ಸಿದ್ದಗಂಗೆಯ ಸಿದ್ಧಪುರುಷರು.
ಸಿದ್ಧಗಂಗೆಯ ಸಿದ್ಧಪುರುಷರೆ ನಿಮಗೆ ನಮ್ಮಯ ವಂದನೆ
ನಿಮ್ಮ ಪಾದ ಕಮಲಗಳಿಗೆ ನಮ್ಮ ಕಾವ್ಯ ಸಮರ್ಪಣೆ
ಎಲ್ಲರ ಹೃದಯದಲಿ ನೆಲೆಸಿದ ಪರಮ ಶಿವನ ಸ್ವರೂಪನೇ
ಎಲ್ಲರಿಂದಲು ಪೂಜೆಗೊಳ್ಳುವ ಭೂಲೋಕದ ದೇವನೇ.
ಅನ್ನ ಅಕ್ಷರ ಜ್ಞಾನ ದಾಸೋಹವನು ನಡೆಸಿದ ಶರಣರು
‘ತ್ರಿವಿಧ ದಾಸೋಹಿಗಳು’ ಎನ್ನುವ ಬಿರುದು ಪಡೆದಿಹ ದೇವರು
ಕಾಯಕವೆ ಕೈಲಾಸವೆನ್ನುತ ನಡೆದ ಕಾಯಕ ಯೋಗಿಯು
ದೀನದಲಿತರ ಉದ್ಧರಿಸಿದ ಪರಮ ಮಂಗಳ ಮೂರ್ತಿಯು.
ಜಾತಿ ಧರ್ಮದ ತಾರತಮ್ಯವ ದೂರ ತಳ್ಳಿದ ಮಹಿಮರು
ಸರ್ವರನು ಸಮಭಾವದಿಂದಲಿ ನೋಡಿದ ಮಹನೀಯರು
ಮಕ್ಕಳಿಗೆ ಸ್ಫೂರ್ತಿಯನು ತುಂಬುತ ಸಂಸ್ಕೃತಿಯ ಕಲಿಸಿದವರು
ಭಕ್ತಗಣಗಳ ಹರಸಿ ಅವರಿಗೆ ಅಭಯ ನೀಡಿದ ಸಂತರು.
ನಿಮ್ಮ ಸ್ಮರಣೆಯ ಮಾಡುವಂಥ ‘ದಾಸೋಹದ ದಿನ’ ವಿದು
ನಾಡಿನೆಲ್ಲೆಡೆ ಅನ್ನದಾನವ ನಡೆಸುವಂಥ ದಿನವಿದು
ದಾನ ಧರ್ಮದಿ ಖ್ಯಾತಿ ಪಡೆದ ಸಿದ್ಧಗಂಗೆಯ ಮಠವಿದು
ಇಂಥ ಶ್ರೇಷ್ಠ ಪುರುಷರನು ಪಡೆದಿರುವ ಪುಣ್ಯದ ನಾಡಿದು.
– ಜಿ.ಎಸ್.ಗಾಯತ್ರಿ
ಶಿಕ್ಷಕಿ…. ಬಾಪೂಜಿ ಶಾಲೆ
ಹರಿಹರ.