ಸಂತೋಷ ಎಂಬುದು ಆಯ್ಕೆಯೇ… ಪರಿಣಾಮವೇ.
– ವೀಣಾ ಹೇಮಂತ್ ಗೌಡ ಪಾಟೀಲ್.
ಜೀವನ ಸುಗಮವಾಗಿ ಸರಳವಾಗಿ ನಮ್ಮ ಎಣಿಕೆಯಂತೆ ಯಾವುದೇ ಏರಿಳಿತಗಳಿಲ್ಲದೆ ಸಾಗುತ್ತಿದ್ದರೆ ಅದು ಸಂತೋಷಕರವಾದದ್ದು ಅದೃಷ್ಟವಂತರಿಗೆ ಮಾತ್ರ ಅಂತಹ ಜೀವನ ದೊರೆಯುತ್ತದೆ ಎಂಬ ಅತಿ ಅಪಾಯಕಾರಿ ಸುಳ್ಳನ್ನು ನಾವು ನಂಬಿದ್ದೇವೆ. ಸಂತೋಷ ಎಂಬುದು ಉದ್ದೇಶಪೂರ್ವಕವಾಗಿ ಮತ್ತು ಧೈರ್ಯದಿಂದ ನಾವು ತೆಗೆದುಕೊಳ್ಳಬಹುದಾದ ನಿರ್ಣಯಗಳ ಮೇಲೆ ನಿಂತಿದೆ.
ಅಧಿಕೃತ ಸಂಬಂಧಗಳು ಪ್ರಾಮಾಣಿಕತೆಯನ್ನು ಅಪೇಕ್ಷಿಸುತ್ತವೆ… ಬೇರೆಯವರ ಮನ ಮೆಚ್ಚಿಸಲು ಕೆಲಸ ಮಾಡದೆ ಅತ್ಯಂತ ಪ್ರಾಮಾಣಿಕವಾಗಿ ತಾವು ತಾವಾಗಿಯೇ ಇರುವಂತಹ ಸಂಬಂಧ ನಮ್ಮದಾಗಿರಬೇಕು. ಬೇರೆಯವರನ್ನು ಮೆಚ್ಚಿಸಲು ಕೈಗೊಳ್ಳುವ ಕಾರ್ಯಗಳು ಭಾವನಾತ್ಮಕವಾಗಿ ನಮ್ಮನ್ನು ಕಟ್ಟಿ ಹಾಕುವ ಜೈಲುಗಳಂತೆ ಭಾಸವಾಗುತ್ತವೆ. ನಿಜವಾದ ಆತ್ಮೀಯತೆಯು ಪ್ರಾಮಾಣಿಕ ನಿಲುವನ್ನು ಅಪೇಕ್ಷಿಸುತ್ತದೆ.
ನಾವು ನಮ್ಮ ಭೂತಕಾಲಕ್ಕೆ ಬಲಿಪಶುಗಳಾಗಿದ್ದರೆ ವರ್ತಮಾನಗಳು ನಮ್ಮ ಕೈಯಲ್ಲಿರುತ್ತದೆ… ನಮ್ಮ ಅನುಭವಗಳ ಕುರಿತು ನಾವು ಹೇಳುವ ಕಥೆಗಳು ನಾವು ಅನುಭವಿಸಿದ್ದಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿರುತ್ತವೆ. ನಮ್ಮ ಆಂತರಿಕ ನಿರೂಪಣೆಯಲ್ಲಿ ನಾವು ಮಾಡಿಕೊಳ್ಳುವ ಬದಲಾವಣೆ ನಮ್ಮ ಬದುಕನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುತ್ತದೆ… ನಮ್ಮನ್ನು ಕುರಿತು ನಾವು ಭಾವಿಸುವ ರೀತಿಯೇ ನಮ್ಮ ಶಕ್ತಿಯಾಗಿರುತ್ತದೆ.
ಹೋಲಿಕೆ ಮಾಡಿಕೊಳ್ಳುವ ಮೂಲಕ ನಮ್ಮ ಸಂತೋಷವನ್ನು ಕಳೆದುಕೊಳ್ಳಬಾರದು… ಸಮಾಜವು ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿದರೆ ಪರವಾಗಿಲ್ಲ… ಆದರೆ ನಾವು ನಮ್ಮನ್ನು ಬೇರೆಯವರೊಂದಿಗೆ ಅವರ ಯಶಸ್ಸು, ಸಾಧನೆ ಮತ್ತು ಅವರ ದೈಹಿಕ ಸೌಂದರ್ಯಕ್ಕೆ ಹೋಲಿಸಿಕೊಂಡು ಕೊರಗಬಾರದು. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ಏಕಮೇವಾದ್ವಿತೀಯನಾಗಿದ್ದು ತನ್ನ ವೈಯುಕ್ತಿಕ ಬಲ ಮತ್ತು ಸಾಮರ್ಥ್ಯದ ಕುರಿತು ಅರಿವನ್ನು ಹೊಂದಿದ್ದರೆ ಸಾಕು.ಹೋಲಿಕೆ ವ್ಯಕ್ತಿಯನ್ನು ಕೀಳರಿಮೆಗೆ ಇಲ್ಲವೇ ಮೇಲರಿಮೆಗೆ ತಳ್ಳುತ್ತದೆ.
ಸ್ವಸ್ಥ ಜೀವನ ಎಂಬುದು ಒಂದು ಸುಂದರವಾದ ಜಾಲ… ಆದರೆ ಅಸ್ವಸ್ಥತೆ ಎಂಬುದು ಎಡರು ತೊಡರಾದರೂ ಬೆಳವಣಿಗೆಯ ಹಾದಿಯನ್ನು ತೋರುವುದು. ಅಪ್ರಿಯ ಸತ್ಯಗಳನ್ನು, ಅನಿಶ್ಚಿತತೆಗಳನ್ನು ಎದುರಿಸುವುದರಲ್ಲಿ ನಿನ್ನ ನಿಜವಾದ ಸಂತೋಷ ಅಡಗಿರುತ್ತದೆ.
ಸಂತೋಷ ಎಂಬುದನ್ನು ನಾವು ಬೇರೆಯವರನ್ನು ನಮ್ಮನಿಯಂತ್ರಣದಲ್ಲಿ ಇಡುವ ಮೂಲಕ ಅನುಭವಿಸಬಾರದು… ಬದಲಾಗಿ ನಮ್ಮ ಭಾವನಾತ್ಮಕ ನಿಲುವಿನ ಮೇಲೆ ಮತ್ತು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಸಂತೋಷವನ್ನು ನಾವು ಅನುಭವಿಸಬೇಕು. ಸ್ವಂತಿಕೆ ನೀಡುವ ಭಾವನಾತ್ಮಕ ಸಾಮರ್ಥ್ಯ ಮತ್ತೆಲ್ಲೂ ದೊರೆಯದು.ಬೇರೆಯವರ ಕರುಣೆಯ ಕೂಸು ನೀವಾಗುವುದು ಬೇಡ. ಮನಃಶಾಂತಿ ಎಂಬುದು ಮನದ ಒಳಗಿನಿಂದ ಹೊರಹೊಮ್ಮಬೇಕೇ ಹೊರತು ಹೊರಗಿನಿಂದ ಪಡೆಯಲು ಸಾಧ್ಯವಿಲ್ಲ.
ನಮ್ಮ ದುರ್ಬಲತೆಯೇ ನಮ್ಮ ಸಬಲತೆಯಾಗಬೇಕು…. ಸಾಂಸ್ಕೃತಿಕ ಮಿಥ್ಯಗಳಿಗೆ ವಿರುದ್ಧವಾಗಿ ನಿಮ್ಮತನವನ್ನು ತೋರಬೇಕು. ನಿಮ್ಮ ಮನದ ಗಾಯ, ಭಯ ಕಣ್ಣೀರು ಮತ್ತು ಅಪೂರ್ಣತೆಗಳನ್ನು ಒಳಗೊಂಡ ನಿಮ್ಮತನ ಒಂದು ಧೈರ್ಯದ ಪ್ರದರ್ಶನವೇ ಸರಿ.
ದುರ್ಬಲತೆ ನಮ್ಮ ದೌರ್ಬಲ್ಯವಲ್ಲ… ಇದು ಮನುಷ್ಯನ ಸಾಮರ್ಥ್ಯದ ಅತ್ಯಂತ ಪರಿಶುದ್ಧವಾದ ಭಾವ.
ಸಂತೋಷವಾಗಿ ಇರಲು ಬೇಕಾಗಿರುವುದು ಸುಸಜ್ಜಿತವಾದ ಮನೆ ಕಾರು ಆಳು ಕಾಳುಗಳು ಮತ್ತು ಐಷಾರಾಮಿ ಜೀವನ ಶೈಲಿಯಲ್ಲ,
ಸಂತೋಷ ಎಂಬುದು ನಮ್ಮ ಆಯ್ಕೆಯಾಗಿರಬೇಕು… ಸಂತೋಷವನ್ನು ಸುಲಭ ಉಪಾಯಗಳಲ್ಲಿ ಹುಡುಕಬಾರದು. ಸಂತೋಷ ಎಂಬುದು ನಮಗೆ ಸುಲಭ ಪರಿಹಾರಗಳನ್ನು ತೋರುವುದಿಲ್ಲ. ಸಂತೋಷವನ್ನು ನಾವು ತೆಗೆದುಕೊಳ್ಳುವ ಧೈರ್ಯದ ಪರಿಣಾಮ ಎಂಬುದನ್ನು ಅರಿತುಕೊಳ್ಳಬೇಕು.
ಸಾವಿರಾರು ಕೋಟಿ ಹಣ ಗಳಿಸಿದವರಿಂದ ಹಿಡಿದು ದಟ್ಟ ದರಿದ್ರರವರೆಗೂ ಬಯಸುವುದು ಸಂತೋಷಕರ ಜೀವನವನ್ನು. ಇರುವಾಗ ಇರುವುದನ್ನು ಇದ್ದಷ್ಟೇ ಅನುಭವಿಸುವುದು ಬಿಟ್ಟು ಇಲ್ಲದೆ ಇರುವುದರೆಡೆಗೆ ನಮ್ಮ ಗಮನವನ್ನು ಹರಿಸಿ ಅಸಂತುಷ್ಟತೆಯಿಂದ ಬಳಲುವುದರ ಬದಲಾಗಿ ವರ್ತಮಾನದಲ್ಲಿ ಜೀವಿಸುತ್ತಾ ವರ್ತಮಾನದ ಸುಖ ಸಂತೋಷಗಳನ್ನು ಅನುಭವಿಸುತ್ತ ಬದುಕನ್ನು ಸಾಗಿಸುವುದು ಜಾಣ್ಮೆಯ ಲಕ್ಷಣ.
ಏನಂತೀರಾ ಸ್ನೇಹಿತರೆ?
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.