Oplus_131072

ಮಕರ ಸಂಕ್ರಾಂತಿ

ಎಳ್ಳು ಬೆಲ್ಲವ ನೀಡಿ ಒಳ್ಳೆ ಮಾತುಗಳಾಡಿ
ಬಂಧುಗಳ ಒಡಗೂಡಿ ಬಾಂಧವ್ಯ ಬೆಸೆದು
ದ್ವೇಷ, ಮತ್ಸರ ದೂಡಿ ಸಂತೋಷದಲಿ ಕೂಡಿ
ಸಂಕ್ರಾಂತಿ ಸಂಭ್ರಮವ ಸವಿಯೋಣವಿಂದು.

ಅಂಗಳದಿ ಬಣ್ಣದ ರಂಗೋಲಿ ಬಿಡಿಸಿ
ಬಾಗಿಲಿಗೆ ಮಾವಿನ ತೋರಣವನಿರಿಸಿ
ಹಳ್ಳಿಯಲಿ ರೈತರು ರಾಸುಗಳ ಸಿಂಗರಿಸಿ
ಸಂತಸವ ತಾಳುವರು ಕಿಚ್ಚನು ಹಾಯಿಸಿ.

ಎಳ್ಳು ಬೆಲ್ಲದ ಜೊತೆಗೆ ಕಬ್ಬು ಸಕ್ಕರೆ ಅಚ್ಚು
ತಿನ್ನುತಿರೆ ಬಾಯಿ ಸಿಹಿಯಾಗುವುದು ಹೆಚ್ಚು
ಸುಗ್ಗಿಯ ಹಬ್ಬದಲಿ ಹುಗ್ಗಿಯೂಟವ ಮಾಡಿ
ಸಂಭ್ರಮಿಸುವುದೆಲ್ಲರಿಗು ಅಚ್ಚು ಮೆಚ್ಚು.

ತನ್ನ ಪಥ ಬದಲಿಸುವ ಸೂರ್ಯದೇವನು ಇಂದು
ಮಕರ ರಾಶಿಗೆ ಅವನು ಕಾಲಿಡುವನೆಂದು
ಈ ಪುಣ್ಯಕಾಲಕೆ ಕಾದಿರುವ ಭೀಷ್ಮರು
ಶರಶಯ್ಯೆಯಲಿ ಪ್ರಾಣ ತ್ಯಜಿಸಿದರು ಅಂದು.

ಉತ್ತರಾಯಣ ಕಾಲ ಅದುವೆ ಪುಣ್ಯದ ಕಾಲ
ಸ್ವರ್ಗದ ಬಾಗಿಲು ತೆರೆದಿರುವ ಕಾಲ
ದೇವರಿಗೆ ನೈವೇದ್ಯ ಮಾಡಿ ಎಳ್ಳು ಬೆಲ್ಲ
ಭಗವಂತನ ಕೃಪೆಯ ಪಡೆಯೋಣ ಎಲ್ಲ.

– ಜಿ.ಎಸ್.ಗಾಯತ್ರಿ
ಶಿಕ್ಷಕಿ…. ಬಾಪೂಜಿ ಶಾಲೆ
ಹರಿಹರ.

 

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *