Oplus_131072

ಕನ್ನಡ ಕಾವ್ಯದಲ್ಲಿ ‘ಸ್ವಾತಂತ್ರ್ಯ ಸಂತ ಗಾಂಧೀಜಿ’ಯ ಮಹಾ(ತ್ಮ) ಮಾರ್ಗ

 

ಡಾ. ರಾಜೇಂದ್ರ ಕುಮಾರ್ ಕೆ ಮುದ್ನಾಳ್.

 

ಜನವರಿ 30, ಗಾಂಧಿ ಹತ್ಯೆಯಾದ ದಿನ. ಗಾಂಧಿ ಇಹಲೋಕ ತ್ಯಜಿಸಿದ ದಿನ. ಭಾರತೀಯರು ಗಾಂಧಿಯನ್ನು ಕಳೆದುಕೊಂಡ ದಿನವನ್ನು ‘ಹುತಾತ್ಮರ ದಿನ’ವೆಂದು ಆಚರಿಸುತ್ತೇವೆ. ಆದರೆ ಇಹಲೋಕದಲ್ಲಿರುವ ಕವಿ ಮನಸುಗಳ ಆಂತರ್ಯದ ಸಂವೇದನೆಯನ್ನು ಕೇಳಲು ಗಾಂಧಿ ಇರಲಿಲ್ಲ. ನಮ್ಮ ಕಣ್ಣೀರ ಕೋಡಿಯನ್ನು ತಡೆಯುವುದಕ್ಕೆ ಗಾಂಧಿ ಬರಲಿಲ್ಲ . ‘ಪರೋಪಕಾರಂ ಇದಂ ಶರೀರಮ್ ‘ಎಂದ ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲಲಾಯಿತು.

 

ವಿಶ್ವ ಕಂಡ ಅಪರೂಪದ ಅಹಿಂಸಾವಾದಿ, ಅಸಹಕಾರದ ಮುತ್ಸದ್ದಿ, ಉಪವಾಸ ಸತ್ಯಾಗ್ರಹದ ಮುಂಚೂಣಿಯ ನಾಯಕ, ಪ್ರಯೋಗಶೀಲ ಗಾಂಧಿಯನ್ನು ನಾವು ಮರೆಯಲು ಸಾಧ್ಯವೇ? ಭಾರತವನ್ನು ಸ್ವತಂತ್ರಗೊಳಿಸಲು ಪ್ರತಿದಿನ ಗಾಂಧಿ ರೂಪಿಸುತ್ತಿದ್ದ ಕಾರ್ಯತಂತ್ರ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿ ಮಾಡುತ್ತಿತ್ತು . ಅಸಹಕಾರ ಚಳವಳಿ, ದಂಡಿಯಾತ್ರೆ ಹೋರಾಟದ ಮೂಲಕ ಅಹಿಂಸಾ ತತ್ವವನ್ನು ಪ್ರತಿಪಾದಿಸಿದ ಮೇಧಾವಿ. ಕೃಶ ಶರೀರ, ಕೈಯಲ್ಲಿ ಬಡಿಗೆ, ಸದಾ ಹಸನ್ಮುಖಿಯಾಗಿ, ಪತ್ರಕರ್ತನಾಗಿ, ನ್ಯಾಯವಾದಿ ಯಾಗಿ, ವೈದ್ಯನಾಗಿ ತನ್ನನ್ನು ತಾನು ಪ್ರಯೋಗಕ್ಕೆ ಒಳಪಡಿಸಿಕೊಂಡ ಗಾಂಧಿಯನ್ನು ‘ಆಧುನಿಕ ಭಾರತದ ಸ್ವಾತಂತ್ರ್ಯದ ಸಂತ ‘ಎಂದು ಕರೆಯಬಹುದು. ಇಂತಹ ಸತ್ಯಾಗ್ರಹಿಯನ್ನು ಅಹಿಂಸಾವಾದಿಯನ್ನು 77 ವರ್ಷಗಳ ಹಿಂದೆ 1948 ಜನವರಿ 30, ರಂದು ಗುಂಡಿಟ್ಟು ಕೊಂದಾಗ ‘ಭೂಮಿ ನಡುಗಿತು ಬಾನ್ ಗುಡುಗಿತು ‘ ಎಂದು ಕವಿ ಮನಸ್ಸುಗಳು, ಸಹೃದಯಗಳು ನೊಂದುಕೊಂಡವು. ಗಾಂಧೀಜಿಯ ಹತ್ಯೆ ವಿಶ್ವಕ್ಕೆ ಎಲ್ಲಿಲ್ಲದ ಆಘಾತವನ್ನುಂಟು ಮಾಡಿತ್ತು.

ಕವಿಗಳು ಆ ದಿನದ ನೋವನ್ನು ತಮ್ಮ ಕವಿತೆಗಳಲ್ಲಿ ವ್ಯಕ್ತಪಡಿಸಿದ ರೀತಿಯನ್ನು ಈ ಲೇಖನದಲ್ಲಿ ದಾಖಲಿಸುವ ಪ್ರಯತ್ನ ಮಾಡಲಾಗಿದೆ. 1960 ರಲ್ಲಿ ಗಾಂಧಿ ಸ್ಮಾರಕ ನಿಧಿ ಪ್ರಕಾಶನದವರು ‘ಬಾಪೂ ಕಾವ್ಯಂಜಲಿ’ಯನ್ನು ಪ್ರಕಟಿಸಿದರು. ಆಗ ಈ ಪುಸ್ತಕದ ಬೆಲೆ ಒಂದು ರೂಪಾಯಿ ಮಾತ್ರ . ಆದರೆ ಅದರ ಮೌಲ್ಯಇಂದು ಹಣಕ್ಕಿಂತಲೂ ಹೆಚ್ಚು ಎನ್ನಬಹುದು. ಏಕೆಂದರೆ ಆ ಕಾಲದ ಕವಿಗಳು ತಾವು ಕಂಡು ಕೇಳಿದ ಗಾಂಧಿಯ ಮಹಿಮೆ,ಸಾಧನೆಯ ಸೋಲು ಗೆಲುವನ್ನು,ಸಾವನ್ನು ದಾಖಲಿಸಿದ ಪುಸ್ತಕವಿದು. ರಾ.ಯ. ಧಾರವಾಡಕರರು ಈ ಪುಸ್ತಕದ ಸಂಪಾದಕರು. 44 ಜನರ ಕವಿಗಳ 58 ಕವಿತೆಗಳನ್ನು ಸಂಪಾದಿಸಿ ಓದುಗರಿಗೆ ನೀಡಿದ್ದಾರೆ. ಕುವೆಂಪು, ಬೇಂದ್ರೆ, ಮಾಸ್ತಿ,ಅಡಿಗ, ವಿನಾಯಕ, ಡಿ.ವಿ.ಜಿ, ಈಶ್ವರ್ ಸಣ್ಣಕಲ್, ತೀ.ನಂ.ಶ್ರೀ, ಪು.ತಿ.ನ. ಗೌರಿಶ್ ಕಾಯ್ಕಿಣಿ ಇತ್ಯಾದಿ ಕವಿಗಳು ಗಾಂಧೀಜಿ ವ್ಯಕ್ತಿತ್ವದ ದರ್ಶನ ಮಾಡಿಸುತ್ತವೆ.

ಜನವರಿ 30, ಗಾಂಧಿ ಹತ್ಯೆಯಾದ ದಿನ. ಗಾಂಧಿ ಇಹಲೋಕ ತ್ಯಜಿಸಿದ ದಿನ. ಭಾರತೀಯರು ಗಾಂಧಿಯನ್ನು ಕಳೆದುಕೊಂಡ ದಿನವನ್ನು ‘ಹುತಾತ್ಮರ ದಿನ’ವೆಂದು ಆಚರಿಸುತ್ತೇವೆ. ಆದರೆ ಇಹಲೋಕದಲ್ಲಿರುವ ಕವಿ ಮನಸುಗಳ ಆಂತರ್ಯದ ಸಂವೇದನೆಯನ್ನು ಕೇಳಲು ಗಾಂಧಿ ಇರಲಿಲ್ಲ. ನಮ್ಮ ಕಣ್ಣೀರ ಕೋಡಿಯನ್ನು ತಡೆಯುವುದಕ್ಕೆ ಗಾಂಧಿ ಬರಲಿಲ್ಲ . ‘ಪರೋಪಕಾರಂ ಇದಂ ಶರೀರಮ್ ‘ಎಂದ ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲಲಾಯಿತು ಎಂಬ ನಿವೇದನೆ ಕೆ.ಎಸ್. ನರಸಿಂಹಸ್ವಾಮಿ ರಚಿಸಿದ ‘ಗಾಂಧಿಸ್ತವನ’ ಕವಿತೆ ಸಾಲುಗಳಲಿ ಕಾಣಬಹುದು.

“ಲೋಕಸೇವೆಗೆ ಮುಡಿಪು ದೇಹವೆಂದರೆ
ಲೋಕ ನುಡಿದವನ ದೇಹವನ್ನೇ ಬಲಿಗೊಂಡಿತು
ನೆಲದ ನೋವನ್ನು ಅರಿತು
ಅಮೃತ ಪಾತ್ರೆಯ ತಂದ ದಾನಿಯನ್ನು ಕೈಯಾರ ಕೊಂದರಿವರು “ಎಂದು ಕವಿ ಮರುಗುತ್ತಾರೆ. ನಾವು ನಮ್ಮವರು ಎಂಬ ಭಾವನೆಯಿಂದ ದುಡಿದವನಿಗೆ ಈ ಲೋಕದಲ್ಲಿ ಮೌಲ್ಯ ದೊರೆಯುವುದಿಲ್ಲ. ಅಮೃತ ಕುಡಿಸುವವನಿಗೆ ವಿಷ ಕುಡಿಸುವ ಜನತೆಯನ್ನು ನಾವು ಕಾಣುತ್ತಿದ್ದೇವೆ. ಸತ್ಯಾಗ್ರಹಿಯಾದ ಗಾಂಧೀಜಿ ಬ್ರಿಟಿಷರನ್ನು ನಿಶಸ್ತ್ರದಿಂದ ಭಾರತ ಬಿಟ್ಟು ಹೋಗುವಂತೆ ಮಾಡಿದ ಯೋಧ. ಬಲು ಕಷ್ಟದ ಸಮಯದಲ್ಲಿ ಗಾಂಧಿ ಭಾರತಕ್ಕೆ ಬಂದು ಉಸಿರಿರುವವರೆಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಕೆ.ಎಸ್. ಎನ್. ಮುಂದುವರೆದು
ಸಿಡಿಮದ್ದು ಗುಂಡುಗಳ ಸಡಗರ
ಸಮಯದಲಿ
ಬರಿಗೈಲಿ ಹೊರಟವನು ಬದುಕಿ ಬಂದೆ
ನೀನೆ ಬೆಳಸಿದ ಧನ್ಯ ದರ್ಶನದ ಯಜ್ಞದಲ್ಲಿ ಸರ್ವಬಲಿ ನೀನಾಗಿ ಮುಗಿದೆ ತಂದೆ “

ಕವಿ ಬಳಸುವ ಈ ರೂಪಕಗಳನ್ನು ಗಮನಿಸಿದಾಗ ಈಗಾಗಲೇ ವಿಶ್ವ ಎರಡು ಮಹಾಯುದ್ಧಗಳನ್ನು ಕಂಡಿದೆ. 1914 ರಿಂದ 1918ರವರೆಗೆ ಮೊದಲ ಮಹಾಯುದ್ಧ, 1939ರಿಂದ 1945 ರ ನಡೆದ ಎರಡನೇ ಯುದ್ಧದಲ್ಲಿ ಅನೇಕ ಸಾವು, ನೋವು, ಸಂಕಷ್ಟಗಳು ಇಡೀ ವಿಶ್ವವನ್ನು ನಿಬ್ಬೆರಗಾಗಿಸಿದ್ದವು. ಈ ಸಂದರ್ಭದಲ್ಲಿ ಗಾಂಧಿ ಅಹಿಂಸೆಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದು ವಿಶೇಷ. ಹಿಂಸೆಯಿಂದ ಆಗುವ ನೋವು ಗಾಂಧಿಗೆ ತಿಳಿದಿತ್ತು.ಹಾಗಾಗಿ ಭಾರತ ಸ್ವತಂತ್ರಗೊಳಿಸಲು ಗಾಂಧಿ ಅಹಿಂಸಾ ಮಾರ್ಗವನ್ನು ಅನುಸರಿಸಿದರು. ಮಹಾತ್ಮಾನ ಅಹಿಂಸೆಯ ನಡಿಗೆಗೆ ವಿಶ್ವವೇ ತಲೆದೂಗುತಲಿತ್ತು. ಆದರೆ ಕವಿ, ಗಾಂಧಿ ಅಹಿಂಸೆಯ ದಾರಿಯಲ್ಲಿ ನಡೆದರೂ ಕೂಡ ಯಜ್ಞಕ್ಕೆ ಎಲ್ಲರನ್ನೂ ಬಲಿಕೊಡುವ ಬದಲು ತಾನೇ ಸರ್ವರ ಪ್ರತಿನಿಧಿಯಾಗಿ ಬಲಿಯಾಗಲು ಮುಂದಾದನೆ ಎಂದು ಕವಿತೆ ದುಃಖಿಸುತ್ತಿದೆ ಎನ್ನಬಹುದು .

ಕೆ. ಎಸ್. ಎನ್. ಮುಂದುವರಿದು “ಮಾನವತೆಯಿಂದ ಅಂಬರವ ತುಂಬಿದ ಉಸಿರೇ ನಿನ್ನ ಬಾಳಿನ ಚೆಲುವ ನೀನೆ ಸಾರು ” ಹಿಂಸೆಯಿಂದ ಅಹಿಂಸಾವಾದಿಗೆ ಸಾವಿನ ಕದ ತಟ್ಟಿದ ನಡೆಗೆ ಧಿಕ್ಕಾರ ಎಂಬ ಅರ್ಥವೂ ಸೇರಿ ಕೊಂಡಿದೆನಿಸುತ್ತದೆ. ಆದರೆ ಆತನ ಅಹಿಂಸೆಯ ಉಸಿರು ಬಾನಂಗಳದಲ್ಲಿ ನಲಿದಾಡುತ್ತಿದೆ.ಅದಕ್ಕೆ ಗಾಂಧಿ ಮಾರ್ಗವೇ ಸಾಕ್ಷಿ ಎಂಬ ಆಲೋಚನೆ ಕವಿತೆಯದ್ದು.

ಬೇಂದ್ರೆ ಕೂಡ ಹಾಗೆ, ಗಾಂಧೀಜಿ ಗುಂಡೇಟಿಗೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ, ಗುಂಡೇಟಿಗೆ ದೇಹ ಸಾಯಬಹುದೇ ಹೊರತು ಗಾಂಧೀಯ ವಿಚಾರ, ಸತ್ಯತೆಗಳು ಸಾಯುವುದಿಲ್ಲವೆಂದು ಕವಿ ನುಡಿಯುತ್ತಾರೆ.
‘ಬತ್ತಿ ಸುಟ್ಟು ಹೋದರೆ ಏನು ಬೆಳಕು ನಂದಿತೇಂಬರೇ ‘ ಎಂದು ಗಾಂಧೀತನದ ಬೆಳಕಿನ ಕಿರಣದ ಉಪವಾಸ ಸತ್ಯಾಗ್ರಹ, ಅಸಹಕಾರ, ಪ್ರಯೋಗಶೀಲತೆಗೆ ಸಾವಿದೆಯೇ? ಎಂದು ಪಟ್ಟ ಭದ್ರ ಹಿತಾಸಕ್ತಿಗಳಿಗೆ ಕವಿತೆ ಮತ್ತೆ ಮತ್ತೆ ಪ್ರಶ್ನೆ ಮಾಡುತ್ತಲೇ ಇರುತ್ತದೆ ಎಂದು ಬೇಂದ್ರೆ ಗಾಂಧಿಯನ್ನು ಜೀವಂತವಾಗಿಡುತ್ತಾರೆ.

ಗಂಗಾಧರ ಚಿತ್ತಾಲರ ಗಾಂಧೀಯ ಸಾವಿಗೆ ‘ಮಹಾತ್ಮ’ ಕವಿತೆಯಲ್ಲಿ
ನಿನ್ನ ನೆತ್ತರ ನೆಲೆಕ್ಕೆ ಚೆಲ್ಲಿದಂದು ಮಣ್ಣು ನಡುಗಿತು ಹಗಲ ಹೂ ಬಾಡಿತು
ನರನು ಕೆರಳುವ ಹುಂಬ ಬಾಳುಯೂಪಸ್ತoಬ
ಉತ್ತಮರ ಬಲಿ ಇಲ್ಲಿ ಬಾನಾಡಿತು “

ಗಾಂಧೀಜಿ ಗುಂಡೇಟಿಗೆ ಬಲಿಯಾದಾಗ ಮಹಾತ್ಮನ ರಕ್ತ ಈ ಭೂಮಿಗೆ ಚೆಲ್ಲಿದಾಗ ಈ ಮಣ್ಣು ಅಂದರೆ ಈ ಭೂಮಿ ಕಂಪಿಸಿತು, ಹಗಲ ಹೂ ಬಾಡಿತೆಂಬುದು ಇಲ್ಲಿ ಸೂರ್ಯನು ಕೂಡ ಮೋಡದ ಮರೆಗೆ ಧಾವಿಸಿದ ಅಥವಾ ಬೆಳಕಿಲ್ಲದಂತಾದ ಎಂಬರ್ಥಗಳು ಬರುತ್ತವೆ. ಈ ದೃಶ್ಯವನ್ನು ನಾನು ನೋಡಲಾರನೆಂದು ಸೂರ್ಯ ಅದೃಶ್ಯನಾದನೆ? ಎಂಬ ಸಂಶಯವು ಕಾಡುತ್ತದೆ. ನರ ರೂಪದ ಮಾನವನ ಅಟ್ಟಹಾಸಕ್ಕೆ ಈ ಜೀವನ ಯಜ್ಞಕ್ಕೆ ಬಲಿಯಾಯಿತು ಎಂದು ಕವಿತೆ ನೊಂದುಕೊಳ್ಳುತ್ತದೆ.

ಕ್ರಿಸ್ತನು ತನ್ನದಲ್ಲದ ತಪ್ಪಿಗೆ ಶಿಲುಬೆಗೇರಿ ಪ್ರಾಣವನ್ನು ಅರ್ಪಿಸಿದಂತಾಯಿತು ಗಾಂಧಿಯ ಹತ್ಯೆ. ಉತ್ತಮರೆ ಇಲ್ಲಿ ಗುಂಡೇಟಿಗೆ ಬಲೆಯಾಗುತ್ತಿದ್ದಾರೆ ಹೊರತು ಕೆಟ್ಟವರು ಹಾಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ ಎಂಬ ಕೊರಗು ಕೂಡ ಇದೆ. ಕವಿ ನುಡಿದ ಭವಿಷ್ಯ ಇಂದು ನಿಜವಾಗತೊಡಗಿದೆ ಅದೆಷ್ಟೋ ಜನರು ಇಂದು ಗುಂಡೇಟಿಗೆ ಬಲಿಯಾಗುತ್ತಿದ್ದಾರೆ.ಪ್ರಶ್ನೆ ಮಾಡಿದವರನ್ನು ಗುಂಡಿಟ್ಟು ಕೊಲ್ಲುವ ನೀಚ ಸಂಸ್ಕೃತಿ ಮುನ್ನಲೆಗೆ ಬರುತ್ತಿರುವುದು ಆತಂಕ ಕಾರಿ ಬೆಳವಣಿಗೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ವಾಣಿ ಇಂದು ನಿಜವಾಗತೊಡಗಿದನಿಸುತ್ತದೆ. ನಾವೆಲ್ಲರು ಅಂತಹ ಅಂಧಕಾರ ಶಕ್ತಿಗಳ ವಿರುದ್ಧ ಹೋರಾಟ ಮಾಡ ಬೇಕಾದ ಅನಿವಾರ್ಯತೆ ಇದೆ. ಅದು ಗಾಂಧಿಯ ಮಾರ್ಗದಲ್ಲಿ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕು.

ಏಕೆಂದರೆ ಜಿ.ಎಸ್. ಶಿವರುದ್ರಪ್ಪನವರು ‘ಕಂಡದ್ದು ಮೂರು ಸಲ’ ಕವಿತೆಯಲ್ಲಿ ಗಾಂಧೀಜಿಯ ವ್ಯಕ್ತಿತ್ವವನ್ನು ತೋರ್ಪಡಿಸುತ್ತಾರೆ.

ಮೂರು ಸಿಡಿ ಗುಂಡುಗಳ ಪೂಜೆ ಸಂದಿತು ಎದೆಗೆ
ಪಂಜರ ಬಿರಿದು ರಾಮಾ ರಾಮಾ ಎಂದು ಹಕ್ಕಿಹಾರಿತು ಹೊರಗೆ,
ತನ್ನ ಮನೆಗೆ
ಶಿಲುಬೆಯಲಿ ಕ್ರಿಸ್ತ ನಿನ್ನು ನಿಂತು ಹೇಳುವ ಮಾತು
ಕೇಳಿತು ಕಿವಿಗೆ, ಕ್ಷಮಿಸು ತಂದೆ ಕ್ಷಮಿಸು
ಇವರ ಕನಿಕರಿಸು “

ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ಜನರನ್ನು ಕುರಿತು ಏಸು ಇವರು ಏನು ಅರಿಯರು ಇವರನ್ನು ಕ್ಷಮಿಸಿಬಿಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾನೆ. ಗಾಂಧೀಜಿ ಕೂಡ ತನ್ನ ಸಾವನ್ನು ಬಯಸಿದ ವ್ಯಕ್ತಿಗೂ ಕೂಡ ಕೇಡನ್ನು ಬಯಸದೆ ಒಳ್ಳೆಯದನ್ನೇ ಮಾಡು ಪ್ರಭು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರೆಂದು ಕವಿ ಹೋಲಿಸಿದ್ದಾರೆ. ತಾನು ಮಾಡದ ತಪ್ಪಿಗೆ ಯೇಸು ಶಿಲುಬೆಯಲ್ಲಿ ಪ್ರಾಣತೆತ್ತಬೇಕಾಯಿತು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಗಾಂಧಿಯು ಕೂಡ ಗುಂಡೇಟಿಗೆ ಬಲಿಯಾಗಬೇಕಾಯಿತು.

‘ಯೋಗಿ ತ್ಯಾಗಿ ಹಾ ವಿರಾಗಿ!’ ಎಂಬ ಕವಿತೆಯಲ್ಲಿ ಆರ್. ಸಿ. ಹಿರೇಮಠ್ ರು ಗಾಂಧಿಯನ್ನು ಹಿಮಗಿರಿಗೆ ಹೋಲಿಸುತ್ತಾರೆ.
“ಹಿಮದಗಿರಿಗೆ ಉರಿಯು ಹತ್ತಿ
ತಮದ ನಾಲಿಗೆಯನೆತ್ತಿ
ನೆಲವ ನೆಕ್ಕಿ ನಭವ ಮುಕ್ಕೆ ಕರುಣ ಮರಣ ಹೊಂದಿತೇ!” ಎಂದು ಕಳವಳಗೊಳ್ಳುತ್ತಾರೆ.

ಬಾಫುವನ್ನು ಕಳೆದುಕೊಂಡು ಭಾರತ ಅನಾಥವಾಗುತ್ತಿದೆ ಎಂದು ಪ್ರಜ್ಞೆ ಕೆಲವರಲ್ಲಿ ಕಾಡಿದರೆ ಮತ್ತು ಗಾಂಧೀಜಿ ಆಸೆಗಳು ಯಾವ ಗುಂಡೇಟಗಿ ಬಲಿಯಾಗುವುದಿಲ್ಲ. ಗಾಂಧೀಜಿಯ ತತ್ವಗಳು ಬುಲೆಟ್ ಪ್ರೂಫ್ ಗಳಂತೆ ಸಮುದಾಯದಲ್ಲಿ ಕಾರ್ಯನಿರ್ವಹಿಸುತ್ತೆ ಎಂಬ ಭಾವವನ್ನು ಕೂಡ ಕವಿತೆಗಳಲ್ಲಿ ಕಾಣಬಹುದು.

ಎಂ ಅಕ್ಬರಲಿ ‘ನಾಡನೇಸರ ಬಾಪು’ಕವಿತೆಯಲ್ಲಿ

ಸಿಡಿಗುಂಡಿ ಗೊಡೆದ ಕನ್ನಡಿಯಾದರೇನಂತೆ?
ನಾಡನೇಸರನಾತ್ಮವಮರವಹುದು
ನಕ್ಷತ್ರಗಳ ಪುಂಜವಾಗುತಲಿ ರಂಜಿಸುತ
ಬಾಳಿನೊಸಗೆಯ ಬಯಸಿ ಬೆಳಗುತಿಹದು!”

ಒಡೆದ ಕನ್ನಡಿ ಚೂರುಗಳಲ್ಲಿ ಗಾಂಧಿಯ ಮತ್ತಷ್ಟು ಪ್ರತಿಬಿಂಬಗಳು ಆತನ ಅಸ್ತಿತ್ವವನ್ನು ಸಾರುತ್ತವೆ. ಪ್ರತಿಯೊಂದು ಕನ್ನಡಿ ಚೂರುಗಳಲ್ಲಿ ನಕ್ಷತ್ರಗಳು ಕಾಣುವಂತೆ ಗಾಂಧೀಜಿ ಮಹಿಮೆ ಇದೆ. ನಮ್ಮ ಹಣೆಬರಹದ ಬಗ್ಗೆ ಯೋಚಿಸದೆ ಗಾಂಧೀಜಿ ನಮಗಿಂತಲೂ ಮುಂದೆ ಹೋಗಿ ನಮ್ಮ ಮಾರ್ಗವನ್ನು ಸರಿ ಮಾಡುವನು ಎಂಬ ಅಭಿಲಾಷೆ ಕವಿತೆಯದು.ಹಾಗಾಗಿ ದಿನಕರ ದೇಸಾಯಿಯವರು ‘ಗಾಂಧಿಯ ಸ್ಮಾರಕ’ ಕವಿತೆಯಲ್ಲಿ

ನಿನಗೇಕೆ ಸ್ಮಾರಕವು,ಶಿಲ್ಪಕೃತಿ ಹೂ ಮಾಲೆ
ಲೋಕವನೇ ಬೆಳಗುತಿದೆ ನಿನ್ನ ಎಲುಬಿನ ಜ್ವಾಲೆ!
ನಿನ್ನ ಪ್ರತಿಮೆಯ ನಿಲ್ಲಿಸಿ,ನಾವು ಮೆರೆಯುವುದು ವ್ಯರ್ಥ
ನಮ್ಮ ಹೃದಯದಲ್ಲಿ ನಿನ್ನ ಮರಣದ ಅರ್ಥ.

ಎಂಬ ಸಾಲುಗಳನ್ನು ಕವಿ ಬಿತ್ತುತ್ತಾರೆ. ಏಕೆಂದರೆ ಪ್ರತಿಯೊಂದು ಹಳ್ಳಿ,ಊರು,ತಾಲೂಕು ಜಿಲ್ಲೆಗಳಲ್ಲಿ ಗಾಂಧಿಯ ಮೂರ್ತಿಗಳು ರಾರಾಜಿಸುತ್ತಿವೆ.
ಆದರೆ ಗಾಂಧೀಜಿಯ ವಿಚಾರಗಳು ಸಮಾಜದಲ್ಲಿ ಗಾಳಿಗೆ ತೂರಲ್ಪಟ್ಟಿವೆ ಎಂಬ ನೋವು ಕವಿತೆಯದು . ಗಾಂಧೀಜಿಯ ಮೌಲ್ಯಯುತ ಮಾತುಗಳನ್ನ ಆಲೋಚನೆಗಳನ್ನ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದು ಎಂಬ ಧೋರಣೆಯನ್ನು ಎಲ್ಲಾ ಕವನಗಳಲ್ಲಿ ಕಾಣುತ್ತೇವೆ . ಗಾಂಧೀಜಿ ಇನ್ನಷ್ಟು ದಿವಸ ಬದುಕಬೇಕೆಂಬ ಆಸೆಯೇ ಪ್ರತಿಯೊಬ್ಬ ಕವಿಯ ಆಶಯವು ಆಗಿತ್ತು. ಆದರೆ ಕಾಲನ ಕೈಗೆ ನಾವೆಲ್ಲರೂ ತಾಳ ಹಾಕಲೇ ಬೇಕಲ್ಲವೇ?
ಗಾಂಧಿಯ ವಿಚಾರ ಕೇವಲ ಪುಸ್ತಕಗಳಲ್ಲಿ ಬರಹಗಳಲ್ಲಿ ಪ್ರತಿಮೆ ಛಾಯಾಚಿತ್ರಗಳಲ್ಲಿ ಮಾತುಗಳಲ್ಲಿದ್ದರೆ ಸಾಲದು ಕೃತಿಯಲ್ಲಿ ಇರಬೇಕೆಂಬ ಅಭಿಲಾಷೆ ಮೋಹನ್ ದಾಸ್ ಕರಮ್ಚಂದ್ ಗಾಂಧಿಯವರದಾಗಿತ್ತು. ಹಾಗಾಗಿ ಅವರು ತಮ್ಮ ಆತ್ಮಕಥೆಯನ್ನು ‘ನನ್ನ ಸತ್ಯಾನ್ವೇಷಣೆ ‘ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇಂದು ಗಾಂಧಿಯ ವಿಚಾರಗಳು ಕೋಲ್ಮಿಂ ಚಿನಂತೆ ಬಂದು ಮಾಯವಾಗುತ್ತಿವೆಯೇ ಹೊರತು ಮಳೆ ಹನಿಗಳಾಗಿ ಭೂಮಿಯನ್ನು ತಲುಪುತ್ತಿಲ್ಲ ಎಂಬ ಎಂಬ ನೋವು ಪ್ರಜ್ಞಾವಂತ ಸಮಾಜವನ್ನು ಕಾಡುತ್ತಿದೆ. ಕೃಷ್ಣಮೂರ್ತಿ ಪುರಾಣಿಕ್ ಅವರು ‘ಅಮರ ಜ್ಯೋತಿ’ ಕವಿತೆಯಲ್ಲಿ ಗಾಂಧಿಯನ್ನು

ಶತಕೋಟಿ ಜೀವಿಗಳ ಕಣ್ಣೀರ ಧಾರೆಯೊಳು
ನನ್ನೊಂದು ಹನಿ ನಿನಗೆ ಪುಣ್ಯಪುರುಷ
ನೊಂದ ಎದೆಯ ಗರ್ಭದೊಳು ಬಿಸಿಯುಸಿರೆ ಮಿಡುಕುವೊಲು
ಕಣ್ತುಂಬಿ ಸೂಸುತಿದೆ ಪುಣ್ಯ ಪುರುಷ”

 

– ಡಾ. ರಾಜೇಂದ್ರ ಕುಮಾರ್ ಕೆ ಮುದ್ನಾಳ್
ಸಂಶೋಧಕರು, ಯಾದಗಿರಿ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *