Oplus_131072

ಹಂಬಲ

ಕಟ್ಟಿದ್ದ ಗೂಡನ್ನು ಸುಟ್ಟು ಹಾಕುವರೆಂದು
ಅಳುತ ಕೂರುವುದೇನು ರಾಣಿ ಜೇನು
ಕ್ಷಣಮಾತ್ರ ದುಃಖಿಸದೆ ಮತ್ತದೇ ನಿಷ್ಠೆಯಲಿ
ಜೇನ ಗೂಡನು ತಾ ಕಟ್ಟದೇನು?

ಬೇಡವೆನ್ನುತ ಜನರು ಹೊಡೆದು ಹಾಕಲು ಜೇಡ
ಬೇಸರಿಸಿ ಕಾಯಕವ ಬಿಡುವುದೇನು
ತನ್ನ ಪಾಡಿಗೆ ತಾನು ಮತ್ತದೇ ಶ್ರದ್ದೆಯಲಿ
ಬಲವಾಗಿ ಬಲೆಯನು ಬೆಸೆಯದೇನು?

ತುಳಿದು ಹಾಕುವರೆಂದು, ಹೊಸಕಿ ಬಿಡುವರು ಎಂದು
ತಿಳಿದರು ಬಳಿಗೆ ಬರದೇ ಇರುವೆ ಸಾಲು
ಅಗುಳು ಸಕ್ಕರೆ ಕಾಳು ಸಿಕ್ಕರೂ ಖುಷಿ ಅದಕೆ
ಹಂಚಿ ತಿನ್ನುವ ಗುಣವು ಎಷ್ಟೊ ಮೇಲು

ಅಳಿದುಳಿದ ಮುಸುರೆಯನು ಕೊಸರದೆ ಕುಡಿದರು
ಕೊಡುವುದಿಲ್ಲವೇ ಹಸುವು ಶುದ್ಧ ಹಾಲು
ತಿಂದ ಅನ್ನದ ಋಣಕೆ ದುಡಿಯುವವು ಮೈಮುರಿದು
ಇರಲಿ ಎನ್ನುತ ತಮ್ಮದೊಂದು ಪಾಲು

ಕಡಿದಷ್ಟು ಚಿಗುರುವುದು ಮರವದಕೆ ತಿಳಿದಿಹುದು
ಹಠ ಮಾಡಿ ಬದುಕುವ ಛಲ ಯಾರ ಸ್ವತ್ತು?
ಹಸಿರಿದುವು ಉಸಿರೆಮಗೆ ಅರಿತು ಬಾಳುವುದೊಳಿತು
ಮರೆತರಿದನಂತೂ ಬಂತು ಕುತ್ತು

ಮೂಕ ಪ್ರಾಣಿಗಳಲ್ಲಿ ,ಪಕ್ಷಿ,ಕೀಟಗಳಲ್ಲಿ
ನೋಡು ಅದೆಂತಹ ಹಠವು, ಛಲವು
ಎಲ್ಲಕಿಂತಲು ತಾ ಮಿಗಿಲೆಂದ ಮಾನವನೇ
ಎಲ್ಲಿ ಉಡಿಗಿ ಹೋಯಿತು ನಿನ್ನ ಬದುಕ ಹಂಬಲವು?

ಎ ಆರ್ ಇಂದಿರಾ ಸಿದ್ದೇಶ್
ಆಂಗ್ಲ ಶಿಕ್ಷಕರು.
ಸ ಹಿ ಪ್ರಾ ಶಾಲೆ. ಜರೇಕಟ್ಟೆ
ದಾವಣಗೆರೆ ( ದ ವ )

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *