Oplus_131072

ಅಭಿವೃದ್ಧಿಯ ಹರಿಕಾರನಿಗೆ ಅಶ್ರುತರ್ಪಣ

ರಾಜ್ಯ ಕಂಡ ಅಪರೂಪದ ರಾಜಕಾರಣಿ
ಪದ್ಮವಿಭೂಷಣವ ಪಡೆದ ನಾಡ ಕಣ್ಮಣಿ
ದಕ್ಷತೆಯಲಿ ರಾಜ್ಯ ನಡೆಸಿದಂಥ ವ್ಯಕ್ತಿಯು
ಆಧುನಿಕ ಕೃಷ್ಣನೆಂಬ ಧೀಮಂತ ಶಕ್ತಿಯು.

ಮಲ್ಲಯ್ಯ ತಾಯಮ್ಮ ದಂಪತಿಗಳ ಮಗನಾಗಿ
ಸೋಮನಹಳ್ಳಿಯಲಿ ಕೃಷ್ಣ ಜನನವು
ದೇಶ ವಿದೇಶಗಳಲಿ ವ್ಯಾಸಂಗ ಮಾಡಿದಂಥ
ಇವರ ವ್ಯಕ್ತಿತ್ವವೇ ಅಸಾಮಾನ್ಯವು.

ಸೋಮನಹಳ್ಳಿಯಿಂದ ರಾಜಧಾನಿ ದಿಲ್ಲಿವರೆಗೆ
ನಡೆಸಿದರು ತಮ್ಮ ರಾಜಕೀಯ ಪಯಣವ
ರಾಜಕಾರಣದ ಭೀಷ್ಮರೆಂದೆನಿಸಿ ಎಲ್ಲರಲಿ
ತೋರಿಸಿದರು ಸೌಹಾರ್ದತೆ ಸೌಜನ್ಯವ.

ಸ್ತ್ರೀಶಕ್ತಿ ಯೋಜನೆಗೆ ಮುನ್ನುಡಿ ಬರೆದವರು
ಮಕ್ಕಳಿಗೆ ಅಕ್ಷರ ದಾಸೋಹವ ತಂದವರು
ರೈತರಿಗೆ ಯಶಸ್ವಿನಿ ಯೋಜನೆ ರೂಪಿಸಿದವರು
ಯುವಜನತೆಗೆ ಉದ್ಯೋಗವ ಕಲ್ಪಿಸಿಕೊಟ್ಟವರು.

ಬೆಂಗಳೂರು ಅಭಿವೃದ್ಧಿಯ ನೇತಾರರು
ಐಟಿ ಬಿಟಿ ಕಂಪನಿಗಳ ಹರಿಕಾರರು
ಮೇಲ್ಸೇತುವೆ ನಿರ್ಮಾಣಕೆ ಕಾರಣೀಭೂತರು
ಕರುನಾಡಿನ ಜನಪ್ರಿಯ ಯೋಜನೆಗಳ ಜನಕರು.

ಹತ್ತಾರು ಸವಾಲುಗಳ ಮೆಟ್ಟಿನಿಂತ ಧೀರರು
ಸರ್ವರನು ಸಮಭಾವದಿಂದ ಕಂಡವರು
ವಿದೇಶದಲ್ಲು ಖ್ಯಾತಿ ಪಡೆದ ಕ್ರಾಂತಿಕಾರಿ ಪುರುಷರು
ಆಧುನಿಕತೆ ಕನಸು ಕಂಡ ಕನಸುಗಾರರು.

ಸಾಗಿತು ಸಾಗಿತು ಬಾರದಿಹ ಲೋಕಕೆ
ಅಜಾತಶತ್ರುವಿನ ಅಂತಿಮ ಪಯಣ
ಜೀವನದಲಿ ಸಾರ್ಥಕತೆಯ ಪಡೆದ ಸಹೃದಯಿಗೆ
ಸಲ್ಲಿಸೋಣ ನಮ್ಮೆಲ್ಲರ ಅಶ್ರುತರ್ಪಣ.

ಜಿ.ಎಸ್.ಗಾಯತ್ರಿ
ಶಿಕ್ಷಕಿ. ಬಾಪೂಜಿ ಶಾಲೆ
ಹರಿಹರ.ದಾವಣಗೆರೆ

 

 

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *