Oplus_131072

ಧೀರ ಸನ್ಯಾಸಿ

 

-ಡಾ ಅನ್ನಪೂರ್ಣ ಹಿರೇಮಠ, ಬೆಳಗಾವಿ.

 

ಜನೆವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ನಿಮಿತ್ತವಾಗಿ ಈ ಲೇಖನ ಪ್ರಕಟಿಸಲಾಗಿದೆ.- ಸಂ.

 

ಈ ಭೂಮಿಯ ಮೇಲೆ ಸ್ವಾಮಿ, ಸಾಧು ,ಸಂತರು, ಶರಣರು, ಸಮಾಜ ಸುಧಾರಕರು, ತಪಸ್ವಿಗಳು ,ಸಿದ್ದರು ,ಸಾಧಕರು ಆಗಿ ಹೋಗಿದ್ದಾರೆ. ಧರೆಯಿದು ಪುಣ್ಯದ ಬಿಡು, ಸಂತಸದ ನೆಲೆ, ನೆಮ್ಮದಿಯ ತಾನ, ಎಲ್ಲವನ್ನೂ ಕೊಟ್ಟು ಸಲುಹುವ ಭೂತಾಯಿ ನಮ್ಮ ಭೂಮಿತಾಯಿ ಈ ನೆಲದ ಮೇಲೆ ಸಾಮ್ರಾಜ್ಯಗಳನ್ನು ಕಟ್ಟಿ ಆಳಿ ಹೋಗಿದ್ದಾರೆ, ಅಳಿದೂ ಹೋಗಿದ್ದಾರೆ. ಇಂತಿರುವ ಈ ಭರತ ಕಂಡ ಜಗತ್ತಿನಲ್ಲಿಯೇ ಹೆಸರಾದ ಪುಣ್ಯದ ಬೀಡಾಗಿದೆ. ಪರದೇಶಿಯರು ದೇಹಕ್ಕೆ ಮಹತ್ವ ಕೊಟ್ಟರೆ, ಭಾರತೀಯರು ಆತ್ಮಕ್ಕೆ ಮಹತ್ವ ಕೊಟ್ಟಿದ್ದಾರೆ .ಆತ್ಮಶುದ್ಧಿಯೇ ಪರಮಾತ್ಮನ ಕಾಣುವ ದಾರಿ ಎಂದು ನಂಬಿಕೆ ಇಟ್ಟವರು ಭಾರತೀಯರು.

ಸತ್ಯ ಸಂದತೆ ,ಕಾರ್ಯತತ್ಪರ್ತೆಯಲ್ಲಿ ದೇವರನ್ನು ಕಂಡವರು ಭಾರತೀಯರು. ಶಾಂತಿ, ಸಹನೆ, ಸದ್ಭಾವದಲಿ ಜೀವನ ಪಾವನ ಮಾಡಿಕೊಂಡವರು. *ಸಂಭವಾಮಿ ಯುಗೇ ಯುಗೇ* ಎಂದು ಶ್ರೀ ಕೃಷ್ಣ ಹೇಳಿದಂತೆ ,ಯಾವಾಗ ಭೂಮಿಯ ಮೇಲೆ ಪಾಪ ಹೆಚ್ಚಾಗುವುದೊ, ಜಗದ ನೆಮ್ಮದಿ ಹಾಳಾಗುವುದೊ, ದುಷ್ಟರ ದರ್ಪ ಹೆಚ್ಚಾಗುವುದೊ ಆವಾಗ ನಾನು ಜನಿಸಿ ಬರುವೆ .ಜಗದುದ್ಧಾರವೇ ನನ್ನ ಆದ್ಯ ಕರ್ತವ್ಯ ಎಂದಿರುವಂತೆ ಮಹಾಪುರುಷರು ದೇವನೆ ಧರೆಗಿಳಿದಂತೆ” ಸತ್ಕಾರ್ಯ ಕಾರನೇನೆ ಜನನಂ ಸತ್ಪುರುಷರ ಜನನ,”, ಎನ್ನುವಂತೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆ ಇದೆ. ಆ ನಂಬಿಕೆಯೇ ನಮ್ಮನ್ನು ಒಳ್ಳೆಯ ದಾರಿ ಹಿಡಿಸುವಲ್ಲಿ ಸಹಾಯ ಮಾಡುತ್ತದೆ. “ಸತ್ಯಮೇವ ಜಯತೆ” ಸತ್ಯಕ್ಕೆ ಎಂದೆಂದಿಗೂ ಗೆಲುವು ಕಟ್ಟಿಟ್ಟ ಬುತ್ತಿ .ಅಸತ್ಯದ ಹಾರಾಟ ಎಷ್ಟೇ ಜೋರಾಗಿದ್ದರು ಅದು ದೀಪದ ಹುಳುವಿನಂತೆ, ಕೊನೆಗೆ ಸತ್ಯವೇ ಗೆಲ್ಲುವುದು.

ಈ ಭುವಿ ಬೆಳಗಲು ಹುಟ್ಟಿ ಬಂದವರಲ್ಲಿ ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಒಬ್ಬರು ವಿವೇಕಾನಂದರೇಂದರೇನೇ ಪ್ರಭೇ, ವಿವೇಕಾನಂದರೆ ಜ್ಞಾನ, ಬುದ್ಧಿ, ತಿಳುವಳಿಕೆಯ ಶಿಖರವೇ ಆಗಿ ನಿಂತಂತ ಧೀಮಂತ ನಾಯಕ. ಭಾರತೀಯರ ಹೆಮ್ಮೆಯ ಪುತ್ರ. ಯುಗ ಬೆಳಗಲು ಬಂದವನು ಎಂದರೆ ತಪ್ಪಾಗಲಾರದು. ಪೂರ್ಣತೆಯೆಡೆಗೆ ದಾರಿಯಷ್ಟೇ ಅಲ್ಲ, ಪೂರ್ಣತೆಯ ತಲುಪಿದ ಅಪರೂಪದ ವ್ಯಕ್ತಿ ವಿವೇಕಾನಂದರು.

ಬೆಳಕಿನ ಪ್ರಭೆಯನ್ನೆ ಹೊತ್ತು ತಂದ ಭುವನೇಶ್ವರಿಯ ಗರ್ಭಸಂಜಾತನಾಗಿ ಸವಿಗಳಿಗೆಯಲಿ 1863ರ ಜನವರಿ 12ರ ಬೆಳಗಿನ ಆರು ಗಂಟೆ 33 ನಿಮಿಷಕ್ಕೆ ಸರಿಯಾಗಿ ಹೊಳೆಯುವ ಮುತ್ತಂತೆ ಹುಟ್ಟಿದ ನರೇಂದ್ರ, ಭುವನೇಶ್ವರಿದೇವಿ ವಿಶ್ವನಾಥದತ್ತರ ಮಗನಾಗಿ ಸಂಪನ್ನತೆಯ ಸಾಕಾರ ಮೂರ್ತಿಯಂತೆ, ಆಧ್ಯಾತ್ಮಿಕತೆಯ ಮೇರುವಿನಂತೆ . ದೈವಭಕ್ತೆ ದೇವ ಪೂಜೆ ಮಾಡುವ ಹದುಳ ಹೃದಯದ ತಾಯಿ ತೊಡೆಯಲಿ ನಲಿಯುವ ನಂದನದ ಕಂದನಾಗಿ ಹುಟ್ಟಿ ಬಂದ ವಿವೇಕಾನಂದ. ಇವನಿಗೆ ಇಟ್ಟ ಹೆಸರು ನರೇಂದ್ರ. ತುಂಬು ಕುಟುಂಬದಲ್ಲಿ ಸುಸಂಸ್ಕೃತ ಮನೆತನದಲ್ಲಿ ತುಂಟ ಕೃಷ್ಣನಂತೆ ಬಾಲಲೀಲೆಗಳ ಗೈಯುತ ಬೆಳೆಯತೊಡಗಿದ. ನರೇಂದ್ರನಿಗೆ ತಾಯಿಯಿಂದ ದೈವ ಭಕ್ತಿ, ತಂದೆಯಿಂದ ಶಿಸ್ತು ಮೈಗೂಡಿತು . ವಿಶ್ವನಾಥದತ್ತರು ಖ್ಯಾತ ವಕೀಲರು ಅವರ ತಂದೆಯೂ ಕೂಡ ಅಂದರೆ ವಿಶ್ವನಾಥ ದತ್ತರ ತಂದೆಯೂ ವಕೀಲರೇ ಆಗಿದ್ದರು.

ನರೇಂದ್ರನ ತುಂಟಾಟ ತಾಯಿಗೆ ಬೇಸರ ತಂದಿತ್ತು.ತಾಯಿಯ ಕೈಗೆ ಸಿಗದಷ್ಟು ಗದ್ದಲ, ಗಲಾಟೆ, ಹಠ ಮಾಡುತ್ತಿದ್ದುದಕ್ಕೆ ಭುವನೇಶ್ವರಿದೇವಿ ತನ್ನ ಕೆಲಸಕ್ಕೆ ಅಡ್ಡಿ ಬರದಂತೆ ಹಗ್ಗದಿಂದ ನರೇಂದ್ರನನ್ನು ಕಟ್ಟಿಹಾಕಿ ಕೆಲಸಗಳನ್ನು ಮಾಡುತ್ತಿದ್ದಳಂತೆ. ಹೀಗೆ ಒಂದು ಸಲ ವಿಚಿತ್ರ ಪ್ರಸಂಗ ಮೊದಲಿನ ಕಾಲದಲ್ಲಿ ರಾಮಾಯಣ, ಮಹಾಭಾರತ ದೃಶ್ಯಗಳನ್ನು ಮನೆ ಬಾಗಿಲಿಗೆ ಬಂದು ನಾಟಕ ರೂಪದಲ್ಲಿ ಮಾಡಿ ಜನರಿಗೆ ನಮ್ಮ ಧರ್ಮಗ್ರಂಥಗಳ ಪರಿಚಯ ಮಾಡಿಸುತ್ತಿದ್ದರು. ಅಂತವರಲ್ಲಿ ಸಾರುವ ಸಂತರು, ಬಯಲು ನಾಟಕಕಾರರು,ಜಾತಿಗ್ಯಾರರು ಈ ರೀತಿ ವಿವಿಧ ವೇಷಧಾರಿಗಳಾಗಿ ಮನೆ ಮನೆಗೆ ಬಂದು ದೃಷ್ಟಾಂತಗಳ ಮೂಲಕ ಧರ್ಮಗ್ರಂಥಗಳ ಬಗ್ಗೆ ಮನಮುಟ್ಟುವಂತೆ ಹೇಳುತ್ತಿದ್ದರು. ಅಂತಹದ್ದೇ ಒಂದು ಸಂದರ್ಭ ಯಾರೊ ಸಂತರು ನರೇಂದ್ರರ ಮನೆ ಬಾಗಿಲಿಗೆ ಬಂದಿರುತ್ತಾರೆ, ಭುವನೇಶ್ವರಿದೇವಿ ಅವರ ಶ್ಲೋಗಳನ್ನು ಕೇಳುತ್ತಿರುತ್ತಾಳೆ. ನರೇಂದ್ರನನ್ನು ಕೂಡುಹಾಕಿ ಕಿಟಲೆ ಮಾಡುತ್ತಾನೆಂದು ಕಿಟಕಿ ಒಳಗೆ ಬಟ್ಟೆ ತುರುಕಿ ಬಂದವರೊಂದಿಗೆ ಮಾತುನಾಡುತ್ತಿರುತ್ತಾಳೆ .ಅವರು ಮಹಾಭಾರತದ ಶ್ಲೋಕಗಳನ್ನು ಹೇಳುತ್ತಿರುತ್ತಾರೆ. ಒಳಗಿನಿಂದಲೇ ನರೇಂದ್ರ ಹಾಗಲ್ಲ ಅದು ಎಂದು ಕಿರುಚುತ್ತಿರುತ್ತಾನೆ .ಅಂದರೆ ಅಂತಹ ತುಂಟನಾಗಿದ್ದರೂ ಚಿಕ್ಕ ವಯಸ್ಸಿನಲ್ಲಿಯೇ ಅವನಿಗೆ ಮಹಾಭಾರತದ ಶ್ಲೋಕಗಳು ಮನನವಾಗಿದ್ದವು ಎಂದರ್ಥವೇ ಅಲ್ಲವೇ? ಇದು ಅವನ ಬುದ್ಧಿಮತ್ತೆಗೆ ಹಿಡಿದ ಕೈಗನ್ನಡಿಯಾಗಿದೆ.

ಮತ್ತೊಂದು ಪ್ರಸಂಗ ಶಾಲೆಯಲ್ಲಿ ಧ್ಯಾನಾಸಕ್ತನಾಗಿದ್ದಾಗ ತರಗತಿಯ ಕೋಣೆಯಲ್ಲಿ ಹಾವು ಬಂದಿರುತ್ತದೆ ಎಲ್ಲರೂ ಚೀರುತ್ತಾ ಭಯದಿಂದ ಓಡಿ ಹೋಗಿರುತ್ತಾರೆ,. ಆದರೆ ನರೇಂದ್ರ ವಿಚಲಿತನಾಗದೆ, ಮೈಮೇಲೆ ಹಾವು ಓಡಾಡಿದರೂ ಅಲುಗಾಡಿರಲಿಲ್ಲ ,ಎಲ್ಲರಿಗೂ ಆಶ್ಚರ್ಯ !ಅಂದರೆ ಅವನ ಏಕಾಗ್ರತೆ ಎಂತಹದ್ದು, ಧ್ಯಾನ ಎಂದರೆ ಹೀಗಿರಬೇಕು, ಎನ್ನುವುದಕ್ಕೆ ಸಾಕ್ಷಿ ವಿವೇಕಾನಂದರು. ಬಾಲ್ಯದಿಂದಲೇ ತನ್ನ ಅಂತ:ಶಕ್ತಿಯ ಪ್ರಕಾಶಿಸುವ ಅನೇಕ ಪ್ರಸಂಗಗಳಿಗೆ ನರೇಂದ್ರ ಸ್ಪಂದಿಸಿದ ರೀತಿ ಸಾಮಾನ್ಯವಾಗಿ” ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ “”ಮೂರು ವರ್ಷದ ಗುಣ, ನೂರು ವರ್ಷದವರೆಗೆ “ಎನ್ನುವ ಹಾಗೆ ಮಾವಿನ ಬೀಜದಿಂದ ಸಿಹಿ ಫಲ ಕೊಡುವ ಮಾವೆ ಬೆಳೆಯುವುದು ಎಂಬೆಲ್ಲ ಗಾದೆಗಳಂತೆ ನರೇಂದ್ರ ಬೆಳೆದು ನಿಂತ ಪರಿ ದೇವಮಾನವನೇ ಭೂಮಿಗಿಳಿದು ಬಂದಿದ್ದಾನೆ ಎನ್ನುವಂತಿತ್ತು. .ದೇವರ ಅಪರಾವತಾರ ಎಂಬಂತೆ ಎಲ್ಲಾ ಘಟನೆಗಳು ಜರುಗುತ್ತಿದ್ದವು. ವಿವೇಕಾನಂದರ ಎತ್ತರದ ನಿಲುವು, ದೃಢಕಾಯ ,ಪ್ರಸನ್ನತೆ, ಶಾಂತಚಿತ್ತತೆ ,ಹಂಬಲ ತುಂಬಿದ ಕಣ್ಣುಗಳುಳ್ಳ ವಿಶಾಲವಾದ ಮುಖ, ಅವರ ನಡೆ-ನುಡಿ, ಆಚಾರ ವಿಚಾರ, ಎಲ್ಲ ಉನ್ನತವಾದದ್ದೆ ಎಲ್ಲಾ ಪರೀಕ್ಷಕ ದೃಷ್ಟಿಯಿಂದ ನೋಡುತ್ತಿದ್ದರು ನೋಡಿದವರಿಗೆಲ್ಲ ಇಂತಹ ಮಗ, ಇಂತಹ ಅಣ್ಣ ,ತಮ್ಮ ,ಸಂಗಾತಿ, ಸ್ನೇಹಿತ ಇರಬೇಕು ಎನ್ನುವಂತೆ ಆಸೆಯಾಗುವಷ್ಟು ನರೇಂದ್ರ ಸ್ಪುರದ್ರೂಪಿಯಾಗಿದ್ದನು.

ಒಮ್ಮೆ ತಂದೆ ಸಾರೂಟನ್ನು ತೋರಿಸುತ್ತಾ ಏನಾಗಬೇಕೆಂದಿರುವೆ ನೀನು? ಎಂದು ಪ್ರಶ್ನೆ ಕೇಳುತ್ತಾರೆ. ನನ್ನಂತೆ ದೊಡ್ಡ ವಕೀಲನಾಗಬೇಕು ನೀನು ಎಂದು ಹೇಳುತ್ತಿರುತ್ತಾರೆ. ಆಗ ನರೇಂದ್ರ ತಂದೆಗೆ ಆ ಸಾರೋಟಿನ ಸಾರಥಿ ಆಗಬೇಕೆಂದಿರುವೆ ಎನ್ನುತ್ತಾನೆ .ತಂದೆಗೆ ತಾಳದ ಕೋಪ ಒಂದು ಏಟು ಕೊಟ್ಟೆ ಬಿಡುತ್ತಾರೆ. ಆದರೆ ನರೇಂದ್ರನ ನಿರ್ಧಾರ ದೃಢವಾಗಿತ್ತು. ದೈವ ಭಕ್ತಿಯ ಕುಟುಂಬವೇ ಅವರದು. ಅವರ ಅಜ್ಜ ಕೂಡ ಮದುವೆ ಮಗು ಆದಮೇಲೆ ಮನೆ ಬಿಟ್ಟು ಸನ್ಯಾಸಿಯಾಗಿ ದೇಶ ಪರಯ೯ಟನೆ ಹೋಗಿರುತ್ತಾರೆ .ಅಂತೆಯೇ ವಿವೇಕಾನಂದರು ಸನ್ಯಾಸಿಯಾಗಬಯಸಿ ಅದನ್ನೇ ಸ್ವೀಕರಿಸಿದವರು. ಸೂಕ್ತ ಗುರುವಿಗಾಗಿ ಅಲೆದವರು .ಗುರುವನ್ನೇ ಪರೀಕ್ಷೆಗೊಳಪಡಿಸಿ ಸ್ವೀಕರಿಸಿ ಸ್ವಾಮಿ ಪರಮಹಂಸರ ನಿಷ್ಠ ಶಿಷ್ಯರಾಗಿ ಜಗಕ್ಕೆ ಬೆಳಕಾದವರು .ವಿವೇಕಾನಂದರು ಉನ್ನತ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುತ್ತಾ ವಿದ್ವತ್ಪೂರ್ಣರಾಗಿ ಸಕಲವನ್ನು ತಿಳಿಯುವ ಕೌತುಕದಿಂದ ಉತ್ತಮವಾದದನೆಲ್ಲಾ ಅಳವಡಿಸಿಕೊಳ್ಳುತ ,ಸರ್ವಸಂಗ ಪರಿತ್ಯಾಗಿ ,ಧರ್ಮ ಶಿಖರವೇರಿದ ಕಳಶದಂತೆ ದೇಶ ಧರ್ಮದ ಅಭಿಮಾನದ ಮೇರುವಾಗಿ ವಿವೇಕಾನಂದರು ಮೆರೆದವರು. ಅಪಾರ ಪಾಂಡಿತ್ಯದಿಂದ ವಾಗ್ವೈಕರಿ, ಭಾವಗಳ ಹೆಣೆಯುವ ನೈಪುಣ್ಯತೆ, ಅನುಕಂಪ ,ದಯೆ ,ಸಹಾನುಭೂತಿಗಳಿಂದ ಭೂಷಣ ಪ್ರಾಯವಾಗಿದ್ದ ಸನ್ಯಾಸಿ ಇವರು. ಅಪಾರ ಪಾಂಡಿತ್ಯದಿಂದ ಉಪನ್ಯಾಸಗಳನ್ನು ನೀಡುವುದು ‌ಎಂತಹದ್ದೇ ಜಟಿಲ ಸಮಸ್ಯೆಯನ್ನು ಬಿಡಿಸುವ ಜಾಣ್ಮೆವುಳ್ಳವರಾಗಿದ್ದರು. ಅವರ ಕಾವಿ ವಸ್ತ್ರಧಾರಣೆ ,ಅವರು ನಡೆಯುವ ಗತ್ತು, ವಿವೇಕದ ಪುಸ್ತಕ ಭಂಡಾರವೇ ವಿವೇಕಾನಂದರು. ಶಕ್ತಿ ಯುಕ್ತಿ ಮೈವೆತ್ತ ಆಧ್ಯಾತ್ಮಯೋಗಿ ವಿವೇಕಾನಂದರು. ಹುಟ್ಟಿಗೆ ಅರ್ಥ ಬರಬೇಕೆಂದರೆ ಸಾಫಲ್ಯದ ಜೀವನ ಬಾಳಬೇಕು. ವ್ಯರ್ಥ ಬದುಕು ಬಾಳಲೇಬಾರದು .ಅನರ್ಥಗಳಾಗದಂತೆ ನೋಡಿಕೊಳ್ಳಬೇಕು. ಶಕ್ತಿವಂತರಾಗಿ ಬಾಳಬೇಕೆಂದರೆ ಸದೃಢಕಾಯರಾಗಬೇಕು. ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರುತ್ತದೆ. ಸದೃಢ ಮನಸ್ಸು ಮಾತ್ರ ಸತ್ಚಿಂತನೆಯಲ್ಲಿ ತೊಡಗಬಲ್ಲದು ಎಂಬ ಅಭಿಪ್ರಾಯ ವಿವೇಕಾನಂದರದು. ಅಂತೆಯೇ ಎಲ್ಲರಿಗೂ ಬದುಕಿನ ಪಾಠ ಕಲಿಸಿದವರು. ಬದುಕಲು ಕಲಿಸಿದವರು. ವಿವೇಕಾನಂದರು ಅಭಿಮಾನದ ಸಾಕಾರಮೂರ್ತಿ ,ಆತ್ಮ ಗೌರವಕ್ಕೆ ಅಪಾರ ಬೆಂಬಲ ನೀಡುವವರು. ಸಾವಿರಾರು ಉಪನ್ಯಾಸ, ಬರಹಗಳ ಮೂಲಕ ಅನೇಕ ವಿಚಾರಗಳ ಮಂಡಿಸಿ ತಿಳಿಸಿಕೊಟ್ಟವರು .ರಾಮಕೃಷ್ಣಾ ಶ್ರಮ ತೆರೆದು ಯೋಗ ,ಧ್ಯಾನ, ಸತ್ಚಿಂತನೆಗೆ ಅವಕಾಶ ಕಲ್ಪಿಸಿಕೊಟ್ಟವರು. ವಿವೇಕಾನಂದರ ವಿಚಾರಧಾರೆಗಳು ಸಾಮಾನ್ಯರಿಗೂ , ವಿದ್ವಾಂಸರಿಗೂ ಎಲ್ಲರಿಗೂ ಮಾದರಿಯೇ ಆದವುಗಳು. ಅವರ ಒಂದೊಂದು ನುಡಿ ಮೈಮನಗಳ ಜಾಡ್ಯ ಝಾಡಿಸುವಂತೆ ಮಾಡುತ್ತವೆ. “ಏಳಿರಿ ಎದ್ದೇಳಿರಿ ಗುರಿ ಮುಟ್ಟುವವರೆಗೆ ನಿಲ್ಲದಿರಿ”” ಗಟ್ಟಿಮುಟ್ಟಾದ ದೃಢ ಕಾಯವುಳ್ಳವರಾಗಿ” “ನಿಮ್ಮ ಅನ್ನ ನೀವೇ ದುಡಿದು ತಿನ್ನಿ “”ಹೇಡಿಯಾಗಿ ಬದುಕುವುದಕ್ಕಿಂತ ಬದುಕದಿರುವುದೇ ಒಳ್ಳೆಯದು” ಎಂದು ಸಾರಿ ಹೇಳಿದವರು.

ಅಂತೆಯೇ ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಭಾರತೀಯರೆಂದರೆ ಎಂತವರು, ಹಿಂದೂ ಧರ್ಮವೆಂದರೆ ಎಂತಹುದು ಎಂದು ತೋರಿಸಿಕೊಟ್ಟು ಗುಡುಗಿದವರು. ಮಾತಾಡಿದರೆ ಕೇಳುಗರು ಮಂತ್ರಮುಗ್ದರಾಗಬೇಕು ಅಂತಹ ವಾಣಿಗಳನ್ನೇ ಆಡುವವರು. ಅತೀ ಕಡಿಮೆ ವಯಸ್ಸು ಜೀವಿಸಿ ಪ್ರಪಂಚ ಇರುವವರಿಗೆ ಅಮರರಾಗಿರುವಂತಹ ಸಾಧನೆ ಮಾಡಿ ಹೋದವರು .ಜಗತ್ತಿಗೆ ಮಾದರಿಯಾಗುವಂತಹ ಬಾಳು ಬಾಳಿದವರು. ಹೇಡಿಯಾಗಿ ನೂರು ವರ್ಷ ಬಾಳುವದಕ್ಕಿಂತ ಶೂರನಾಗಿ ಮೂರೇ ವರ್ಷ ಬಾಳಿದರೆ ಸಾಕು ಎಂದು ನಮ್ಮಜ್ಜಿ ಹೇಳುತ್ತಿದ್ದಂತೆ, ಇಲಿಯಾಗಿ ನೂರು ವರ್ಷ ಬಾಳಲು ಬೇಡ ಹುಲಿಯಾಗಿ ಮೂರೇ ದಿನ ಬದುಕಿದರೂ ಜೀವನ ಸಾರ್ಥಕ “ಎಂಬ ಮಾತಿಗೆ ತಕ್ಕಂತೆ ಬಾಳಿದವರು .ವಿವೇಕಾನಂದರು ಅಪಾರವಾದ ದೇಶಪ್ರೇಮ, ಉತ್ಕಟವಾದ ಜ್ಞಾನಕ್ಕಾಗಿ ಬಳಲಿದವರು. ಜಗದುದ್ಧಾರಕ್ಕಾಗಿ ದೇಶ ಸಂಚಾರ ಮಾಡಿದವರು. ವಿದ್ವತ್ಪೂರ್ಣ ಭಾಷಣಗಳಿಂದ ಜಗತ್ ವಿಖ್ಯಾತ ಪಡೆದವರು. ಜ್ಞಾನಿಯಾಗಿ ಶ್ರೇಷ್ಠ ಭಾರತೀಯನಾಗಿ ನೆಲೆ ನಿಂತವರು ವಿವೇಕಾನಂದರು.

ಭವ್ಯ ಭಾರತದ ದಿವ್ಯತೆಗಾಗಿ ,ಉದ್ಧಾರಕ್ಕಾಗಿ ಮಾಡಬೇಕಾದ ಅನೇಕ ಕರ್ತವ್ಯಗಳನ್ನು ಮಾಡಿ ಮಾದರಿಯಾದವರು. ಜನಮನಗಳನ್ನು ಬಡಿದೆಬ್ಬಿಸಿದವರು. ವೀರರೆ ಏಳಿ ಕೆಚ್ಚೆದೆಯ ಕಲಿಗಳಾಗಿ, ನಿಮ್ಮ ನರನಾಡಿಗಳು ಕಬ್ಬಿಣದ ಸರಳಗಳಂತಾಗಲಿ, ನಿರಂತರ ಕಾಯಕದಿಂದ ಶ್ರೇಷ್ಠನಾಗು, ದೇಶಕ್ಕಾಗಿ ಏನಾದರು ಕೊಡುಗೆ ಕೊಟ್ಟೆ ಹೋಗು ಇಲ್ಲದಿದ್ದರೆ ಬಾಳು ನಿರರ್ಥಕ. ನಿನ್ನಲ್ಲಡಗಿದ ದಿವ್ಯಶಕ್ತಿಗೆ ಪ್ರೇರಣೆ ಕೊಡು ಯಾರೂ ಇಲ್ಲಿ ಬುದ್ಧಿಹೀನರಾಗಿ ಹುಟ್ಟಿಲ್ಲ ,ಹೇಡಿಗಳನ್ನು ಭರತ ಮಾತೇ ಎಂದೂ ಹೆರಳು . ಪ್ರತಿಯೊಬ್ಬರಲ್ಲೂ ಅದ್ಭುತವಾದದ್ದು ಅಡಗಿದೆ ಅದನ್ನು ಹೊರ ಹಾಕುವ ಕೌಶಲ್ಯ ನೀನೆ ಬೆಳೆಸಿಕೊಳ್ಳು. ನಿನ್ನಂತರಾಳವ ಒಳಹೊಕ್ಕು ನೋಡು, ಶಾಂತವಾಗಿ ವಿಚಾರಿಸು, ಕಲಕಿದ ನೀರು ತಿಳಿಯಾಗಿ ಪ್ರತಿಬಿಂಬ ಕಾಣುವಂತೆ,ಶಾಂತ ಮನಸ್ಸು ತಿಳಿಯಾದಾಗ ನಿನ್ನ ಶಕ್ತಿ ಸಾಮರ್ಥ್ಯದ ಅರಿವು ನಿನಗಾಗುವುದು. ಹೆತ್ತ ತಾಯಿಯ, ಹೊತ್ತ ಭೂಮಿಯ ಋಣ ತೀರಿಸದೇ ಹೋಗದಿರು. ದಿವ್ಯ ಶಕ್ತಿಯ ಪ್ರಜ್ವಲಿಸಲು ಅರಿವಿನ ಜ್ಯೋತಿ ಮುಟ್ಟಿಸಬೇಕು ಎಂಬೆಲ್ಲ ಹೊನ್ನನುಡಿಗಳನ್ನು ನಮಗೆ ಕೊಟ್ಟು ಅಮರರಾಗಿದ್ದಾರೆ .ಅವರ ನುಡಿಗಳೆಂದರೆ ವೇದ ಘೋಷಗಳು ಮೊಳಗಿದಂತೆ ಸರಿ. ಗಂಟೆ ಶಬ್ಧದಂತೆ ಅವರ ನುಡಿಗಳು ಮನಸ್ಸಿಗೆ ನಾಟುತ್ತವೆ. ಗುಡುಗಿನ ನಂತರ ಮಿಂಚು ಹೊಳೆವಂತೆ ಅವರ ಮಾತು ಮುಗಿದ ಮೇಲೆ ನಮ್ಮೊಳಗೊಂದು ಶಕ್ತಿಯ ಸಂಚಲನ, ಪ್ರೇರಣೆಯ ಮಿಂಚು ಸಂಚರಿಸುತ್ತದೆ. ಅಂತಹ ದಿವ್ಯ ಶಕ್ತಿ ತುಂಬಿವೆ ಅವರಲ್ಲಿ, ಅವರಾಡಿದ ನುಡಿಗಳಲ್ಲಿ. ಹಾಗೆ ಹುಟ್ಟಲಿಲ್ಲ ವಿವೇಕಾನಂದರು. ಕಾರಣೀ ಪುತ್ರರಾಗಿ ಯುಗಪುರುಷರಾಗಿ ಜಗದಲ್ಲಿ ಹುಟ್ಟಿ, ಜಗ ಬೆಳಗಲು ಕಾರಣನಾದವರು. ಹೆಣ್ಣು ಮಕ್ಕಳಿಗೆ ಗೌರವ ನೀಡಿದವರು. ಕಲಿಯಲು ಅವಕಾಶ ಕೊಡಿಸಿದವರು. ತಾಯಿಯಿಂದ ಎಲ್ಲ ವಿದ್ಯೆಗಳನ್ನು ಕರಗತ ಮಾಡಿಕೊಂಡವರು. ಒಬ್ಬ ಧೀರ ಭಾರತೀಯ ಒಂದು ಮನಸ್ಸನ್ನಷ್ಟೆ ಅಲ್ಲ, ಒಂದು ಮನೆತನ, ಒಂದು ಕುಟುಂಬ, ಒಂದು ದೇಶವನ್ನ ಬೆಳಗಬಲ್ಲ ಶಕ್ತಿಯನ್ನು ಹೊಂದಿ ಸಾರ್ಥಕತೆ ಪಡೆದವರು. ಶಾರದಾ ಮಾತೆಯ ದಿವ್ಯತೆಯ ಕಂಡು ಬೆರಗಾದವರು. ಅಪಾರ ಶಿಷ್ಯ ಬಳಗ ಹೊಂದಿ, ಶ್ರೇಷ್ಠ ಶಿಷ್ಯನಾಗಿ, ಶ್ರೇಷ್ಠ ಮಗನಾಗಿ, ಶ್ರೇಷ್ಠ ಗುರುವಾಗಿ, ಶ್ರೇಷ್ಠ ಸನ್ಯಾಸಿಯಾಗಿ, ಶ್ರೇಷ್ಠ ದೇಶಪ್ರೇಮಿಯಾಗಿ ,ಧೀಮಂತ ನಾಯಕನಾಗಿ, ಸಚ್ಚಾರಿತ್ತಿರ ಮೈಗೂಡಿಸಿಕೊಂಡು ಓಡಾಡುವ ವಿಶ್ವಕೋಶವಾಗಿ ವಿವೇಕಾನಂದರು ನಮ್ಮ ಮನದಾಳದಲ್ಲಿ ನೆಲೆಯಾಗಿ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಕಾರಣೀ ಪುರುಷನಾಗಿ ಸಾರ್ವಕಾಲಿಕ ಸತ್ಯಗಳ ಆಳ ಅಂತ್ಯ ಅರಿಯಲು ಶ್ರಮಿಸಿದ ಯೋಗಿ, ಜೀವನ್ಮರಣ , ಜೀವ ಪರಮಾತ್ಮನ ಬಗ್ಗೆ ಚಿಂತನ ಮಾಡಿ ಸತ್ಯ ಕಂಡುಕೊಂಡವರು. ಪ್ರಾಯೋಗಿಕವಾಗಿ ಆತ್ಮದರಿವು ಮೂಡಿಸಿಕೊಂಡವರು .ದೇಹ ಅದರೊಳಗಿರುವ ಉಸಿರಿಗಿರುವ ಸಂಬಂಧ ಭೇದಿಸಿದವರು. ಹುಟ್ಟು ಸಾವುಗಳ ಮರ್ಮ ಅರಿತುಕೊಂಡವರು. ಮನುಷ್ಯನಲ್ಲಿರುವ ಅಗಾಧವಾದ ಶಕ್ತಿಯಿಂದ ಏನನ್ನಾದರೂ, ಎಂತಹದನ್ನಾದರೂ ಸಾಧಿಸಬಲ್ಲ ಎಂಬ ಸತ್ಯವನ್ನು ಬಿಚ್ಚಿ ಜಗತ್ತಿಗೆ ಸಾರಿದವರು. ವಿವೇಕಾನಂದರು ಇರುವವರಿಗೆ ವಿಚಲಿತರಾಗದೆ ತತ್ವ ಸಿದ್ಧಾಂತಗಳ ದರ್ಶನ ಮಾಡಿಕೊಂಡು ಪ್ರಬುದ್ಧ ಆಧ್ಯಾತ್ಮ ಯೋಗದಿಂದ ಭರತ ಭೂಮಿಯನ್ನೇ ತಪೋ ಭೂಮಿಯಂತೆ ಕಂಡ ಅತ್ಯದ್ಭುತ ಸನ್ಯಾಸಿಯಾಗಿ ನಮ್ಮೆಲ್ಲರ ಮುಂದೆ ವಿದ್ವತ್ತಿನ ಮೂರ್ತಿಯಾಗಿ ತೋರುತ್ತಾರೆ. ಮೂಢನಂಬಿಕೆಗಳ ಕಿತ್ತೆಸೆಯುವ ಪ್ರಯತ್ನ ಮಾಡಿದವರು. ಹಾಡುವ ಕಲೆಯನ್ನೂ ಕೂಡ ಮೈಗೂಡಿಸಿಕೊಂಡವರು .ಇಂಗ್ಲಿಷ್, ಬಂಗಾಳಿ ಭಾಷೆಯಲ್ಲಿ ಪ್ರಬುದ್ಧತೆ ಹೊಂದಿದವರು ವಿವೇಕಾನಂದರು. ಮಾತು ಬರಹಗಳಿಗಿಂತ ಘನವಾದ ಜೀವನ ಅವರದು. ಚೇತೋಹಾರಿ ಸಂದೇಶಗಳ ಹರಿಕಾರರು. ಆತ್ಮಾಭಿಮಾನ, ಧೀರತ್ವ, ಯುವಕರನ್ನು ಬಡಿದೆಬ್ಬಿಸುವ ರೀತಿ, ಧರ್ಮದ ಸಾರವನ್ನು ಅರುಹುವ ರೀತಿ, ಒಬ್ಬ ಬಡತನ ನೀಗಿಸುವ ಕರುಣೆಯುಳ್ಳವನಾಗಿ, ದೇಶಾಭಿಮಾನ ಬೆಳೆಸುವ ಯುವಪಟುವಾಗಿ, ದಾರಿದ್ರವನ್ನು ಹೋಗಲಾಡಿಸುವ ಧೀಮಂತ ನಾಯಕನಾಗಿ, ಸ್ವತಂತ್ರವನ್ನು ಪಡೆಯುವ ಸಂಕಲ್ಪ ಕಟ್ಟಿಕೊಂಡವನಾಗಿ, ದೇವಮಾನವನಾಗಿ ರೂಪಗೊಳ್ಳುವ ಒಬ್ಬ ಸ್ವಯಂ ಶಿಲ್ಪಿ ಯಾಗಿ, ದೇಶ ಪರ್ಯಟನೆ ಮಾಡುವ ಯಾತ್ರಿಯಾಗಿ, ಯಾರ ದಬ್ಬಾಳಿಕೆಗೂ, ಭಾಗದ ಯಾರ ಮಾತಿಗೂ ಮಾಗದ, ತನ್ನದೇ ಆದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಹಿಂದೂ ಧರ್ಮದ ಸಾರಸತ್ವವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ, ಧೀಮಂತ ನಾಯಕ, ಅಲ್ಪಾವಧಿಯಲ್ಲಿ ಯುಗಯುಗಗಳು ಮರೆಯದಂತೆ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋದಂತಹ ರಾಷ್ಟ್ರಪ್ರೇಮಿ, ಧೀರ ಸನ್ಯಾಸಿ,ಜಡ ಹಿಡಿದ ವ್ಯವಸ್ಥೆಗಳಿಂದ ಹೊರಬಂದು ಹೊಸ ಭಾರತ ಕಟ್ಟುವ ಕರೆಕೊಟ್ಟವರು. ಆತ್ಮಜಾಗೃತಿ ,ಆತ್ಮಭಿಮಾನ ತುಂಬಿದವರು.

ವಿವೇಕಾನಂದ ಕಂಡ ಕನಸು ಇಂದಿನ ಯುವಕರು ಕಂಡರೆ ಭಾರತ ಭವ್ಯವಾದೀತು, ಅವರದೆಯಲಿ ಹೊತ್ತಿ ಉರಿದ ಧೀರತೆಯ ಕಿಡಿ ಸಿಡಿದರೆ ಸಿಡಿದೆದ್ದಾರು, ಭ್ರಷ್ಟತೆಯನ್ನು ಹೊಡೆದೋಡಿಸಿದರೆ ,ಭಾರತ ಪ್ರಭುದ್ಧ ಭಾರತವನಾಗಿಸಬಲ್ಲರು . ಸ್ವಾಭಿಮಾನಿಗಳಾದರೆ ಇಚ್ಛೆ ಪೂರೈಸಿಕೊಂಡಾರು, ಚಟ ವ್ಯಸನಗಳ ಬಿಟ್ಟು ಹಠಯೋಗಿಗಳಾದರೆ ದಿಟ್ಟ ಯೋಧರಾದಾರು, ಭಾರತವಿದು ಭವ್ಯ ದಿವ್ಯ ಪ್ರಗತಿಯ ಪರಾಕಾಷ್ಠೆ ತಲುಪಲು ಯುವಕರಿಂದ ಮಾತ್ರ ಸಾಧ್ಯ. ಯುವಕರು ಸಿಡಿದೆದ್ದು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವಂತೆ ಭಾರತವನ್ನು ಮಾಡಬಲ್ಲರು. ಯುವಕರು ಸಚ್ಚಾರಿತ್ರ್ ಯುಳ್ಳವರಾಗಿ ಸತ್ಚಿಂತನೆಗಳಲ್ಲಿ ತೊಡಗಿ ತನ್ನ ಏಳಿಗೆಯೊಂದಿಗೆ ದೇಶದೇಳಿಗೆ ಎಂಬ ಮನಸ್ಥಿತಿ ಹೊಂದಿ ಗೆದ್ದೆ ಗೆಲ್ಲುವೆಂಬ ಸಂಕಲ್ಪದೊಂದಿಗೆ ಸೆಣಸಾಡಬೇಕಿದೆ. ಸತ್ಯ ಸಂದತೆಯಲ್ಲಿ ಅನಾಚಾರ ಎಸಗುವವರಿಗೆ ಶಿಂಹ ಸ್ವಪ್ನರಾಗಬೇಕು ಅಂದಾಗ ನಮ್ಮ ದೇಶ ರಾಮರಾಜ್ಯ ಆಗಬಲ್ಲದು .ಕಲಂಕರಹಿತ, ಕಂಠಕರಹಿತ, ಕಲಹರೆಹಿತ ದೇಶವಾಗಿ ನೆಮ್ಮದಿಯ ಬಾಳು ನಮ್ಮದಾಗಬಹುದು. ನಾನಾ ಹೆಸರುಗಳಿಂದ ಕರೆಯಲ್ಪಡುವ ದೇವನೊಬ್ಬನೇ ಎಂಬುದು ಎಷ್ಟು ಸತ್ಯವೋ ಹಾಗೆ ಎಷ್ಟೇ ಜಾತಿ, ಮತ, ಪಂಥ, ಧರ್ಮಗಳಿದ್ದರೂ ಮಾನವ ಧರ್ಮ ಶ್ರೇಷ್ಠ ಅದಕ್ಕಾಗಿ ನಾವು ಮಾನವರಾಗಿ ,ಮಾನವೀಯತೆಯಿಂದ ನಾಗರಿಕರಾದರೆ ಸಾಕು ನಮ್ಮ ಜೀವನ ಪಾವನವಾಗುವುದರೊಂದಿಗೆ, ದೇಶವು ಏಕತೆಯಿಂದ ಸುಭದ್ರ ಸಮೃದ್ಧ ದೇಶವಾಗಬಲ್ಲದು ಎಂಬುದು ನನ್ನ ಅಭಿಪ್ರಾಯದೊಂದಿಗೆ ಸದಾ ನನ್ನ ದೇಶ ನನ್ನ ಈ ಭರತ ಭೂಮಿ ಸತ್ಯ ಸುಂದರ ಸಂಪನ್ನ ಶಾಂತ ನೆಮ್ಮದಿಯ ರಾಷ್ಟ್ರವಾಗುವ ಕನಸು ನನ್ನದು.

ವಿಷಯ ನೆಂಟರೊಡನೆ ಊಟ ತಿಂಡಿ ಸೇವಿಸಬೇಕು ಆದರೆ ವ್ಯವಹಾರ ಮಾಡಬಾರದು.

ನೆಂಟಿಸ್ತಿಗೆ ಎಂಬುದು ಒಂದು ಮುಷ್ಟಿಯಲ್ಲಿನ ಗಂಟಿ ದ್ದಂತೆ. ಅದನ್ನು ಬಳಸುವ ರೀತಿ ಉಪಯೋಗಿಸುವ ಕ್ರಮ ,ಪ್ರತಿಯೊಬ್ಬರೂ ತಿಳಿದಿರಬೇಕು. ಸಂಬಂಧಗಳಲ್ಲಿ ಕರುಳು ಸಂಬಂಧ, ಸ್ನೇಹ ಸಂಬಂಧ, ವ್ಯವಹಾರಿಕ ಸಂಬಂಧ ಹೀಗೆ ಹಲವಾರು ಬಗೆಯ ಸಂಬಂಧಗಳನ್ನು ನಾವು ಕಾಣುತ್ತೇವೆ. ಇವೆಲ್ಲಾ ಸಂಬಂಧಗಳನ್ನು ಹೊರತು ಒಂದು ಸಾಮಾನ್ಯ ಸಂಬಂಧ ನೆಂಟಸ್ತಿಕೆ. ಇಲ್ಲಿ ಸಂಬಂಧಗಳ ನಡುವೆ ಬಾಂಧವ್ಯ ಪ್ರೀತಿ ಅಷ್ಟೊಂದು ಗಟ್ಟಿಯಾಗಿರುವುದಿಲ್ಲ. ಕಾರಣ ನಾವು ಅವರೊಂದಿಗೆ ಹಣದ ವ್ಯವಹಾರ ಮಾಡಿದರೆ ಇರುವ ನಂಬಿಕೆ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ. ವಿನಾಕಾರಣ ಇಲ್ಲದ ಗೊಂದಲಕ್ಕೆ ಸಿಲುಕಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಮತ್ತು ಮರ್ಯಾದೆಯ ಪ್ರಶ್ನೆ ಬಂದಾಗ ನೆಂಟರೊಂದಿಗೆ ಯಾವಾಗಲೂ ಎಂದು ಹಣದ ವ್ಯವಹಾರವನ್ನು ಮಾಡಲೇಬಾರದು. ಒಮ್ಮೆ ಏನಾದರೂ ತಪ್ಪಾದರೆ ಮುಗಿಯಿತು ಇವರೇನು? ಹೇಗಿದ್ದಾರೆ ?ಎಂತಹ ನೆಂಟರು? ಎಂಬ ವಿಚಾರ ಬರದೇ ಇರದು. ಇವರಿಗೆ ಇಷ್ಟು ಗತಿ ಇಲ್ಲ ನನ್ನ ಹತ್ತಿರ ಹಣ ಪಡೆದಿದ್ದಾರೆ ಎಂದು ಬೇರೆಯವರ ಮುಂದೆ ಹೇಳುವ ಸಂಭವ ಇರುತ್ತದೆ. ಕಾರಣ ನೆಂಟರೊಂದಿಗೆ ಹಣದ ವ್ಯವಹಾರ ಮಾಡಲೇಬಾರದು.

-ಡಾ ಅನ್ನಪೂರ್ಣ ಹಿರೇಮಠ, ಬೆಳಗಾವಿ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *