ಅಳವಡಿಸಿಕೊಳ್ಳಲೇಬೇಕಾದ ಬದುಕಿನ ಕೆಲ ಮೌಲ್ಯಗಳು
– ವೀಣಾ ಹೇಮಂತ್ ಗೌಡ ಪಾಟೀಲ್.
ಒಲೆ ಉರಿಯನ್ನು ಜೋರಾಗಿ ಇಟ್ಟು ಹಾಲು ಕಾಯಿಸಿದರೆ ಹಾಲು ಉಕ್ಕಿ ಹೋಗುತ್ತದೆ… ಅದೇ ಮಂದ ಉರಿಯಲ್ಲಿ ಕಾಯಿಸಿದ ಹಾಲು ಕೆನೆಗಟ್ಟುತ್ತದೆ…. ‘ಕಾಯದ ಹೊರತು ಹಾಲು ಕೆನೆಗಟ್ಟದು’ ಎಂಬ ಸತ್ಯದ ಅರಿವಿನ ಮೂಲಕ ಅಂತಹ ಸಮಾಧಾನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ.
ಬದುಕು ಒಂದು ನದಿಯಂತೆ. ನಿರಂತರವಾಗಿ ಹರಿಯುತ್ತಿರುವ ನೀರು ಅಲ್ಲಲ್ಲಿಯ ಕಲ್ಮಶಗಳನ್ನು ಅಲ್ಲಲ್ಲಿಯೇ ತೊಡೆದು ಹಾಕುತ್ತಾ ಹೊಸ ಹೊಳಹಿನೆಡೆಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾ ತನ್ನ ಹಾದಿಯಲ್ಲಿ ಬರುವ ಏರು ದಿಣ್ಣೆಗಳು ಕಣಿವೆ ಪಾತಾಳಗಳನ್ನು ಹತ್ತಿ ಇಳಿಯುತ್ತಾ ಸಾಗಿ ತನ್ನ ಗಮ್ಯವನ್ನು ತಲುಪುತ್ತದೆ… ಅಂತೆಯೇ ನಮ್ಮ ಬದುಕು ಕೂಡ ಇರಬೇಕು. ಒಪ್ಪಲಿ ಒಪ್ಪದೇ ಇರಲಿ ನಮ್ಮ ಬದುಕು ನದಿಯಂತೆ ಹರಿದು, ಬದುಕು ಒಡ್ಡುವ ಪ್ರತಿ ಸವಾಲುಗಳನ್ನು, ಏರಿಳಿತಗಳನ್ನು ಅನುಭವಿಸಿ ಗುರಿಯನ್ನು ತಲುಪಬೇಕು.ಹಾಗೆ ಗುರಿ ತಲುಪುವ ಹಾದಿಯಲ್ಲಿ ನಾವು ಅಳವಡಿಸಿಕೊಳ್ಳಲೇಬೇಕಾದ ಕೆಲ ಜೀವನ ಮೌಲ್ಯಗಳು ಹೀಗಿವೆ.
ಸಮಾಧಾನ….ಒಳ್ಳೆಯ ಸಂಗತಿಗಳು ಫಲಪ್ರದವಾಗಲು ಸಾಕಷ್ಟು ಸಮಯ ಬೇಕು. ಅದಕ್ಕಾಗಿ ತಾಳ್ಮೆ ಇರಲಿ. ಬದುಕಿನ ಎಂತದ್ದೇ ಪರಿಸ್ಥಿತಿಯನ್ನು ಎದೆಗುಂದದೇ ಸಮಾಧಾನದಿಂದ ಇದ್ದರೆ ಅರ್ಧ ಯುದ್ಧವನ್ನು ಗೆದ್ದಂತೆ.
ತೊಟ್ಟಿಲಿನಿಂದ ಚಟ್ಟದವರೆಗೂ ನಾವು ಸದಾ ಬಳಸುವ ಬಿದಿರಿನ ಕುರಿತು ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿಲ್ಲದ ಒಂದು ಸಂಗತಿ ಇದೆ. ಭೂಮಿಯ ಅಡಿಯಲ್ಲಿಯೇ ಇರುವ ಬಿದಿರಿನ ಬೀಜ ಮೊಳಕೆ ಒಡೆಯಲು ತೆಗೆದುಕೊಳ್ಳುವ ಕಾಲ ಸುಮಾರು ಮೂರು ವರ್ಷ. ಆದರೆ ಒಂದೊಮ್ಮೆ ಮೊಳಕೆಯೊಡೆದು ಬೆಳೆಯುವ ಬಿದಿರು ಮೊದಲ ಆರು ತಿಂಗಳಲ್ಲಿಯೇ ಹತ್ತಿಪ್ಪತ್ತು ಅಡಿ ಬೆಳೆಯುತ್ತದೆ. ಸುಮಾರು 60 ವರ್ಷಗಳ ಕಾಲ ಹೀಗೆ ಬೆಳೆಯುವ ಬಿದಿರು ಅಂತಿಮವಾಗಿ ಹೂ ಬಿಟ್ಟಾಗ ಅದರ ಅವಸಾನ ಕಾಲ ಪ್ರಾಪ್ತವಾಯಿತು ಎಂದರ್ಥ. ಆರು ತಿಂಗಳು, ಒಂದು ವರ್ಷಕ್ಕೆ ಬಿದಿರು ಮೊಳಕೆ ಒಡೆಯಲೇ ಇಲ್ಲ ಎಂದು ನಾವು ನೀರು ಹಾಕುವುದನ್ನು ಬಿಟ್ಟರೆ ಅದು ಅಲ್ಲಿಯೇ ಕಮರಿ ಹೋಗುತ್ತದೆ… ಎಷ್ಟೋ ಜನ ಸಾಧಕರು ಸದ್ದಿಲ್ಲದೆ ನಿರಂತರ ಸಾಧನೆಯ ತಪಸ್ಸನ್ನು
ತಮ್ಮದಾಗಿಸಿಕೊಂಡಿರುತ್ತಾರೆ.
ಒಲೆ ಉರಿಯನ್ನು ಜೋರಾಗಿ ಇಟ್ಟು ಹಾಲು ಕಾಯಿಸಿದರೆ ಹಾಲು ಉಕ್ಕಿ ಹೋಗುತ್ತದೆ… ಅದೇ ಮಂದ ಉರಿಯಲ್ಲಿ ಕಾಯಿಸಿದ ಹಾಲು ಕೆನೆಗಟ್ಟುತ್ತದೆ…. ‘ಕಾಯದ ಹೊರತು ಹಾಲು ಕೆನೆಗಟ್ಟದು’ ಎಂಬ ಸತ್ಯದ ಅರಿವಿನ ಮೂಲಕ ಅಂತಹ ಸಮಾಧಾನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ.
ಶಾಂತಿ…. ಸದಾ ಶಾಂತ ಮನಸ್ಥಿತಿಯನ್ನು ಕಾಯ್ದುಕೊಳ್ಳುವುದು ಸವಾಲಿನ ಕೆಲಸ ನಿಜ… ಆದರೆ ಒಂದೊಮ್ಮೆ ಶಾಂತ ಮನಸ್ಥಿತಿಯನ್ನು ನಮ್ಮದಾಗಿಸಿಕೊಂಡರೆ ಬದುಕು ಸರಳ.
ಕೊಳದಲ್ಲಿ ಪ್ರಶಾಂತವಾಗಿ ತೇಲುವಂತೆ ಕಾಣುವ ಬಾತುಕೋಳಿ ನಮ್ಮ ಮನವನ್ನು ಸೆಳೆಯುತ್ತದೆ ನಿಜ.. ಆದರೆ ನೀರಿನಲ್ಲಿ ಮುಚ್ಚಿರುವ ಅದರ ಕಾಲುಗಳ ವೇಗ ಅಪರಿಮಿತ. ಅದೆಷ್ಟೇ ಅಂತರಂಗದಲ್ಲಿ ಧಾವಂತದ ಬದುಕು ನಮ್ಮದಾಗಿದ್ದರೂ ಬಹಿರಂಗದಲ್ಲಿ
ಶಾಂತ ಮನಸ್ಥಿತಿಯನ್ನು ಹೊಂದಲೇಬೇಕು… ಹೊರಗಿನ ಭಾವಗಳ ಪ್ರತಿಫಲನ ಅಂತರಂಗದಲ್ಲಿ ಮೂಡಿ ಮನಸ್ಸು ಶಾಂತವಾಗಲು ಚಿಂತನ ಮಂಥನ, ಸುವಿಚಾರಗಳ ಹಂಚಿಕೊಳ್ಳುವಿಕೆ, ಧ್ಯಾನ ಮತ್ತು ಮನನಗಳು ನಮಗೆ ಅನುವು ಮಾಡಿಕೊಡುತ್ತವೆ.
ಅಂತಹ ಶಾಂತ ಮನಸ್ಥಿತಿಯನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳೋಣ.
ಭರವಸೆ…. ಇಳೆಯಲ್ಲಿ ಕವಿದ ಗಾಢಾಂಧಕಾರವನ್ನು ತೊಲಗಿಸಲು ಪುಟ್ಟದೊಂದು ಹಣತೆಯ ಬೆಳಕು ಸಾಕು. ಅಂತೆಯೇ ಬದುಕಿನಲ್ಲಿ ಎಲ್ಲವನ್ನು ಕಳೆದುಕೊಂಡಾಗಲೂ ಮುಂದೆ ಒಳ್ಳೆಯದಾಗುತ್ತದೆ ಎಂಬ ಭರವಸೆ ನಮ್ಮನ್ನು ಕಾಯುತ್ತದೆ.
ಹುಸಿಯಾದರೂ ಸರಿ ದೊಡ್ಡದಾದ ನಗು ನಮ್ಮ
ಮೊಗದಲ್ಲಿ ಮೂಡಿದಾಗ ಸಕಾರಾತ್ಮಕ ಹಾರ್ಮೋನುಗಳು ಸ್ರವಿಸಿ ಧನಾತ್ಮಕತೆ ನಮ್ಮಲ್ಲಿ ಒಡ ಮೂಡುತ್ತದೆ. ಭರವಸೆ ಬದುಕಿನ ಚುಕ್ಕಾಣಿಯನ್ನು ಹಿಡಿದು ಸರಿಯಾದ ಗಮ್ಯವನ್ನು ತಲುಪಿಸಲು ಅಗತ್ಯ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತದೆಯಾದ್ದರಿಂದ ಭರವಸೆಯೇ ಬದುಕು ಎಂಬ ಸತ್ಯವನ್ನು ಮನಗಾಣಬೇಕು. ನಮ್ಮ ಬದುಕನ್ನು ಉನ್ನತವಾಗಿ ರೂಪಿಸಿಕೊಳ್ಳಲು ಭರವಸೆಯನ್ನು ನಮ್ಮದಾಗಿಸಿಕೊಳ್ಳೋಣ.
ನಮ್ರತೆ…. ತೆನೆ,ಕಾಯಿ ಹೊತ್ತ ಫಸಲು ಬಾಗುವುದು.
ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿನಂತೆ ನಮ್ರತೆಯಿಂದ ನಾವು ಬದುಕಿನಲ್ಲಿ ಹೆಚ್ಚಿನದನ್ನು ಸಾಧಿಸಬಹುದು.. ನಮ್ಮ ಸುತ್ತಣ ಸಮಾಜದ ದೀನ, ದುರ್ಬಲರ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ ವಿನಮ್ರತೆಯನ್ನು ಬದುಕಾಗಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಬಾಗುವ ಕಾಯ ಜನರ ಜೀವನದ ಭರವಸೆಯಾಗಿ ಅವರ ಮನದ ಅಂಗಳದಲ್ಲಿ ಸದಾ ಅಮರವಾಗಿರುತ್ತದೆ.
ಹೆತ್ತವರು, ಗುರು ಹಿರಿಯರಿಗೆ ತೋರುವ ವಿನಮ್ರತೆ ನಮ್ಮ ಬದುಕಿಗೆ ಸದಾ ಒಳಿತನ್ನು ಉಂಟುಮಾಡುತ್ತದೆ.
ವಿನಮ್ರತೆಯೇ ಬಾಳಿನ ಮೈಲುಗಲ್ಲಾಗಲಿ.
ದಯೆ…. ದಯವಿಲ್ಲದ ಧರ್ಮ ಅದಾವುದಯ್ಯ ದಯವೇ ಧರ್ಮದ ಮೂಲವಯ್ಯ, ದಯ ಬೇಕು ಸಕಲ ಪಶು ಪಕ್ಷಿಗಳಲ್ಲಿ ಎಂದು ಸಾರಿದ ಬಸವಣ್ಣನ ನಾಡಿನ ಮಕ್ಕಳು ನಾವು. ದೇವರು ನಮಗೆ ಸಾಕಷ್ಟು ಕೊಟ್ಟು ಮರೆತಿರಬಹುದು… ಆದರೆ ನಮಗಿಂತ ಕಡಿಮೆ ಅವಕಾಶಗಳನ್ನು ಹೊಂದಿರುವ ಜನರ ಮೇಲೆ ಪ್ರೀತಿ, ವಿಶ್ವಾಸ, ಕರುಣೆ, ದಯೆಯನ್ನು ಹೊಂದಿದ್ದು ಅವರ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡಲೇಬೇಕು. ಪರರ ಕುರಿತು ದಯಾ ಭಾವ, ಕ್ಷಮಾ ಗುಣ, ಸಹನೆ, ಸಹಾನುಭೂತಿಗಳನ್ನು ಹೊಂದಿದ್ದು ಸೇವೆಯಲ್ಲಿಯೇ ಪೂಜೆ ಎಂಬ ಸತ್ಯವನ್ನು ಮನಗಾಣಬೇಕು…. ಪ್ರಸ್ತುತ ಜಗತ್ತಿನಲ್ಲಿ ಅತ್ಯವಶ್ಯಕವಾದುದು ಆರ್ಟಿಫಿಶಿಯಲ್ ಇಂಟಲಿಜೆನ್ಸಿ (ಎ ಐ ) ಅಲ್ಲ ಬದಲಾಗಿ ಹ್ಯೂಮನ್ ಇಂಟಿಮಸಿ (ಹೆಚ್ ಐ ) ಅಂದರೆ ನಮ್ಮ ಇಂದಿನ ಅವಶ್ಯಕತೆ ಕೃತಕ ಬುದ್ಧಿಮತ್ತೆಯಲ್ಲ ಬದಲಾಗಿ ಮಾನವೀಯ ಸಂಬಂಧಗಳಲ್ಲಿ ಆತ್ಮೀಯತೆ,ಸೌಹಾರ್ದತೆ ಮತ್ತು ಸಹಾನುಭೂತಿಯ ಅವಶ್ಯಕತೆ ಇದೆ.
ಆತ್ಮವಿಶ್ವಾಸ… ಆತ್ಮವಿಶ್ವಾಸವನ್ನು ಹೊಂದಿರುವ ಮೂಲಕ ನಮ್ಮ ಜಾಣ್ಮೆ ಮತ್ತು ಪ್ರತಿಭೆಯನ್ನು ಮುಚ್ಚಿಟ್ಟುಕೊಳ್ಳದೆ ಮತ್ತೊಬ್ಬರ ಏಳಿಗೆಗಾಗಿ ಅವುಗಳನ್ನು ಬಳಸುವುದು. ನಮ್ಮ ಆತ್ಮವಿಶ್ವಾಸ ನಮ್ಮನ್ನು ಮಾತ್ರ ಔನ್ಯತ್ಯದೆಡೆಗೆ ಕರೆದೊಯ್ಯದೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳಬೇಕು.
ಗಮನಹರಿಸುವಿಕೆ…. ಬೇರೆಯವರ ಅಭದ್ರತೆ ಮತ್ತು ನಮ್ಮ ಕುರಿತಾದ ಅವರ ಹೇಳಿಕೆಗಳು ನಮಗೆ ತೊಂದರೆ ಎಂದು ಭಾವಿಸಿ ನಮ್ಮ ಗಮನವನ್ನು ಕ್ಷುಲ್ಲಕ ವಿಚಾರಗಳತ್ತ ಹರಿಸಬಾರದು. ನಮ್ಮ ಬದುಕಿನ ಕುರಿತು ಸೂಕ್ತ ಅವಗಾಹನೆ ಮತ್ತು ನಿಖರ ಗುರಿಯನ್ನು
ಹೊಂದಿದ್ದು ಉನ್ನತ ಸಾಧನೆಯತ್ತ ಗಮನ ಹರಿಸಬೇಕು.
ಸ್ವಾತಂತ್ರ… ಬೇರೆಯವರು ನಮ್ಮ ಯೋಚನೆಗಳನ್ನು,
ಭಾವನೆಗಳನ್ನು ಮತ್ತು ಬದುಕನ್ನು ನಿಯಂತ್ರಿಸದಂತಹ ಸ್ವಾತಂತ್ರ್ಯವನ್ನು ನಾವು ಬದುಕಿನಲ್ಲಿ ಹೊಂದಿರಲೇಬೇಕು. ನಮ್ಮ ಒಳಿತು ಕೆಡುಕುಗಳ ಕುರಿತು ನಮಗೆ ಉತ್ತಮ ಅವಗಾಹನೆ ಇದ್ದು ನಮ್ಮ ಬದುಕನ್ನು ಸ್ವತಂತ್ರವಾಗಿ ನಿರ್ಧರಿಸುವ, ನಾವು ನಾವೇ ಆಗಿ ಬದುಕುವ ಸ್ವಾತಂತ್ರ್ಯ ನಮಗಿರಬೇಕು.
ಪ್ರೀತಿ…. ನಮ್ಮಲ್ಲಿ ಅಪಾರ ಪ್ರೀತಿಯ ಭಂಡಾರವನ್ನು ನಾವು ಹೊಂದಿರಲೇಬೇಕು. ಬೇರೆಯವರಲ್ಲಿ ಪ್ರೀತಿಯನ್ನು ಅರಸುವ ಮುನ್ನ ನಮ್ಮಲ್ಲಿ ಸದಾ ಬತ್ತದ ಪ್ರೀತಿಯ ತೊರೆ ಇರಬೇಕು.ನಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸುವವರನ್ನು ಮಾತ್ರ ಪ್ರೀತಿಸದೆ ನಮ್ಮ ಜೊತೆಗಿರುವ ಎಲ್ಲರನ್ನೂ ಅವರ ಎಲ್ಲಾ ಅವಗುಣಗಳ ಸಮೇತ ಪ್ರೀತಿಸಿ ಸಾಧ್ಯವಾದರೆ ಅವರಲ್ಲಿ ಉತ್ತಮ ಬದಲಾವಣೆಗಳನ್ನು ತರಲು ಪ್ರಯತ್ನಿಸಬೇಕು. ಬದುಕು ಎಂದರೆ ನಮ್ಮ ವೈಯುಕ್ತಿಕ ಪ್ರಗತಿಯಲ್ಲ… ‘ಸರ್ವೇ ಜನಾ ಸುಖಿನೋ ಭವಂತು’ ಎಂಬ ಸಂಸ್ಕೃತ ಉಕ್ತಿಯಂತೆ ಎಲ್ಲರ ಸುಖದಲ್ಲಿಯೇ ನಮ್ಮ ಜೀವನದ ಯಶಸ್ಸು ಅಡಗಿದೆ ಎಂಬ ಅರಿವನ್ನು ಹೊಂದಿದ್ದು ಬದುಕಿನಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತಹ ಮಾತಿನ ತಾತ್ಪರ್ಯ ಹೀಗಿದೆ… ‘ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟುತ್ತಾನೆ… ಆದರೆ ನಾವು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಅವರ ಮೇಲೆ ಹೇರಿ ಅವರನ್ನು ಸಂಕುಚಿತ ಮನಸ್ಕರನ್ನಾಗಿಸುತ್ತೇವೆ… ಹಾಗಾಗಕೂಡದು…. ‘ವಸುಧೈವ ಕುಟುಂಬಕಂ’ ಎಂಬ ಉಕ್ತಿಯಂತೆ ಇಡೀ ಜಗತ್ತಿನ ಜನರೆಲ್ಲ ಭ್ರಾತೃತ್ವವನ್ನು ಹೊಂದಿರಬೇಕು… ಅಂತಹ ಜಗತ್ತನ್ನು ನಿರ್ಮಾಣ ಮಾಡೋಣ.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.
‘ಬೀದರ ಜಿಲ್ಲೆಯ ಸಾಹಿತಿಗಳು’ ಇಲ್ಲಿ ಕ್ಕಿಕ್ ಮಾಡಿ.