Oplus_131072

ನಿಮ್ಮ ಅನಾದರಕ್ಕೆ ನೀವೇ ಕಾರಣ.

 

ವೀಣಾ ಹೇಮಂತ್ ಗೌಡ ಪಾಟೀಲ್.

 

ಎಲ್ಲರ ಸಹನೆಗೂ ಒಂದು ಮಿತಿ ಇರುತ್ತದೆ…. ಸಹನೆ ಮಿತಿಯನ್ನು ಮೀರಿದಾಗ ಸಮುದ್ರದಲ್ಲಿ ಚಂಡಮಾರುತ, ಸುನಾಮಿಗಳು ಏಳುವಂತೆ, ಜ್ವಾಲಾಮುಖಿ ಸಿಡಿದು ಲಾವಾರಸ ಉಕ್ಕುವಂತೆ, ಭೂಮಿ ತನ್ನುದರದಲ್ಲಿ ಕಂಪನ ಉಂಟುಮಾಡಿ ಬಾಯ್ದೆರೆಯುವಂತೆ, ಮೋಡಗಳ ತಾಕಲಾಟದಿಂದ ವಿಪರೀತ ಮಳೆ ಬಂದು ಪ್ರವಾಹ ಉಂಟಾಗುವಂತೆ ಮಾಡಿ ಎಲ್ಲವೂ ಕೊಚ್ಚಿ ಹೋಗುವಂತೆ ನಮ್ಮ ಸಹನೆಯ ಕಟ್ಟು ಕೂಡ ಒಂದೊಮ್ಮೆ ಎಲ್ಲ ಬಂಧನಗಳಿಂದ ಕಳಚಿ ಹೊರ ಹೊಮ್ಮಬೇಕು

 

ಆಫೀಸಿನಲ್ಲಿ ಬಾಸ್ ತನ್ನ ಕೆಳಗಿನ ನೌಕರರಿಗೆ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ, ಅತ್ತೆ ತನ್ನ ಸೊಸೆಗೆ, ಪತಿ ತನ್ನ ಪತ್ನಿಗೆ, ಪತ್ನಿ ತನ್ನ ಪತಿಗೆ, ಪಾಲಕರು ತಮ್ಮ ಮಕ್ಕಳನ್ನು ಕಾರಣಾಂತರಗಳಿಂದ ಬಯ್ಯುವುದನ್ನು, ಹೀಗಳೆಯುವುದನ್ನು ನಾವು ನೋಡುತ್ತಲೇ ಇದ್ದೇವೆ. ಮತ್ತೆ ಕೆಲವೊಮ್ಮೆ ಅವರನ್ನು ರದ್ದಿ ಪೇಪರ್ ನಂತೆ ಬಳಸಿ ಬಿಸುಡುವಂತೆ ವರ್ತಿಸುವ, ತಮ್ಮನ್ನು ಪ್ರಶ್ನಿಸಲು ತಮ್ಮ ಎದುರಿಗಿರುವವರಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂಬಂತೆ ಯೋಚಿಸುವ ತಮ್ಮ ಅಸ್ತಿತ್ವವನ್ನೇ ಅಲ್ಲಗಳೆಯುವುದು ಕಂಡುಬರುತ್ತದೆ.

ಹೀಗೆ ಅನಾದರಕ್ಕೆ ಒಳಗಾಗುವ ವ್ಯಕ್ತಿ ತನ್ನನ್ನು ಅನಾದರಕ್ಕೆ ಗುರಿ ಮಾಡಲು ಬಹಳಷ್ಟು ಬಾರಿ ತಾನೇ ಕಾರಣನಾಗಿರುತ್ತೇನೆ ಎಂಬ ಅರಿವನ್ನು ಹೊಂದಿಲ್ಲದೆ ಹೋಗುವುದು ಆತನ ಈ ದುಸ್ಥಿತಿಗೆ ಕಾರಣ ಎಂದರೆ ತಪ್ಪಿಲ್ಲ.

ಎಷ್ಟೋ ಬಾರಿ ಅರಿತೋ ಅರಿಯದೆಯೋ ನಾವು ನಮ್ಮ ಎದುರಿನವರಿಗೆ ಕೊಡುವ ಗೌರವ, ಪ್ರೀತಿ, ಸಲಿಗೆಗಳು ಕೂಡ ದುರುಪಯೋಗವಾಗಿ ಇಲ್ಲವೇ ಅಪಾರ್ಥಕ್ಕೆ ಈಡು ಮಾಡಿ ಅವರು ನಮ್ಮನ್ನು ಹಗುರವಾಗಿ ನೋಡಲು ಕಾರಣವಾಗುತ್ತದೆ.
ಅಂತಹ ಕೆಲವು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಬೇರೆಯವರು ನಿಮ್ಮನ್ನು ಅಗೌರವಿಸಲು ಕಾರಣ ಖುದ್ದು ನೀವು ನಿಮ್ಮನ್ನು ಹಾಗೆ ಅವಮಾನಿಸಲು ಅವಕಾಶ ಮಾಡಿಕೊಡುವುದು.

ಯಾವಾಗಲೂ ಅವರ ಬಳಿಯಲ್ಲಿದ್ದು ಅವರ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಮತ್ತು ಅವರ
ಕುರಿತು ಅತಿಯಾದ ಕಾಳಜಿ ಮತ್ತು ಗಮನಹರಿಸುವುದು ಬಲಹೀನತೆ ಎಂಬಂತೆ ಅವರಿಗೆ ಭಾಸವಾಗುತ್ತದೆ. ಖುದ್ದು ಅವರ ಎಲ್ಲ ಕೆಲಸಗಳಿಗೆ ನಿಮ್ಮ ಮೇಲೆ ಅವಲಂಬನೆ ಹೊಂದಿರುವ ಅವರು ನಿಮಗೆ ಅವರನ್ನು ಬಿಟ್ಟರೆ ಬೇರೆ ಗತಿ ಇಲ್ಲ ಎಂದು ಭಾವಿಸುತ್ತಾರೆ.

ನಿಮ್ಮನ್ನು ನೀವು ಸುಧಾರಿಸಿಕೊಳ್ಳುವುದಿಲ್ಲ, ನಿಮ್ಮ ಜೊತೆಗಿರುವವರು ನಿಮ್ಮನ್ನು ಗೌರವಿಸುವಂತಹ ಯಾವುದೇ ಗಂಭೀರ ಪ್ರಯತ್ನಗಳನ್ನು ನಿಮ್ಮ ವೈಯುಕ್ತಿಕ ಬೆಳವಣಿಗೆಗೆ ಕಾರಣವಾಗುವ ಯಾವುದೇ ಅರ್ಥಪೂರ್ಣವಾದ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳದೆ ಇರುವುದು ನಿಮ್ಮೆದುರಿಗಿರುವವರ ಅನಾದರಕ್ಕೆ ನೀವು ಗುರಿಯಾಗಲು ಬಹಳಷ್ಟು ಬಾರಿ ಕಾರಣವಾಗಿರುತ್ತದೆ.

ಎಲ್ಲರ ಅವಶ್ಯಕತೆಗಳನ್ನು ಪೂರೈಸುವ ನೀವು ನಿಮ್ಮ ವೈಯುಕ್ತಿಕ ಹಿತಾಸಕ್ತಿಗಳನ್ನು ಕಡೆಗಣಿಸುತ್ತೀರಿ. ಎಲ್ಲರ ಬೇಕು ಬೇಡಗಳನ್ನು ನೋಡಿಕೊಳ್ಳುವಲ್ಲಿಯೇ ನೆಮ್ಮದಿ ಇದೆ ಎಂದು ತಪ್ಪಾಗಿ ಭಾವಿಸುವ ಮತ್ತು ಅದರಲ್ಲಿಯೇ ನೆಮ್ಮದಿಯನ್ನು ಕಾಣುವೆ ಎಂದು ಹೇಳಿಕೊಳ್ಳುವ ಮೂಲಕ ಆತ್ಮವಂಚನೆ ಮಾಡಿಕೊಳ್ಳುತ್ತೀರಿ. ನಿಮ್ಮ ವೈಯುಕ್ತಿಕ ಬೆಳವಣಿಗೆಯನ್ನು ಕುರಿತು ಯೋಚಿಸದವರು ಬೇರೆಯವರಿಗಾಗಿ ಬದುಕಿ ಅವರ ಅಸಡ್ಡೆಗೆ,ಅವಹೇಳನಕ್ಕೆ,ಅನಾದರಕ್ಕೆ ಪಾತ್ರರಾಗುತ್ತಾರೆ.

ಬೇರೆಯವರ ಹುಚ್ಚಾಟಗಳನ್ನು ನೀವು ಅತಿಯಾಗಿ ಸಹಿಸುತ್ತೀರಿ. ಅತಿಯಾದ ಅಮಾಯಕತೆ, ಸ್ನೇಹಪರತೆ, ಮೃದುತ್ವ ಮತ್ತು ಇತರರ ಹಿತಾಸಕ್ತಿಗಳನ್ನು ಪರಿಗಣಿಸುವ ನೀವು… ಖುದ್ದು ನಿಮ್ಮನ್ನು ಕಡೆಗಣಿಸುವ ಮೂಲಕ ಅವರು ನಿಮ್ಮನ್ನು ಅಸಡ್ಡೆ ಮಾಡಲು ಅವಕಾಶ ಮಾಡಿಕೊಡುತ್ತೀರಿ. ಪದೇ ಪದೇ ಅವರು ಮಾಡುವ ತಪ್ಪುಗಳನ್ನು ಕ್ಷಮಿಸುವ ಮೂಲಕ ಕೂಡ ನಿಮ್ಮೊಂದಿಗೆ ಹೇಗೆ ನಡೆದುಕೊಂಡರೂ,ಏನು ಮಾಡಿದರೂ ನಡೆಯುತ್ತದೆ ಎಂಬ ಭಾವಕ್ಕೆ ಪಾತ್ರರಾಗುತ್ತೀರಿ.

ನಿಮ್ಮ ಅಸ್ತಿತ್ವದ ಕುರುಹೇ ಇಲ್ಲದಂತೆ ಜನರು ನಿಮ್ಮನ್ನು ತಿರಸ್ಕರಿಸುವಾಗ ನಿಮಗೆ ನೋವಾಗುತ್ತದೆ. ಮನಸ್ಸು ವಿಲವಿಲ ಒದ್ದಾಡುತ್ತದೆ. ಕೆಲವೊಮ್ಮೆ ಸಾಯುವಷ್ಟು ಬೇಸರ ನಿಮ್ಮನ್ನು ಕಾಡುತ್ತದೆ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಇಲ್ಲಿದೆ.

ನಿಮ್ಮನ್ನು ಅವಗಣಿಸುವ ಜನರೊಂದಿಗಿನ ಸಂಪರ್ಕವನ್ನು ಕಡಿಮೆ ಮಾಡಿ. ಮನೆಯವರೇ ಹಾಗಿದ್ದರೆ ಸಾಧ್ಯವಾದಷ್ಟು ಅವರಿಂದ ಅಂತರವನ್ನು ಉಳಿಸಿಕೊಳ್ಳಿ

ನಿಮ್ಮನ್ನು ಅನಾದರಿಸುವವರಿಗೆ ಪ್ರತಿ ಕ್ಷಣ ಲಭ್ಯವಾಗಬೇಡಿ, ನಿಮ್ಮ ಗೈರುಹಾಜರು ನಿಮ್ಮ ಮೌಲ್ಯದ ಅರಿವನ್ನು ಮೂಡಿಸಲು ಸಹಕಾರಿ. ನಿಮ್ಮನ್ನು ನೀವು ಬೇರೆ ಅರ್ಥಪೂರ್ಣ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.

ಅತಿಯಾದ ಸಲಿಗೆ ಮತ್ತು ಪರಿಚಿತತೆಗಳು ತಿರಸ್ಕಾರವನ್ನು ಉಂಟು ಮಾಡುತ್ತವೆ.ನಿಮ್ಮನ್ನು ತಡವುವುದು ಅಪಾಯಕಾರಿ ಎಂದೂ, ನೀವು ಕೂಡ ಸಿಟ್ಟು ಮಾಡಿಕೊಳ್ಳಬೇಡಿರಿ ಎಂಬುದರ ಅರಿವು ಮೂಡಿಸಿ.
ಬೇರೆಯವರು ನಿಮ್ಮನ್ನು ಅವಮಾನಿಸಿದಾಗ ಸುಮ್ಮನಿರಬೇಡಿ… ನಿಮ್ಮ ಆತ್ಮ ಗೌರವವನ್ನು ನೀವೇ ಕಾಯ್ದುಕೊಳ್ಳಿ.

ನಿಮ್ಮ ಜೀವನವನ್ನು ಕೂಡ ಮೌಲ್ಯಯುತವಾಗಿ ಕಟ್ಟಿಕೊಳ್ಳಿ. ನಿಮ್ಮದಾಗಿ ಹಣ ಸಂಪಾದಿಸಿ ಮತ್ತು ಸ್ಪಷ್ಟ ಉದ್ದೇಶವನ್ನು ಹೊಂದಿರುವ ಅರ್ಥಪೂರ್ಣ ವ್ಯಕ್ತಿತ್ವ ನಿಮ್ಮದಾಗಿರಲಿ

ಪದೇ ಪದೇ ನಿಮ್ಮನ್ನು ಅವಮಾನಿಸುವ ವ್ಯಕ್ತಿಗಳನ್ನು ಕಡೆಗಣಿಸಿ ಮುನ್ನಡೆಯಿರಿ. ಕೌಟುಂಬಿಕವಾಗಿ ಅಂತಹ ವ್ಯಕ್ತಿಗಳು ಇದ್ದಾಗ ಅವರೊಂದಿಗೆ ಸ್ಪಷ್ಟ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಯಾವುದೇ ರೀತಿಯ ಅವಮಾನಗಳನ್ನು, ಅಸಡ್ಡೆಗಳನ್ನು ನೀವು ಸಹಿಸುವುದಿಲ್ಲ ಎಂದು ಆಗಾಗ ಅವರಿಗೆ ಅರಿವಿಗೆ ಬರುವಂತೆ ವರ್ತಿಸಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಕಾಯ್ದುಕೊಳ್ಳಿ.

ಎಷ್ಟೇ ಅನ್ನ ಹಾಕಿ ಸಾಕಿದ ಯಜಮಾನನಾದರೂ ಅತಿಯಾಗಿ ತನ್ನನ್ನು ಕಾಡಿದಾಗ ಬಾಯಿ ಹಾಕುವ ನಾಯಿ, ತನ್ನನ್ನು ತಾನು ಕಾಪಾಡಿಕೊಳ್ಳಲು ಬುಸುಗುಟ್ಟುವ ನಾಗರ ಹಾವು ಕೂಡ ನಮಗೆ ವೈಯುಕ್ತಿಕ ಕಾಪಾಡಿಕೊಳ್ಳುವಿಕೆಯ ಪಾಠವನ್ನು ಕಲಿಸಿಕೊಡುತ್ತವೆ.

ಎಲ್ಲರ ಸಹನೆಗೂ ಒಂದು ಮಿತಿ ಇರುತ್ತದೆ…. ಸಹನೆ ಮಿತಿಯನ್ನು ಮೀರಿದಾಗ
ಸಮುದ್ರದಲ್ಲಿ ಚಂಡಮಾರುತ, ಸುನಾಮಿಗಳು ಏಳುವಂತೆ, ಜ್ವಾಲಾಮುಖಿ ಸಿಡಿದು ಲಾವಾರಸ ಉಕ್ಕುವಂತೆ, ಭೂಮಿ ತನ್ನುದರದಲ್ಲಿ ಕಂಪನ ಉಂಟುಮಾಡಿ ಬಾಯ್ದೆರೆಯುವಂತೆ, ಮೋಡಗಳ ತಾಕಲಾಟದಿಂದ ವಿಪರೀತ ಮಳೆ ಬಂದು ಪ್ರವಾಹ ಉಂಟಾಗುವಂತೆ ಮಾಡಿ ಎಲ್ಲವೂ ಕೊಚ್ಚಿ ಹೋಗುವಂತೆ ನಮ್ಮ ಸಹನೆಯ ಕಟ್ಟು ಕೂಡ ಒಂದೊಮ್ಮೆ ಎಲ್ಲ ಬಂಧನಗಳಿಂದ ಕಳಚಿ ಹೊರ ಹೊಮ್ಮಬೇಕು….. ಆಗಲೇ

ಮನಸ್ಸಾಗುವುದು ಭಾವ ಬಂಧದಿಂದ…ಮುಕ್ತ
ಮಾನಸಿಕ ಹಿಂಸೆ, ಕ್ಲೇಶಗಳಿಂದ…. ಮುಕ್ತ
ನೋವು, ನಿರಾಸೆಗಳಿಂದ….. ಮುಕ್ತ
ಅಸಡ್ಡೆ ಅಪಮಾನಗಳಿಂದ…. ಮುಕ್ತ

ಅತಿಯಾದ ಒಳ್ಳೆಯತನ, ಸಹಿಸುವಿಕೆ, ಸ್ವಾ ನುಕಂಪದ ಬೇಗೆಯಲ್ಲಿ ಬೇಯುವುದು ಬೇರೆಯವರು ನಿಮ್ಮನ್ನು ಅನುಕಂಪದಿಂದ ನೋಡಲಿ ಎಂಬ ಆಶಯ ಇದಾವುದೂ ಒಳ್ಳೆಯ ಲಕ್ಷಣಗಳಲ್ಲ. ಆತ್ಮವಿಶ್ವಾಸದಿಂದ ನಿಮಗಾಗಿ ನೀವು ಕಾರ್ಯನಿರ್ವಹಿಸಿ, ನಿಮ್ಮ ಬದುಕಿನ ಎಲ್ಲಾ ಒಳಿತು ಕೆಡುಕುಗಳಿಗೆ ನೀವೇ ಕಾರಣರಾಗಿ….
ಮಳೆ ಬಂದಾಗ ಛತ್ರಿ ಹಿಡಿಯಬೇಕೇ ಹೊರತು
ಯಾವಾಗಲೂ ಅಲ್ಲ ಎಂಬ ಸತ್ಯವನ್ನು ಅರಿತು ನಿಮ್ಮನ್ನು ಅನಾದರಿಸುವವರಿಂದ ತುಸು ಹೆಚ್ಛೇ ಅಂತರವನ್ನು ನೀವು ಕಾಯ್ದುಕೊಳ್ಳಬೇಕು.

–  ವೀಣಾ ಹೇಮಂತ್ ಗೌಡ ಪಾಟೀಲ್ ಮಂಡಲಗಿ ಗದಗ್.

 

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *