Oplus_131072

ಜೀವನ ಮೌಲ್ಯಗಳು

 

ವೀಣಾ ಹೇಮಂತ್ ಗೌಡ ಪಾಟೀಲ್.

 

ವಿಶಾಲ್ ಮಿಶ್ರಾ ಎಂಬ ನಟ ತಾನು ಭಾಗವಹಿಸಿದ ಸಂತೋಷ ಕೂಟವೊಂದರಲ್ಲಿ ನಡೆದ ಘಟನೆಯನ್ನು ಹೇಳಿದ್ದು ಹೀಗೆ.

ಬಹುತೇಕ ಘಟಾನುಘಟಿಗಳನ್ನು ಆಹ್ವಾನಿಸಿದ ಔತಣಕೂಟದಲ್ಲಿ ಕ್ರಿಕೆಟ್ನ ದಿಗ್ಗಜ ಸಚಿನ್ ತೆಂಡೂಲ್ಕರ್ ಭಾಗವಹಿಸುತ್ತಿದ್ದಾರೆ ಎಂಬ ಸುದ್ದಿಯೇ ನಮ್ಮಲ್ಲಿ ಉದ್ವೇಗ ಉಂಟು ಮಾಡಿತ್ತು. ಬಹುತೇಕ ಕ್ರಿಕೆಟ್ ಅಭಿಮಾನಿಗಳಂತೆ ನಾನೂ ಕೂಡ ಸಚಿನ್ ತೆಂಡೂಲ್ಕರ್ ರನ್ನು ನೋಡಲು ಅತ್ಯಂತ ಉತ್ಸುಕನಾಗಿದ್ದೆ. ಔತಣ ಕೂಟದ ಹಾಲ್
ಸಂಪೂರ್ಣ ಭರ್ತಿಯಾಗಿದ್ದು ಅಲ್ಲೊಂದು ರೀತಿಯ ರೋಮಾಂಚಕಾರಿ ಉದ್ವೇಗ ಎಲ್ಲರಲ್ಲೂ ತುಂಬಿತ್ತು.

ಎಲ್ಲರೂ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಲು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹಾತೊರೆಯುತ್ತಿದ್ದರು. ಜೀವನದ ಈ ಅತ್ಯದ್ಭುತ ಕ್ಷಣವನ್ನು ಮನದುಂಬಿ ಆನಂದಿಸಲು
ನಟ ವಿಶಾಲ್ ಕೂಡ ತಯಾರಾಗಿದ್ದರೂ ಇಷ್ಟು ದೊಡ್ಡ ಜನರ ಸಂತೆಯಲ್ಲಿ ತನಗೆ ಸಚಿನ್ ತೆಂಡೂಲ್ಕರ್ ರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ದೊರೆಯುತ್ತದೆಯೋ ಇಲ್ಲವೋ ಎಂಬ ಭಾವ ಅವರನ್ನು ಕಾಡಿತ್ತು.

ಎಲ್ಲರೊಂದಿಗೆ ಮಾತನಾಡುತ್ತಾ ಹಾಗೆಯೇ ಮುಂದೆ ಬಂದಾಗ ವಿಶಾಲ್ ಗೆ ಖ್ಯಾತ ಗಾಯಕ ಸೋನು ನಿಗಮ್ ದೊರೆತರು. ಅವರೊಂದಿಗೆ ಕುಶಲೋಪರಿ ಮಾತನಾಡಿದ ವಿಶಾಲ್ ಸೋನು ಅವರಿಗೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಒಂದು ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲು ಕೇಳಿಕೊಂಡರು. ಸೋನು ನಿಗಮ್ ನಸುನಗುತ್ತಾ ಇದಕ್ಕೆ ಒಪ್ಪಿಗೆ ಸೂಚಿಸಿದರು.

ನಂತರ ವಿಶಾಲ್ ತನ್ನ ಸ್ನೇಹಿತರೊಂದಿಗೆ ಟೇಬಲ್ ಒಂದನ್ನು ಆರಿಸಿ ಅಲ್ಲಿ ಕುಳಿತುಕೊಂಡು ಔತಣಕೂಟದ ಸಂಭ್ರಮವನ್ನು ವೀಕ್ಷಿಸಲಾರಂಭಿಸಿದರು. ಇದ್ದಕ್ಕಿದ್ದಂತೆ ಓರ್ವ ವ್ಯಕ್ತಿ ಅವರನ್ನು ಸಮೀಪಿಸಿ ನೀವು ಈ ಟೇಬಲ್ ಅನ್ನು ಬಿಟ್ಟುಕೊಡಬೇಕು. ಈ ಮೇಜನ್ನು ಸಚಿನ್ ತೆಂಡೂಲ್ಕರ್ ಅವರಿಗಾಗಿ ಕಾಯ್ದಿರಿಸಲಾಗಿದ್ದು ಅವರು ಇಲ್ಲಿ ಊಟ ಮಾಡುತ್ತಾರೆ ಎಂದು ವಿನಯ ಪೂರ್ವಕವಾಗಿ ಹೇಳಿದ. ಆತನ ಕೋರಿಕೆಗೆ ಒಪ್ಪಿದ ವಿಶಾಲ್ ಮತ್ತು ಆತನ ಸ್ನೇಹಿತರು ಇನ್ನೇನು ಊಟದ ಮೇಜನ್ನು ಬಿಟ್ಟು ಹೋಗಬೇಕು ಎಂದು ಎದ್ದು ನಿಲ್ಲುತ್ತಿದ್ದಂತೆಯೇ ಅಲ್ಲಿಗೆ ಬಂದಿದ್ದ ಸಚಿನ್ ತೆಂಡೂಲ್ಕರ್ ಅವರಿಬ್ಬರ ಮಾತುಕತೆಯನ್ನು ಕೇಳಿಸಿಕೊಂಡಿದ್ದರು.
ಕೂಡಲೆ ಸಚಿನ್ ದಯವಿಟ್ಟು ನಿಮ್ಮಿಬ್ಬರು ಊಟ ಮಾಡುವುದನ್ನು ಬಿಟ್ಟು ಹೋಗ್ಬೇಡಿ. ನನಗೆ ಮುಜುಗರವಾಗುತ್ತದೆ. ನೀವು ಹಾಗೆ ಮಾಡಿದರೆ ನನಗೆ ಸಮಾಧಾನದಿಂದ ಊಟ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಆಗ್ರಹಿಸಿದರು.

ಸಚಿನ್ ರ ಹೃದಯ ವೈಶಾಲ್ಯತೆಯನ್ನು ಕಂಡು ವಿಶಾಲ್ ಮತ್ತು ಆತನ ಸ್ನೇಹಿತರು ಮತ್ತೆ ತಮ್ಮ ಕುರ್ಚಿಗಳಲ್ಲಿ ಕುಳಿತುಕೊಂಡರು. ಅವರಿಗೆ ಆಶ್ಚರ್ಯವಾದದ್ದು ಸಚಿನ್ ಕೂಡ ಅವರೊಂದಿಗೆ ಊಟಕ್ಕೆ ಕುಳಿತುಕೊಂಡದ್ದು.
ಯಾರ ಜೊತೆ ಕೇವಲ ಒಂದು ಸೆಲ್ಫಿ ತೆಗೆದುಕೊಳ್ಳಲು ತಾವು ಬಯಸಿದ್ದರೋ, ಅವರಿಗೆ ಸಚಿನ್ ರೊಂದಿಗೆ ಕುಳಿತು ಊಟ ಮಾಡುವ ಅವಕಾಶ !
ಊಟದ ಸಮಯದಲ್ಲಿ ತಮ್ಮೆಲ್ಲ ಧೈರ್ಯವನ್ನು ಒಗ್ಗೂಡಿಸಿಕೊಂಡು ವಿಶಾಲ್ ಸರ್ …. ಯಾರು ಸಚಿನ್ ತೆಂಡೂಲ್ಕರ್ ರಂತೆ ಆಗಬಹುದು ಎಂದು ಪ್ರಶ್ನಿಸಿದರು.

ಒಂದು ಕ್ಷಣ ಸುಮ್ಮನಿದ್ದು ನಂತರ ನಗುತ್ತ ಉತ್ತರಿಸಿದ ಸಚಿನ್ ಇಂದು ಈ ಸ್ಥಾನದ ಅರ್ಹತೆಯನ್ನು ಪಡೆಯಲು ಕಾರಣವಾಗಿರುವ ನಮ್ಮ ಮೂಲ ಬೇರುಗಳನ್ನು, ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು, ನಮ್ಮ ಜೀವನದ ಹಿನ್ನೆಲೆಯನ್ನು ನಾವು ಎಂದೂ ಮರೆಯಬಾರದು. ನಿಮ್ಮ ತಂದೆ ತಾಯಿಗಳು ನಮ್ಮಲ್ಲಿ ಬಿತ್ತಿರುವ ಮೌಲ್ಯಗಳನ್ನು ಮತ್ತು ನಡವಳಿಕೆಗಳನ್ನು ನಾವೆಂದೂ ಮರೆಯಬಾರದು.

ಸಚಿನ್ ರ ಸರಳ ಮತ್ತು ಮೌಲಿಕವಾದ ಮಾತುಗಳು
ವಿಶಾಲ್ ರನ್ನು ಭಾವ ಪರವಶರನ್ನಾಗಿಸಿದವು. ಪಕ್ಕದಲ್ಲಿ ಕುಳಿತಿದ್ದ ಕ್ರಿಕೆಟ್ನ ದೇವರು ಎಂದು ಹೆಸರಾದ ಸಚಿನ್ ರ
ಕುರಿತು ಅಭಿಮಾನ ಮತ್ತು ಗೌರವದಿಂದ ಮನದುಂಬಿ ಬಂದು ಕಣ್ಣಲ್ಲಿ ನೀರು ಮಡುಗಟ್ಟಿತ್ತು.

ನೋಡಿದಿರಾ ಸ್ನೇಹಿತರೆ, ಕ್ರಿಕೆಟ್ ನ ದಂತಕತೆಯಾದ ಸಚಿನ್ ತೆಂಡೂಲ್ಕರ್ ಕೇವಲ ಕ್ರಿಕೆಟ್ ನಿಂದ ಜನಪ್ರಿಯರಾಗಿಲ್ಲ. ಅವರಲ್ಲಿರುವ ಮಾನವೀಯ ಪ್ರಜ್ಞೆ ಮೌಲ್ಯಗಳು, ಕರ್ತವ್ಯ ಪರತೆ ಮತ್ತು ಶ್ರದ್ಧೆ ಅವರನ್ನು ಈ ಮಟ್ಟಕ್ಕೆ ಏರಿಸಿದೆ ಎಂದರೆ ತಪ್ಪಿಲ್ಲ.

ಗಿಡ ಎತ್ತರವಾಗಿ ಬೆಳೆದು ರೆಂಬೆ ಕೊಂಬೆಗಳನ್ನು ಚಾಚಿ ಹೂವು ಹಣ್ಣುಗಳನ್ನು ಬಿಡಲು ಕಾರಣ ಅದರ ತಾಯಿ ಬೇರು. ಗಿಡದ ಬೇರು ಆಳವಾಗಿ ಭೂಮಿಯಲ್ಲಿ ಚಾಚಿಕೊಂಡಿರುತ್ತದೆ. ನಮ್ಮ ನೆಲದ ಸರ್ವ ಗುಣಗಳನ್ನು ಹೀರಿಕೊಂಡು ಬೆಳೆಯುವ ಗಿಡದಂತೆ ನಮ್ಮ ಮಕ್ಕಳು ನಮ್ಮ ಸಂಸ್ಕೃತಿಯ ಎಲ್ಲ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಕಾರಣೀಭೂತರು ನಾವಾಗೋಣ. ಎಂಬ ಆಶಯದೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *