಗಿ ಕತ್ತರಿಸಬೇಕು. ವಿದ್ಯೆಯನ್ನು ಉಚ್ಚರಿಸಿದರೆ, ಅವನ ನಾಲಿಗೆ ಕತ್ತರಿಸಬೇಕು. ವಿದ್ಯೆಯನ್ನು ಕೇಳಿದರೆ, ಅವನ ಕಿವಿಯಲ್ಲಿ ಕಾದ ಕಬ್ಬಿಣದ ಸೀಸವನ್ನು ಸುರಿಯಬೇಕು. ಎಂದು ಈ ಮನುಮುನಿಯು ಬರೆದಿರುವ ‘ಮನಸ್ಪೃತಿಯಂಬ’ ಧಾರ್ಮಿಕ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ.
ಅಕ್ಷರಶಃ ಈ ಸಂವಿಧಾನವು ಗುಪ್ತರ ಕಾಲದಲ್ಲಿ ಭಾರತದ ಎಲ್ಲಾ ಕಡೆ ಜಾರಿಗೆ ತರಲಾಯಿತು. ಇದರಿಂದಾಗಿ ಈ ದೇಶದ ಬಹುಸಂಖ್ಯಾತರಾದ ಬಹುಜನರು ವಿದ್ಯೆ, ಆಸ್ತಿ, ಅಧಿಕಾರದಿಂದ ವಂಚಿತರಾದರು. ಇದರ ಪರಿಣಾಮವಾಗಿ , ವಿದ್ಯೆಯಿಲ್ಲದೆ ದಡ್ಡರಾದರು. ಆಸ್ತಿ ಇಲ್ಲದೆ ಬಡವರಾದರು. ಅಧಿಕಾರವಿಲ್ಲದೆ ಗುಲಾಮರಾದರು. ಒಟ್ಟಿನಲ್ಲಿ ಮಾನಸಿಕ ಗುಲಾಮಗಿರಿಗೆ ಒಳಪಟ್ಟರು.
ಇದರ ಮಧ್ಯೆ ಹಲವಾರು ವಿದೇಶಿಗರು ಭಾರತದ ಮೇಲೆ ದಾಳಿ ಮಾಡಿ, ಇಲ್ಲಿನ ಅಪಾರ ಸಂಪತ್ತನ್ನು ಲೂಟಿ ಮಾಡಿದರು. ಅಷ್ಟೇ ಅಲ್ಲದೆ ಈ ಭಾರತ ದೇಶದಲ್ಲೇ ತನ್ನ ಆಳ್ವಿಕೆ ಪ್ರಾರಂಭ ಮಾಡಿದರು. ಆದರೆ ಇವರ್ಯಾರಿಂದಲು ಈ ದೇಶದ ಬಹುಸಂಖ್ಯಾತರಾದ ಶೂದ್ರ ಅತಿಶೂದ್ರರರ ಹಾಗೂ ಮಹಿಳೆಯರ ಕಷ್ಟಕರ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಲಿಲ್ಲ.
ಕ್ರಿ.ಶ. 1600 ರಲ್ಲಿ ಬ್ರಿಟಿಷರು ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದು ತನ್ನ ಆಡಳಿತವನ್ನು ಪ್ರಾರಂಭಿಸಿ, ಇಲ್ಲಿನ ಅಮೂಲ್ಯ ಸಂಪತ್ತೆಲ್ಲ ಕೊಳ್ಳೆ ಹೊಡೆದು ತನ್ನ ತವರಾದ ಇಂಗ್ಲೆಂಡಿಗೆ ವೈದರು.
ಆದರೆ ಕ್ರಿ.ಶ.1835 ರ ಸಮಯ ಬ್ರಿಟಿಷರು ಆಧುನಿಕ ಶಿಕ್ಷಣಕ್ಕೆ ಅಡಿಪಾಯ ಹಾಕಿದ ಸಮಯ, ಯಾವ ದೇವರು ಮಾಡದ ಮಾನವೀಯ ಕೆಲಸವನ್ನು ಮಾನವರಾದ ಬ್ರಿಟಿಷರು ವಿಶೇಷ ಆಸಕ್ತಿಯಿಂದ ಮಾಡಲು ಮುಂದಾದ ಸಮಯ, ಈ ಸಮಯದಲ್ಲಿ ಸಾರ್ವಜನಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿದ್ದ ’ಲಾರ್ಡ್ ಥಾಮಸ್ ಮೆಕಾಲೆ’ ಭಾರತದ ಏಳಿಗೆಯ ಬಗ್ಗೆ, ಭಾರತೀಯರ ಪ್ರಗತಿಯ ಬಗೆಗೆ ವಿಶೇಷವಾದ ಕಾಳಜಿ ಕನಿಕರವನ್ನು ಹೊಂದಿದವನಾಗಿದ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣದ ಮೂಲಕ ಭಾರತೀಯರ ಬದುಕು ಬಾಳುವೆಗಳಲ್ಲಿ ಪರಿಣಾಮಕಾರಿಯಾದ ಸುಧಾರಣೆಗಳನ್ನು ಕ್ರಾಂತಿಕಾರರಾದ ಬದಲಾವಣೆಗಳನ್ನು ತರಬೇಕೆಂದು ಮಹಾದಾಸೆ ಹೊಂದಿದವನಾಗಿದ. ಅದಕ್ಕಾಗಿ ಪರಿಣಾಮಕಾರಿಯಾದ ಒಂದು ಶಿಕ್ಷಣ ನೀತಿಯನ್ನು ರೂಪಿಸಿದ.
ಭಾರತೀಯರ ಪಾಲಿಗೆ ನಿಜವಾದ ಲಾರ್ಡ್ ಆದ ಮೆಕಾಲೆಯವರ ಈ ನಡೆಯನ್ನು ನೋಡಿ, ಭಾರತದ ಜಾತಿವಾದಿಗಳು ಉರಿದು ಬಿದ್ದರು. ಮೈಯಲ್ಲಿ ದೇವ್ವ ಬಂದವರ ಹಾಗೆ ಅರಚಾಡಿದರು. ಹಾದಿ ಬೀದಿಗಿಳಿದು ಕಿರುಚಾಡಿದರು. ಶೂದ್ರರು ಹಾಗೂ ಹೆಣ್ಣುಮಕ್ಕಳು ವಿದ್ಯೆ ಕಲಿಯುವುದು ಧರ್ಮ ವಿರೋಧವಾಗಿದೆ ಆದಕಾರಣ ಸಾರ್ವತ್ರಿಕ ಶಿಕ್ಷಣ ನೀತಿ ಜಾರಿಗೊಳಿಸಬಾರದು ಎಂದು ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹಾಕಿದರು. ಯಾವ ಮಟ್ಟಕ್ಕೆ ಅಂದರೆ, ಬ್ರಿಟಿಷರು ಲಾರ್ಡ್ ಮೆಕಾಲೆಯವರಿಗೆ ; “ಸಾರ್ವತ್ರಿಕ ಶಿಕ್ಷಣ ಪದ್ಧತಿಯಿಂದ ಬ್ರಿಟಿಷ್ ಸರ್ಕಾರದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ ಕಾರಣ ತಾವು ಈ ಶಿಕ್ಷಣ ನೀತಿ ಹಿಂದೆ ತೆಗೆದುಕೊಳ್ಳುವುದು ಉತ್ತಮ” ಎಂದು ಮೆಕಾಲೆಯವರಿಗೆ ಬ್ರಿಟಿಷ್ ಅಧಿಕಾರಿಗಳಿಂದ ಪತ್ರ ಬರುವ ಮಟ್ಟಕ್ಕೆ.
ಯಾರು ಏನೇ ಹೇಳಿದರು. ಏನೇ ಮಾಡಿದರೂ ತನ್ನ ಹಠ ಬಿಟ್ಟುಕೊಡದ ಮೆಕಾಲೆಯು ” ಭಾರತದಲ್ಲಿ ಕಟ್ಟಿದ ಬ್ರಿಟಿಷ್ ಸಾಮ್ರಾಜ್ಯ ಒಂದಲ್ಲಾ ಒಂದು ದಿನ ನಾಶವಾಗಬಹುದು. ಆದರೆ ನಮ್ಮ ಭಾಷೆಗೆ ಮತ್ತು ನಮ್ಮ ಶಿಕ್ಷಣ ನೀತಿಗೆ ಇಂದಲ್ಲ ನಾಳೆ ಇಡಿ ವಿಶ್ವವೇ ತಲೆಬಾಗುತ್ತದೆ” ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸಿ, ತನ್ಮೂಲಕ ತಾನು ರೂಪಿಸಿದ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದನು. ಇಲ್ಲಿ ನಿಜಕ್ಕೂ ಮೆಕಾಲೆಯವರ ಧೈರ್ಯ ಮತ್ತು ಜ್ಞಾನ ಮೆಚ್ಚಲೇಬೇಕು.
ಕ್ರಿ.ಶ 1835 ರಲ್ಲಿ ಲಾರ್ಡ್ ಮೆಕಾಲೆಯವರು ಜಾರಿಮಾಡಿದ ಸಾರ್ವತಿಕ ಶಿಕ್ಷಣ ನೀತಿಯಿಂದಾಗಿ, ಭಾರತದಲ್ಲಿ ಕ್ರೈಸ್ತ ಧರ್ಮ ಪ್ರಚಾರಕರಿಂದ ಹಲವಾರು ಮಿಷನರಿ ಶಾಲೆಗಳು ತಲೆಯೆತ್ತಿದವು. ಕ್ರಿ.ಪೂ 185 ರಿಂದ ಕ್ರಿ.ಶ 1835 ರ ವರೆಗೆ, ಅಂದರೆ ಎರಡು ಸಾವಿರದ ಅಧಿಕ ವರ್ಷಗಳ ಕಾಲ ವಿದ್ಯೆಯಿಂದ ದೂರ ಇದ್ದ ಶೂದ್ರ ಅಸ್ಪೃಶ್ಯರಿಗೆ ಹಾಗೂ ಮಹಿಳೆಯರಿಗೆ ಮತ್ತೆ ಶಾಲೆಗಳು ತೆರೆದುಕೊಂಡವು. ಇಂತಹ ಶಾಲೆಗಳಲ್ಲಿ ವಿದ್ಯೆ ಕಲಿತ ಮೊದಲಿಗರು ಮಹಾತ್ಮ ಜ್ಯೋತಿಬಾಫುಲೆಯವರು.
ಕ್ರಿ.ಶ1827 ಫೆಬ್ರವರಿ 20 ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ಕಟಗುಣ ಎಂಬಲ್ಲಿ ಜ್ಯೋತಿಬಾಫುಲೆಯವರ ಜನನವಾಯಿತು. ಇವರ ತಂದೆ ಗೋವಿಂದರಾವ್ ಫುಲೆ ತಾಯಿ ಜಿಮಣಬಾಯಿ. ಶೂದ್ರ ಮಾಲಿ ಸಮಾಜದಲ್ಲಿ ಜನಿಸಿದ ಜ್ಯೋತಿಬಾಫುಲೆಯವರು, ಶೂದ್ರ ಸಮಾಜದಲ್ಲಿಯೇ ವಿದ್ಯೆ ಪಡೆಯುವುದರಲ್ಲಿ ಮೊದಲಿಗರಾಗಲು ಕಾರಣ 1835ರ ಈ ಶಿಕ್ಷಣ ನೀತಿ.
ಅಂದಿನ ಕಾಲದಲ್ಲಿ ಬಾಲ್ಯವಿವಾಹ ಪದ್ಧತಿ ಜಾರಿಯಿದ್ದರಿಂದ; 13ವರ್ಷದ ಜ್ಯೋತಿಬಾಫುಲೆ ಅವರಿಗೆ 9ವರ್ಷದ ಸಾವಿತ್ರಿಬಾಯಿ ಅವರೊಂದಿಗೆ ಮದುವೆ ಮಾಡಲಾಯಿತು. ಅವಾಗ ಸಾವಿತ್ರಿಬಾಯಿಗೆ ಇನ್ನೂ ಉಂಡಾಡುವ ವಯಸ್ಸು, ಉಂಡಾಡುವ ವಯಸ್ಸಿನಲ್ಲೇ ತನ್ನ ತವರು ಮನೆ ಬಿಟ್ಟು ಗಂಡನ ಮನೆಗೆ ಬಂದು ಸೇರಿಕೊಂಡಳು. ವಿದ್ಯಾದ ಮಹತ್ವವನ್ನು ಚೆನ್ನಾಗಿಯೇ ಅರಿತ ಜ್ಯೋತಿಬಾಫುಲೆಯವರು, ಅನಕ್ಷರಸ್ಥಳಾದ ತನ್ನ ಹೆಂಡತಿ ಸಾವಿತ್ರಿಬಾಯಿ ಫುಲೆಯವರಿಗೆ ಮೊಟ್ಟ ಮೊದಲ ಗುರುವಾಗಿ ಮನೆಯಲ್ಲಿಯೇ ಅಕ್ಷರ ಅಭ್ಯಾಸ ಮಾಡಿಸಿದರು.
ಅಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಕಲಿತರೆ ಧರ್ಮ ವಿರೋಧ ಕಾರ್ಯ ಎಂದು ಬಲವಾಗಿ ನಂಬಲಾಗಿತ್ತು. ಇದು ಸಂಪ್ರದಾಯಸ್ಥ ಜಾತಿವಾದಿಗಳಿಗೆ ನುಂಗಲಾರದ ಬಿಸಿ ತುಪ್ಪವಾಯಿತು. ಅದರೆ ಇಂತಹ ಯಾವ ವಿಷಯದ ಕಡೆ ಗಮನ ಕೊಡದೆ ಜ್ಯೋತಿಬಾಫುಲೆಯವರು ಕ್ರಿ.ಶ 1847ರಲ್ಲಿ ಸಾವಿತ್ರಿಬಾಯಿ ಫುಲೆಯವರಿಗೆ ಶಿಕ್ಷಕಿಯ ತರಬೇತಿ ಕೊಡಿಸಿದರು. ಹಾಗೂ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ಮಾಡಿದರು. ಆಗ ಸಾವಿತ್ರಿಬಾಯಿ ಫುಲೆಯವರಿಗೆ ಕೇವಲ 17 ವರ್ಷ.
ಕ್ರಿ.ಶ 1848ರ ಆಗಸ್ಟ್ ತಿಂಗಳಲ್ಲಿ ಫುಲೆ ದಂಪತಿಗಳು ಪುಣೆಯ ಬುದವಾರ ಪೇಟೆಯ ಬಿಡೆಯಲ್ಲಿ ಮೊಟ್ಟ ಮೊದಲ ಮಹಿಳಾ ಶಾಲೆ ತೆರೆದರು. ಹಾಗೂ ಅದರ ಮುಖ್ಯೋಪಾಧ್ಯಾಯಿನಿಯಾಗಿ ತಾಯಿ ಸಾವಿತ್ರಿಬಾಯಿ ಫುಲೆ ಅವರು ಕಾರ್ಯ ಆರಂಭ ಮಾಡಿದರು. ಆದರೆ, ಅ ಕಾರ್ಯ ಅಷ್ಟೊಂದು ಸುಲಭವಾಗಿರಲಿಲ್ಲ.
ಶೂದ್ರ ಜಾತಿಗೆ ಸೇರಿದ ಒಬ್ಬ ಸಾಮಾನ್ಯ ಮಹಿಳೆ ತಾಯಿ ಸಾವಿತ್ರಿಬಾಯಿ ಫುಲೆ ಶಾಲೆಗೆ ಹೋಗಿದ್ದು, ಅಕ್ಷರ ಕಲಿತಿದ್ದು, ಶಿಕ್ಷಕಿಯಾಗಿದ್ದು, ಸ್ವಂತ ಶಾಲೆ ತೆರೆದು ಉಚಿತವಾಗಿ ವಿದ್ಯಾದಾನ ಮಾಡತೊಡಗಿದ್ದು, ಇದೆಲ್ಲಾ ಎಲ್ಲ ಬಗೆಯ ಪ್ರಗತಿಗೆ ವಿರೋಧಿಗಳಾದ ಜಾತಿವಾದಿಗಳ ಕಣ್ಣಿಗೆ ಅಪರಾಧವಾಗಿ ಕಾಣಿಸಿತು. ಧರ್ಮಬಾಹೀರ ಕೆಲಸವಾಗಿ ತೋರಿತು. ದೇವ ದ್ರೋಹಿ ಕಾರ್ಯವಾಗಿ ಕಂಡಿತು. ಇದರಿಂದ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಒದ್ದಾಡಿದ ಜಾತಿವಾದಿಗಳು ತಾಯಿ ಸಾವಿತ್ರಿಬಾಯಿ ಫುಲೆ ಕಲಿಸುವ ಶಾಲೆಗೆ ಹೋಗುವ ಹುಡುಗಿಯರಿಗೆ ಬೆದರಿಕೆ ಹಾಕತೊಡಗಿದರು. ಮಾತು ಕೇಳದ ಹುಡುಗಿಯರಿಗೆ ಹೊಡೆಯತೊಡಗಿದರು. ಜಾತಿ ಮತ್ತು ಸಾಮಾಜಿಕ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಇನ್ನಿಲ್ಲದಂತೆ ಕಿರುಕುಳವನ್ನು ಕೊಡತೊಡಗಿದರು. ಸ್ವತಹ ತಾಯಿ ಸಾವಿತ್ರಿಬಾಯಿ ಫುಲೆ ಅವರಿಗೆ ಕೊಲೆಬೆದರಿಕೆ ಹಾಕತೊಡಗಿದರು. ಹೆಣ್ಣು ಮಕ್ಕಳು ಶಿಕ್ಷಣ ಕಲಿಯುವುದು , ಹಾಗೂ ಹೆಣ್ಣು ಮಕ್ಕಳಿಗೆ ಉಚಿತವಾಗಿ ವಿದ್ಯೆ ಕೊಡುವುದು, ಧರ್ಮಕ್ಕೆ ವಿರುದ್ಧವಾಗಿದೆ.ಇದನ್ನು ನಿಲ್ಲಿಸಲೇಬೇಕು ಎಂದು ಹಟತೊಟ್ಟ ಜಾತಿವಾದಿಗಳು ಮಾನ ಮರ್ಯಾದೆಯನ್ನು ಬಿಟ್ಟು ನಿಂತಿದ್ದರು. ತಾಯಿ ಸಾವಿತ್ರಿಬಾಯಿ ಫುಲೆ ಶಾಲೆಗೆ ಹೋಗುವಾಗ, ಬರುವಾಗ, ಕಲ್ಲು ಕಟ್ಟಿಗೆ ಎಸೆಯುವ ಸಗಣಿ, ಕೆಸರು ಎರಚುವ ಅವ್ಯಾಚ್ಯ ಶಬ್ದಗಳಿಂದ ಅವಮಾನಗೊಳಿಸುವ, ಹಾಗೂ ಹೋಗೋ ಬರುವ ದಾರಿಯಲ್ಲಿ ಗಾಜಿನಚೂರು ಮುಳ್ಳಿನ ಕೊರೆ ಹಾಕುವ ಅತ್ಯಂತ ಹೇಯ ಕೆಲಸದಲ್ಲಿ ನಿರಂತರಾಗಿದ್ದರು. ಆದರೆ, ದಯಾಮಯಿಯಾದ ತಾಯಿ ಸಾವಿತ್ರಿಬಾಯಿ ಫುಲೆ ” ಸಹೋದರಿಯರ ಸೇವೆಯೇ ದೇವರ ಸೇವೆಯಂದು ನಾನು ತಿಳಿದಿದ್ದೇನೆ. ನೀವು ಎರಚುವ ಕೆಸರು, ಸಗಣಿ, ತೋರುವ ಕಲ್ಲು, ಕಟ್ಟಿಗೆಗಳು ನನ್ನ ಪಾಲಿಗೆ ಹೂವುಗಳು, ದೇವರ ಪಾದ ಸೇರುವ ಹೂವುಗಳು, ಇಂದು ನಾವು ಮಾಡುತ್ತಿರುವ ಕೆಲಸ ನಿಮಗೆ ಕೆಟ್ಟದಾಗಿ ಕಾಣಿಸಬಹುದು. ಆದರೆ, ಖಂಡಿತವಾಗಿ ಮುಂದೊಂದು ದಿನ ನಮ್ಮ ಕೆಲಸವೇ ಸರಿಯಾದುದೆಂದು ಹೇಳುವ ಕಾಲ ಬಂದೇ ಬರುತ್ತದೆ.” ಎಂದು ತಮ್ಮ ವಿರೋಧಿಗಳಿಗೆ ದಿಟ್ಟತನದಿಂದ ಎದುರುತ್ತರ ಕೊಡುತ್ತಿದ್ದರು.
ಒಂದು ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನ, ತಾಯಿ ಸಾವಿತ್ರಿಬಾಯಿ ಶೂದ್ರಾತಿಶೂದ್ರರ ಶೋಚನೀಯ ಬದುಕನ್ನು ಮತ್ತು ಧ್ವನಿಯಿಲ್ಲದ ಬ್ರಹ್ಮಾಣ ಮಹಿಳೆಯರ ಬಾಳನ್ನು ಬೆಳಗುವ ಸಲುವಾಗಿ ಸಾವಿರಾರು ಕಷ್ಟಗಳನ್ನು ಅನುಭವಿಸಿದರು.
ಇಂದು ಮಹಿಳೆಯರು ಗ್ರಾಮ ಪಂಚಾಯಿತಿಯಿಂದ ಹಿಡಿದು ಪ್ರಧಾನಮಂತ್ರಿಯವರಿಗೆ ಬೆಳೆದಿದ್ದಾಳೆ. ಮಂತ್ರಿಯಿಂದ ಮುಖ್ಯಮಂತ್ರಿಯವರಿಗೆ ನಡೆದಿದ್ದಾಳೆ. ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿ , ಅರಣ್ಯಾಧಿಕಾರಿ, ಮುಂತಾದ ಉನ್ನತ ಹುದ್ದೆಗಳಲ್ಲಿ ಕುಳಿತು ಅತ್ಯುನ್ನತ ಆಡಳಿತ ನೀಡುತ್ತಿದ್ದಾಳೆ. ವಿಮಾನದಲ್ಲಿ ಉಪಗ್ರಹಗಳಲ್ಲಿ ಕುಳಿತು ಆಕಾಶದಲ್ಲಿ ಹಾರಾಡುತ್ತಿದ್ದಾಳೆ. ಪುರುಷನಿಗಿಂತ ಪ್ರಾಮಾಣಿಕವಾದ ಸೇವೆಯನ್ನು ನೀಡುತ್ತಿದ್ದಾಳೆ.
ಇದಕ್ಕೆಲ್ಲಾ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ತಾಯಿ ಸಾವಿತ್ರಿಬಾಯಿ ಫುಲೆ ಅವರ ನಿರಂತರವಾದ ನಿಸ್ವಾರ್ಥ ದುಡಿಮೆಯೇ ಕಾರಣವಾಗಿದೆ. ಆದಕಾರಣ ಇಂದಿನ ಮಹಿಳೆಯರು ಮತ್ತು ಪುರುಷರು ಮಹಾತ್ಮ ಜ್ಯೋತಿಬಾಪುಲೆ ಅವರನ್ನು ಆಧುನಿಕ ಭಾರತದ ವಿದ್ಯಾಜ್ಯೋತಿ ಎಂದು ತಾಯಿ ಸಾವಿತ್ರಿಬಾಯಿ ಫುಲೆಯವರನ್ನು ಆಧುನಿಕ ಭಾರತದ ವಿದ್ಯಾದೇವತೆ ಎಂದು ಗುರುತಿಸಬೇಕಾಗಿದೆ. ಗೌರವಿಸಬೇಕಾಗಿದೆ.
– ಅಶ್ವಜೀತ ದಂಡಿನ ಬೀದರ.