ಆಧುನಿಕ ಸಾವಿತ್ರಿ ಮತ್ತು ಸೂಕ್ತ ನಿರ್ಧಾರದ ಅವಶ್ಯಕತೆ
ಸಿಲಿಕಾನ್ ಸಿಟಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಹೊಂದಿ, ಆರಂಕಿಯ ಸಂಬಳವನ್ನು ಎಣಿಸುವ ಸ್ವಂತ ಮನೆಯನ್ನು ಹೊಂದಿರುವ ಆತನಿಗೆ ಸುಂದರವಾದ ಪತ್ನಿ ಮತ್ತು ಇಬ್ಬರು ಮಕ್ಕಳು, ಪ್ರೀತಿಸುವ ತಂದೆ ತಾಯಿ ಊರಿನಲ್ಲಿ ಇದ್ದರೆ ಮತ್ತೊಬ್ಬ ಸೋದರ ಅದೇ ಊರಿನ ಮತ್ತೊಂದು ಬಡಾವಣೆಯಲ್ಲಿ ವಾಸವಾಗಿದ್ದ. ಬೆಚ್ಚನಾ ಮನೆ, ವೆಚ್ಚಕ್ಕೆ ಹೊನ್ನು ಇಚ್ಛೆಯನರಿತು ನಡೆವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು ಎಂಬಂತಹ ಜೀವನ ಶೈಲಿ. ಇಷ್ಟೇ ಆಗಿದ್ದರೆ ನನ್ನ ಅಂಕಣಕ್ಕೆ ಕಥೆಯಾಗುತ್ತಿರಲಿಲ್ಲ ಅವರ ಜೀವನ.
ಯಾವಾಗಲೂ ಚಟುವಟಿಕೆಯಿಂದಿರುತ್ತಿದ್ದ ಆಕೆಯ ಪತಿ ಕಳೆದ ಕೆಲ ತಿಂಗಳುಗಳಿಂದ ಸದಾ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದು ಆಕೆಯ ಚಿಂತೆಗೂ ಕಾರಣವಾಗಿತ್ತು. ಅದೆಷ್ಟೇ ಹೇಳಿದರೂ ವೈದ್ಯರಿಗೆ ತೋರಿಸಲು ಹಿಂಜರಿಯುತ್ತಿದ್ದ ಪತಿಯನ್ನು ಎಳೆದುಕೊಂಡು ಹೋದ ಆಕೆಗೆ ಹಲವಾರು ಪರೀಕ್ಷೆಗಳ ನಂತರ ಅರಿವಾದದ್ದು ಆಕೆಯ ಪತಿಯ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು.
ರಿಪೋರ್ಟುಗಳನ್ನು ಹಿಡಿದು ಬೇರೆ ವೈದ್ಯರ ಸಲಹೆ ಪಡೆದರೂ ಕೂಡ ಎಲ್ಲರ ಅಭಿಪ್ರಾಯ ಮೂತ್ರಪಿಂಡಗಳನ್ನು ಬದಲಾಯಿಸಬೇಕು ಎಂದೇ ಆಗಿತ್ತು. ನಿರ್ದಿಷ್ಟ ಸಮಯವನ್ನು ಹೇಳದೆ ಹೋದರೂ ಸರಿಯಾದ ಪಥ್ಯ, ಚಿಕಿತ್ಸೆ ಮತ್ತು ಜೀವನಶೈಲಿಯನ್ನು ನಡೆಸುವ ಮೂಲಕ ಬದಲಿ ಮೂತ್ರಪಿಂಡ ಚಿಕಿತ್ಸೆಯನ್ನು ಮುಂದೂಡಬಹುದಿತ್ತೇ ಹೊರತು ಮೂತ್ರಪಿಂಡವನ್ನು ಬದಲಾಯಿಸದೆ ಇರಲು ಸಾಧ್ಯವಿರಲಿಲ್ಲ. ಒಂದೆರಡು ವರ್ಷ ಸಮಯಾವಕಾಶ ಅವರಿಗಿತ್ತು.
ಅದು ಕೊರೋನಾ ಸಮಯ. ತುಸು ದಪ್ಪನೆಯ ಕಾಯದವರಾಗಿದ್ದ ಆಕೆಯ ಪತಿ ತೂಕ ಇಳಿಸಿಕೊಳ್ಳಲು ತೆಗೆದುಕೊಂಡ ಪ್ರಚಲಿತವಾಗಿರುವ ಔಷಧೀಯ ಆಹಾರ ಉತ್ಪಾದನೆಗಳನ್ನು ಬಳಸಿದ್ದು ಅದು ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರಬಹುದು ಎಂಬ ಅಭಿಪ್ರಾಯ ವೈದ್ಯರದಾಗಿತ್ತು. ಯಾವುದೇ ರೀತಿಯ ದುಶ್ಚಟಗಳಿಲ್ಲದಿದ್ದರೂ ಈ ರೀತಿ ಕಿಡ್ನಿ ವೈಫಲ್ಯವಾದದ್ದು ದಂಪತಿಗಳ ಮೇಲೆ ಹೆಚ್ಚಿನ ಮಾನಸಿಕ ಪರಿಣಾಮವನ್ನು ಬೀರಿತು. ಕೊರೊನಾದ ಸಂಕಷ್ಟ ಸಮಯದಲ್ಲಿ ಆತನ ಕಿಡ್ನಿಗಳು ಕೇವಲ 20% ನಷ್ಟು ಕ್ಷಮತೆಯನ್ನು ಮಾತ್ರ ಹೊಂದಿದ್ದು ಆತ ಖಿನ್ನತೆಗೆ ಒಳಗಾಗತೊಡಗಿದ್ದ.
ದಾನಿಗಳು ಮಾತ್ರ ಸಿಕ್ಕಿರಲಿಲ್ಲ… ಅದೊಂದು ದಿನ ಆಕೆಗೆ ನಾನೇಕೆ ನನ್ನ ಪತಿಗೆ ಮೂತ್ರಪಿಂಡವನ್ನು ನೀಡಬಾರದು ಎಂಬ ಯೋಚನೆ ತಲೆದೋರಿ ಈಗಾಗಲೇ ಪರಿಚಯವಾದ ಮೂತ್ರಪಿಂಡ ದಾನ ಮಾಡಿದ ಮತ್ತು ಕಸಿ ಮಾಡಿಸಿಕೊಂಡ ಸ್ನೇಹಿತರೊಂದಿಗೆ ಈ ಕುರಿತು ಚರ್ಚೆ ಮಾಡಿದ ಆಕೆ ಅಂತಿಮವಾಗಿ ವೈದ್ಯರ ಮುಂದೆ ಈ ಪ್ರಶ್ನೆಯನ್ನು ಇಟ್ಟಳು.
ಆಕೆಯದು ಓ ಪಾಸಿಟಿವ್ ರಕ್ತದ ಗುಂಪಾದ್ದರಿಂದ
ಮೂತ್ರಪಿಂಡ ಕಸಿ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹಸಿರು ನಿಶಾನೆ ತೋರಿಸಿದ ನಂತರ ಶುರುವಾಯಿತು ನೋಡಿ ವೈದ್ಯಕೀಯ ಮತ್ತು ಕಾನೂನು ಪ್ರಕ್ರಿಯೆಗಳು.
ಸ್ವತಹ ಆಕೆಯನ್ನು ಪರೀಕ್ಷಿಸಿ ಆಕೆಗೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆ ಇಲ್ಲ, ಆಕೆ ಯಾರದೇ ಬಲವಂತವಿಲ್ಲದೆ ತನ್ನ ಸ್ವ ಇಚ್ಛೆಯಿಂದ ಮೂತ್ರಪಿಂಡ ದಾನವನ್ನು ಮಾಡುತ್ತಿದ್ದಾಳೆ ಎಂಬುದನ್ನು ಪರಿಶೀಲಿಸಿ ಎಲ್ಲಾ ಅವಶ್ಯಕ ಕಾಗದ ಪತ್ರಗಳಿಗೆ ಆಕೆಯ ರುಜು ಮಾಡಿಸಿಕೊಳ್ಳಲಾಯಿತು.ಆಕೆಯ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲು ಕಣ್ಣು, ಕಿವಿ, ಮೂಗು ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೀಗೆ ದೈಹಿಕ ಸ್ವಾಸ್ಥ್ಯದ ಎಲ್ಲ ಬಗೆಯ ಪರೀಕ್ಷೆಗಳು ನಡೆದು ಆಕೆ ನೂರು ಪ್ರತಿಶತ ಮೂತ್ರಪಿಂಡ ದಾನ ಮಾಡಲು ಏನೂ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢೀಕರಿಸಿದರು. ಈ ಎಲ್ಲಾ ಪ್ರಕ್ರಿಯೆಗಳಿಗೆ ತಗುಲಿದ ಸಮಯ ಆರು ತಿಂಗಳಾದರೆ, ನನ್ನ ಪತಿಗೆ ನಾನು ಕಿಡ್ನಿ ದಾನ ಮಾಡಲು ಇಷ್ಟೆಲ್ಲ ಪ್ರಕ್ರಿಯೆಗಳನ್ನು ಎದುರಿಸಬೇಕೇ ಎಂದು ಆಕೆ ಹೈರಾಣಾದದ್ದು ಸುಳ್ಳಲ್ಲ.
ಕಿಡ್ನಿ ದಾನ ಮಾಡಬೇಕೆಂದು ಆಕೆ ಯೋಚಿಸಿದ ನಂತರ ಆ ಕುರಿತು ಮಾತನಾಡಿದ್ದು ತನ್ನ ವೈದ್ಯರು ಮತ್ತು ಈಗಾಗಲೇ ಕಿಡ್ನಿ ದಾನ ಮಾಡಿದ ಇನ್ನೋರ್ವ ಮಹಿಳೆ ಮತ್ತು ಕಿಡ್ನಿ ಪಡೆದು ಆರೋಗ್ಯವಾಗಿ ಇರುತ್ತಿದ್ದ ಮತ್ತೋರ್ವ ಹಿರಿಯ ಸ್ನೇಹಿತೆಯೊಂದಿಗೆ ಮಾತ್ರ.ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಆಕೆ ತನ್ನ ಪಾಲಕರಿಗೆ ತನ್ನದೇ ಮೂತ್ರಪಿಂಡವನ್ನು ಪತಿಗೆ ನೀಡುವ ಕುರಿತು ಹೇಳಿದಳು.ಈ ಮೊದಲು ಅಳಿಯನ ಆರೋಗ್ಯದ ಕುರಿತು ಮಾತ್ರ ಚಿಂತಿಸುತ್ತಿದ್ದ ಆಕೆಯ ಪಾಲಕರು ಇದೀಗ ಆತನಿಗೆ ಕಿಡ್ನಿ ದಾನ ಮಾಡಿದ ಮೇಲೆ ತಮ್ಮ ಮಗಳ ಆರೋಗ್ಯಕ್ಕೆಲ್ಲಿ ಹಾನಿ ಯಾಗುತ್ತದೆ ಎಂಬ ಭಯ ಆತಂಕಗಳನ್ನು ಹೊಂದಿದ್ದರೂ ಕೂಡ ಅವರ ಭವಿಷ್ಯದ ಕುರಿತು ಯೋಚಿಸಿ ಅನುಮತಿ ಪತ್ರಕ್ಕೆ ಸಹಿ ಹಾಕಿದರು. ಜೊತೆಗೆ ಆಕೆಯ ಒಡಹುಟ್ಟಿದವರಿಂದಲೂ ಅನುಮತಿ ಪತ್ರಕ್ಕೆ ರುಜು ಮಾಡಿಸಿಕೊಳ್ಳಲಾಯಿತು.
ಮುಂದೆ ಅತ್ಯಂತ ಸರಳವಾಗಿ ಆಕೆಯ ಕಿಡ್ನಿಯನ್ನು ವೈದ್ಯಕೀಯ ಪ್ರಕ್ರಿಯೆಯ ಮೂಲಕ ಬೇರ್ಪಡಿಸಿ ಆಕೆಯ ಪತಿಗೆ ಕಸಿ ಮಾಡಲಾಯಿತು. ಅತ್ಯಂತ ಕಡಿಮೆ ಅವಧಿಯಲ್ಲಿ ವೈದ್ಯಕೀಯ ಚಿಕಿತ್ಸೆಯ ಮೂಲಕ ಚೇತರಿಸಿಕೊಂಡ ದಂಪತಿಗಳಿಬ್ಬರು ಇದೀಗ ನೆಮ್ಮದಿ ಮತ್ತು ಸಂತಸದ ಜೀವನವನ್ನು ನಡೆಸುತ್ತಿದ್ದಾರೆ.
ಆಗಾಗ ತಮಾಷೆಗಾಗಿ ಕಿತ್ತಾಡುವ ಅವರ ನಡುವೆ ನನ್ನ ಕಿಡ್ನಿ ನನಗೆ ಕೊಟ್ಟು ಬಿಡು ಎಂದು ಪತ್ನಿ ಹೇಳಿದಾಗ ಪೊಲೀಸರ ಮುಂದೆ ಸೈನ್ ಹಾಕಿದ್ದೀಯಾ ಈಗ ಅದು ನನ್ನ ಕಿಡ್ನಿ ಎಂದು ಆತನೂ ತಮಾಷೆಯಿಂದ ಉತ್ತರ ಹೇಳಿದರೂ ಕೂಡ ತನಗೆ ಕಿಡ್ನಿ ದಾನ ಮಾಡಿದ ಪತ್ನಿಯ ಕುರಿತು ಅಪಾರ ಗೌರವ, ಪ್ರೀತಿ ಆತನಿಗೆ.
ಇದೀಗ ಆರೋಗ್ಯಕರ ಜೀವನವನ್ನು ನಡೆಸುತ್ತಿರುವ ಆಕೆ ಹೇಳುವುದು ಇಷ್ಟೇ…. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದಾಗ ಸ್ವಯಂ ವೈದ್ಯಕೀಯ ಮಾಡಿಕೊಳ್ಳದೆ ನುರಿತ ತಜ್ಞ ವೈದ್ಯರನ್ನು ಭೇಟಿಯಾಗಿ ತಾನು ಕಿಡ್ನಿ ದಾನಿ ಎಂಬುದನ್ನು ಮೊದಲೇ ಹೇಳಿದರೆ ಆಕೆಗೆ ಕೊಡಬಹುದಾದ ಔಷಧಿ ಮಾತ್ರೆಗಳನ್ನು ಅವರು ನೀಡುತ್ತಾರೆ. ಯೋಗ,ಧ್ಯಾನ, ಪ್ರಾಣಾಯಾಮ ಮತ್ತು ನಡಿಗೆಯಂತಹ ಶಿಸ್ತಿನ ದಿನಚರಿ ಮತ್ತು ಒಳ್ಳೆಯ ಆರೋಗ್ಯ ಸೇವನೆಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ವಯೋ ಸಹಜವಾಗಿ ಬರುವ ತೊಂದರೆಗಳನ್ನು ನಿಭಾಯಿಸಲು ಸಾಧ್ಯ ಎಂದು ಹೇಳಿದ ಆಕೆ ಇತ್ತೀಚಿಗೆ ತುಸು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಅಕ್ಕ, ಪ್ರೊಟೀನ್ಗ ಕೊರತೆ,ಕುಳಿತರೆ ಏಳಲು ಆಗುವುದಿಲ್ಲದಂತಹ ಸಣ್ಣಪುಟ್ಟ ದೈಹಿಕ ತೊಂದರೆಗಳು ಆಗುತ್ತಿವೆ ಎಂದು ಹೇಳಿದಳು.
ಸಹಜವಾಗಿ 40ರ ನಂತರ ಎಲ್ಲರಿಗೂ ಈ ಸಮಸ್ಯೆಗಳು ತಲೆದೋರುತ್ತವೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿರುವ ಹೆಣ್ಣು ಮಕ್ಕಳು ಕೂಡ ಈ ಸಮಸ್ಯೆಗಳಿಂದ ಬಳಲುತ್ತಾರೆ. ಕಿಡ್ನಿ ನೀಡಿರುವುದರಿಂದ ಹೀಗಾಗುತ್ತದೆ ಎಂದು ಮನಸ್ಸಿನಲ್ಲಿ ಭಯ ಇಟ್ಟುಕೊಳ್ಳಬೇಡ.ಸೂಕ್ತ ಚಿಕಿತ್ಸೆ ಪಡೆದುಕೋ ಮತ್ತು ಒಳ್ಳೆಯ ಪೌಷ್ಟಿಕ ಆಹಾರವನ್ನು ಸೇವಿಸು ಎಂದಷ್ಟೇ ಹೇಳಿ ಮಾತು ಮುಗಿಸಿದೆ.
ಅಂಗಾಂಗ ದಾನ ಮಹಾದಾನ. ಆಕಸ್ಮಿಕ ಅಪಘಾತಗಳಲ್ಲಿ ಬ್ರೈನ್ ಡೆಡ್ ಎಂದು ಘೋಷಿಸಲ್ಪಟ್ಟ ವ್ಯಕ್ತಿಯ ಪಾಲಕರ ಒಪ್ಪಿಗೆಯ ಮೂಲಕ ಅವರ ಅಂಗಾಂಗಗಳನ್ನು ದಾನ ಪಡೆದು
ಅಂಗಾಂಗ ವೈಫಲ್ಯದ ತೊಂದರೆಗಳಿಂದ ನರಳುತ್ತಿರುವ ಹಲವಾರು ಜನರ ಬದುಕಿಗೆ ಬೆಳಕಾಗಬಹುದು,ಆದರೆ ಈ ಅಂಗಾಂಗಗಳ ದಾನದಲ್ಲಿ ಯಾವುದೇ ರೀತಿಯ ಅಕ್ರಮಗಳು, ದುರ್ಬಳಕೆಗಳು ನಡೆಯಬಾರದು ಎಂಬ ಕಾರಣಕ್ಕೆ ಹಲವಾರು ವೈದ್ಯಕೀಯ ಮತ್ತು ಕಾನೂನು ಪ್ರಕ್ರಿಯೆಗಳನ್ನು ಎದುರಿಸಲೇಬೇಕು.
ಅಂದು ಆ ಸಾವಿತ್ರಿ ತನ್ನ ಪತಿಯ ಪ್ರಾಣ ಭಿಕ್ಷೆಯನ್ನು ಪಡೆಯಲು ಯಮನನ್ನೇ ಮಣಿಸಿದರೆ ಇಂದು ಈ ಸಾವಿತ್ರಿ ತನ್ನ ಪತಿಯ ಪ್ರಾಣ ಉಳಿಸಲು ತನ್ನದೇ ದೇಹದ ಅಂಗವೊಂದನ್ನು ದಾನ ಮಾಡಿದಳು. ಆ ದಂಪತಿಗಳ ಜೀವನ ಆರೋಗ್ಯಕರವಾಗಿ ಸುಖಮಯವಾಗಿ ಸಾಗಲಿ ಎಂದು ಹಾರೈಸುವ.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.