ಭಾವೈಕ್ಯತೆ
ಭಾರತ ದೇಶದಲಿ ಜನಿಸಿಹೆವು ನಾವು
ಭಾರತೀಯರು ಎಂದು ಹೆಮ್ಮೆ ಪಡುತಿಹೆವು
ಭಾವೈಕ್ಯತೆಯ ಸಾರಿ ಒಗ್ಗಟ್ಟಿನಲಿ ಕೂಡಿ
ಭಾರತಾಂಬೆಯ ಪಾದಗಳಿಗೆ ಎರಗುವೆವು.
ಧರ್ಮದ ವಿಷಬೀಜ ಎಲ್ಲೆಡೆ ಹರಡಿ
ಮೊಳಕೆಯೊಡೆದು ಹೆಮ್ಮರವಾಗುವ ಮುನ್ನ
ಬುಡದಿಂದ ಕತ್ತರಿಸಿ ಎಲ್ಲರ ಮನದಲ್ಲಿ
ಐಕ್ಯತೆಯ ಬೀಜವನು ಬಿತ್ತೋಣವಣ್ಣ.
ಹಬ್ಬಗಳಿಗೇಕೆ ಜಾತಿ ಧರ್ಮದ ಸೀಮೆ?
ಎಲ್ಲರೂ ಒಂದಾಗಿ ಆಚರಿಸುವುದೆ ಹಿರಿಮೆ
ಜಾತಿ ಮತ ಪಂಥಗಳ ಭೇದಭಾವವ ತೊರೆದು
ದೇಶಸೇವೆಯ ಮಾಡುವುದೆ ನಮಗೆ ಹೆಮ್ಮೆ.
ನೆಲ ಜಲವು ಒಂದೇ ಇರುತಿರಲು ಎಮಗೆ
ಜಾತಿ ಧರ್ಮದ ಗೋಡೆ ಏತಕೆ ಬೇಕು?
ಇರುವುದೊಂದೇ ಧರ್ಮ ಅದುವೆ ಮಾನವ ಧರ್ಮ
ಎಂಬುದನು ಎಲ್ಲರೂ ಅರಿತರೆ ಸಾಕು.
ವಿಶ್ವದಲೆ ಶ್ರೇಷ್ಠವು ಅದುವೆ ಭಾರತವು
ಎಂದುಲಿಯುತ ನಾವು ಸಂಭ್ರಮಿಸುತಿಹೆವು
‘ಭಾರತ ಮಾತೆಗೆ ಜಯವಾಗಲಿ’ ಎನುತ
ಎಲ್ಲರೂ ಒಕ್ಕೊರಲಿನಿಂದ ಹಾಡುವೆವು.
ಜಿ.ಎಸ್.ಗಾಯತ್ರಿ.
ಶಿಕ್ಷಕಿ
ಬಾಪೂಜಿ ಶಾಲೆ
ಹರಿಹರ.