Oplus_131072

ಬದುಕಿನ ಕೆಲ ಪಾಠಗಳು.

 

ವೀಣಾ ಹೇಮಂತ್ ಗೌಡ ಪಾಟೀಲ್.

 

ನಮ್ಮ ಒಳ ಮನಕ್ಕೆ ಹಾಕಿದ ಪೂರ್ವಾಗ್ರಹದ ಕೀಲಿ ಕೈ ನಮ್ಮ ಬಳಿಯಲ್ಲಿಯೇ ಇರುತ್ತದೆ… ತೆರೆಯಬೇಕಾಗಿರುವುದು ನಾವೇ. ಬದಲಾವಣೆಗೆ ಅತ್ಯಂತ ಕಡಿಮೆ ಸಮಯ ತಗಲುತ್ತದೆ. ಮನಸ್ಸು ಮಾಡಬೇಕಷ್ಟೇ

 

ಆಗ ತಾನೇ ವಿಮಾನದಿಂದ ಇಳಿದು ತನ್ನ ಲಗ್ಗೇಜನ್ನು ಕಲೆಕ್ಟ್ ಮಾಡಿಕೊಂಡು ಏರ್ಪೋರ್ಟ್ ನ ಹೊರ ಆವರಣಕ್ಕೆ ಬಂದು ನಿಂತ ಆ ಶ್ರೀಮಂತ ವ್ಯಕ್ತಿಯನ್ನು ನೀಟಾಗಿ ಡ್ರೆಸ್ ಮಾಡಿದ ಓರ್ವ ಡ್ರೈವರ್ ಸಮೀಪಿಸಿ ನನ್ನ ಕ್ಯಾಬ್ ನಲ್ಲಿ ಪ್ರಯಾಣಿಸಲು ಬರುವಿರಾ ಸರ್ ? ಎಂದು ಕೇಳಿದ.

ಆತನ ವರ್ತನೆಯಿಂದ ಪ್ರಭಾವಿತನಾದ ಅ ಶ್ರೀಮಂತ ವ್ಯಕ್ತಿ ‘ಎಸ್’ ಎಂದು ಹೇಳಿದೊಡನೆ ಅವರ ಕೈಯಿಂದ ಲಗೇಜನ್ನು ಪಡೆದುಕೊಂಡು ಅವರನ್ನು ತನ್ನ ಕಾರಿನತ್ತ ಕರೆದೊಯ್ದ ಆ ಚಾಲಕ ಲಗೇಜನ್ನು ಕಾರಿನ ಡಿಕ್ಕಿಯಲ್ಲಿ ನೀಟಾಗಿ ಜೋಡಿಸಿದನು. ಆ ಶ್ರೀಮಂತ ವ್ಯಕ್ತಿಗೆ ಪಳ ಪಳನೇ ಹೊಳೆಯುವ ಶುಭ್ರವಾದ ಕಾರಿನ ಹೊರ ಭಾಗವನ್ನು ಕಂಡು ಸಮಾಧಾನವೆನಿಸಿತು. ನಂತರ ಕ್ಯಾಬ್ ಒಳಗೆ ಕುಳಿತುಕೊಂಡ ಆ ವ್ಯಕ್ತಿಗೆ ಶುಭ್ರವಾದ ಕ್ಯಾಬ್ ನ ಒಳ ಭಾಗ ಮನಸ್ಸಿಗೆ ಮುದ ತಂದಿತು. ಅಲ್ಲಿಯೇ ಅಂಟಿಸಿದ್ದ
ಡಕ್ ಆರ್ ಈಗಲ್…. ಯು ಡಿಸೈಡ್ ‘ಎಂಬ ಬರಹ ಆತನ ಮನ ಸೆಳೆಯಿತು.

ಇದೀಗ ತನ್ನ ಸೀಟನ್ನು ಅಲಂಕರಿಸಿದ ಡ್ರೈವರ್ ಆ ಶ್ರೀಮಂತ ವ್ಯಕ್ತಿಗೆ ತನ್ನ ಪರಿಚಯವನ್ನು ಹೇಳಿಕೊಂಡು ಆತನ ಕೈಗೆ ಕಾರ್ಡ್ ಒಂದನ್ನು ನೀಡಿದ. ಆ ಕಾರ್ಡಿನಲ್ಲಿ

”ನನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ಆರಾಮದಾಯಕವಾಗಿ ಮತ್ತು ಸುರಕ್ಷಿತವಾಗಿ ಅವರ ಗಮ್ಯವನ್ನು ತಲುಪಿಸುವಲ್ಲಿ ಅನುಕೂಲವಾಗುವ ಉತ್ತಮ ವಾತಾವರಣವನ್ನು ಕಲ್ಪಿಸಿ ಕೊಡುವುದು ನನ್ನ ಉದ್ದೇಶ” ಎಂದು ಬರೆದಿತ್ತು.

ಕಾರಿನ ಡ್ರೈವರ್ ಸ್ವೀಟ್ನಲ್ಲಿ ಬಂದು ಕುಳಿತ ಆ ಡ್ರೈವರ್

‘ಸರ್, ನೀವು ಚಹಾ ಇಲ್ಲವೇ ಕಾಫಿ ಕುಡಿಯುತ್ತೀರಾ ?’ ಎಂದು ಕೇಳಿದ. ಬೇಕೆಂದೇ ಆ ಗಣ್ಯ ವ್ಯಕ್ತಿ ‘ಇಲ್ಲ, ನನಗೆ ಜ್ಯೂಸ್ ಬೇಕಾಗಿತ್ತು’ ಎಂದು ಹೇಳಿದ.

ಕೂಡಲೇ ಡ್ರೈವರ್ ಸರ್ ನನ್ನ ಬಳಿ ರೆಗ್ಯುಲರ್ ಜ್ಯೂಸ್ ಮತ್ತು ಡಯಟ್ ಜ್ಯೂಸ್ ನ ಕ್ಯಾನ್ ಗಳು ಮತ್ತು ನೀರಿನ ಬಾಟಲ್ ಗಳು ಇವೆ. ನಿಮಗೆ ಯಾವುದನ್ನು ಕೊಡಲಿ ? ಎಂದು ಕೇಳಿದ. ನಂತರ ಶ್ರೀಮಂತ ವ್ಯಕ್ತಿ ಇಚ್ಚಿಸಿದ ಡಯಟ್ ಜ್ಯೂಸನ್ನು ಆತನಿಗೆ ಕೊಟ್ಟ ಡ್ರೈವರ್ ‘ಸರ್, ಇಂದಿನ ನ್ಯೂಸ್ ಪೇಪರ್ ಮತ್ತು ಕೆಲ ಮ್ಯಾಗಝೀನ್ಗಳು ಇವೆ. ನಿಮಗೆ ಬೇಕಿದ್ದರೆ ನೋಡಿ’ ಎಂದು ಹೇಳಿದ.

ನಂತರ ಸ್ವೀಟ್ ಬೆಲ್ಟ್ ಕಟ್ಟಿಕೊಂಡು ಅತ್ಯಂತ ಸಮಾಧಾನದಿಂದ ಕಾರನ್ನು ಚಲಾಯಿಸಲಾರಂಭಿಸಿದ ಡ್ರೈವರ್ ಆ ವ್ಯಕ್ತಿಯನ್ನು ಉದ್ದೇಶಿಸಿ

“ಸರ್,ಇಂದು ಆಯಾ ರೇಡಿಯೋ ಸ್ಟೇಷನ್ಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ವಿವರವನ್ನು ಒಳಗೊಂಡ ಪಟ್ಟಿ ನಿಮ್ಮ ಮುಂದೆ ಇದೆ. ನೀವು ರೇಡಿಯೋ ಕೇಳಲು ಇಚ್ಚಿಸುವುದಾದರೆ ಆ ಪಟ್ಟಿಯನ್ನು ನೋಡಿ” ಎಂದು ಕೇಳಿದನಲ್ಲದೆ ‘ಕಾರಿನಲ್ಲಿರುವ ಏರ್ ಕಂಡೀಷನಿಂಗ್ ವ್ಯವಸ್ಥೆ ತಮಗೆ ಅನುಕೂಲವಾಗಿದೆಯೇ ? ಎಂದು ಕೂಡ ವಿಚಾರಿಸಿದ.

ಮುಂದುವರೆದ ಆತ ಗಮ್ಯವನ್ನು ತಲುಪುವ ರಸ್ತೆಯ ಮಾಹಿತಿಯನ್ನು ಶ್ರೀಮಂತ ವ್ಯಕ್ತಿಗೆ ನೀಡಿ ತಾವು ಬಯಸುವುದಾದರೆ ನಾನು ತಮ್ಮೊಂದಿಗೆ ಮಾತನಾಡಬಲ್ಲೆ… ಬೇಡವೆಂದರೆ ನಾನು ಪದೇಪದೇ ಮಾತನಾಡಿ ನಿಮಗೆ ತೊಂದರೆ ಕೊಡುವುದಿಲ್ಲ ಎಂದು ಹೇಳಿದ.

‘ನೀನು ನಿನ್ನ ಎಲ್ಲಾ ಗ್ರಾಹಕರೊಂದಿಗೆ ಹೀಗೆಯೇ ವರ್ತಿಸುವೆಯಾ’ ಎಂದು ಆ ಗಣ್ಯ ವ್ಯಕ್ತಿ ಕೇಳಲು ಅ ಡ್ರೈವರ್ ‘ಇಲ್ಲ ಸರ್,ಯಾವಾಗಲೂ ನಾನು ಹೀಗೆ ವರ್ತಿಸುತ್ತಿರಲಿಲ್ಲ. ನನ್ನ ವೃತ್ತಿಯ ಮೊದಲ ಹಲವಾರು ವರ್ಷ ನಾನು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಗ ಇತರ ಡ್ರೈವರ್ ಗಳಂತೆ ನಾನು ಸದಾ ಜನರನ್ನು ದೂರುತ್ತಿದ್ದೆ. ಒಂದು ಬಾರಿ ವ್ಯಕ್ತಿತ್ವ ವಿಕಸನದ ತರಬೇತಿಯೊಂದರಲ್ಲಿ ವೈದ್ಯರೊಬ್ಬರು ಮಾತನಾಡಿದ್ದನ್ನು ಕೇಳಿದ ನಾನು ನನ್ನ ಗ್ರಹಿಕೆಯನ್ನು ಬದಲಾಯಿಸಿಕೊಂಡೆ.

ಮುಂಜಾನೆ ಏಳುವಾಗಲೇ ನಾನು ಏನಾಗಬೇಕೆಂದು ಬಯಸುತ್ತೇನೋ ಅದನ್ನೇ ಇಡೀ ದಿನ ಮಾಡಲು ಇಚ್ಚಿಸುತ್ತೇನೆ ಎಂದು ತೀರ್ಮಾನಿಸಿದೆ.

‘ನಾನು ಹಾಕಿದ ಫಲಕದಲ್ಲಿ ಬರೆದಿರುವಂತೆ ಬಾತುಕೋಳಿಗಳು ಸದಾ ವಟಗುಟ್ಟುತ್ತಾ ದೂರನ್ನು ಹೇಳುತ್ತವೆ. ಆದರೆ ಹದ್ದುಗಳು ಆಗಸದ ಮೇಲೆ ಹಾರಿ ಸಾಧಿಸಿ ತೋರಿಸುತ್ತವೆ ಎಂಬುದನ್ನು ಅರಿತ ನಾನು ನನ್ನನ್ನು ಹದ್ದಿನಂತೆ ಭಾವಿಸಿದೆ.

ಬೇರೆ ಕ್ಯಾಬ್ ಗಳು ಮತ್ತು ಅದರ ಡ್ರೈವರಗಳನ್ನು ನಾನು ಆಗ ಗಮನವಿಟ್ಟು ಪರಿಶೀಲಿಸಿದೆ… ಗ್ರಾಹಕ ಸ್ನೇಹಿಯಲ್ಲದ ಡ್ರೈವರ್ ಗಳ ವರ್ತನೆ, ಸ್ವಚ್ಛವಿಲ್ಲದ ಕ್ಯಾಬ್ ಗಳು, ವೃತ್ತಿಪರತೆ ಇಲ್ಲದ ನಡೆ ನುಡಿಗಳು ಗ್ರಾಹಕರಲ್ಲಿ ಬೇಸರವನ್ನು ಉಂಟು ಮಾಡುತ್ತವೆ ಎಂಬುದನ್ನು ಗಮನಿಸಿದ ನಾನು ಸಂಪೂರ್ಣವಾಗಿ ನನ್ನ ಮತ್ತು ನನ್ನ ವಾಹನದಲ್ಲಿ ಮಾರ್ಪಾಡುಗಳನ್ನು ತಂದೆ.

ಮೊದಲ ವರ್ಷದಲ್ಲಿ ನನ್ನ ವಾಹನ ಮತ್ತು ನನ್ನ ಶಿಸ್ತಿನ ನಡೆ ನುಡಿಗಳನ್ನು ಕಂಡುಕೊಂಡ ಜನ ನನ್ನೊಂದಿಗೆ ಪಯಣಿಸಲು ಇಚ್ಚಿಸಿದ ಪರಿಣಾಮವಾಗಿ ನನ್ನ ಮೊದಲ ವರ್ಷದ ವರಮಾನ ದುಪ್ಪಟ್ಟಾಯಿತು.

ಇದೀಗ ಎರಡನೇ ವರ್ಷದಲ್ಲಿ ನನ್ನ ವರಮಾನ ಮೂರು ಪಟ್ಟು ಹೆಚ್ಚಾಗಿದೆ. ಬಹಳಷ್ಟು ಬಾರಿ ನಾನು ಕ್ಯಾಬ್ ಸ್ಟ್ಯಾಂಡ್ ನಲ್ಲಿ ಗ್ರಾಹಕರಿಗಾಗಿ ಕಾಯುವ ಪರಿಸ್ಥಿತಿ ಬರುವುದೇ ಇಲ್ಲ… ನನ್ನ ಗ್ರಾಹಕರು ಖುದ್ದಾಗಿ ನನ್ನನ್ನು ಮೊಬೈಲ್ ನಲ್ಲಿ ಸಂಪರ್ಕಿಸಿ ಮುಂಗಡ ಬುಕಿಂಗ್ ಮಾಡಿಕೊಳ್ಳುತ್ತಾರೆ. ಇದೀಗ ನನ್ನಂತಹದೇ ಮನಸ್ಥಿತಿಯನ್ನು ಹೊಂದಿರುವ ನನ್ನ ಹಲವಾರು ಸ್ನೇಹಿತರು ನನ್ನೊಂದಿಗೆ ಕೈಜೋಡಿಸಿದ್ದು ಈಗಲ್ ಎಂಬ ಹೆಸರಿನ ಗುಂಪನ್ನು ನಾವು ಹೊಂದಿದ್ದು ಒಳ್ಳೆಯ ಗ್ರಾಹಕ ಸ್ನೇಹಿ ವಾತಾವರಣವನ್ನು ನೀಡುವ ಟ್ಯಾಕ್ಸಿ ಸರ್ವಿಸ್ ಸಂಸ್ಥೆಯನ್ನು ನೋಂದಣಿ ಮಾಡಿಸಿದ್ದೇವೆ.
ಇದೀಗ ನಾವು ಬಾತುಕೋಳಿಯಂತೆ ವಟಗುಟ್ಟದೇ
ಹದ್ದಿನ ಹಾಗೆ ಮೋಡದ ಮೇಲೆ ಹಾರುವುದನ್ನು ಕಲಿತಿದ್ದೇವೆ. ಹೀಗೆ ತನ್ನ ಸದ್ವರ್ತನೆಯಿಂದ, ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡು ವೈಯಕ್ತಿಕವಾಗಿ ತಾನು ಪ್ರಗತಿ ಹೊಂದಿದ್ದಲ್ಲದೆ, ತನ್ನ ಸಮಾನ ಮನಸ್ಕ ಸ್ನೇಹಿತರ ಶ್ರೇಯೋ ಭಿವೃದ್ಧಿಗಾಗಿ ದುಡಿಯುತ್ತಿರುವ ಆ ವೃತ್ತಿಪರ ಕ್ಯಾಬ್ ಡ್ರೈವರ್ ಯಾವುದೇ ಮ್ಯಾನೇಜ್ಮೆಂಟ್ ತರಬೇತಿ ಇಲ್ಲದೆ ತನ್ನ ವೈಯಕ್ತಿಕ ಶ್ರದ್ಧೆ ತಾಳ್ಮೆ ಮತ್ತು ಶಿಸ್ತಿನ ಜೀವನ ಶೈಲಿಯ ಮೂಲಕ ಉದ್ಯಮ ನಿರ್ವಹಣೆಯ ಪಾಠವನ್ನು ಕಲಿಸಿದನು.

ಹೀಗೆ ಟ್ಯಾಕ್ಸಿ ಡ್ರೈವರ್, ಟೀಚರ್, ಸರಕಾರಿ ನೌಕರ, ರಾಜಕಾರಣಿ ಯಾವುದೇ ಕಂಪನಿಯ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿರಲಿ ಇಲ್ಲವೇ ಖಾಸಗಿ ಸಂಸ್ಥೆಯ ನೌಕರರಾಗಿರಲಿ ನಮ್ಮ ನಡವಳಿಕೆಗಳು ನಮ್ಮ ವ್ಯಕ್ತಿತ್ವದ ಕೈಗನ್ನಡಿಗಳಾಗಿರುತ್ತವೆ. ಸದಾ ವ್ಯವಸ್ಥೆಯನ್ನು ದೂರುತ್ತಾ ವ್ಯವಸ್ಥೆಯ ಭಾಗವಾಗುವುದರ ಬದಲು ನಮ್ಮ ವೈಯುಕ್ತಿಕ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ನಾವು ಸಾಕಷ್ಟು ಸಾಮಾಜಿಕ ಬದಲಾವಣೆಗೆ ಕಾರಣರಾಗಬಹುದು.

ನಮ್ಮ ಒಳ ಮನಕ್ಕೆ ಹಾಕಿದ ಪೂರ್ವಾಗ್ರಹದ ಕೀಲಿ ಕೈ ನಮ್ಮ ಬಳಿಯಲ್ಲಿಯೇ ಇರುತ್ತದೆ… ತೆರೆಯಬೇಕಾಗಿರುವುದು ನಾವೇ. ಬದಲಾವಣೆಗೆ ಅತ್ಯಂತ ಕಡಿಮೆ ಸಮಯ ತಗಲುತ್ತದೆ. ಮನಸ್ಸು ಮಾಡಬೇಕಷ್ಟೇ

ನಾವು ಈ ಹಿಂದೆ ಮಾಡಿದ ತಪ್ಪುಗಳನ್ನು ಸುಧಾರಿಸಿಕೊಂಡು ನಮ್ಮನ್ನು ನಾವು ತಿದ್ದಿಕೊಂಡರೆ ನಾವು ಈಗ ಇರುವುದಕ್ಕಿಂತ

ಒಳ್ಳೆಯ ಪಾಲಕರಾಗಬಹುದು,
ಒಳ್ಳೆಯ ತಂದೆಯಾಗಬಹುದು
ಒಳ್ಳೆಯ ತಾಯಿಯಾಗಬಹುದು
ಒಳ್ಳೆಯ ಹೆಂಡತಿಯಾಗಬಹುದು
ಒಳ್ಳೆಯ ಮಕ್ಕಳಾಗಬಹುದು
ಒಳ್ಳೆಯ ಸ್ನೇಹಿತರಾಗಬಹುದು
ಒಳ್ಳೆಯ ಸಹೋದ್ಯೋಗಿ ಗಳಾಗಬಹುದು

ಹೆಚ್ಚು ಹೆಚ್ಚು ಪ್ರಾರ್ಥಿಸುವ ಮೂಲಕ, ಬೇರೆಯವರನ್ನು ಅವರ ಉತ್ತಮ ಕಾರ್ಯಗಳಿಗೆ ಪ್ರಶಂಶಿಸುವ ಮೂಲಕ, ಧನ್ಯವಾದಗಳನ್ನು ಅರ್ಪಿಸುವ ಮೂಲಕ ನಾವು ಮತ್ತಷ್ಟು ಪ್ರಬುದ್ಧತೆಯನ್ನು ಹೊಂದಬೇಕು. ಒಳ್ಳೆಯ ಎಲ್ಲಾ ವಸ್ತು ವಿಷಯಗಳನ್ನು ನಮ್ಮ ಬದುಕಿನಲ್ಲಿ ಹೊಂದುವ ಮೂಲಕ ಬದುಕನ್ನು ಪ್ರಗತಿಯ ದಿಶೆಯಲ್ಲಿ ಕೊಂಡೊಯ್ಯಬೇಕು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *