ಸಂಸ್ಕೃತಿಯೋ..! ವಿಕೃತಿಯೋ ! ಎತ್ತ ಸಾಗುತ್ತಿದೆ ಯುವ ಜನತೆ ?
– ಜಿ.ಎಸ್. ಗಾಯತ್ರಿ.ಹರಿಹರ
ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ನಾವು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ಭಗವಂತ ನಮಗೆ ಕೈಗಳನ್ನು ಕೊಟ್ಟಿರುವುದು ದುಡಿಯಲಿಕ್ಕೇ ಹೊರತು ಕಡಿಯಲಿಕ್ಕಲ್ಲ.
‘ ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎನ್ನುತ್ತಾ ವ್ಯಾಘ್ರನಿಗೆ ತಾನು ಕೊಟ್ಟ ಮಾತನ್ನು ಉಳಿಸಿ ಕೊಳ್ಳಲು ತನ್ನ ಕಂದನನ್ನು ಬೇರೊಬ್ಬರ ಮಡಿಲಿಗೆ ಹಾಕಿ ಆ ಹುಲಿಯ ಬಾಯಿಗೆ ಆಹಾರವಾಗಲು ಹೋಗುವ ‘ಪುಣ್ಯಕೋಟಿ‘ ಎಂಬ ಹಸುವಿನ ಕಥೆ ಸಾಮಾನ್ಯವಾಗಿ ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ತಿಳಿದಿದೆ. ಹಸುವನ್ನು ‘ಕಾಮಧೇನು’ ‘ಗೋಮಾತೆ’ ಎಂದು ಕರೆಯುತ್ತೇವೆ. ಅದರ ಶರೀರದ ಕಣಕಣದಲ್ಲೂ ಮುಕ್ಕೋಟಿ ದೇವತೆಗಳು ವಾಸವಾಗಿದ್ದಾರೆ ಎನ್ನುವ ನಂಬಿಕೆ ಪುರಾಣ ಕಾಲದಿಂದಲೂ ಇದೆ. ಆ ನಂಬಿಕೆಯಿಂದಲೇ ನಾವೆಲ್ಲರೂ ಗೋಮಾತೆ ಯನ್ನು ಪವಿತ್ರವೆಂದು ಪೂಜಿಸುತ್ತೇವೆ. ನೂತನ ಗೃಹ ಪ್ರವೇಶದ ಸಂದರ್ಭದಲ್ಲಿ ಮನೆಯ ಒಳಗೆ ಹಸುವಿನ ಪ್ರವೇಶವಾದ ನಂತರವೇ ನಾವು ಗೃಹ ಪ್ರವೇಶ ಮಾಡುತ್ತೇವೆ. ಸಂಕ್ರಾಂತಿಯ ದಿವಸ ಹಳ್ಳಿಗಳಲ್ಲಿ ರೈತರು ಗೋವುಗಳನ್ನು ಸಿಂಗರಿಸಿ, ಗೋಪೂಜೆ ಮಾಡಿ ಕಿಚ್ಚು ಹಾಯಿಸಿ ಸಂಭ್ರಮಿಸುತ್ತಾರೆ. ಇದು ನಮ್ಮ ಸನಾತನ ಭಾರತೀಯ ಸಂಸ್ಕೃತಿ.
ಆದರೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೀಚಕನಂತಹ ಕ್ರೂರಿಯೊಬ್ಬ ನಿರ್ದಾಕ್ಷಿಣ್ಯವಾಗಿ ಹಸುಗಳ ಕೆಚ್ಚಲನ್ನೇ ಕತ್ತರಿಸಿ ವಿಕೃತಿಯನ್ನು ಮೆರೆದಿರುವುದು ತುಂಬಾ ಶೋಚನೀಯ ಸಂಗತಿ. ಏನೂ ಅರಿಯದ ಮೂಕ ಪ್ರಾಣಿಗಳ ಮೇಲೂ ದೌರ್ಜನ್ಯವೆಸಗುವ ರಾಕ್ಷಸರು ಇಂದಿನ ಸಮಾಜದಲ್ಲಿರುವುದು ನಾಚಿಕೆಗೇಡಿತನ. ದೈವ ಸಮಾನವಾದ ಹಸುವಿನ ಕಾಲಿಗೆ ಮಚ್ಚಿನಿಂದ ಹೊಡೆದು ಮೂರು ಹಸುಗಳ ಕೆಚ್ಚಲನ್ನೇ ಕತ್ತರಿಸಿ ಹಾಕುವಷ್ಟು ಕ್ರೂರತನ ಅವನಲ್ಲಿದೆಯೆಂದರೆ ಅವನು ಮನಷ್ಯ್ಯನೋ ! ರಾಕ್ಷಸನೋ ! ಅಥವಾ ವಿಕೃತ ಮನಸುಳ್ಳವನೋ ! ಎಂಬುದು ಯೋಚಿಸಬೇಕಾದ ವಿಷಯ. ನಮ್ಮಂತೆ ಮೂಕ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕು ಇದೆ ಎನ್ನುವುದರ ಅರಿವಿರಬೇಕಲ್ಲವೆ ? ಎಲ್ಲಾ ತಿಳುವಳಿಕೆಯಿರುವ ಹಾಗೂ ಮಾತನಾಡಲು ಬರುವ ನಮಗೆ ಸ್ವಲ್ಪ ಗಾಯವಾದರೂ ಆ ನೋವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಅಂದಮೇಲೆ ಮೂಕ ಪ್ರಾಣಿಗಳಾದ ಆ ಹಸುಗಳು ಅಂತಹ ಯಮ ಯಾತನೆಯನ್ನು ಹೇಗೆ ತಾನೇ ಸಹಿಸಿಕೊಳ್ಳಲು ಸಾಧ್ಯ? ಪಶು ವೈದ್ಯರ ಚಿಕಿತ್ಸೆಯಿಂದಾಗಿ ಅವು ಚೇತರಿಸಿಕೊಳ್ಳುತ್ತಿರುವುದು ನೆಮ್ಮದಿಯ ಸಂಗತಿ.
ಕವಿ ಎಸ್.ಜಿ. ನರಸಿಂಹಾಚಾರ್ಯ ಅವರು ಬರೆದಿರುವ ‘ಗೋವಿನ ಹಾಡು’ ಪದ್ಯದಲ್ಲಿ
‘ಇಟ್ಟರೆ ಸಗಣಿಯಾದೆ,ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವಾ ?’
ಎಂದು ಹಸು ಎಲ್ಲಾ ರೀತಿಯಲ್ಲೂ ತನ್ನ ಉಪಯೋಗವನ್ನು ತಿಳಿಸುತ್ತಾ ಮನುಷ್ಯನನ್ನು ನಿರುಪಯೋಗಿ ಎಂದು ಸೂಚ್ಯವಾಗಿ ಹೇಳಿರುವುದು ಸರಿಯಾಗಿದೆ. ಏಕೆಂದರೆ ಹಸುವಿನಿಂದ ಎಲ್ಲಾ ಅನುಕೂಲಗಳನ್ನು ಪಡೆದು ಈ ರೀತಿ ಮೃಗೀಯವಾಗಿ ವರ್ತಿಸಿದರೆ ಮನುಷ್ಯರಾಗಿ ಹುಟ್ಟಿ ಏನು ಪ್ರಯೋಜನ ?
‘ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ’ ಎಂಬ ದಾಸವಾಣಿಯಂತೆ ಭಗವಂತ ನಮಗೆ ದಯಪಾಲಿಸಿರುವ ಶ್ರೇಷ್ಠವಾದ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ನಾವು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕಲ್ಲವೇ? ಭಗವಂತ ನಮಗೆ ಕೈಗಳನ್ನು ಕೊಟ್ಟಿರುವುದು ದುಡಿಯಲಿಕ್ಕೇ ಹೊರತು ಕಡಿಯಲಿಕ್ಕಲ್ಲ.
‘ ಜನಕಂಜಿ ನಡೆಯದೆ ಮನಕಂಜಿ ನಡೆ’ ಎಂಬ ಶರಣರ ವಚನದಂತೆ ಇಂಥ ಕೆಟ್ಟ ಕೆಲಸ ಮಾಡುವಾಗ ಬೇರೆಯವರಿಗಲ್ಲದಿದ್ದರೂ ನಮ್ಮ ಮನಸ್ಸಾಕ್ಷಿಗಾದರೂ ಹೆದರಬೇಕು. ನಮಗೆ ಪೌಷ್ಠಿಕಾಂಶವನ್ನು ಒದಗಿಸುವ ಹಾಲು, ಮೊಸರು, ಬೆಣ್ಣೆ, ತುಪ್ಪ ಇವೆಲ್ಲವನ್ನೂ ನೀಡುವ ಹಾಗೂ ಕಸವನ್ನೇ ತಿಂದರೂ ಅಮೃತವನ್ನೇ ಕೊಡುವ ಗೋಮಾತೆಯ ರಕ್ಷಣೆ ಮಾಡುವುದನ್ನು ಬಿಟ್ಟು ಅದರ ಕೆಚ್ಚಲಿಗೇ ಕೈ ಹಾಕುವ ಇಂಥ ರಕ್ಕಸರಿಗೆ ಏನು ಶಿಕ್ಷೆ ಕೊಟ್ಟರೂ ಸಾಲದು.
‘ಉಪಕಾರ ಮಾಡಲು ನಿನಗಾಗದಿರೆ ಮನುಜ
ಅಪಕಾರವನೆಂದೂ ಎಸಗದಿರು ಬದುಕಿನಲಿ
ನೀ ಮಾಡಿದುಪಕಾರ ನಿನಗೊಳಿತು ಮಾಡುವುದು
ನೀ ಗೈದ ಅಪರಾಧ ನಿನ್ನನೇ ಸುಡುವುದು.
ಮನುಷ್ಯರಾದ ನಮಗೆ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಆಗದಿದ್ದರೂ ಚಿಂತೆಯಿಲ್ಲ. ಆದರೆ ಕೆಟ್ಟ ಕೆಲಸಗಳನ್ನು ಯಾವತ್ತೂ ಮಾಡಬಾರದು. ಏಕೆಂದರೆ ನಾವು ಮಾಡುವ ಕೆಲಸದಿಂದಲೇ ನಮ್ಮ ಒಳಿತು, ಕೆಡುಕು ನಿರ್ಧಾರವಾಗುತ್ತದೆ. ಮೇಲೆ ಕುಳಿತು ನಮ್ಮ ಎಲ್ಲಾ ಕೆಲಸಗಳನ್ನು ನೋಡುತ್ತಿರುವ ಭಗವಂತನೇ ಅದನ್ನು ನಿರ್ಧಾರ ಮಾಡುತ್ತಾನೆ.
– ಜಿ.ಎಸ್. ಗಾಯತ್ರಿ
ಶಿಕ್ಷಕಿ… ಬಾಪೂಜಿ ಶಾಲೆ
ಹರಿಹರ.