ಬಸವಣ್ಣ ನಿಮ್ಮಂಗದಾಚಾರವ ಕಂಡು.
– ಸಾಕ್ಷಿ ಎಸ್.ಸತ್ಯಂಪೇಟೆ. ಕಲಬುರಗಿ.
ಬಸವಣ್ಣಾ! ನಿಮ್ಮಂಗದಾಚಾರವ ಕಂಡು ಎನಗೆ ಲಿಂಗಸಂಗವಾಯಿತ್ತಯ್ಯ
ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮ ಸಂಬಂಧವಾಯಿತ್ತಯ್ಯ
ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತಯ್ಯ
ಚನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣ.
-ಅಕ್ಕಮಹಾದೇವಿ
೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ಅನುಭಾವದ ನುಡಿಗಳಾದ ವಚನಗಳಿಗೆ ಅದರದ್ದೇ ಆದ ವಿಶಿಷ್ಟತೆ ಮತ್ತು ಮಹತ್ವವಿದೆ. ಮಾತುಕೊಟ್ಟಂತಿರುವ, ಪ್ರಮಾಣ ಮಾಡಿದಂತಿರುವ ಈ ವಚನಗಳನ್ನು ನಿರ್ವಚನ ಮಾಡುವುದು ಎಂದರೆ ಕುರುಡನೊಬ್ಬ ಆನೆಯನ್ನು ವರ್ಣಿಸಿದಂತಾಗುತ್ತದೆ.
ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಸವಣ್ಣನವರ ಕತೃತ್ವ ಶಕ್ತಿ ಏನು? ಎಂಥದು? ಎಂಬುದನ್ನು ನಾವಿಂದು ಮೆಲುಕು ಹಾಕಬೇಕಿದೆ. ಬಸವಣ್ಣನವರ ವ್ಯಕ್ತಿತ್ವ ಜಗದಗಲ ಮುಗಿಲಗಲ, ಮಿಗೆಯಗಲವಾದದ್ದು. ಅವರು ನಿರ್ಗುಣ, ನಿರಾಕಾರ ಪರಮಾತ್ಮನ ಸಾಕಾರ ರೂಪವಾಗಿಯೇ ಧರೆಗೆ ಬಂದ ಮಹಾನುಭಾವರು. ಅದಕ್ಕಾಗಿಯೇ ಶರಣರು “ಬಸವಣ್ಣನವರಿಂದ ಬದುಕಿತ್ತು ಈ ಲೋಕ” ಎಂದು ಕರೆದಿದ್ದಾರೆ.
ಬಸವಣ್ಣನವರ ಇನ್ನೊಂದು ವಿಶೇಷವೇನೆಂದರೆ ಅವರು ತಾವೊಬ್ಬರೇ ದಾರ್ಶನಿಕರಾಗಲಿಲ್ಲ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನು ಆ ಎತ್ತರಕ್ಕೆ ಏರಿಸಿದವರು.
ಬಸವಣ್ಣನವರ ಭೂಮ, ಭವ್ಯ ವ್ಯಕ್ತಿತ್ವವನ್ನು ಕುರಿತು ಬಸವಕಾಲೀನ ಶರಣ ಶರಣೆಯರ ಸಾಕ್ಷಾತ್ಕಾರದ ವಚನಗಳನ್ನು ಅದರಲ್ಲೂ ಅಕ್ಕ ಮಹಾದೇವಿಯವರ ವಚನ ನಿರ್ವಚನ ಮಾಡುವುದು ಇನ್ನೂ ಕಷ್ಟದ ಕೆಲಸ.
ಬದುಕಿನಲ್ಲಿ ಅದು ಬೇಕು ಇದು ಬೇಕು, ಅದನ್ನು ತನ್ನದಾಗಿಸಿ ಕೊಳ್ಳಬೇಕು ಎಂಬ ವಯಸ್ಸಿನಲ್ಲೇ ಅದು ತನಗೆ ಬೇಡ, ಅದನ್ನು ತೆಗೆದುಕೊಂಡು ನಾನೇನು ಮಾಡಲಿ ಎಂಬ ಉನ್ನತ ಸ್ಥಿತಿ ತಲುಪಿ, ಹಸಿವೆ ನೀನು ನಿಲ್ಲು, ತೃಷೆಯೇ ನೀನು ನಿಲ್ಲು, ಕಾಮವೇ ನೀನು ನಿಲ್ಲು ಎಂದು ಹೊರಟ ಅಕ್ಕಮಹಾದೇವಿ ಆಸೆ ತೊರೆದು, ರೋಷ ಬಿಚ್ಚಿಟ್ಟು ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದವಳು.
ಚನ್ನಮಲ್ಲಿಕಾರ್ಜುನನೆಂಬ ತನ್ನ ಮನದ ನಲ್ಲನನ್ನು ಹುಡುಕುವ ದಾರಿಯಲ್ಲಿ ಬಸವನೆಂಬ ಬಳ್ಳಿಯನ್ನು ಕಾಲಿಗೆ ತಾಗಿಸಿಕೊಂಡು ಶರಣರ ಅನುಭವ ಮಂಟಪದಲ್ಲಿ ಮಾಗಿ ಉರಿಯುಂಡ ಕರ್ಪುರವಾಗಿ ಬೆಳಗಿದವಳು.
ಬಸವಣ್ಣಾ! ನಿಮ್ಮಂಗದಾಚಾರವ ಕಂಡು ಎಂಬ ಸಾಲುಗಳಿಂದ ಆರಂಭವಾಗುವ ಅಕ್ಕಮಹಾದೇವಿಯವರ ಈ ವಚನ ಬಸವಣ್ಣನವರಿಂದ ತಾನು ಏನೇನು ಪಡೆದೆ ಎಂಬುದನ್ನು ಹೇಳುವ ಮೂಲಕ ಧನ್ಯತೆಯನ್ನು ವ್ಯಕ್ತಪಡಿಸುವುದಾಗಿದೆ.
ಅಂಗ ಎಂದರೆ ಕೇವಲ ಕಣ್ಣು, ಕಿವಿ, ಮೂಗು, ಕೈ ಕಾಲುಗಳ ದೇಹ ರಚನೆಯಲ್ಲ. ಅಲ್ಲಿ ಆತ್ಮ ಅಡಗಿರುತ್ತದೆ. ಅದು ಪರಶಿವನ ನೆಲೆಯೂ ಹೌದು. ಆಚಾರವೆಂದರೆ ಲಿಂಗ. ಲಿಂಗ ವೆಂದರೆ ಅರಿವು, ಜ್ಞಾನ ಎಂದರ್ಥ. ನಡೆ ನುಡಿ ಒಂದಾಗಿ ನಮ್ಮನ್ನೆಲ್ಲ ಲಿಂಗದೆಡೆಗೆ ಕರೆದೊಯ್ಯುವ ಪರಿ. ಎಲ್ಲರಲ್ಲಿ ಕೂಡಲಸಂಗಮದೇವರನ್ನು ಕಾಣುವ ನಿಮ್ಮ ವಿಶಾಲ ಹೃದಯ, ನಯ ವಿನಯ ಕಂಡು ಎನಗೆ ಲಿಂಗ ಸಂಗವಾಯಿತ್ತು ಎಂದು ಅಕ್ಕ ಹೇಳುತ್ತಾರೆ.
ಜ್ಞಾನ ಎಂಬುದು ಬೆಳಕಿನ ಸಂಕೇತ. ಸುಜ್ಞಾನ ಎಂದರೆ ಒಳ್ಳೆಯ ಜ್ಞಾನ ಎಂದರ್ಥ. ಲಿಂಗವೇ ಜಂಗಮ, ಜಂಗಮವೇ ಲಿಂಗ. ಜಂಗಮ ಎಂದರೆ ಅರಿವು, ಚೈತನ್ಯ, ಚಲನಶೀಲ. ಇನ್ನೂ ವಿಶಾಲರ್ಥದಲ್ಲಿ ಹೇಳಬೇಕಾದರೆ ಜಂಗಮ ಎಂದರೆ ಸಮಾಜ. ನಿಮ್ಮ ನಿಜ ಜ್ಞಾನ ಹಾಗೂ ಸುಜ್ಞಾನ ನನಗೆ ಜಂಗಮದ (ಸಮಾಜ) ಜೊತೆ ಸಂಬಂಧ ಬೆಳೆಸುವಂತಾಯಿತು ಎಂದು ಇಲ್ಲಿ ಹೇಳುತ್ತಾರೆ.
ಭಕ್ತಿ ಎನ್ನುವುದು ತೋರುಂಬುವ ಲಾಭವಲ್ಲ. ಅದು ಮನಸ್ಸು ಹಾಗೂ ಭಾವನೆಗೆ ಸಂಬಂಧಿಸಿದ್ದು, ಸದ್ಭಕ್ತಿ ಎಂದರೆ ದೋಷವಿಲ್ಲದ, ನಿಷ್ಥಾಯುಕ್ತವಾದುದು ಎಂದರ್ಥ. ಇನ್ನೂ ಮುಂದೆ ಹೋಗಿ ಹೇಳುವುದಾದರೆ ಅನನ್ಯವಾದ ಪ್ರೇಮ, ಸಕಲಜೀವಿಗಳನ್ನು ತನ್ನಂತೆ ಪ್ರೀತಿಸುವ ಭಾವ ಎಂದು ಕರೆಯಬಹುದು. ನಾನು ಯಾರು? ಭಕ್ತನಾಗಿರುವ ನಾನು ಚನ್ನಮಲ್ಲಿಕಾರ್ಜುನನನ್ನು ಒಲಿಸಿಕೊಳ್ಳಬೇಕಾದ ಸುಜ್ಞಾನ ನೀಡಿದ ಮುಕ್ತದಾತ ನೀನು ಎಂದು ಅಕ್ಕ ಹೇಳುತ್ತಾರೆ.
ಉತ್ಪತ್ತಿ, ಸ್ಥಿತಿ, ಲಯ ನಾಮ, ರೂಪ ಕ್ರಿಯೆಗಳಿಲ್ಲದ ಪರ ವಸ್ತುವಿಗೆ ಲಿಂಗ ಎಂದು ಹೆಸರಿಟ್ಟು ತನಗೊಂದು ಆಧಾರವಿಲ್ಲದೆ ಎಲ್ಲಕ್ಕೂ ಆಧಾರವಾಗಿರುವ ಲಿಂಗಕ್ಕೆ ಬೇರೆ ಬೇರೆ ಹೆಸರಿನಿಂದ ಕರೆದರು. ಆದರೆ ನೀವು ಮಾತ್ರ ಪರವಸ್ತು, ಪರಬ್ರಹ್ಮ, ಪರಶಿವ, ಬಯಲು, ಶೂನ್ಯ ಎಂದು ಕರೆದು ನಮಗೆಲ್ಲರಿಗೂ ವಿಳಾಸವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎಂದು ಬಸವಣ್ಣನವರ ವ್ಯಕ್ತಿತ್ವನ್ನು ಹಾಡಿ ಕೊಂಡಾಡಿದ್ದಾರೆ.
– ಸಾಕ್ಷಿ ಶಿವರಂಜನ ಸತ್ಯಂಪೇಟೆ, ಕಲಬುರಗಿ,
(ಕೃಪೆ: ಅಕ್ಟೋಬರ್ 2024 ರ ‘ಶರಣ ಮಾರ್ಗ‘ ಮಾಸ ಪತ್ರಿಕೆಯಿಂದ ಆಯ್ದುಕೊಳ್ಳಲಾಗಿದೆ.)