ಜಾಹೀರಾತುಗಳು. (ಲಲಿತ ಪ್ರಬಂಧ)
– ಭಾಲಚಂದ್ರ ಜಯಶೆಟ್ಟಿ ರಾಜೇಶ್ವರ.
ಜಾಹೀರಾತುಗಳ ಪರಂಪರೆ ಎಷ್ಟು ಹಳೆಯದೆಂದು ಹೇಳುವುದು ಕಷ್ಟ, ನಾನು ಸಂಸ್ಕೃತವಾಗಲೀ, ಪಾಲೀ ಪ್ರಾಕೃತವಾಗಲಿ ಬಲ್ಲವನಲ್ಲ. ಆದ್ದರಿಂದ ಆ ಸಾಹಿತ್ಯಗಳಲ್ಲಿ
ಜಾಹೀರಾತಿನ ಬಗ್ಗೆ ಎಲ್ಲೆಲ್ಲಿ, ಯಾವ ಸ್ವರೂಪದಿಂದ ಉಲ್ಲೇಖಿತವಾಗಿದೆ ಎಂದು ಹೇಳಲು
ನಾನು ಅಸಮರ್ಥನಾಗಿದ್ದೇನೆ. ಆದರೆ ಕರ್ನಾಟಕದಲ್ಲಿ, ಕನ್ನಡ ಸಾಹಿತ್ಯದಲ್ಲಿ ಈ ಜಾಹೀರಾತಿನ
ಜನಕರೆಂದರೆ ಕರ್ನಾಟಕ ಸಂಗೀತದ ಪ್ರವರ್ತಕರಾದ ಪುರಂದರದಾಸರು, ಅವರ ಒಂದು
ಕೀರ್ತನೆಯು ಜಾಹೀರಾತಿನ ಪ್ರಾಚೀನತೆಗೆ ಸಾಕ್ಷಾಧಾರವಾಗಿದೆ. ಅವರು ತಮ್ಮ ಕೀರ್ತನೆಯಲ್ಲಿ
ಈ ರೀತಿ ಹೇಳಿದ್ದಾರೆ.
ಕಲ್ಲುಸಕ್ಕರೆ ಕೊಳ್ಳಿರೋ | ನೀವೆಲ್ಲ |
ಕಲ್ಲುಸಕ್ಕರೆ ಕೊಳ್ಳಿರೋ – | ಪಲ್ಲವಿ |
ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು !
ಫುಲ್ಲಲೋಚನ ಶ್ರೀ ಕೃಷ್ಣನ ನಾಮವೆಂಬ ॥ ಅನುಪಲ್ಲವಿ |
ಶ್ರೀಕೃಷ್ಣನ ನಾಮವೆಂಬ ಕಲ್ಲುಸಕ್ಕರೆಯನ್ನು ಜನಪ್ರಿಯಗೊಳಿಸಲು ಪುರಂದರದಾಸರು
ಅದರ ಬಗ್ಗೆ ಎಷ್ಟೊಂದು ಪ್ರಚಾರ ಕಾರ್ಯ ಕೈಗೊಳ್ಳಬೇಕಾಯಿತು ಎಂಬುದನ್ನು ಈ ಕೀರ್ತನೆಯಲ್ಲಿ ನಾವು ಕಾಣಬಹುದು. ತಮ್ಮ ಸರಕಿನ ಬಗ್ಗೆ ಎಷ್ಟೊಂದು ಹೊಗಳಿ ಹೇಳಿದ್ದಾರೆ.
ಎತ್ತು ಹೇರುಗಳಿಂದ ಹೊತ್ತುಮಾಡುವುದಲ್ಲ |
ಒತ್ತೊತ್ತಿಗೋಣಿಯೊಳುಂಬುವುದಲ್ಲ |
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ |
ಉತ್ತಮ ಸರಕಿದು ಅತಿಲಾಭ ಬರುವಂಥ ॥ 1 ॥
ನಷ್ಟ ಬೀಳುವುದಲ್ಲ – ನಾತ ಹುಟ್ಟುವುದಲ್ಲ |
ಎಷ್ಟು ಒಯ್ದರು ಬೆಲೆರೊಳ್ಳವಿದಕಿಲ್ಲ |
ಕಟ್ಟಿರುವೆಯು ತಿಂದು ಕಡಿಮೆಯಾಗುವುದಲ್ಲ |
ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ ॥ 2 ॥
ಸಂತೆಸಂತೆಗೆ ಹೋಗಿ ಶ್ರಮಪಡಿಸುವುದಲ್ಲ |
ಸಂತೆಯೊಳಗೆ ಇಟ್ಟು ಮಾರುವುದಲ್ಲ |
ಸಂತ ಭಕ್ತರ ನಾಲಿಗೆ ಸವಿಗೊಂಬ |
ಕಾಂತ ಪುರಂದರ ವಿಠಲನ ನಾಮವೆಂಬ ॥ 3 ॥
ಅದು ಯಾವುದೇ ಸರಕಾಗಿರಲಿ, ಹರಿದಾಸರಿಗೂ ಕೂಡ ತಮ್ಮ ಸರಕನ್ನು
ಮಾರುವುದಕ್ಕಾಗಿ ಎಂಥ ಮಾತುಗಳನ್ನಾಡಬೇಕಾಯಿತು ಎಂಬುದು ಇದರಿಂದ
ಸಾಬೀತಾಗುತ್ತದೆ. ಈಗ ನಮ್ಮ ಬೀದಿಗಳಲ್ಲಿ, ಪೇಟೆಯಲ್ಲಿ ಫುಟ್ ಪಾಥಗಳ ಮೇಲಿನ
ಕೋರಿಸೆಟ್ಟಿಗಳ (ತಿರುಗುವ ಮಾರಾಟಗಾರರ) ಮಾರಾಟದ ವೈಖರಿಯನ್ನು ನೋಡಿದರೆ
ಆಗಿನ ಕಾಲದಲ್ಲಿ (ಈಗಿನ ಕಾಲದಲ್ಲಿಯೂ ಕೂಡ) ಶ್ರೀ ಕೃಷ್ಣನ ನಾಮವೆಂಬ ಕಲ್ಲುಸಕ್ಕರೆಯನ್ನು
ಬೀದಿ ಬೀದಿಗಳಲ್ಲಿ ತಿರುಗಾಡಿ ಮಾರಾಟ ಮಾಡಬೇಕಾಗುತ್ತಿತ್ತೆಂದು ಕಾಣುತ್ತದೆ.
ಆಗಿನ ಕಾಲಕ್ಕಿಂತಲೂ ಈಗಿನ ಕಾಲದಲ್ಲಿ ಅಂಥ ‘ಕಲ್ಲುಸಿಕ್ಕರೆ ಕೊಳ್ಳಿರೋ’ ಎಂದು ಬೆನ್ನು ಹತ್ತಿ
ಬೀದಿಗಳಿಂದ ಓಡಿಸಿಕೊಡುವ ಸಾಧ್ಯತೆಗಳಿರವುದರಿಂದ ಯಾವ ಸಾಧು ಸಂತರೂ ಅಂಥ
ಕೆಲಸಕ್ಕೆ ಮುಂದಾಗುತ್ತಿಲ್ಲ ಎಂದು ನನ್ನ ಭಾವನೆ.
ಈಗಿನ ಮಾರಾಟದ ಸರಕುಗಳೇ ಬೇರೆ. ‘ರಾಜಧಾನಿಯಲ್ಲಿ ಕೊಲೆ, ಮಂತ್ರಿಗಳ
ಕೈವಾಡ’. ಇಂಗು ತಿಂದ ಮಂಗನಾದ ಸರಕಾರ’, ‘ಜೈಲುಲಿತಾಳ ಜಯಭೇರಿ’, ‘ಮಾಯಾವತಿಯ
ಮಾಟ ಬಯಲು’, ‘ಕುಮಾರಿ ಮಮತಾಳ ಕೀಟಲೆಗೆ ಬ್ರಹ್ಮಚಾರಿಯ ನಿದ್ದೆಗೆ ಕುತ್ತು’. ಇವು
ನಮ್ಮ ಪೇಪರ ಮಾರುವ ಹುಡುಗರ ಕೆಲವು ಘೋಷಣೆಗಳು, ಅವರ ಮಾತಿನ ಮೋಡಿಗೆ
ಮರುಳಾಗಿ ಎಂಥವರಾದರೂ ಅವರ ಕೈಯಲ್ಲಿಯ ಪೇಪರನ್ನು ಖರೀದಿಸಿ ಓದಬೇಕು.
ಅಂಥ ಚಪಲ ಹುಟ್ಟಿಸುತ್ತಾರೆ ಈ ಹುಡುಗರು. ಚಪಲಕ್ಕೆ ಬಲಿಯಾಗಿ ನೀವು ಪೇಪರ
ಖರೀದಿಸಿ ಓದುತ್ತೀರಿ ಎಂದಿಟ್ಟುಕೊಳ್ಳೋಣ. ಅದರಲ್ಲಿ ಏನಿರುತ್ತದೆ ? ಅವರು ಹೇಳುವ
ಧಾಟಿಯಂಥ ಸುದ್ದಿಯೇನೂ ಅಲ್ಲಿರುವುದಿಲ್ಲ. ಪೇಪರನ್ನೆಲ್ಲ ಹೆಕ್ಕಿ ನೋಡಿದರು ಅವರು
ಜಾಹೀರಾತಿನ ಕುರಿತು ಎಲ್ಲೋ ಒಂದು ಕಡೆ ಒಂದು ಸಣ್ಣ ಸುದ್ದಿ ಅಚ್ಚಾಗಿರುತ್ತದೆ. ಉಳಿದದ್ದೆಲ್ಲ
ಜಾಹೀರಾತುಗಳಿಂದ ತುಂಬಿರುವ ಪತ್ರಿಕೆ. ಅದರಲ್ಲಿ ಇನ್ನೇನೂ ಇರುವುದಿಲ್ಲ.
ಈ ಪತ್ರಿಕೆಯ ಜಾಹೀರಾತಿನ ಕುರಿತು ಒಂದು ಮಾತನ್ನು ಹೇಳಬೇಕು.
ಹಣ ಖರ್ಚು ಮಾಡಿ ಈ ಜಾಹೀರಾತುಗಳನ್ನು ಕೊಡುವವರು ತಮ್ಮ ಸರಕಿನ ಪ್ರಚಾರವಾಗಲಿ,
ವ್ಯಾಪಾರ ಚೆನ್ನಾಗಿ ಆಗಲಿ ಎಂಬ ಉದ್ದೇಶದಿಂದ. ಅಂದರೆ ಜಾಹೀರಾತು ಕೊಡುವುದರ
ಹಿಂದೆ ಜಾಹೀರಾತುದಾರನ ಲಾಭ ಇರುತ್ತದೆಯೇ ಹೊರತು ಓದುಗನ ಲಾಭವಲ್ಲ. ತನ್ನ ಗಿರಾಕಿ ಎಂಬ ಮೀನಿಗೆ ಗಾಳ ಹಾಕಲು ಜಾಹೀರಾತು ಎಂಬುದು ಒಂದು ಮಾಧ್ಯಮ.
ಆದರೆ ಆ ಗಾಳಕ್ಕೆ ಈ ಗಿರಾಕಿಗಳೆಂಬ ಮೀನಗಳಿಂದಲೂ ಕೂಡ ಪತ್ರಿಕೆಯವರೂ ಹಣ
ಸುಲಿಗೆ ಮಾಡುವುದು ಎಷ್ಟು ಧೂರ್ತತನ ಅಂತೀರಿ ! ಪತ್ರಿಕೆಯವರಿಗೆ ಜಹೀರಾತು
ದಾರನಿಂದಲೂ ಲಾಭ, ಓದುಗರಿಂದಲೂ ಲಾಭ. ಹನ್ನೆರಡು ಪುಟಗಳ ಪತ್ರಿಕೆಯಲ್ಲಿ ಎಂಟು
ಪುಟ್ಟಗಳಷ್ಟು ಜಾಹೀರಾತೇ ಇರುತ್ತದೆ. ಆದರೂ ನಾವು ಪತ್ರಿಕೆಗಳನ್ನು ಕೊಳ್ಳುತ್ತೇವೆ, ಅದರಲ್ಲಿಯ
ಜಾಹೀರಾತುಗಳಿಗೆ ಬಲಿಯಾಗುತ್ತೇವೆ. ಬಲಿಯಾಗಿ ಅನೇಕ ಸಲ ಮೋಸ ಹೋಗುತ್ತೇವೆ.
‘ಒಂದು ಸೋಪು ಖರೀದಿಸಿದರೆ ಒಂದು ಕಾರು ಗೆಲ್ಲುವ ಭಾಗ್ಯ ನಿಮ್ಮದಾಗುತ್ತದೆ.
ಸ್ಟಾಕ ಇರುವುರೆಗೆ ಮಾತ್ರ ಈ ಯೋಜನೆ’, ‘ಇಂಥ ವಸ್ತುಗಳನ್ನು ಕೊಂಡರೆ ಇಂಥ ವಸ್ತು
ಉಚಿತ’, ‘ಒಂದನ್ನು ಕೊಂಡರೆ ಇನ್ನೊಂದು ಉಚಿತ’, ಇಂಥ ಜಾಹೀರಾತುಗಳು ದಿನ
ಬೆಳಗಾದರೆ ನಾವು ನೋಡುತ್ತೇವೆ. ಅವುಗಳಿಗೆ ಮಾರು ಹೋಗುತ್ತವೆ. `ಒಂದು ಸೀರೆ ಕೊಂಡರೆ ಇನ್ನೊಂದು ಫ್ರೀ’ ಎಂಬ ಯೋಜನೆಯಲ್ಲಿ ಖರೀದಿ ಮಾಡಿದ ಸೀರೆಗಳ
ಸಂಗ್ರಹವೇ ಇದೇ ನಮ್ಮ ಮನೆಯಲ್ಲಿ ‘ಒಂದು ಹಳೆ ಸೀರೆ ಕೊಂಡರೆ ಇನ್ನೊಂದು ಫ್ರೀ’
ಎಂಬ ಪ್ರಚಾರ ವೈಖರಿಯ ಸಂದರ್ಭದಲ್ಲಿ ನಮ್ಮ ಕಾಲೋನಿಯಲ್ಲಿ ಮೊನ್ನೆ ಮೊನ್ನೆ
ನಡೆದ ಒಂದು ಪ್ರಸಂಗ ನೆನಪಾಗುತ್ತದೆ.
ನಮ್ಮ ಕಾಲೋನಿಯಲ್ಲಿ ಯಂಗಯ್ಯಶೆಟ್ಟಿ ಎಂಬರದೊಂದು ಕಿರಾಣಿ ಅಂಗಡಿ ಇದೆ.
ನಮ್ಮ ಕಾಲೋನಿಗೆ ಅವರೇ ಮೊಟ್ಟ ಮೊದಲಿಗರಾದ ಕಿರಾಣಿ ಅಂಗಡಿಯವರು, ಇತ್ತೀಚೆಗೆ
ಹೊಸ ಹೊಸ ಪಡ್ಡೆ ಹುಡುಗರೆಲ್ಲ ಅಂಗಡಿಗಳನ್ನು ಪ್ರಾರಂಭಿಸಿ ವ್ಯಾಪಾರದ ನಿಯತ್ತನ್ನೇ
ಕೆಡಿಸುತ್ತಿದ್ದಾರೆ ಎಂದು ನಮ್ಮ ಸೆಟ್ಟಿಯ ಗೊಣಗಾಟವಾಗಿದೆ. ಸ್ವತಂತ್ರ ವ್ಯಾಪಾರ ಎಂದ ಮೇಲೆ
ಬೇರೆಯವರು ಕೇಳುತ್ತಾರೆಯೆ. ನಮ್ಮ ಬೆಳ್ಳುಳ್ಳಿ, ಈರುಳ್ಳಿ, ಉಪ್ಪು, ಖಾರದ ಪೆಟೆಂಟು ಅಮೇರಿಕದವರು
ಪಡೆದಂತೆ ಯಂಗಯ್ಯಸೆಟ್ಟಿ ಒಬ್ಬನೇ ನಮ್ಮ ಕಾಲೋನಿಯ ಕಿರಾಣಿ ವ್ಯಾಪಾರ ಎಂಬ ಪೆಟೆಂಟ
ಏನು ಪಡಿದಿಲ್ಲವಲ್ಲ. ಹೀಗಾಗಿ ಮನಸ್ಸಿಗೆ ಬಂದಂತೆ ಕಾಲೋನಿಯ ಗಿರಾಕಿಗಳ ಸುಲಿಗೆ
ಮಾಡುವುದು ತನ್ನೊಬ್ಬನದೇ ಅಧಿಕಾರ ಎಂದು ಸಾಧಿಸಲು ಸಾಧ್ಯವಿಲ್ಲ. ಅವನೂ ಸ್ಪರ್ದೆಗೆ
ಇಳಿಯಲೇ ಬೇಕಾಗಿದೆ. ಒಂದು ದಿನ ಆತ ತನ್ನ ಅಂಗಡಿಯ ಎದುರಿಗೆ ಒಂದು ಬೋರ್ಡ
ಹಾಕಿಯೇ ಬಿಟ್ಟ. ‘ಯಾವುದೇ ಒಂದು ಸರಕು ಕೊಂಡರೆ ಇನ್ನೊಂದು ಉಚಿತ.
ಈ ಜಾಹೀರಾತಿನ ನಂತರ ಆತನ ವ್ಯಾಪಾರದ ಭರಾಟೆ ಕೇಳಬೇಡಿರಿ. ಗಿರಾಕಿಗಳಿಗೆ
ಸಾಮಾನುಗಳ ಅವಶ್ಯಕತೆ ಇರುತ್ತದೆಯೋ ಇಲ್ಲವೋ, ಖರೀದಿ ಮಾಡಿದ್ದೇ ಮಾಡಿದ್ದು,
ಕೊಂಡದ್ದೇ ಕೊಂಡದ್ದು. ಇಲ್ಲಿ ಹೆಚ್ಚಾಗಿ ಪರ ಊರುಗಳಿಂದ ಬಂದ ವಿದ್ಯಾರ್ಥಿಗಳು
ರೂಮು, ಮನೆ ಮಾಡಿಕೊಂಡಿರುವುದರಿಂದ ಅವರೇ ಪ್ರಮುಖ ಗಿರಾಕಿಗಳು.
ಹೊತ್ತುಗೊತ್ತಿಲ್ಲದೆ ಗೆಳೆಯರು ಗುಂಪು ಕಟ್ಟಿಕೊಂಡು ಬಂದು ಒಂದು ಸಿಗರೇಟಿನ ಬೆಲೆಗೆ
ಎರಡು ಸಿಗರೇಟುಗಳನ್ನು ಕೊಂಡು ನಾಲ್ಕು ಜನರು ‘ಫಿಫ್ಟಿ-ಫಿಫ್ಟಿ’ ಸೇದುವುದು, ಅದರ
ಹೊಗೆ ಉಗುಳಿ ನಮ್ಮ ಮನೆಗೆ ರವಾನಿಸುವುದು ಸಾಮಾನ್ಯ ಸಂಗತಿಯಾಗಿದೆ. ವ್ಯಾಪಾರ
ಚೆನ್ನಾಗಿ ನಡೆದಿದೆ. ಮದುವೆಯ ವಯಸ್ಸಿಗೆ ಬಂದ ನಾಲ್ಕು ಜನ ಹೆಣ್ಣುಮಕ್ಕಳ ಚಿಂತೆ
ಹೊತ್ತ ಯಂಗಯ್ಯ ಸೆಟ್ಟಿ ಪಾಪ ಹಣ ಗಳಿಸಲು ಏನಾದರೂ ಹಾದಿ ಹುಡುಕಲೆ ಬೇಕಲ್ಲ.
ಆತನ ಎರಡನೆಯ ಹುಡುಗಿ ಚಂಚಲಾ ತುಂಬ ಚೂಟಿಯಾಗಿದ್ದಾಳೆ. ತುಂಬ ಲಕ್ಷಣವಾಗಿಯೂ ಇದ್ದಾಳೆ. ಆಕೆಯ ನಗುವನ್ನು ನೆಕ್ಕಲು, ಕಣೋಟದಲ್ಲಿ ಮೀಯಲು,
ಮಾತಿನ ಎಂಜಲು ಸವಿಯಲು ಒಬ್ಬ ಹುಡುಗ ಮೇಲಿಂದ ಮೇಲೆ ಬಂದು ಅಂಗಡಿಯ ಎದುರಿಗೆ ಹರಟೆ ಹೊಡೆಯುತ್ತ ಕೂಡುತ್ತಾನೆ. ಆತ ಚಂಚಲೆಯನ್ನು ಮೆಚ್ಚಿದ್ದಾನೆ. ಎಂಬುದು ಎಲ್ಲರಿಗೂ ತಿಳಿದಿದೆ. ಯಂಗಯ್ಯ ಸೆಟ್ಟಿಗೂ ತಿಳಿದಿದೆ. ಆದರೆ ಏನು ಮಾಡುವುದು.
ಚಂಚಲೆಯ ಅಕ್ಕ ಕೋಮಲೆಯ ಮದುವೆಯಾಗುವವರೆಗೆ ಆ ಹುಡುಗನ ಇಷ್ಟಾರ್ಥ
ಸಿದ್ಧಿಯಾಗುವ ಯೋಗವಿಲ್ಲ. ಪಾಪ ಬಹಳ ದಿನಗಳಿಂದ ಹೊಂಚು ಹಾಕಿ ಕಾಯುತ್ತಿದ್ದಾನೆ. ಆದರೆ ಕಾಯಲು ವಯಸ್ಸಿಗೆ ಪುರಸೊತ್ತು ಇರಬೇಕಲ್ಲ ಅದು ಮುಂದೆ ಓಡುತ್ತಲೇ ಇದೆ.
ಹೀಗೇ ಎಷ್ಟು ದಿನ ಅಂತ ಕಾಯುವುದು ? ಎಂದು ಯೋಚಿಸಿ ಆ ಹುಡುಗ ಒಂದು ನಿರ್ಧಾರಕ್ಕೆ ಬಂದು ನಮ್ಮ ಸೆಟ್ಟಿಯ ಹಿರಿಯ ಮಗಳಾದ ಕೋಮಲೆಯನ್ನೇ
ಮದುವೆಯಾಗಲು ನಿರ್ಧರಿಸಿದ. ಅಂತೂ ಇಂತೂ ಕಂಕಣಬಲ ಕೂಡಿ ಬಂತಲ್ಲ ಎಂದು ತಿಳಿದು ಸೆಟ್ಟಿಯೂ ಕೂಡ ವರದಕ್ಷಿಣೆ, ವರೋಪಚಾರ ಇತ್ಯಾದಿಗಳಲ್ಲಿ ಜಿಪುಣತನ ಮಾಡದೆ
ಧಾರಾಳವಾಗಿ ವರ ಕೇಳಿದ್ದಕ್ಕೆಲ್ಲ ‘ಹೂಂ’ ಎಂದು ಒಪ್ಪಿಕೊಂಡ, ಇದನ್ನು ಕೇಳಿ ನಮಗೂ ಸಂತೋಷವಾಯಿತು. ಮದುವೆ ನಿಶ್ಚಯವಾಯಿತು.
ಮದುವೆ ಮಂಟಪಕ್ಕೆ ಕೋಮಲಾ ಮದುವಣಿಗಳಾಗಿ ಬಂದಳು. ಹುಡುಗ ಆಕೆಯ ಕೈ ಹಿಡಿಯಬೇಕು, ಕತ್ತಿಗೆ ತಾಳಿ ಕಟ್ಟಬೇಕು, ಸಪ್ತಪದಿ ತುಳಿಯಬೇಕು, ‘ಕೂರ್ಯಾತ್
ಸದಾ ಮಂಗಲಮ್’ ಆಗಬೇಕು. ಹುಡುಗ ತಿರುಗಿ ಬಿದ್ದ. ‘ಚಂಚಲಾ ಎಲ್ಲಿ ?’ ಎಂದು ಕೇಳಿದ. ಒಂದು ಕೊಂಡರೆ ಇನ್ನೊಂದು ಫ್ರೀ ಬೇಕು ಎಂದು ಹಟ ಹಿಡಿದ. ಅದೂ ಕೂಡ
ಯಂಗಯ್ಯ ಸೆಟ್ಟಿಗೆ ಲಾಭದಾಯಕವಾಗಿಯೇ ಕಂಡಿತು. ಯಾಕೆಂದರೆ ಒಂದೇ ಖರ್ಚಿನಲ್ಲಿ
ಎರಡು ಹೆಣ್ಣುಗಳು ಖರ್ಚಾಗುತ್ತವೆ ಎಂದರೆ ಸಾಮಾನ್ಯವಾದ ಮಾತೆ ? ಚಂಚಲೆಯನ್ನೂ ಮಂಟಪಕ್ಕೆ ಕರೆತಂದರು. ಆದರೆ ಹುಡುಗ ಕೋಮಲೆಯ ಜೊತೆಗೆ ಬರುವಷ್ಟು ಎನಕ್ಲೋರ್ಜ ಚಂಚಲೆಯ ಜೊತೆಗೂ ಬರಬೇಕು’ ಎಂದು ಹೇಳೀದ. ಅಂದರೆ ಕೋಮಲೆಗೆ ಬೆಲೆ ಕಟ್ಟಿದಷ್ಟೇ ವರೋಪಚಾರ, ವರದಕ್ಷಿಣೆ ಚಂಚಲೆಗೂ ಬೇಕು ಎಂದು ಹಟ ಹಿಡಿದ. ಚೆಲುವೆಯಾದ ಚಂಚಲೆಯ ಬೆಲೆಯೂ ಇದರಿಂದಾಗಿ ಹೆಚ್ಚಾಯಿತು. ಒಂದೊಂದು ಸಲ
ಇಂಥ ಘಾಟಿ ಗಿರಾಕಿಗಳೂ ಸಿಗುತ್ತಾರೆ.
ಈ ಜಾಹೀರಾತುಗಳು ಒಮ್ಮೊಮ್ಮೆ ವಿಚಿತ್ರವಾಗಿರುತ್ತವೆ.
ಉಡುಪಿಯಲ್ಲಿ ಬಸ್ಸಿನಿಂದ
ಊರು ಪ್ರವೇಶಿಸುತ್ತಿದ್ದಂತೆ ನಾನೊಂದು ಹೋಟೆಲಿನ ನಾಮಫಲಕ ನೋಡಿದ ನೆನಪು.
‘ಶ್ರೀ ಕೃಷ್ಣ ಬಾರ್’, ನಮ್ಮೂರಲ್ಲೂ ಒಂದಿದೆ ‘ಮಹಾತ್ಮಾ ಗಾಂಧಿ ಬಾರ್ ಎಂಡ್ ರೆಸ್ಟೋರಂಟ್’,
ಇಂಥ ವಿಚಿತ್ರವಾದ ನಾಮಫಲಕಗಳು ನೋಡಲು ಸಿಗುತ್ತವೆ. ‘ಸೌಭಾಗ್ಯ ಲಕ್ಷ್ಮೀ ಹೇ ಕಟಿಂಗ ಸೆಲೂನ್’, ‘ನೇತಾಜಿ ಕೆಫೆ’, ‘ನೆಹರೂ ಚಪ್ಪಲ್ ಮಾರ್ಟ’, ‘ಇಂದಿರಾ ಗಾಂಧಿ
ಕುಂಕುಮ ಭಾಂಡಾರ’, ‘ಲಾಲೂ ಪಾನ್ ಶಾಪ್’ – ಈ ರೀತಿಯ ಫಲಕಗಳು ಎಷ್ಟು ಸಾರ್ಥಕವಾಗಿರುತ್ತವೆ ಎಂಬುದು ಓದುಗರಿಗೆ ಬಿಟ್ಟ ವಿಚಾರ.
ಮನುಷ್ಯನಾಗಿ ಹುಟ್ಟಿದ ಮೇಲೆ ನೂರೆಂಟು ಆಸೆಗಳು ಅವನಲ್ಲಿ ಮನೆಮಾಡಿ ಕೊಂಡಿರುತ್ತವೆ. ‘ಆಸೆ ಎಂಬುದು ಭವದ ಬೀಜ’ ಎಂದು ಶರಣರು, ‘ಆಸೆಯೇ ದುಃಖಕ್ಕೆ
ಮೂಲ’ ಎಂದು ಭಗವಾನ್ ಬುದ್ಧದೇವರು ಹೇಳಿದ್ದರೂ ಯಾರೂ ಆಸೆಯನ್ನು ಬಿಟ್ಟವರಲ್ಲ.
ಆಸೆಯೆಂಬುದು ಪ್ರತಿಯೊಬ್ಬರ ಮನಸ್ಸಿನಲ್ಲಿ ಸುಪ್ತವಾಗಿ ಇರುತ್ತದೆ.
ಜಾಹೀರಾತುಗಳು ಈ
ಸುಪ್ತ ಭಾವನೆಯನ್ನು ಕೆರಳಿಸುತ್ತವೆ. ಹಿಂದೆ ಮೊಟ್ಟ ಮೊದಲಿಗೆ ಚಹಪುಡಿಯು ಭಾರತದ
ಮಾರುಕಟ್ಟೆಗೆ ಬಂದಾಗ ಚಹಾಪುಡಿ ಉತ್ಪಾದಕರು ಯಾರೂ ಇದನ್ನು ಕೊಳ್ಳಿ ಎಂದು ಪ್ರಚಾರ ಮಾಡುತ್ತಿರಲಿಲ್ಲ. ಸಂತೆಗಳಲ್ಲಿ, ಜಾತ್ರೆಗಳಲ್ಲಿ, ತುಂಬಿದ ಪೇಟೆಗಳಲ್ಲಿ ಹೋಗಿಬರುವ ಜನರಿಗೆ ಪುಕ್ಕಟೆಯಾಗಿ ಚಹ ಕುಡುಸುತ್ತಿದ್ದರಂತೆ. ಪುಕ್ಕಟೆಯಾಗಿ ಸಿಗುತ್ತಿದ್ದ ಚಹ ಕುಡಿದೂ
ಬಡಿಗೂ ನಾವು ಚಹಾಕ್ಕೆ ಸಂಪೂರ್ಣವಾಗಿ ಗುಲಾಮರಾಗಿದ್ದೇವೆ. ಮುಂಜಾನೆ ಎದ್ದಕೂಡಲೇ
ಹಾಸಿಗೆಯ ಮೇಲೆಯೇ ಬೆಡ್ ಟೀ ಬೇಕು. ತಿಂಡಿಯ ಜೊತೆಗೆ ಟೀ ಬೇಕು. ಕೆಲವರಿಗೆ ಊಟವಾದ ಮೇಲೂ ಟೀ ಬೇಕು, ರಾತ್ರಿ ಮಲಗುವುದಕ್ಕೆ ಮುಂಚೆ ಟೀ ಬೇಕು, ಟೀ
ಕುಡಿದೂ ಕುಡಿದೂ ಈಗ ಅದರ ಸ್ವಾದ, ರುಚಿ ಕೆಟ್ಟು ಹೋಗಿದೆ. ಟೀಯ ಜಾಗವನ್ನು ಬೀರು, ರಮ್, ವಿಸ್ಕಿ, ಕಾಕ್ ಟೇಲಗಳು ಆಕ್ರಮಿಸುತ್ತಿವೆ. ಇವು ಕೂಡ ಜಾಹೀರಾತುಗಳ
ಮೂಲಕವೇ ಪ್ರಚಾರಕ್ಕೆ ಬಂದಿವೆ.
ಜಾಹೀರಾತುಗಳಿಗೆ ಬಲಿಯಾಗುವುದು ಮೊಟ್ಟ ಮೊದಲಿಗೆ ಮನುಷ್ಯನ ಸೌಂದರ್ಯ ಪ್ರಜ್ಞೆ ಎಂದು ಹೇಳಬಹುದು. ತಾನು ಸುಂದರವಾಗಿ ಕಾಣಬೇಕು, ಜನ ತನ್ನನ್ನು ಮೆಚ್ಚಬೇಕು. ಮರುಳಾಗಬೇಕು ಎಂಬ ಸುಪ್ತ ಭಾವನೆಯೇ ನಮ್ಮನ್ನು ಸೌಂದರ್ಯ ಪ್ರವಣರನ್ನಾಗಿ
ಮಾಡುತ್ತದೆ. ಕನ್ನಡಿಯ ಎದುರಿಗೆ ತಾಸುಗಟ್ಟಲೆ ನಿಂತು ಹೆಣ್ಣು ತನ್ನ ಸೌಂದರ್ಯದ ಸಮೀಕ್ಷೆ
ಮಾಡಿಕೊಳ್ಳುವುದು ಯಾರಿಗಾಗಿ ? ತನ್ನಲ್ಲಿ ತಾರುಣ್ಯದ ಆ ಚೆಲುವು ಇನ್ನು ಇದೆಯೋ ಇಲ್ಲವೋ ಎಂಬ ಆತಂಕ ಆಕೆಯನ್ನು ಕಾಡುತ್ತದೆ. ಗಂಡನನ್ನು ಈಗಲೂ ತನ್ನ ಸೌಂದರ್ಯದ
ಬಲೆಯಲ್ಲಿ ಹಿಡಿದಿಡಲು ಸಾಧ್ಯವಿದೆಯೋ ಇಲ್ಲವೋ ! ಎಂಬುದನ್ನು ತಾಳೆ ನೋಡುತ್ತಾಳೆ,
ಹುಬ್ಬು ತೀಡಿಕೊಳ್ಳುವುದು, ಕೂದಲು ಕಪ್ಪು ಮಾಡಿಕೊಳ್ಳುವುದು, ಕಣ್ಣಿನ ಕೆಳಗಿನ ಕಪ್ಪು ಕಲೆಯನ್ನು ಮರೆಮಾಚಲು ಪ್ರಯತ್ನಿಸುವುದು, ಹೈಹೀಲ್ಡ್ ಚಲ್ಲಪಿ ಧರಿಸುವುದು, ಪರಲ್ಯೂಮ ಹಾಕಿಕೊಳ್ಳುವುದು, ಮುಖವನ್ನು ಆಗಾಗ ಬೀಚ್ ಮಾಡಿಸಿಕೊಳ್ಳುವುದು, ಇಂಥ ಅನೇಕ
ಕ್ರಿಯೆಗಳಲ್ಲಿ ತೊಡಗಲು ಈ ಜಾಹೀರಾತುಗಳು ನಮ್ಮ ನೆರವಿಗೆ ಬರುತ್ತವೆ. ಈ ಸೌಂದರ್ಯ ಪ್ರಜ್ಞೆಯಲ್ಲಿ ಗಂಡಸರೇನೂ ಹಿಂದೆ ಬಿದ್ದಿಲ್ಲ. ಕೂದಲು ಒಮ್ಮೆ
ಉದುರಿ ಹೋಗಿ ತಲೆ ಬೋಡಾದ ಮೇಲೆ ಪುನಃ ಅಲ್ಲಿ ಕೂದಲು ಬೆಳೆಯುವುದಿಲ್ಲ ಎಂಬುದು ವೈದ್ಯಕೀಯ ಶಾಸ್ತ್ರ ಖಚಿತ ಪಡಿಸಿದ್ದರೂ ನಾವು ಕೂದಲು ಬೆಳೆಸುವ ಲೋಶನಗಳಿಗೆ ಮಾರು ಹೋಗುತ್ತೇವೆ. ತಲೆಗೆ ಏನೇನೋ ತಿಕ್ಕಿಕೊಳ್ಳುತ್ತೇವೆ. ಬಿಳಿ ಕೂದಲು
ಕಪ್ಪು ಮಾಡಿಕೊಳ್ಳಲು ಕಾಲಿ ಮೆಹಂದಿಗೆ ಶರಣು ಹೋಗುತ್ತೇವೆ. ಮೊಂಡ ಕೂದಲು ಉದ್ದಾಗಿ ಬೆಳೆಸಲು ಕೇಶವರ್ಧಿನಿಗಳನ್ನು ಬಳಸುತ್ತೇವೆ. ತಲೆಯ ಹೊಟ್ಟು ಹೋಗಿಸಲು ಶ್ಯಾಂಪು ಉಪಯೋಗಿಸುತ್ತೇವೆ. ಇವುಗಳಲ್ಲಿ ಯಾವುದು ಒಳ್ಳೆಯದು ಎಂಬುದನ್ನು
ಜಾಹೀರಾತುಗಳೇ ನಿರ್ಣಯಿಸಿ ಹೇಳುತ್ತವೆ. ‘ಚಕ್ರವ್ಯೂಹವನ್ನು ಬಿಡಿಸಿ ತ್ರಿಶೂಲ ಬಳಸಲು
ಜಾಹೀರಾತುಗಳು ಹೇಳುತ್ತವೆ. ‘ಝಂಡುಬಾಮನ್ನು ಬಳಸಿ ಮನೆಯಲ್ಲೇ ಡಾಕ್ಟರ್ ಆಗಿ’
ಡಾಕ್ಟರಿ ಓದಿನ ಖರ್ಚು ಉಳಿಸುವ ಸಲಹೆ ಜಾಹೀರಾತುಗಳೇ ನೀಡುತ್ತದೆ.
ಸೌಂದರ್ಯ ಪ್ರಜ್ಞೆಯ ನಂತರ ಆರೋಗ್ಯ ರಕ್ಷಣೆಯ ಆಕಾಂಕ್ಷೆಯ ಸರದಿ ಬರುತ್ತದೆ. ಜಾಹೀರಾತುಗಳು ನಮ್ಮ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತವೆ.
ಹಸಿವು ದೇವರ ವರದಾನ ಎಂದು ವಿನೋಬಾ ಭಾವೆಯವರು ಹೇಳಿದ್ದಾರೆ. ಮೈಮುರಿದು
ದುಡಿಯುವವನಿಗೆ ಹಸಿವಿನ ಬಾಧೆ ಇರುವುದಿಲ್ಲ. ಆದರೆ ಬೊಟ್ಟೂ ಬೆಳೆಸಿ ಕುಂತು ತಿನ್ನುವ ಜನರಿಗೆ ಈ ಹಸಿವಿನ ತೊಂದರೆ ಅತಿಯಾಗಿ ಪೀಡಿಸುತ್ತಿರುತ್ತದೆ. ಏನೇ ಮಾಡಿದರೂ ಹಸುವೇ ಆಗುವುದಿಲ್ಲ. ಅದಕ್ಕಾಗಿ ಜಾಹೀರಾತು ‘ಏನೇ ತಿನ್ನಿ, ಎಷ್ಟೇ ತಿನ್ನಿ, ಹಾಜಮೋಲಾ
ಇರುವವರೆಗೆ ಅಜೀರ್ಣವಾಗುವುದಿಲ್ಲ’. ಎಷ್ಟೇ ತಿಂದರೂ ಇನ್ನೂ ತಿನ್ನಬೇಕೆನ್ನುವ ಆಸೆ ಹುಟ್ಟಿಸಲು ಪಂಚಾರಿಷ್ಟ ತೆಗೆದುಕೊಳ್ಳಿರಿ. ದಿನಕ್ಕೆ ಐದು ನಿಮಿಷಗಳ ಉಪಯೋಗದಿಂದ
ಕೊಬ್ಬು ಕರಗಿಸುವ ಸಾಧನಗಳಿವೆ, ಲಂಬೋದರಿಯರನ್ನು ತಳೋದರಿಯರನ್ನಾಗಿಸುವ
ಉಪಕರಣಗಳಿವೆ. ಎತ್ತರವನ್ನು ಹೆಚ್ಚಿಸುವ ಯಂತ್ರಗಳಿವೆ. ಅವು ಪರಿಣಾಮ ಬೀರದಿದ್ದರೆ
ಅಥವಾ ಅವುಗಳಿಂದ ನಿಮಗೆ ತೃಪ್ತಿಯಾಗದಿದ್ದರೆ ನಿಮ್ಮ ಹಣ ನಿಮಗೆ ವಾಪಸ್, ಈ
ಜಾಹೀರಾತುಗಳನ್ನು ಓದುತ್ತಾ ಹೋದಂತೆ ಮನುಷ್ಯ ತನ್ನಲ್ಲಿ ಇಲ್ಲದೇ ಇರುವ ಕಾಯಿಲೆಗಳನ್ನು
ಹುಡುಕಲು ಶುರುಮಾಡುತ್ತಾನೆ. ಗೊತ್ತಿಲ್ಲದ ರೋಗಗಳನ್ನು ಗುರುತಿಸಿಕೊಳ್ಳುತ್ತಾನೆ. ದಿನಕ್ಕೆ
ನೂರೆಂಟು ಮಾತ್ರೆಗಳನ್ನು ನುಂಗುತ್ತಾನೆ.
ಈ ಜಾಹೀರಾತುಗಳು ಎಷ್ಟರ ಮಟ್ಟಿಗೆ ಸತ್ಯವನ್ನು ನುಡಿಯುತ್ತವೆ ಎಂದು ಹೇಳಲು ಬರುವುದಿಲ್ಲ. ಇತ್ತೀಚೆಗೆ ‘ವೆಜಿಟೇರಿಯನ್ ಟೂಥಪೇಸ್ಟ’ ಎಂದು ಒಂದು ಉತ್ಪಾದನೆ
ಪ್ರಚಾರಗೊಳ್ಳುತ್ತಿದೆ. ಹಲ್ಲಿನ ವೈದ್ಯೆಯಾದ ನನ್ನ ಸೊಸೆಯನ್ನು ‘ವೆಜಿಟೇರಿಯನ್ ಟೂಥಪೇಸ್ಟ
ಎಂದರೆ ಏನು ಎಂದು ಕೇಳಿದೆ. ಪಾಪ. ಆಕೆಗೂ ದಿಗಿಲಾಯಿತು. ಒಮ್ಮೆ ಒಂದು ಜಾಹೀರಾತು
ಬಂದಿತ್ತು. ‘ಮಾಯಾಪಟಲದಿಂದ ಜಗತ್ತನ್ನೇ ನೋಡಬಹುದು, ನೀವು ಮಾತ್ರ ಯಾರಿಗೂ ಕಾಣಿಸಲಾರಿರಿ’ ಈ ಜಾಹೀರಾತಿಗೆ ಮರುಳಾಗಿ ನನ್ನ ಗೆಳೆಯನ್ನೊಬ್ಬನು ಮುಂಗಡ ಹಣ
ಕಳಿಸಿ ಮಾಲು ತರಿಸಿಕೊಂಡ. ಪಾರ್ಸಲ ಬಿಚ್ಚಿನೋಡಿದರೆ ಅದರಲ್ಲಿ ಮುಸ್ಲಿಂ ಮಹಿಳೆಯರು
ಧರಿಸುವ ಬುರ್ಖಾ ಇತ್ತು. ಇನ್ನೊಂದು ಜಾಹೀರಾತು ‘ತಿಗಣೆ ಕೊಲ್ಲುವ ಯಂತ್ರ ಎಂದಿತ್ತು. ತಿಗಣೆಯ ಕಾಟದಿಂದ ಬೇಸತ್ತಿದ್ದ ಗೆಳೆಯರೊಬ್ಬರು ಆ ಯಂತ್ರ ತರಿಸಿಕೊಂಡರು. ಪಾರ್ಸಲನಲ್ಲಿ ಎರಡು ಚಪ್ಪಟೆಯಾದ ದುಂಡನೆಯ ಕಲ್ಲುಗಳಿದ್ದವು. ಒಂದರ ಮೇಲೆ
ತಿಗಣೆಯನ್ನಿಟ್ಟು ಇನ್ನೊಂದರಿಂದ ತಿಕ್ಕಿದರೆ ತಿಗಣೆಗಳು ನಿರ್ನಾಮವಾಗುತ್ತವೆ ಎಂದು
ಅದನ್ನು ಉಪಯೋಗಿಸುವ ವಿಧಾನವನ್ನು ಕಂಪನಿಯವರು ತಿಳಿಸಿದ್ದರು. ಈ ಜಾಹೀರಾತುಗಳಿಗೆ ಮಾರು ಹೋಗಲು ನಮ್ಮ ಸಾಮಾಜಿಕ ಅಂತಸ್ತು ಕೂಡ
ಅನೇಕ ಸಂದರ್ಭಗಳಲ್ಲಿ ಕಾರಣವಾಗುತ್ತದೆ. ಉದಾಹರಣೆಗೆ ದಾಡಿಮಾಡಿಕೊಳ್ಳಲು ಯಾವ
ಸೋಪಾದರೂ ನಡೆಯುತ್ತದೆ. ಆದರೆ ನಮ್ಮ ಗಳಿಕೆ ಹೆಚ್ಚಾದಂತೆ ನಾವು ಖರೀದಿಸುವ
ಸೋಪಿನ ಬದಲಿಗೆ ಕ್ರೀಮ್ ಬರುತ್ತದೆ, ಕ್ರೀಮಿನ ಬದಲಿಗೆ ಫೋಮ್ ಬರುತ್ತದೆ. ಶೇವ್ ಮಾಡಿಕೊಳ್ಳಲು ಎಂಟಾಣೆಯದೋ ಒಂದು ರೂಪಾಯಿದೋ ಬೇಡಾದರೆ ಸಾಕು. ಆದರೆ ನಮಗೆ ನಲ್ವತ್ತು ರೂಪಾಯಿಯ ಜಿಲ್ಲೆಟ ಬೇಡ್ ಬೇಕು. ಎರಡೂ ನಡೆಯುವುದು ಅಷ್ಟೇ
ದಿನ. ಆದರೆ ಅಂತಸ್ತು ಎಂಬುದೊಂದಿರುತ್ತದಲ್ಲ.
ಇಂಥ ಮಾಲುಗಳ ತಯಾರಿಕೆಗಿಂತ ಅವುಗಳ ಪ್ಯಾಕಿಂಗ್ ಬೆಲೆಯೇ
ಜಾಸ್ತಿಯಾಗಿರುತ್ತದೆ. ಐವತ್ತು ಪೈಸೆಗೋ ಒಂದು ರೂಪಾಯಿಗೋ ತಯಾರಾಗುವ ಮಾಲಿನ
ಮುಖ ಬೆಲೆ ಮಾರುಕಟ್ಟೆಯಲ್ಲಿ ಹತ್ತರಿಂದ ಇಪ್ಪತ್ತು ರೂಪಾಯಿಯಷ್ಟಿರುತ್ತದೆ. ಇದರಲ್ಲಿ
ತಯಾರಕನ ಲಾಭ, ಜಾಹೀರಾತಿನ ಖರ್ಚು, ಸಾಗಾಣಿಕೆಯ ಖರ್ಚು, ಮಧ್ಯವರ್ತಿಯ ಲಾಭ, ಸೇಲ್ಸ ಏಜೆಂಟರ ಕಮೀಶನ್ನು ಇವೆಲ್ಲ ಸೇರಿರುತ್ತದೆ, ಚಿಲ್ಲರೆ ವ್ಯಾಪಾರಿಯು ಮುಖ ಬೆಲೆಯ ಮೇಲೆ ತನಗೆಷ್ಟು ಲಾಭ ಗಿಟ್ಟುತ್ತದೆ ಎಂದು ನೋಡುತ್ತಾನೆ. ಹೆಚ್ಚು ಲಾಭಾಂಶ
ಕೊಡುವ ಮಾಲನ್ನೇ ಪ್ರಾರ ಮಾಡಿ ಮಾಡಿ ಮಾರುತ್ತಾನೆ. ಹೀಗಾಗಿ ಉತ್ಪಾದಕನು ಬೆಲೆಯನ್ನು ನಿರ್ಧರಿಸುವಾಗ ತನ್ನ ಲಾಭಕ್ಕಿಂತ ಹೆಚ್ಚಾಗಿ ಚಿಲ್ಲರೆ ವ್ಯಾಪಾರಿಯ ಲಾಭಾಂಶವನ್ನು ಗಮನಿಸುತ್ತಾನೆ. ಇದರಲ್ಲಿ ಜಾಹೀರಾತುಗಳಿಗಾಗಿ ಖರ್ಚಾಗುವ ಮೊತ್ತವೆ ಅಧಿಕವಾಗಿರುತ್ತದೆ.
ಈ ಜಾಹೀರಾತುಗಳಿಗಾಗಿ ಖಾಸಗಿ ಉದ್ಯಮಿಗಳಷ್ಟೇ ಖರ್ಚು ಮಾಡುತ್ತಾರೆ ಎಂದಲ್ಲ, ಸರಕಾರವೂ ಕೂಡ ಈ ಖರ್ಚಿನಲ್ಲಿ ಜಿಪುಣತನ ತೋರುವುದಿಲ್ಲ. ವ್ಯಾಪಾರಿಯಾದವನು ಜಾಹೀರಾತಿಗಾಗಿ ಖರ್ಚು ಮಾಡುವಾಗ ಅಷ್ಟು ಹಣ ತಾನು
ಇಂದಲ್ಲ ನಾಳೆಯಾದರೂ ಗಳಿಸಬಹುದು ಎಂದು ಯೋಚಿಸಿ, ಜೂಜಾಟದಲ್ಲಿ ಹಣ
ತೊಡಗಿಸುವಂತೆ ಇಲ್ಲಿ ಖರ್ಚು ಮಾಡುತ್ತಾನೆ. ಆದರೆ ಸರ್ಕಾರಕ್ಕೆ ಆ ತಾಪತ್ರಯ ಇರುವುದಿಲ್ಲ.
ಜನತೆಯ ಹಣ, ಎಷ್ಟು ಬೇಕಾದರೂ ಖರ್ಚು ಮಾಡಬಹುದು. ಅಧಿಕಾರದಲ್ಲಿ ನೂರು
ದಿನ ಪೂರೈಸಿದ ಸರಕಾರ ಶತದಿನೋತ್ಸವ ಆಚರಿಸುತ್ತದೆ. ಸಾಕ್ಷರತೆಯ ಪ್ರಚಾರಕ್ಕಾಗಿ
ಐವತ್ತು ವರ್ಷಗಳಿಂದ ಕೊಟ್ಯಾನು ಕೋಟಿ ಹಣ ಖರ್ಚು ಮಾಡಿ ಪ್ರಚಾರ ಮಾಧ್ಯಮಗಳ
ಮೂಲಕ ಜನತೆಯ ಎದುರಿಗೆ ಪಾರದರ್ಶಕತೆಯನ್ನು ಮಂಡಿಸುತ್ತದೆ. ಅಂದರೆ ಐವತ್ತು
ವರ್ಷಗಳ ಹಿಂದೆ ಸರಕಾರಿ ದಾಖಲೆಗಳಲ್ಲಿ ಸಾಕ್ಷರನಾದ ವ್ಯಕ್ತಿ ಇಂದಿನವರೆಗೂ ತಾನೊಬ್ಬನೇ
ನಿರಕ್ಷರನಾಗಿರದೆ ಆತನ ಮಕ್ಕಳು, ಮೊಮ್ಮಕ್ಕಳು ಕೂಡ ನಿರಕ್ಷರರಾಗಿಯೇ ಮುಂದು
ವರೆದಿರುತ್ತಾರೆ. ಒಂದು ವೇಳೆ ಆತ, ಆತನ ಕುಟುಂಬ ನಿಜವಾಗಿಯೂ ಸಾಕ್ಷರವಾಗಿ ಬಿಟ್ಟಿದ್ದರೆ ಮುಂದೆ ಬರಲಿರುವ ಸರಕಾರಗಳು ಯಾರನ್ನು ಸಾಕ್ಷರಗೊಳಿಸಬೇಕು. ಸರಕಾರದ
ಕಪ್ಪು ಹಲಗೆ ಕಾರ್ಯಕ್ರಮ ಹೇಗೆ ಯಶಸ್ವೀಯಾಗಬೇಕು. ಸರಕಾರ ನೀಡುವ ಈ ಜಾಹೀರಾತುಗಳು ಏನನ್ನು ಸಾಧಿಸುತ್ತವೆ ಎಂಬುದನ್ನು ಆಲೋಚಿಸಬೇಕು. ಜಾಹೀರಾತುಗಳು ಇರಲೇ ಬಾರದು. ಎಂದು ನಾನು ಹೇಳುವುದಿಲ್ಲ. ಜಾಹೀರಾತುಗಳಿಂದಲೇ ನಾವು ಎಷ್ಟೋ ಸಂಗತಿಗಳನ್ನು ತಿಳಿದುಕೊಳ್ಳುತ್ತೇವೆ. ನಮ್ಮಲ್ಲಿ
ಸೌಂದರ್ಯ ಪ್ರಜ್ಞೆಯನ್ನು ಬೆಳೆಸಿದ ಮಾಧ್ಯಮವೇ ಜಾಹೀರಾತುಗಳು, ಬೇಲೂರಿನ ಕನ್ನಡಿ-
ಚೆಲುವೆಯ ಚಿತ್ರ ನೋಡಿಯೇ ನಾವು ಮೈಸೂರ ಸ್ಯಂಡಲ್ ಸೋಪಿಗೆ ಮಾರು ಹೋದದ್ದು. ಅತಿಥಿ, ಔತಣ, ಸನ್ಮಾನ ಮುಂತಾದ ಹೆಸರುಗಳನ್ನು ನೋಡಿಯೇ ನಾವು ನಮ್ಮ ಊಟ
ತಿಂಡಿಗಳಿಗೆ ಹೋಟೆಲ್ಲುಗಳನ್ನು ಆಯ್ಕೆ ಮಾಡಿಕೊಳ್ಳುವುದು, ಆದರೆ ಈ ಜಾಹೀರಾತುಗಳು
ಮನುಷ್ಯನ ಚಲಪತೆಯನ್ನು, ಪ್ರಲೋಭನೆಯನ್ನು, ಆಕಾಂಕ್ಷೆಗಳನ್ನು ಯಾವ ರೀತಿಯಾಗಿ
ತಪ್ಪು ದಾರಿಗೆ ಎಳೆದು ನಮ್ಮ ಆರೋಗ್ಯಕರವಾದಂಥ ಅಭಿರುಚಿಯನ್ನು ಕೆಡಿಸುತ್ತವೆ
ಎಂಬುದೇ ನನ್ನ ಆತಂಕವಾಗಿದೆ. ಯಾವುದೂ ತನ್ನಲ್ಲಿ ತಾನು ಕೆಡುಕಲ್ಲ. ಆದರೆ ಅದು ಅತಿಯಾಗಬಾರದು. ವ್ಯಾಪಾರದಲ್ಲಿ ಸ್ಪರ್ಧಾತ್ಮಕತೆ ಇದೆ ಎಂದು ತಿಳಿದು ಜಾಹೀರಾತುಗಳ
ಮೂಲಕ ಹಣಗಳಿಸುವ ಒಳದಾರಿಗಳನ್ನು ಕಂಡು ಕೊಳ್ಳುವುದು ಅಕ್ಷಮ್ಮ ಅಪರಾಧವಾಗುತ್ತದೆ.
ಈ ದಿಸೆಯಲ್ಲಿ ಗ್ರಾಹಕ ಸಂರಕ್ಷಣೆ ಕಾಯಿದೆ ಎಂಬುದೊಂದಿದೆ. ಅದಕ್ಕಾಗಿ ತಾಲ್ಲೂಕು
ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗ್ರಾಹಕ ವೇದಿಕೆಗಳೂ ಇವೆ. ಆದರೆ ಜಾಹೀರಾತುಗಳ ಮೂಲಕ ತಮಗಾಗುವ ಮೋಸ, ವಂಚನೆ ಕುರಿತು ಗ್ರಾಹಕ ವೇದಿಕೆಗೆ ಹೋಗುವಷ್ಟು ತಿಳುವಳಿಕೆ ಅಥವಾ ತಾಳ್ಮೆ ನಮ್ಮಲ್ಲಿ ಎಲ್ಲಿದೆ ? ಅಂಥ ಜಾಗೃತಿ ನಮ್ಮಲ್ಲಿ ಬರುವವರೆಗೆ ಈ ಜಾಹೀರಾತುಗಳ ಜಾಲದಲ್ಲಿ ಬಿದ್ದು ಒದ್ದಾಡುತ್ತಲೇ ಇರಬೇಕಾಗುತ್ತದೆ.
– ಭಾಲಚಂದ್ರ ಜಯಶೆಟ್ಟಿ ರಾಜೇಶ್ವರ.ಬೀದರ