Oplus_131072

ಹೊಟ್ಟೆ ಗ್ಯಾಸ್ಟ್ರಿಕ್‌ ಗೆ ಇಲ್ಲಿದೆ ಪರಿಹಾರ.

 

– ಸಂಗಮೇಶ ಎನ್ ಜವಾದಿ.

 

ಕೆಲವೊಮ್ಮೆ ಮನುಷ್ಯನ ಮುಜುಗರಕ್ಕೆ ಎಡೆಮಾಡುವ ಗ್ಯಾಸ್ ಸಮಸ್ಯೆಯು ಹೊಟ್ಟೆಯಲ್ಲಿ ಸೆಳೆತ, ಹೊಟ್ಟೆ ಉಬ್ಬು, ಹೊಟ್ಟೆ ಭಾರ ಹಾಗೂ ಎದೆ ಉರಿಯಂತಹ ಸಮಸ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಜೀರ್ಣಕ್ರಿಯೆ ಸುಗಮವಾಗಿ ನೆರವೇರದೆ ಅನಿಲವು ಸಂಗ್ರಹವಾಗುವ ಸ್ಥಿತಿಯೇ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ.

 

ಮನುಷ್ಯ ಆರೋಗ್ಯವಾಗಿ ಇರಬೇಕೆಂದರೆ,ದೇಹದ ಎಲ್ಲಾ ಭಾಗಗಳ ಅಂಗಾಂಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರಬೇಕು. ಒಂದು ವೇಳೆ ದೇಹದ ಯಾವುದೋ ಭಾಗದಲ್ಲಿ ವ್ಯತ್ಯಾಸ ಉಂಟಾದರೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ತರುವಾಯ
ಮನಸ್ಸಿಗೆ ಕಸವಿಸಿ ಆಗುತ್ತದೆ, ಏಕಾಗ್ರತೆಗೆ ಭಂಗ ಬರುತ್ತಿದೆ. ನೆಮ್ಮದಿ ಹಾಳಾಗುತ್ತದೆ.

ಇತ್ತೀಚಿಗೆ ಮಾನವರ ದೇಹದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿ ರುವ ಭಯಾನಕ ಸಮಸ್ಯೆ ಎಂದರೆ ಅದು ಹೊಟ್ಟೆ ಗ್ಯಾಸ್ ಸಮಸ್ಯೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಈ ಒಂದು ಹೊಟ್ಟೆ ಗ್ಯಾಸ್ ಸಮಸ್ಯೆಯಿಂದ ಮಾನವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಗಳು ಸಹ ಬಂದು ಬಿಡುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ನಿಟ್ಟಿನಲ್ಲಿ ಹೊಟ್ಟೆಯ ಗ್ಯಾಸ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಮನೆಮದ್ದಿನ ಪರಿಹಾರ ನೀಡುವ ಕುರಿತು ಇಲ್ಲಿ ಬರೆಯುವ ಪ್ರಯತ್ನ ಮಾಡಿರುತ್ತೇವೆ.

ಕೆಲವೊಮ್ಮೆ ಮನುಷ್ಯನ ಮುಜುಗರಕ್ಕೆ ಎಡೆಮಾಡುವ ಗ್ಯಾಸ್ ಸಮಸ್ಯೆಯು ಹೊಟ್ಟೆಯಲ್ಲಿ ಸೆಳೆತ, ಹೊಟ್ಟೆ ಉಬ್ಬು, ಹೊಟ್ಟೆ ಭಾರ ಹಾಗೂ ಎದೆ ಉರಿಯಂತಹ ಸಮಸ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಜೀರ್ಣಕ್ರಿಯೆ ಸುಗಮವಾಗಿ ನೆರವೇರದೆ ಅನಿಲವು ಸಂಗ್ರಹವಾಗುವ ಸ್ಥಿತಿಯೇ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ. ಹಾಗು ಇದಲ್ಲದೆ ಮನುಷ್ಯನ ಮನಸ್ಸು ಬಯಸಿದ ಊಟ-ತಿಂಡಿ ಸಿಕ್ಕಾಗ ಖುಷಿಯಿಂದ ಸೇವಿಸುತ್ತೇವೆ. ಆದರೆ ಅದರ ಪರಿಣಾಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆಯನ್ನು ಉಂಟುಮಾಡಬಹುದು. ಪದೇ ಪದೇ ಗಾಸ್ ಬಿಡುಗಡೆಯಾಗುವುದು, ಹೊಟ್ಟೆಯಲ್ಲಿ ನೋವು ಹಾಗೂ ಬಳಲಿಕೆ ಉಂಟಾಗುತ್ತದೆ. ಕೆಲವೊಮ್ಮೆ ಸಭೆ-ಸಮಾರಂಭಗಳ ನಡುವೆ ಇರುವಾಗ ಗ್ಯಾಸ್ ಸಮಸ್ಯೆಯು ಅಧಿಕವಾಗಿ ಕಾಡುವ ಸಾಧ್ಯತೆಗಳು ಇರುತ್ತವೆ. ಆಗ ಸಾಕಷ್ಟು ಇರುಸು-ಮುರಿಸು ಉಂಟಾಗುವುದು ಸಹಜ.

ಹೊಟ್ಟೆಯಲ್ಲಿರುವ ಗ್ಯಾಸ್ ಹೊರಗೆ ಹೋದರೆ ಅಷ್ಟು ಸಮಸ್ಯೆ ಎನಿಸದು. ಅದು ಹೊಟ್ಟೆಯಲ್ಲಿಯೇ ಉಳಿದುಕೊಂಡಾಗ ಸಮಸ್ಯೆ ಅಧಿಕವಾಗುವುದಂತು ಗ್ಯಾರಂಟಿ ಎನ್ನುವುದು ಸುಳ್ಳಲ್ಲ.ಹಾಗಾಗಿ ನಾವು ಸೇವಿಸುವ ದೈನಂದಿನ ಆಹಾರ ಸಮತೋಲನ ಹಾಗೂ ಆರೋಗ್ಯ ಪೂರ್ಣವಾಗಿರಬೇಕು. ಬೀನ್ಸ್, ಎಲೆಕೋಸು, ಕಡಲೆ, ಸಕ್ಕರೆ ಯ ಪದಾರ್ಥಗಳು ಹೆಚ್ಚಿನ ಕಾರ್ಬನ್ಗಳನ್ನು ಒಳಗೊಂಡಿರುತ್ತವೆ. ಅವು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಅವು ಕೊಲೋನ್ ಮೂಲಕ ಹಾದುಹೋಗುತ್ತವೆ. ಅಲ್ಲದೆ ಬಹಳಷ್ಟು ಬ್ಯಾಕ್ಟೀರಿಯಾಗಳಿಂದಲೂ ಕೂಡಿರುತ್ತದೆ. ಅವು ಹೆಚ್ಚು ಅನಿಲವನ್ನು ಬಿಡುಗಡೆ ಮಾಡುವುದರ ಮೂಲಕ ಅನಾರೋಗ್ಯ ಹಾಗೂ ಗ್ಯಾಸ್ ಸಮಸ್ಯೆಯನ್ನು ಸೃಷ್ಟಿಸುತ್ತವೆ.ಆದ್ದರಿಂದ ಇದನ್ನು ತಡೆಗಟ್ಟಲು ಹಲವಾರು ಕ್ರಮಗಳು ಇಂದಿನ (ಮನೆಗಳಲ್ಲಿ)ದಿನಗಳಲ್ಲಿ ಕಾಣುತ್ತೇವೆ. ಈ ನಿಟ್ಟಿನಲ್ಲಿ ಗ್ಯಾಸ್‌ ಸಮಸ್ಯೆಗೆ ಪರಿಹಾರ, ಮನೆಮದ್ದು ಇದನ್ನು ನಾವು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಖಂಡಿತಾ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು.

ಕ್ಯಾರಮ್ ಬೀಜ – ಓಂಕಾಳು ಅಥವಾ ಕ್ಯಾರಮ್ ಬೀಜದಲ್ಲಿ ಥೈಮೋಲ್ ಎಂಬ ಸಂಯುಕ್ತವಿದೆ. ಇದು ಜೀರ್ಣ ಕ್ರಿಯೆಗೆ ಸಹಾಯ ಮಾಡುವುದು. ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ ಸಮಸ್ಯೆಯನ್ನು ನಿವಾರಿಸಲು ಕ್ಯಾರಮ್ ಬೀಜವನ್ನು ಸೇವಿಸಬೇಕು. ನಿತ್ಯವೂ ಒಂದು ಬಾರಿ ಅರ್ಧಟೀ ಚಮಚ ಓಂಕಾಳನ್ನು ಜಗೆದು ನೀರನ್ನು ಕುಡಿಯಬಹುದು. ಇಲ್ಲವೇ ನೀರಿಗೆ ಸೇರಿಸಿ, ಕಷಾಯವನ್ನು ತಯಾರಿಸಿಯೂ ಕುಡಿಯಬಹುದು. ಈ ವಿಧಾನವು ಬಹುಬೇಗ ಆರೈಕೆಯನ್ನು ಮಾಡುವುದು.

ಜೀರಿಗೆ ನೀರು (ಉಗುರು ಬೆಚ್ಚಗಿನ ನೀರು)- ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಸಮಸ್ಯೆಗೆ ಜೀರಿಗೆ ನೀರು ಕುಡಿಯುವುದು ಉತ್ತಮ ಮನೆಮದ್ದು. ಜೀರಾ ಅಥವಾ ಜೀರಿಗೆ ಜೀವಾಣು ಗ್ರಂಥಿಗಳನ್ನು ಉತ್ತೇಜಿಸುವ ಸಾರಭೂತ ತೈಲಗಳನ್ನು ಒಳಗೊಂಡಿರುತ್ತದೆ. ಇದು ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಅನಿಲದ ರಚನೆಯನ್ನು ತಡೆಯುತ್ತದೆ ಎಂದು ಎಂದು ತಜ್ಞರು ಹೇಳುತ್ತಾರೆ. ಎರಡು ಕಪ್ ನೀರಿಗೆ ಒಂದು ಟೀ ಚಮಚ ಜೀರಿಗೆ ಸೇರಿಸಿ, 15-20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಕಾಲ ತಣಿಯಲು ಬಿಡಿ. ಊಟ ಆದ ನಂತರ ಈ ಜೀರಿಗೆ ನೀರನ್ನು ಸೇವಿಸಿ. ಆಗ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಪ್ರಕ್ರಿಯೆಯನ್ನು ಸುಲಭವಾಗಿ ತಡೆಯಬಹುದು.

ಅಸಫೊಯೆಟಿಡಾ / ಇಂಗು – ಗ್ಯಾಸ್ ಸಮಸ್ಯೆಯಿಂದ ಬಳಲುವವರು ಅರ್ಧ ಟೀ ಚಮಚ ಇಂಗ್ ಅನ್ನು ಒಂದು ಲೋಟ ಮಜ್ಜಿಗೆಗೆ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬಹುದು. ಈ ವಿಧಾನದಿಂದ ಬಹುಬೇಗ ಗ್ಯಾಸ್ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದು. ಇಂಗು ನಿಮ್ಮ ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲವನ್ನು ಉತ್ಪಾದಿಸುವ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಇಂಗು ವಾಯು ವಿರೋಧಿ ಆಗಿ ಕಾರ್ಯನಿರ್ವಹಿಸುತ್ತದೆ.

ಆಯುರ್ವೇದದ ಪ್ರಕಾರ ದೇಹದ ವಾತ ದೋಶವನ್ನು ಸಮತೋಲನಗೊಳಿಸಲು ಇಂಗು ಸಹಾಯ ಮಾಡುತ್ತದೆ.
ಶುಂಠಿ – ಶುಂಠಿಯು ಆಯುರ್ವೇದದಲ್ಲಿ ಅತ್ಯುತ್ತಮ ಔಷಧಿ ಮೂಲ ಎಂದು ಗುರುತಿಸಲಾಗಿದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವುದು. ಗ್ಯಾಸ್ ಸಮಸ್ಯೆ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಶುಂಠಿಯ ಪರಿಹಾರ ಕಂಡುಕೊಳ್ಳಬಹುದು. ತಾಜಾ ಶುಂಠಿಯ ತುರಿಯನ್ನು ನಿಂಬೆ ರಸದೊಂದಿಗೆ ಸೇರಿಸಿ, ಸೇವಿಸಬೇಕು. ಈ ಕ್ರಮವನ್ನು ಊಟದ ನಂತರ ಸೇವಿಸಿದರೆ ಉತ್ತಮ ಪರಿಹಾರ ನೀಡುವುದು. ಊಟದ ನಂತರ ಬೆಚ್ಚಗಿನ ಶುಂಠಿ ಚಹಾ ಸೇವಿಸುವುದರಿಂದಲೂ ಹೊಟ್ಟೆ ಉಬ್ಬರ ಗುಣಮುಖವಾಗುವುದು. ಶುಂಠಿ ನೈಸರ್ಗಿಕ ಕಾರ್ಮಿನೇಟಿವ್ ಆಗಿ ಕಾರ್ಯನಿರ್ವಹಿಸುತ್ತದೆ.
ನಿಂಬೆ ರಸ – ಮಾಂಸಹಾರ, ಸಮಾರಂಭಗಳ ಊಟ-ತಿಂಡಿಯಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಒಂದು ಟೀ ಚಮಚ ನಿಂಬೆ ಸರಕ್ಕೆ ಅರ್ಧ ಟೀ ಚಮಚ ಅಡುಗೆ ಸೋಡವನ್ನು ಸೇರಿಸಿ, ಒಂದು ಕಪ್ ನೀರಿನಲ್ಲಿ ಬೆರೆಸಿ. ನಂತರ ಸೇವಿಸಿ. ಇದರಿಂದ ಗ್ಯಾಸ್ ಸಮಸ್ಯೆ ಬಗೆಹರಿಯುವುದು. ಊಟದ ನಂತರ ಈ ಕ್ರಮ ಅನುಸರಿಸಿದರೆ ಹೊಟ್ಟೆಯಲ್ಲಿ ಉತೊತ್ತಿಯಾಗುವ ಕಾರ್ಬನ್ ಡೈ ಆಕ್ಸೈಡ್ಅನ್ನು ದೇಹದ ಹೊರಗೆ ಹೋಗುವಂತೆ ಉತ್ತೇಜನ ನೀಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುವುದು.

ತ್ರಿಫಲ ಪುಡಿ – ಕುದಿಯುವ ನೀರಿಗೆ ಅರ್ಧ ಟೀ ಚಮಚ ತ್ರಿಫಲ ಪುಡಿಯನ್ನು ಸೇರಿಸಿ, 15 -20 ನಿಮಿಷ ಕುದಿಸಿ. ನಂತರ ಒಂದೆಡೆ ಇಡಿ. ಊಟದ ನಂತರ ತ್ರಿಫಲ ದ್ರಾವಣ ಅಥವಾ ನೀರನ್ನು ಕುಡಿಯಿರಿ. ಇದನ್ನು ಅತಿಯಾಗಿ ಕುಡಿದರೂ ಹೊಟ್ಟೆ ಉಬ್ಬರ ಉಂಟಾಗುವುದು. ಹಾಗಾಗಿ ಮಿತವಾದ ಸೇವನೆ ಮಾಡುವುದು ಉಚಿತ. ಅಲ್ಲದೆ ಸಮಸ್ಯೆಯೂ ನಿವಾರಣೆಯಾಗುವುದು. ಆಗಾಗ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಅನಿಲ ತುಂಬುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಅದು ಸಾಮಾನ್ಯ ಸಂಗತಿಯಾಗಿರುತ್ತದೆ. ಇದು ನಮ್ಮಲ್ಲಿ ಹೆಚ್ಚಿನವರಿಗೆ ಸಂಭವಿಸುತ್ತದೆ. ಅದಕ್ಕಾಗಿ ಮನೆ ಮದ್ದು ಬಳಸಿದರೆ ಬಹುಬೇಗ ಶಮನವಾಗುವುದು. ಆದರೆ ಈ ಸಮಸ್ಯೆ ನಿಯಮಿತವಾಗಿ ಬರುತ್ತಿದೆ ಅಥವಾ ಬಳಲುತ್ತಿದ್ದೀರಿ ಎಂದಾದರೆ ಇದು ಲ್ಯಾಕ್ಟೋಸ್ ಅಸಹಿಷ್ಣುತೆ, ಹಾರ್ಮೋನುಗಳ ಅಸಮತೋಲನ ಅಥವಾ ಕೆಲವು ರೀತಿಯ ಕರುಳಿನ ಅಡಚಣೆಯಂತಹ ಗಂಭೀರ ಅಸ್ವಸ್ಥತೆಯ ಸಂಕೇತವಾಗಿರ ಬಹುದು. ಮಾತ್ರೆಗಳನ್ನು ಹಾಕುವ ಬದಲು ನೈಸರ್ಗಿಕ ಪರಿಹಾರಗಳನ್ನು ಆಶ್ರಯಿಸುವುದು ಯಾವಾಗಲೂ ಒಳ್ಳೆಯದು. ಆದರೆ ಸಮಸ್ಯೆ ಮುಂದುವರಿದರೆ ನಿಮ್ಮ ವೈದ್ಯರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಪರಿಶೀಲನೆ ಹಾಗೂ ಚಿಕಿತ್ಸೆ ಪಡೆಯುವುದು ಸೂಕ್ತ.

ಕೊನೆಯ ಮಾತು : ಕೊಲೆಸ್ಟ್ರಾಲ್ ಮತ್ತು
ಮಸಾಲೆ ಪದಾರ್ಥಗಳನ್ನು ತಿನ್ನುವುದು ಕಡಿಮೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.ಯೋಗ, ವ್ಯಾಯಾಮ ಮಾಡುವುದು. ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರು ಸೇವಿಸುವುದು ಉತ್ತಮ. ಹೀಗೆ ನಾವು ನಮ್ಮ ಮನೆಯಲ್ಲಿ ಸೀಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ. ಈ ಮೂಲಕ ಮಾನವರು ಆರೋಗ್ಯಕರ ಜೀವನ ಸಾಗಿಸಬಹುದು.

ಸಂಗಮೇಶ ಎನ್ ಜವಾದಿ.
ಬರಹಗಾರರು, ಚಿಂತಕರು, ಹೋರಾಟಗಾರರು,ಬೀದರ ಜಿಲ್ಲೆ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *