ಥಟ್ಟಂತ ಹೊಳೆವ ಸರಳ ಉಪಾಯ. (ಮಕ್ಕಳ ಕತೆ)
ಒಂದು ಊರಿನಲ್ಲಿ ಶ್ರೀಮಂತ ಜಮೀನ್ದಾರನಿದ್ದ. ಆಗಿನ ಕಾಲಕ್ಕೆ ಕೋಟ್ಯಾಧಿಪತಿ. ಆದರೆ ದುರಹಂಕಾರಿ, ಊರಿಗೆ ಊರೇ ಅವನಿಗೆ ಹೆದರುತಿತ್ತು. ಅವನ ಮಾತೆ
ಶಾಸನ. ಇಂತಿಪ್ಪ ಮನುಷ್ಯಗೆ ಒಮ್ಮೆ ‘ಕಣ್ಣು’ ಬೇನೆ ಬಂತು. ದೊಡ್ಡ ದೊಡ್ಡ ವೈದ್ಯರುಗಳಿಂದ ಔಷದೋಪಚಾರ ಮಾಡಿಸಿದ. ಆದರೆ ಫಲಕಾರಿ ಯಾಗದೆ ಕಣ್ಣಿನ ಉರಿ ಹೆಚ್ಚಾಗಿ ಪೂರ್ತಿ ಕಣ್ಣು ಬಿಡಲಾಗದೆ ರೆಪ್ಪೆ ಮುಚ್ಚಿ ನೋಡಬೇಕಾಯಿತು. ಕೊನೆಗೆ ಪಟ್ಟಣದ ಪ್ರಸಿದ್ಧ ಹಿರಿಯ ವೈದ್ಯರ ಹತ್ತಿರ ಹೋದನು, ಕಣ್ಣು ಪರೀಕ್ಷಿಸಿದ
ಅವರು, ನಿಮ್ಮ ಕಣ್ಣಿಗೆ ಸೋಂಕು ಆಗಿದೆ. ಕಣ್ಣಿನ ಉರಿ ಕಡಿಮೆಯಾಗಲು ಸೂರ್ಯ ಕಿರಣ ಬೀಳಬಾರದು ಹಾಗೆ ಕೇವಲ ಹಸಿರು ಬಣ್ಣ ಮಾತ್ರ ನೋಡಬೇಕು ಬೇರೆ ಬಣ್ಣಗಳನ್ನು ನೋಡಿದರೆ ಕಣ್ಣಿನ ದೃಷ್ಟಿ ಹೋಗುತ್ತದೆ ಎಂದರು.
ಶ್ರೀಮಂತ, ವೈದ್ಯರ ಮಾತಿಗೆ ಒಪ್ಪಿ ಔಷಧಿ ಪತ್ಯ ಮಾಡಿದ. ಕೇವಲ ಹಸಿರು ಬಣ್ಣ ಮಾತ್ರ ನೋಡಬೇಕೆಂದು, ಗೋಡೆಗಳಿಗೆ ಬಣ್ಣ ಹಚ್ಚುವ ಬಣ್ಣಗಾರರನ್ನು ಕರೆಸಿದ. ತನ್ನ ಮನೆಯ ಗೋಡೆ, ಮಾಳಿಗೆ, ಗೃಹೋಪಕರಣಗಳು ಎಲ್ಲವನ್ನು ಹಸಿರುಮಯ ಮಾಡಿಸಿದ. ಆದರೆ ಹೊರಗೆ ಹೋದಾಗ ಯೋಚಿಸಿದ, ತಾನು ನಿತ್ಯ ಓಡಾಡುವ ಜಾಗವನ್ನು ಹಸಿರು ಮಾಡಿಸಲು, ಮತ್ತಷ್ಟು ಬಣ್ಣ ಬಣ್ಣಗಾರರನ್ನು ಕರೆಸಿದ, ನಾನು ಎಲ್ಲೆಲ್ಲಿ ನಡೆದಾಡುತ್ತೇನೋ ಅಲ್ಲೆಲ್ಲ ಹಸಿರು ಬಣ್ಣ ಇರಬೇಕು ಬೇರೆ ಯಾವುದೇ ಬಣ್ಣವಿದ್ದರೂ ಅದನ್ನೆಲ್ಲ ತೆಗೆದು ಹಸಿರು ಬಣ್ಣ ಹಚ್ಚಿರಿ. ಗಮನದಲ್ಲಿರಲಿ ನಾನು ಓಡಾಡುವ ಜಾಗದಲ್ಲಿ ಹಸಿರು ಬಿಟ್ಟು ಬೇರೆ ಯಾವ ಬಣ್ಣಗಳು ಕಣ್ಣಿಗೆ ಬೀಳ ಬಾರದು ಎಂದನು.
ಕೆಲಸಗಾರರು ಬಂದರು ಹಣವು ನೀರಿನಂತೆ ಖರ್ಚಾಯಿತು ಆದರೆ ಆಕಾಶ, ಮೋಡ, ಭೂಮಿ, ತಿನ್ನುವ ಆಹಾರ, ಮನುಷ್ಯನ ದೇಹ, ಕುಡಿವ ನೀರು, ಪ್ರಾಣಿ ಪಕ್ಷಿಗಳು, ಪ್ರಕೃತಿದತ್ತವಾದ ಇವುಗಳನ್ನೆಲ್ಲ ಹಸಿರು ಮಾಡಲು ಸಾಧ್ಯವಿಲ್ಲ. ಕೆಲಸವು
ಪೂರ್ಣ ಆಗಲಿಲ್ಲ, ಊರಿನ ಜನಗಳಿಗೂ ತೊಂದರೆಯಾಗಿದೆ. ಶ್ರೀಮಂತನಿಗೆ ಹೇಳುವ ಧೈರ್ಯ ಯಾರಿಗೂ ಇರಲಿಲ್ಲ ಹಾಗೆ ನಡೆಯುತ್ತಿತ್ತು.
ಒಂದು ದಿನ ದೂರದ ಊರಿನಿಂದ ಒಬ್ಬ ಬುದ್ಧಿವಂತ ವ್ಯಕ್ತಿ ಬಂದ. ಊರನ್ನು ನೋಡಿದ ಎಲ್ಲೆಲ್ಲಿ ನೋಡಿದರೂ ಹಸಿರು. ಅಲ್ಲಿದ್ದ ಜನಗಳನ್ನು ಇದೇನು ನಿಮ್ಮ ಊರಿನಲ್ಲಿ ಎಲ್ಲವೂ ಹಸಿರು ಬಣ್ಣ ಏಕೆ ಎಂದು ಕೇಳಿದ. ಊರಿನ ಜನರು ಶ್ರೀಮಂತನ ಕಥೆ ಹೇಳಿ ಎಲ್ಲರಿಗೂ ತೊಂದರೆಯಾಗಿದೆ ಆದರೆ ಮಾತಾಡುವಂತಿಲ್ಲ ಎಂದು ದುಃಖವನ್ನು ಹೇಳಿಕೊಂಡರು. ಹೊಸ ವ್ಯಕ್ತಿ ಯೋಚನೆ ಮಾಡಿದ ಮತ್ತು ಜನಗಳಿಗೆ ಹೇಳಿದ ಇದಕ್ಕೊಂದು ಸುಲಭ ಉಪಾಯ ವಿದೆ ಅದನ್ನು ನಿಮ್ಮ ಶ್ರೀಮಂತನಿಗೆ ಹೇಳುತ್ತೇನೆ ನನಗೆ ಅವರ ಪರಿಚಯ ಮಾಡಿಸಿ ಎಂದನು.
ಜನರು ಶ್ರೀಮಂತನ ಮನೆ ತೋರಿಸಿದರು. ಆ ಬುದ್ಧಿವಂತ ಒಳಗೆ ಬಂದು ಶ್ರೀಮಂತನಲ್ಲಿ ತನ್ನ ಪರಿಚಯ ಮಾಡಿ ಕೊಂಡು, ನಿಮ್ಮ ಕಣ್ಣ ಬೇನೆಯ ಪರಿಹಾರಕ್ಕೆ ನನ್ನ ಹತ್ತಿರ ಒಂದು ಉಪಾಯ ಇದೆ. ಅದಕ್ಕೆ ನೀವು ಇಷ್ಟೊಂದು ಹಣ ಖರ್ಚು ಮಾಡ ಬೇಕಾಗಿಲ್ಲ, ಇಷ್ಟೊಂದು ಕೆಲಸಗಾರರು ಬೇಡ ಎಂದನು. ಶ್ರೀಮಂತನಿಗೆ ಆ ಮಾತು ಕೇಳಿ ಬಹಳ ಸಂತೋಷವಾಯಿತು ಏಕೆಂದರೆ ಈಗಾಗಲೇ ಅವನು ನೀರಿನಂತೆ ಹಣ ಚೆಲ್ಲಿದ್ದಾನೆ. ಇನ್ನು ಎಷ್ಟು ಆಗುವುದು ಗೊತ್ತಿಲ್ಲ. ಅವನಿಗೆ ಯೋಚನೆ ಶುರುವಾಗಿದೆ. ಬೇಗ ಹೇಳಿ ಅದು ಎಂಥ ಉಪಾಯ ಎಂದು ಕಾತುರದಿಂದ ಕೇಳಿದ. ಬುದ್ಧಿವಂತ ಹೇಳಿದ, ನೀವು ನಿಮ್ಮ ಕಣ್ಣಿಗೆ ಹಸಿರು ಬಣ್ಣದ ಕನ್ನಡಕವನ್ನು ಹಾಕಿರಿ ಅದರ ಬೆಲೆ ಕೇವಲ ಕೆಲವೇ ರೂಪಾಯಿಗಳು. ಆಗ ನೀವು ನೋಡುವ ಎಲ್ಲಾ ವಸ್ತುಗಳು, ಪ್ರಕೃತಿ ಮತ್ತು ವ್ಯಕ್ತಿಗಳು ಪ್ರಾಣಿ, ಪಶು, ಪಕ್ಷಿ,ಎಲ್ಲವೂ ಹಸಿರಾಗಿಯೇ ಕಾಣುತ್ತದೆ ಎಂದನು.
ಶ್ರೀಮಂತನಿಗೆ ಈ ಮಾತು ಕೇಳಿ ತುಂಬಾ ಆಶ್ಚರ್ಯವಾಯಿತು ಕಣ್ಣುಗಳಲ್ಲಿ ಆನಂದದ ಹೊಳಪು ಕಂಡಿತು. ನೀವು ಹೇಳಿದ ಪರಿಹಾರ ಎಷ್ಟು ಸರಳವಾಗಿದೆ. ನನ್ನ ಬುದ್ದಿಗೆ ಮಂಕು ಕವಿದಿತ್ತು. ನಾನ್ಯಾಕೆ ಇಷ್ಟು ಸುಲಭದ ಉಪಾಯವನ್ನು ಯೋಚಿಸಲಿಲ್ಲ. ಮತ್ತೆ ಅವನೇ ಹೇಳಿಕೊಂಡ ನನಗೆ ಕಣ್ಣು ನೋವಿನಿಂದ ತುಂಬಾ ಹೆದರಿ ಅವಸರ ಮಾಡಿದೆ ಎಂದು ತನ್ನನ್ನು ತಾನೇ ಹಳಿದುಕೊಂಡ
ಕಥೆಯ ತಾತ್ಪರ್ಯ ಬೆಟ್ಟದಂತ ಸಮಸ್ಯೆಗೂ ಸಣ್ಣ ಪರಿಹಾರ ಇರುತ್ತದೆ. ತಾಳ್ಮೆಯಿಂದ ಯೋಚಿಸಬೇಕು. ಸಲಹೆ ಕೊಡುವವರಿಗಿಂತ, ಸಮಸ್ಯೆ ಪರಿಹಾರ ಮಾಡುವವರಿಂದ ತಿಳಿಯಬೇಕು. ನಿಧಾನವಾಗಿ ಯೋಚಿಸಬೇಕು. ನಮ್ಮ ಕಣ್ಣ ಮುಂದೆ ಸಮಸ್ಯೆಗೆ ಪರಿಹಾರ ಇರುತ್ತದೆ ಆದರೆ ಆ ಪರಿಹಾರವನ್ನು ಇನ್ನೆಲ್ಲೋ ಹುಡುಕಲು ಹೋಗುತ್ತೆವೆ. ನೂರೆಂಟು ಸಲಹೆಗಳಿಗಿಂತ ಒಂದು ಪರಿಹಾರ ಉತ್ತಮ.
ಕೃಪೆ,ಬರಹ:- ಆಶಾ ನಾಗಭೂಷಣ.
ಸಂಗ್ರಹ:ವೀರೇಶ್ ಅರಸೀಕೆರೆ.