Oplus_131072

ಸಂತೃಪ್ತಿ (ಮಕ್ಕಳ ಕತೆ)

 

ಒಂದೂರಲ್ಲಿ ಒಂದು ಕಾಗೆ ಇತ್ತು.ಕರಿ ಬಣ್ಣ. ಕೆಟ್ಟದ್ವನಿ. ಆದರೆ ಕಾಗೆ ಅರಣ್ಯಕ್ಕೆ ಹೋಗುವುದಿಲ್ಲ ಮನುಷ್ಯ ಇರುವಲ್ಲೇ ಇರುತ್ತದೆ. ಅವನ ಮನೆ ಮೇಲೆ ಕೂತಿರುತ್ತದೆ. ಆದರೆ ಮನುಷ್ಯನಂತೆ ಆಗಿಲ್ಲ. ಅದು ವೈಶಿಷ್ಟ್ಯ. ಅದು ಮನುಷ್ಯನ ಕೈಗೆ ಸಿಕ್ಕಿಲ್ಲ. ಆದರೆ ಎರಡು ಸುಂದರ ಕೆಲಸ ಮಾಡುತ್ತದೆ.
ಬೆಳಗಿನ ಹೊತ್ತಿನಲ್ಲಿ ಕೂಗಿ ಕೂಗಿ ಮನುಷ್ಯನನ್ನು ಎಬ್ಬಿಸುತ್ತದೆ. ಮತ್ತು ಜನ ತಿಂದು ಚೆಲ್ಲಿದ್ದನ್ನು ಸ್ವಚ್ಛ ಮಾಡುತ್ತವೆ.

ಹೀಗೆ ಕಾಗೆ ತನ್ನ ಬಂಧುಗಳನ್ನು ಕರೆದುಕೊಂಡು ಊರನ್ನೆಲ್ಲಾ ಸ್ವಚ್ಛ ಮಾಡುತ್ತಿದ್ದವು. ಇದರ ಸ್ವಚ್ಛತಾ ಕಾರ್ಯವನ್ನು ಯಾರೂ ಗೌರವಿಸಲಿಲ್ಲ. ಆದರೂ ಮಾಡ್ತಾನೆ ಇದಾವೆ.

ಇದರ ಕೆಲಸ ನೋಡಿ ದೇವರಿಗೆ ಸಂತೋಷವಾಯಿತು. ಈ ಕಾಗೆಗಳನ್ನು ಭೇಟಿ ಮಾಡಲು ದೇವರು ಬಂದನು. ಬಂದವನೇ ಕಾಗೆಗೆ ಹೇಳಿದ.

ನಿನ್ನ ಕೆಲಸ ನೋಡಿ ಮೆಚ್ಚುಗೆಯಾಗಿದೆ. ನಿನಗೇನು ಬೇಕು ಕೇಳು ಕೊಡುತ್ತೇನೆ ಎಂದು. ಆಗ ಕಾಗೆ ಹೇಳಿದ್ದು, ನಾನು ಕರೆದಿಲ್ಲ, ಬೇಡಿಲ್ಲ, ನೀನ್ ಯಾಕೆ ಬಂದೆ ?.

ಈ ಮನುಷ್ಯರು ನಿನ್ನನ್ನು ಕರಿತಾರೆ, ಬೇಡುತ್ತಾರೆ ಅವರನ್ನು ಭೇಟಿಯಾಗು ಅಂದಿತು. ಆಗ ದೇವರು ಹೇಳಿದ ಮನುಷ್ಯರನ್ನು ಭೇಟಿಯಾಗೊ ತಾಕತ್ತು ನನಗಿಲ್ಲ. ಅವರು ಒಂದು ಹೂ ನೀಡಿ ಒಂದು ಕಾಸು ಕೊಟ್ಟು ಲಕ್ಷ, ಕೋಟಿ ಕಾಸು ಬೇಡುತ್ತಾರೆ. ಅವರು ಬೇಡಿದ್ದನ್ನು ಪೂರೈಸಕಾಗೋದಿಲ್ಲ. ಅದಕ್ಕೆ ಅವರ ಬಳಿ ಹೋಗುವುದನ್ನೇ ಬಿಟ್ಟಿದ್ದೇನೆ. ನಿನಗೇನು ಬೇಕು?. ಕೇಳು ಕೊಡುತ್ತೇನೆ ಎಂದನು.

ಆಗ ಕಾಗೆ ಹೇಳಿದ್ದು, ನನಗೇನು ಕೊರತೆ ಇದೆ ? ಹೇಳಿತು. ಆಗ ಭಗವಂತ ಹೇಳಿದ. ನೀನು ಬೆಳಿಗ್ಗೆ ಎಲ್ಲರನ್ನೂ ಎಬ್ಬಿಸುತ್ತಿಯೇ, ಆದರೆ ನಿನಗೆ ಮಧುರ ಧ್ವನಿ ಕೊಡಲಿಲ್ಲ. ಊರೆಲ್ಲ ಸ್ವಚ್ಛ ಮಾಡುತ್ತಿ, ನಿನಗೆ ಸುಂದರ ಬಣ್ಣ ಕೊಡಲಿಲ್ಲ. ಅದಕ್ಕೆ ಕೇಳು, ಒಳ್ಳೆ ಬಣ್ಣ, ಧ್ವನಿ ಕೊಡುತ್ತೇನೆ ನಿನಗೆ. ಸುಂದರ ಮನೆ ಕಟ್ಟೋದಿಕ್ಕೆ ಬರೋದಿಲ್ಲ. ಮುಳ್ಳು ಕಡ್ಡಿ ಹಾಕಿಕೊಂಡು ಇರುತ್ತೀಯೆ, ನಿನಗೊಂದು ಸುಂದರ ಮನೆ ಕೊಡುತ್ತೇನೆ. ಕೇಳು ಏನು ಬೇಕು? ಅಂದನು.

ಅವಾಗ ಕಾಗೆ ಹೇಳಿತು, ಭಗವಂತನೇ ನೀನೇನು ಕೊಟ್ಟಿದ್ದೀಯೋ?, ಅದು ಬಹಳ ಚೆನ್ನಾಗಿದೆ. ನಾನು ಕಪ್ಪಾಗಿದ್ದೇನೆ. ಧ್ವನಿ ಚೆನ್ನಾಗಿಲ್ಲ. ಅದಕ್ಕೆ ನಾನು ಸ್ವತಂತ್ರವಾಗಿದ್ದೇನೆ. ಮನುಷ್ಯನ ಕೈಯಿಂದ ಪಾರಾಗಿದ್ದೇನೆ. ನಾನು ಚೆನ್ನಾಗಿದ್ದರೆ, ಧ್ವನಿ ಮಧುರವಾಗಿದ್ದರೆ, ಮನುಷ್ಯ ನನ್ನನ್ನು ಬಂಧಿಸುತ್ತಿದ್ದನು.

ಈಗ ನಾನು ಸ್ವತಂತ್ರವಾಗಿದ್ದೇನೆ. ಇದಕ್ಕಿಂತ ಹೆಚ್ಚು ನನಗೇನು ಬೇಡ, ಇದೇ ಸಾಕು ಅಂದಿತು. ಇದರಿಂದ ನಾನು ಆರಾಮವಾಗಿದ್ದೇನೆ. ಎಷ್ಟು ಚೆನ್ನಾಗಿ ಬದುಕುತ್ತಾ ಇದ್ದೇನೆ. ನನಗೆ ಯಾರು ವೈರಿ ಇಲ್ಲ. ಚೆನ್ನಾಗಿದ್ದರೆ ವೈರಿ ಇರುತ್ತಾರೆ. ಒಳ್ಳೆ ಧ್ವನಿ ಇದ್ದರೆ ವೈರಿ ಇರುತ್ತಾರೆ. ಬೈಯುತ್ತಾರೆ, ಅಸೂಯೆ ಪಡ್ತಾರೆ.

ನನ್ನಲ್ಲಿ ಅದಿಲ್ಲ ಅಂತ ಆರಾಮಾಗಿದ್ದೇನೆ. ಏನು, ನೀನು ನಿನ್ನ ಇಚ್ಛೆಯಂತೆ ಬಣ್ಣ ರೂಪ ಧ್ವನಿ ಕೊಟ್ಟಿದಿಯಲ್ಲ, ಅದೇ ನನಗೆ ಸಂತೃಪ್ತಿ ಇದೆ ಅಂತು. ಆ ಕಾಗೆ ಎಷ್ಟು ಸಂತೃಪ್ತ ?. ಏನಿದೆ ಅದರಲ್ಲೇ ಸ್ವರ್ಗ ಕಂಡಿತ್ತು. ಆಗ ಭಗವಂತ ಹೇಳಿದ.

ನಿನಗೆ ಹಿಂದಿನದು ಗೊತ್ತಾಗಲಿ. ಮುಂದಿನದು ಗೊತ್ತಾಗಲಿ. ನೀನು ಕರೆದರೆ ಜನರಿಗೆ ಗೊತ್ತಾಗಲಿ ಏನೋ ಭವಿಷ್ಯ ಇದೆ ಅಂತ ಹೇಳಿ ದೃಷ್ಟಿ ನೀಡಿದ್ದಾನೆ. ಅದಕ್ಕೆ ಸತ್ತ ಕೂಡಲೇ ಕಾಗೆ ಬಂದಿದೆಯೋ ಇಲ್ಲವೋ ಅಂತ ನೋಡುತ್ತಾರೆ. ಸತ್ತವರು ಹೋಗಿದ್ದಾರೋ ಇಲ್ಲವೋ ಅಂತ.

ನಾವು ಕಲ್ಲು ಹೊಡೆದರೆ ಅವು ಜಗಳ ಮಾಡುವುದಿಲ್ಲ. ಮುಷ್ಕರ ಮಾಡುವುದಿಲ್ಲ. ಬೇರೆ ಕಡೆ ಹೋಗ್ತೀವಿ ಅಂತ ಹಾರಿಹೋಗುತ್ತವೆ. ಅದು ಬೇಡ ಅಂದರೆ ಇನ್ನೊಂದು ಕಡೆ ಹಾರಿ ಹೋಗುತ್ತವೆ.

ಕಾಗೆ ಮನುಷ್ಯನಿಗೆ ಹೇಳುತ್ತದೆ. ನೋಡು ನಿನಗೆ ಎಲ್ಲ ಇದೆ. ಸಮಾಧಾನ ಇಲ್ಲ. ನಾನು ನನಗೇನು ಇದೆಯೋ ಅದರಲ್ಲಿ ಸಂತೃಪ್ತಿ ಪಟ್ಟಿದ್ದೇನೆ ಅಂತು. ಎಷ್ಟಿದೆಯೋ ಅಷ್ಟರಲ್ಲಿ ತೃಪ್ತಿ ಪಡಬೇಕು. ಎಲ್ಲಾ ಉಚಿತ ಬಂದರೆ ತೃಪ್ತಿ ಇಲ್ಲ. ನಾವು ಶ್ರಮ ಮಾಡಿ ಅನುಭವಿಸಿದರೆ ತೃಪ್ತಿ. ಎಷ್ಟು ಅದೇ ಅಷ್ಟರಲ್ಲಿ ತೃಪ್ತಿಯಿಂದ ಇರಬೇಕು.

ಸಂಗ್ರಹ – ಬನ್ನಪ್ಪ ಅಂಗಡಿ.ಶಿಕ್ಷಕರು
ಯಾದಗಿರಿ.

ಬೀದರ ಜಿಲ್ಲೆಯ ಸಾಹಿತಿಗಳು’ ಇಲ್ಲಿ ಕ್ಲಿಕ್ ಮಾಡಿ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *