Oplus_131072

ಮಕ್ಕಳಿಗೆ ಕಿವಿಮಾತು

ಇರಬೇಕು ಮಕ್ಕಳೇ ಒಳಿತು ಕೆಡುಕಿನ ಅರಿವು
ಕೊನೆತನಕ ಜೀವನದ ಪಯಣದಲ್ಲಿ
ಇದನರಿತು ನಡೆದಾಗ ಯಾರಿಗೂ ಸಿಗದಿರುವ
ಸುಖವು ದೊರೆವುದು ನಿಮ್ಮ ಬದುಕಿನಲ್ಲಿ.

ತಂದೆ ತಾಯಿಯ ಪ್ರೀತಿ ನಿಮ್ಮ ಜೀವನದಲ್ಲಿ
ಹಿರಿದೆಂಬ ಸತ್ಯವನು ಅರಿಯಬೇಕು
ಗುರುಹಿರಿಯರನು ಗೌರವಿಸುವ ರೀತಿಯ ತಿಳಿದು
ಸಂಸ್ಕಾರಯುತರಾಗಿ ಬಾಳಬೇಕು.

ಓದುವ ವಯಸಿನಲಿ ಕೆಟ್ಟ ಚಟಗಳ ಬಲೆಗೆ
ಬೀಳದಿರಿ ಮಕ್ಕಳೇ ನೀವೆಂದಿಗೂ
ತಂದೆ ತಾಯಿಯ ಗುರುಗಳ ಮಾತು ಕೇಳಿದರೆ
ಬದುಕು ಹಸನಾಗುವುದು ಎಂದೆಂದಿಗೂ.

ಅಪರಾಧಗಳನೆಂದೂ ಮಾಡಿದಿರಿ ಮಕ್ಕಳೇ
ಜೀವನವು ಕ್ಷಣಿಕವೆಂಬುದ ತಿಳಿಯಿರಿ
ಇರುವಷ್ಟು ದಿನವೂ ಸನ್ಮಾರ್ಗದಲಿ ನಡೆದು
ಸಂತೋಷವನು ಎಲ್ಲರಿಗು ಹಂಚಿರಿ.

ಹೆತ್ತವರ ಮನಸನು ನೋಯಿಸದಿರಿ ನೀವು
ಹಗಲಿರುಳು ನಿಮಗಾಗಿ ದುಡಿಯುತಿಹರು
ನಿಮ್ಮ ಸುಖದಲಿ ಅವರು ಸಂತೋಷ ಕಾಣುತ್ತ
ತಮ್ಮ ಕಷ್ಟವನೆಲ್ಲ ಮರೆಯುತಿಹರು.

ಶಾಲೆಯಲಿ ಗುರುಗಳು ಕಲಿಸಿದ ಪಾಠಗಳ
ಮನವಿಟ್ಟು ಓದಿದರೆ ಒಳಿತು ನಿಮಗೆ
ಹಿಂದೆ ಗುರು ಇರುವಾಗ ನಿಮ್ಮ ಗುರಿ ಸಾಧಿಸಲು
ಕಷ್ಟವಾಗದು ನಿಮ್ಮ ಬದುಕಿನೊಳಗೆ.

ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ
ಇರಬೇಕು ನಿಮ್ಮ ನಡೆ ನುಡಿಯೆಂದಿಗೂ
ಕೆಟ್ಟ ಗುಣಗಳ ಬುಡದಿ ಕತ್ತರಿಸಿ ಹಾಕಿದರೆ
ಬಾಳುವಿರಿ ಸುಖವಾಗಿ ಕೊನೆಯವರೆಗೂ.

ಜಿ.ಎಸ್.ಗಾಯತ್ರಿ
ಶಿಕ್ಷಕಿ….ಬಾಪೂಜಿ ಶಾಲೆ
ಹರಿಹರ.

(ಮಕ್ಕಳ ದಿನಾಚರಣೆಯ ಪ್ರಯುಕ್ತ ಈ ಕವನ ಪ್ರಕಟಿಸಲಾಗಿದೆ)

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.