ಮಲ್ಯ (ಕತೆ)
– ಮಚ್ಚೇಂದ್ರ ಪಿ ಅಣಕಲ್.
ನಾನು ರಾತ್ರಿ ಮಲ್ಯನಿಗೆ ಹೊಡೆಯಬಾರದಾಗಿತ್ತು. ನಾನು ತಪ್ಪ ಮಾಡ್ದೆ. ಕುನ್ನಿಯಾಗಿದ್ದಾಗ ಇದೆ ಕೈಯಿಂದ ನೀರು ಹಾಕಿ, ಹಾಲು ಹಾಕಿ, ಸಾಕಿ ಸಲುಹಿ ದೊಡ್ಡದಾಗಿ ಮಾಡಿದೆ. ಈಗ ಇದೆ ಕೈಯಿಂದ ಎಂಥ ಅನಾಚಾರ ಮಾಡಿಬಿಟ್ಟೇ ? ರಾತ್ರಿ ಸಿಟ್ಟಿನಲ್ಲಿ ಮನೆ ಬಿಟ್ಟು ಹೋಗು ಅಂತ ಹೇಳಿದ್ರೆ ಮನೆ, ನನ್ನ, ಗೌರಿನಾ ಬಿಟು ಹೋಗೋದೆ ? ಛೇ! ಛೇ! ಎಲ್ಲರಿಗೂ ಬೇಡವಾಗಿದ ಮಲ್ಯ ನನ್ನ ಮಾತಿಗೆ ನೊಂದುಕೊಂಡನೆ ? ನಾನೆಂತ ಪಾಪಿ! ನನಗೆ ಆ ದೇವರು ಕ್ಷೇಮಿಸೋದಿಲ್ಲ. ಓ! ದೇವರೇ! ನನ್ ಮಲ್ಯನಿಗೆ ಬರಲು ಹೇಳು. ತಂದೆ ಬರಲು ಹೇಳು” ಅಂತ ಕಲ್ಲು ಬಂಡೆಯ ಮೇಲೆ ಕುಳಿತು ನನ್ನನ್ನೆ ನಾನು ಹಳಿದುಕೊಂಡು ದುಃಖಿಸಿದೆ
ಮಲ್ಯ’ ಅಂದ್ರೆ ಅದು ನಮ್ಮನೆ ನಾಯಿ ಹೆಸ್ರು. ನಾಯಿ ಅಂದ್ರೆ ಕೆಲವರು ಹೀನಾರ್ಥವಾಗಿ ಅರ್ಥೈಸುವುದುಂಟು . ಆದ್ರೆ ನಾಯಿಯಷ್ಟು ಪ್ರಮಾಣಿಕತೆ ಕೃತಜ್ಞತೆಯುಳ್ಳವ ರಾದರೂ ಯಾರು? ನಮ್ಮ ನಾಯಿ ಮಾನವ ಭಾಷೆ ತಿಳಿದುಕೊಂಡಿತ್ತು. ಅದು ನನ್ನ ಪುಣ್ಯವೋ ! ಏನೋ! ನನಗೊಂದು ತಿಳಿಯದು. ಆದರೂ ನನ್ನ ಬದುಕಿನಲ್ಲಿ ಶಾಸ್ವತ ನೆನಪಾಗಿ ಉಳಿದಿರುವ ಅದರ ಬಗ್ಗೆ ಹೇಳಬೇಕಾದ್ರೆ ನನ್ನ ಬಾಲ್ಯದ ಮೊರೆ ಹೋಗಬೇಕಾಗುತ್ತದೆ.
ನಾನಾಗ ಆರೇಳು ವರ್ಷದವನಿರಬೇಕು. ನಮ್ಮೂರು ಬಸವಕಲ್ಯಾಣದ ಕಿಣ್ಣಿ ಗ್ರಾಮ. ಇತ್ತೀಚಿಗೆ ಬೆಣ್ಣೆತೊರೆ ಆಲಮಟ್ಟಿ ಜಲಾಶಯದ ನೀರು ಬಂದು ಕೆಲವು ಗ್ರಾಮಗಳು ಸ್ಥಳಾಂತರವಾದಂತೆ 1981-82 ರಲ್ಲಿ ಮುಲ್ಲಾಮಾರಿ ಮೇಲ್ದಂಡೆ ಜಲಾಶಯದ ನೀರು ಪೂರ್ತಿ ನಮ್ಮೂರಿಗೆ ಆವರಿಸಿದ್ದರಿಂದ ಜನರ ಬದುಕು ಅಲ್ಲೋಲ-ಕಲ್ಲೋಲವಾಗಿತ್ತು. ನಮ್ಮೂರಿನ ಜನ ಎರಡು ಗುಂಪುಗಳಾಗಿ ಚದುರಿ ಹೋದರು. ಅಂದ್ರೆ ನದಿಯ ಆಚೆ ದಡದಲ್ಲಿ ಅರ್ಧದಷ್ಟು ಜನ; ನದಿಯ ಈಚೆ ದಡದಲ್ಲಿ ಅರ್ಧದಷ್ಟು ಜನ, ತಮ್ಮ ಸಂಸಾರದ ಉಳಿವಿಗಾಗಿ ಗುಡಿಸಲು ಹಾಕಿಕೊಂಡು ನೆಲೆ ನಿಂತರು.
ಕರ್ನಾಟಕ ಸರ್ಕಾರ ನದಿಯ ಈಚೆಗೆ ಊರು ಸ್ಥಳಾಂತರಿಸಲು ನಿರಾಶ್ರಿತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದರೆ; ಅದಕ್ಕೆ ಆಚೆಗಿದ್ದವರು ಸೌಲಭ್ಯ ಪಡೆಯದೆ ಅಲ್ಲೇ ಗುಡಿಸಲು ಹಾಕಿಕೊಂಡು ಜೀವಿಸುತ್ತಿದ್ದರು. ಅದಕ್ಕೊಂದು ಕಾರಣವೂ ಇತ್ತು. ಅದೇನಂದ್ರೆ ಅವರ ಹೊಲಗಳು ನದಿಯ ಆಚೆ ದಡದಲ್ಲಿ ಇದ್ದವು. ನಮ್ಮ ಹೊಲವು ಆಚೆಗೆ ಇರುವುದರಿಂದ ನಾವೂ ಕಾಡು ಜನರಂತೆ ಸೌಲಭ್ಯವಂಚಿತರಾಗಬೇಕಾಯಿತು. ಅಪ್ಪ ನನಗೆ ಶಾಲೆಗೆ ಸೇರಿಸದೆ ತುಂಬಿದ ಹಸುವೊಂದನ್ನು ಕೊಂಡು ಕಾಯುವುದಕ್ಕೆ ಹಚ್ಚಿದ. ನನಗೆ ಶಾಲೆ ಕಲಿಯಬೇಕೆಂಬ ಹಂಬಲವಿತ್ತು. ಆದ್ರೆ ಆಚೆ ದಡದಿಂದ ಈಚೆಗೆ ಇರೋ ಶಾಲೆಗೆ ಬರಬೇಕಾದ್ರೆ ನದಿಗೆ ಸುಲಭ ಸೇತುವೆ ಇರ್ಲಿಲ್ಲ. ನಮ್ಮನೆ ‘ಗೌರಿ’ ಹಸುವೊಂದನ್ನೆ ಕಾಯುತ್ತಿದ್ದ ನನಗೆ ಇನ್ನೂ ಕೆಲವರ ದನ ಕಾಯಲು ಅಪ್ಪ ಹೇಳಿದ. ಕಿತ್ತು ತಿನ್ನುವ ಬಡತನದಲ್ಲಿ ಅಪ್ಪನಿಗೆ ದುಡ್ಡಿನ ಸಹಾಯವಾಗಬಹುದೆಂದು ಒಪ್ಪಿಕೊಂಡೆ.
ಪ್ರತಿದಿನ ಸೂರ್ಯ ಮೂಡುವ ಮೊದ್ಲೇ ಐಗೋಳ್ ತಿಮ್ಮಯ್ಯ ಮತ್ತು ಮೇಕಾರ ದೇವಪ್ಪನ ಮನೆಗ್ಹೋಗಿ ಮಳೆ, ಚಳಿ, ಇದ್ರೂ ಕೂಡ ನಡುಗುತ್ತ , ಬಿಳಿಯ ತಾಡಪತ್ರಿ ಹೊದ್ದುಕೊಂಡು ಬರುತ್ತಿದ್ದೆ. ಬರುವಾಗ ‘ಗುರುತಾಯಿ !’ “ಗೌಡ್ತಿ!!” ಅಂತ ಕೂಗಿದ್ರೆ ಅವರು ಹೊರಗೆ ಬಂದು; ಒಂದು ತಂಗಳ ರೊಟ್ಟಿಯ ಮೇಲೆ ಪುಡಿಕಾರ್ ಹಚ್ಚಿ ಮೇಲಿನಿಂದ ಬಿಸಾಕುತ್ತಿದರು.ನನಗೆ ಅದ್ಯಾವದು ಅರ್ಥವಾಗುತ್ತಿರಲಿಲ್ಲ. ಆದರೂ ಮುಂಜಾನೆಯ ನ್ಯಾಯಾರಿಗಾಗಿ ರೊಟ್ಟಿ ಕೊಡುತ್ತಿದ್ದಾರಲ್ಲ!” ಅಂತ ಖುಷಿಲಿಂದ ಅಪ್ಪನ ಹಳೆಯ ದೋತರದ ಪಾವಡಿನಲ್ಲಿ ಸುತ್ತಿಕೊಂಡು ಒಂದು ದಿನ ಮೇಕಾರ ಗುಡ್ಡಕ್ಕೆ ಮತ್ತೊಂದು ದಿನ ಐಗೋಳ ಗದ್ದೆಗೆ ದನ ಮೇಯಿಸಲು ಹೋಗುತ್ತಿದ್ದೆ.
ದನಗಳು ಗುಡ್ಡದಲ್ಲಿ ಬಿಟ್ಟು ಬಂಡೆಯೊಂದರ ಮೇಲೆ ಕುಳಿತು ತಲೆಯ ಮೇಲೆ ಅಪ್ಪ ತಂದು ಕೊಟ್ಟ ಅಪ್ಪಟ ಗಾಂಧಿ ಟೋಪಿ ಹಾಕಿಕೊಂಡು ಹಿಂದೊಮ್ಮೆ ಅಜ್ಜಿ ಹೇಳಿದ ಈ ಹಾಡುಭೂಮಿ
” ಭೂಮಿ ಮೇಲೆ ಒಂದು ಮಿಕ ಕಂಡೇನು ! ಅದಕ್ಕೆ ಆರು ಕಾಲss ಆಹಾ! ತಲೆಯ ಇದ್ದಿದಿಲ್ರಿ….! “
ಅಂತ ಹಾಡ್ತಿದ್ದರೆ ದಾರಿ ಹೋಕರು ಕೇಳಿ ನಗುತ್ತಿದ್ದರು. ಮುಂಜಾನೆ ನಸುಕಿನಲ್ಲಿ ಹೋಗುವಾಗ ಸಂಜೆ ಕತ್ತಲಲ್ಲಿ ಬರುವಾಗ ಈ ಹಾಡು ಹಾಡುತ್ತಿದ್ದೆ. ಯಾಕೆಂದ್ರೆ ಒಂಬಟ್ಟಿಯಾಗಿದ್ದಾಗ ಭಯವಾಗುತ್ತಿತ್ತು. ಅದಕ್ಕೆ ಹಾಡುತ್ತಿದ್ದೆ.
ಒಂದು ದಿನ ನಾನು ಮೇಕಾರ ಗುಡ್ಡದಲ್ಲಿ ದನ ಕಾಯುತ್ತಿದ್ದಾಗ ಕಲ್ಲು ಬಂಡೆಯ ಕೆಳಗೆ ಬೀದಿ ನಾಯಿಯೊಂದು ಒಂಭತ್ತು ಮರಿಗಳಿಗೆ ಜನ್ಮ ನೀಡಿ ಅದ್ಯಾಕೋ ಸತ್ತಿತ್ತು. ಅದರ ಮರಿಗಳು ಕೂಡ ಹಾಲಿಲ್ಲದೆ ಅಸುನಿಗಿದ್ದವು. ಅದರಲ್ಲಿನ ಒಂದು ಗಂಡು ಮರಿ ಮಾತ್ರ ಇನ್ನೂ ಉಸಿರು ಬಿಟ್ಟಿರಲಿಲ್ಲ. ಪ್ರೀತಿಯಿಂದ ಆ ಮರಿಗೆ ಕೈಗೆತ್ತಿಕೊಂಡೆ. ಇನ್ನೇನು ಪ್ರಾಣ್ ಬಿಡುತ್ತದೋ! ಅನ್ನುವಷ್ಟರಲ್ಲಿ ಚಳಿಗೆ “ಗಡಗಡ” ನಡುಗುತ್ತಿತ್ತು. ಗುಡ್ಡದ ಕೆಳಗೆ ವಿಶಾಲವಾಗಿ ನಿಂತ ನದಿಯ ನೀರು ಕುಡಿಸಿದೆ. ಆಗ ಅದು ಸ್ವಲ್ಪ ಜೀವ ಬಂದಂತೆ ಚೇತರಸಿಕೊಂಡಿತ್ತು. ನಮ್ಮ ಗೌರಿ ಈದಿ ಒಂದು ವಾರವಷ್ಟೇ ಆಗಿತ್ತು. ಅದರ ತುಂಬಿದ ಕುಂಭಕ್ಕೆ ಕೈ ಹಾಕಿ ಮುತ್ತಲ ದೊಣ್ಣೆಯಲ್ಲಿ ಹಾಲು ಕರೆದು ಅದರ ಮುಂದಿಟ್ಟೆ. ಅದು ಕುಡಿದು ಬದುಕಿಕೊಂಡಿತ್ತು.
ಗಂಡು ಮರಿಯಾಗಿದ್ದರಿಂದ ಕಾಲಿನ ಉಗುರಗಳು ಎಣಿಸಿದೆ. ಬರೋಬ್ಬರಿ ಇಪ್ಪತ್ತೊಂದು.ಈ ಸಂಖ್ಯೆಯ ನಾಯಿಗಳು ಸಾಕುವುದಕ್ಕೆ ಉತ್ತಮ ಅನ್ನುವ ಮಾತು ಹಿಂದೊಮ್ಮೆ ಅಜ್ಜಿ ಹೇಳಿದ್ದು ನೆನಪಾಗಿ ಮನೆಗೆ ತಂದೆ. ಆದ್ರೆ ಅಜ್ಜಿಗೆ ತೋರಿಸೋಣವೆಂದ್ರೆ ಅವಳಿಲ್ಲದ ಬಾಲ್ಯ ನನ್ನದಾಗಿತ್ತು. ಅಮ್ಮಳಿಗೆ ತೋರಿಸಿದೆ.
“ಬೀದಿ ನಾಯಿಗೆ ಮನೆಗೆ ತಂದಿದ್ದಿಯಾ? ಅನಿಷ್ಠದ್ದು ತಳ್ಳು ಆಚೆಗೆ?” ಅಂತ ಅಮ್ಮ ಬೈಯತೊಡಗಿದಳು. ಅಷ್ಟೊತ್ತಿನಲ್ಲಿ ಬಂದ ಅಪ್ಪ ಕೂಡ
“ನಮಗೆ ತಿನ್ನಲು ಅನ್ನವಿಲ್ಲದ ಇಂತಹ ಬಡತನದಲ್ಲಿ ಈ ನಾಯಿ ಮರಿ ಯಾಕಪ್ಪ ? ಬಿಟ್ ಬಿಡು ಅದ್ಕೆ” ಅಂತ ವಿನಯದಿಂದ ಹೇಳಿದರು.
ಆಗ ನಾನು ” ಅಪ್ಪಾ ಈ ನಾಯಿಮರಿಗೆ ಬಿಟ್ ಬಿಡ್ತಿನಿ ನೀಜ. ಆದ್ರೆ ಜೊತೆಗೆ ದನ ಕಾಯೋದು ಬಿಟ್ ಬಿಡ್ತೀನಿ” ಅಂತ ಅಂದು ಬಿಟ್ಟೆ.ಆಗ ಅವ್ವನ ಮುಖ ಖಳೆಗುಂದಿತ್ತು.
ಅವರು”ಸರಿಯಪ್ಪ ನಿನ್ನಿಷ್ಟ” ಅಂದ್ರು ನನಗೆ ಸಂತೋಷಕ್ಕೆ ಪಾರವೇ ಇರ್ಲಿಲ್ಲ. ಆಗ ಅಪ್ಪನ ಮಾತಿಗೆ ಅವ್ವ ಕೂಡ ಸುಮ್ಮನಾದಳು.
ಕುನ್ನಿ ಅಂದಿನಿಂದ ಗೌರಿಯ ಹಾಲು ಕುಡಿದು ಬೆಳೆಯಿತು. ಆಕೆ ಅದಕ್ಕೆ ತಾಯಿ ಆದಳು. ನಾನು ಪೋಷಕನಾದೆ. ಮುಂದೆ ಬೆಳೆದು ದೊಡ್ಡದಾಯಿತು. ನೋಡುಗರಿಗೆ ಹುಲಿಯಂತೆ ದಷ್ಟ-ಪುಷ್ಟವಾಗಿ ಕಾಣುತ್ತಿತ್ತು. ಅದಕ್ಕೆ ‘ಮಲ್ಯ’ ಅಂತ ಹೆಸರಿಟ್ಟಿದ್ದು ನಾನೆ.
ನಾನು ಕೂಗಿ ಕರೆದಾಗಲೆಲ್ಲ. ಕೂಡಲೇ ಓಡಿ ಬರ್ತಿತ್ತು. ಗುಡ್ಡದಲ್ಲಿ ಚದುರಿ ಹೋದ ದನಗಳು ಪಕ್ಕದ ಬೆಳೆಗೆ ಹೋಗದಂತೆ ಅದು ನೋಡಿಕೊಳ್ಳುತ್ತಿತ್ತು. ನಾನು ಬಿಸಿಲಿನ ತಾಪ ತಾಳದೆ ನದಿಯಲ್ಲಿ ಈಜುವಾಗ ದನಗಳು ಅದೇ ಕಾಯುತ್ತಿತ್ತು.ಮಲ್ಯ ಹುಲಿಯಂತೆ ಬೆಳೆದಾಗ ನನಗೆ ಯಾವುದು ಭಯವಿರಲಿಲ್ಲ. ಭಯವಾದಾಗ ಹಾಡುತ್ತಿದೆನಲ್ಲ ! ಆ ಹಾಡು ಈಗ ಹಾಡಲಾರೆ. ಮಲ್ಯನೆ ಆ ಹಾಡು ಮರೆಸಿದ. ನನ್ನಲ್ಲಿ ಧೈರ್ಯ ತರಿಸಿದ. ನನಗೆ ತಮ್ಮನಿಲ್ಲದ ಬಾಲ್ಯದಲ್ಲಿ ತಮ್ಮನ ಪ್ರೀತಿ ಪಡೆದುಕೊಂಡು ಒಬ್ಬ ಸ್ನೇಹಿತನಂತೆ ಜೊತೆಗಿರುತ್ತಿದ್ದ. ಅದು ಮಾಂಸ ಮತ್ತಿತರ ಹೊಲಸು ತಿನ್ನುತ್ತಿರಲಿಲ್ಲ. ಅದಕ್ಕೆ ನಾನು ತಂಗಳ ರೊಟ್ಟಿ ತಿನಿಸಿ ಗೌರಿಯ ಹಾಲು ಕುಡಿಸಿ ಬೆಳೆಸಿದೆ. ಮಲ್ಯ ಕೂಡ ‘ಗೌರಿಯೇ !’ ತನ್ನ ತಾಯಿ ಎನ್ನುವಂತೆ ನೋಡುತ್ತಿದ್ದ. ರಾತ್ರಿ ಗೌರಿಯ ಕೊಟ್ಟಿಗೆಯಲ್ಲೆ ಮಲಗುತ್ತಿದ್ದ.
ಮನೆಯಂಗಳದಲ್ಲಿ ಅನ್ಯರ ದನಕರುಗಳು ಬರದಂತೆ ನೋಡಿಕೊಳ್ಳುತ್ತಿದ್ದ. ಮಲ್ಯ ಬೊಗಳುವುದು ನೋಡಿ ಹೊಸಬರು. ನಮ್ಮನೆಗೆ ಬರಲು ಹೆದರುತ್ತಿದ್ದರು. ಅಂತು ನಮ್ಮನೆಯ ಕಾವಲುಗಾರ ನಂತಿರುವುದರಿಂದ ನಾವೆಲ್ಲರು ನೆಮ್ಮದಿಯಿಂದ ಯಾರ ಭಯವಿಲ್ಲದೆ ಸುಖ ಜೀವನ ಮಾಡುತ್ತಿದ್ದೇವು. ನನ್ನ ತಾಯಿ ತಂದೆ ಕೂಡ ಬರುಬರುತಾ ಮಲ್ಯನ ಗುಣ ಮೆಚ್ಚಿದರು. ನನ್ನಂತೆ ಅದಕ್ಕೆ ಪ್ರೀತಿಯಿಂದ ಕಾಣ್ತಿದ್ದರು.ಒಂದಿನ ನನಗೆ ವಿಪರಿತ ಜ್ವರ ಬಂದಿದ್ದರಿಂದ ದನ ಗುಡ್ಡದಲ್ಲಿ ಮೆಯಲು ಬಿಟ್ಟು ಬೇವಿನ ಮರದ ಕೆಳಗೆ ಮಲಗಿದೆ.ಜ್ವರವಿದ್ದುದರಿಂದ ಗಾಢವಾದ ನಿದ್ರೆ ಮಾಡಿ ಸಾಯಂಕಾಲ ಐದರವರೆಗೆ ಮಲಗಿ ಎಚ್ಚರವಾದಾಗ ಅರಿವಿಲ್ಲದೆ ನಿದ್ರೆ ಹೋದದ್ದು ಅರಿತು ಒಮ್ಮೆಲೆ ದಿಗಿಲಗೊಂಡು ಅತ್ತಿತ್ತ ಗೋಣೆತ್ತಿ ನೋಡಿದೆ. ದನಗಳು ಗುಡ್ಡದಲ್ಲೆ ಮೇಯುತ್ತಿದ್ದವು. ಮಲ್ಯ ಬೋಗಳುತ ಎಲ್ಲಿಗೂ ಹೋಗದಂತೆ ನಿಯಂತ್ರಿಸಿ ಮೆಯಿಸುತ್ತಿದ್ದ.
ಇನ್ನೊಂದು ದಿನ ಮಲ್ಯನ ಭರೋಸಾದ ಮೇಲೆ ದನಗಳು ಬಿಟ್ಟು ಐಗೋಳ್ ಶರಣಯ್ಯ ನಾನು ನದಿಯಲ್ಲಿ ಈಜಾಡುತ್ತಿದ್ದೇವು. ಇದ್ದಕ್ಕಿದಂತೆ ಶರಣಯ್ಯ ನನಗೆ “ಈಜು ಸಾಕು” ಅಂತ ದಡಕೆ ಬಂದು ಬಟ್ಟೆಯುಟ್ಟುಕೊಂಡು ನಡೆದಿದ್ದ. ನಾನು ಹೊರಬಂದು ಬಟ್ಟೆ ಧರಿಸಿ ಕಿಸೆಯಲ್ಲಿ ಕೈ ಹಾಕಿದೆ. ಕಿಸೆಯಲ್ಲಿನ ಅಪ್ಪ ಕೊಟ್ಟ 10 ಪೈಸೆ ಮಾಯವಾಗಿತ್ತು. ನನಗೆ ಶರಣಯ್ಯನ ಮೇಲೆ ಪೂರ್ತಿ ಅನುಮಾನ ಇದ್ದಿದ್ದರಿಂದ “ಶರಣಯ್ಯ, ನಿಲ್ಲು. ನನ್ ಕಿಸೆಯಲ್ಲಿ 10 ಪೈಸೆ ತಗೊಂಡು ಅದಕ್ಕೆ ಈಜು ಸಾಕಂತ ಹೋಗತ್ತಿದ್ದಿಯಾ?” ಅಂತ ಎದುರು ಹೋಗಿ ತಡೆದು ಕೇಳಿದ್ದೆ ತಡ;
“ಏ ನಾನ್ಯಾಕ್ ತಗೋಳ್ಲಿ, ನನ್ ಹತ್ರ ಹತ್ ಪೈಸೆ ಅದಾ. ಇದು ನಮ್ಮಪ್ಪ ಕೊಟ್ಟಾನ” ಅಂತ ನನ್ನ ದುಡ್ಡೆ ತೋರಿಸಿದ.
“ಏ ಶರಣಯ್ಯ ! ಸುಮ್ಕೆ ಕೊಟ್ಬಿಡು. ನನ್ ಜೊತೆ ಆಟ ಆಡಬ್ಯಾಡ್” ಅಂತ ಅವನೆದೆಯ ಮೇಲಿನ ಅಂಗಿ ಹಿಡಿದು ಕೇಳಿದೆ.
“ಏ ಹೋಲ್ಯಾಗ್ ಹುಟ್ಟಿದವ್ನೇ ಬಿಡೋ! ನನ್ ಅಂಗಿ!” ಅಂತ ಅವನೂ ನನ್ ಅಂಗಿ ಹಿಡಿದು ಜಗ್ಗಿದ. ನನಗೆ ಮತ್ತಷ್ಟು ಕೋಪ ಬಂದು ಕೈ ಮುಷ್ಠಿಮಾಡಿ ಒಂದು ಕಂಕುಳಲ್ಲಿ ಗುದ್ದಿದೆ. ಅವನೂ ನನಗೆ ಗುದ್ದಿದ. ಹೀಗೆ ನಮ್ಮ ಜಗಳ ಮುಂದುವರೆದಿತ್ತು. ನಾನು ಸಿಟ್ಟಿನಿಂದ ಮತ್ತೆ ಮತ್ತೆ ಗುದ್ದತೊಡಗಿದೆ. ಅವಾ ಬೊಬ್ಬೆ ಹೊಡೆದು ಚೀರತೊಡಗಿದ. ಅವನ ಕೂಗಿಗೆ ಎಲ್ಲಿಂದಲೋ ಬಂದ ಅವರಣ್ಣ ಲಿಂಗಯ್ಯ ಹಿಂದಿನಿಂದ ನನ್ನ ತಲೆಗೆ ಬೆತ್ತದಿಂದ ಬಲವಾಗಿ ಹೊಡೆದ.
ನಾನು ಆ ಪೆಟ್ಟು ಸಹಿಸಿಕೊಳ್ಳದೆ “ಮಲ್ಯ” ಅಂತ ಸ್ಮೃತಿ ತಪ್ಪಿ ಚೀರಿದೆ. ನನ್ನ ಧ್ವನಿ ಕೇಳಿದ ಮಲ್ಯ ರೋಷದಿಂದ ಓಡಿ ಬಂದು ಶರಣಯ್ಯ ಮತ್ತು ಲಿಂಗಯ್ಯನನ್ನು ಮನ ಬಂದಂತೆ ಕಚ್ಚಿ ಮೈ ಮೇಲಿನ ಬಟ್ಟೆಗಳನ್ನೆಲ್ಲ ಹರಿದು ಬೆತ್ತಲೆ ಓಡಿಸಿತಂತೆ.ನನ್ನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ನನಗ್ಯಾವುದೂ ಅರಿವಿರಲಿಲ್ಲ. ಸ್ವಲ್ಪ ಸಮಯದ ನಂತರ ಸ್ಮೃತಿ ಬಂದು “ನೀರು! ನೀರು!” ಅಂತ ನರಳುತ್ತಿದ್ದೆ. ಆಗ ‘ಮಲ್ಯ’ ಅದ್ಯಾರದೋ ಹೊಲದ ಸಾಲುಗಳ ಮಧ್ಯೆ ನೀರಿನ ಕ್ಯಾನು ಇಟ್ಟಿದನ್ನು ಬಾಯಲ್ಲಿ ಹಿಡಿದುಕೊಂಡು ತಂದು ನನ್ನ ಬಾಯಾರಿಕೆ ಇಂಗಿಸಿದ. ಇನ್ನೂ ನನ್ ಅದೃಷ್ಟ ಒಳ್ಳೆಯದು ಬದುಕುಳಿದೆ. ಅಂದಿನಿಂದ ಮಲ್ಯ ನನಗೆ ಹೊಡೆದವರನ್ನು ಕಂಡ್ರೆ ಪ್ರತಿಭಟಿಸುತ್ತಾ ಬೋಗಳುತ್ತಿದ್ದ .
ಒಂದು ದಿನ ಲಿಂಗಯ್ಯನನ್ನು ಕಂಡು ಬೊಗಳುತ್ತಿದ್ದಾಗ ಅವನು ಇದರ ಕಡೆಗೆ ಕಲ್ಲು ತೂರಿದ. ಆ ಕಲ್ಲು ಮಲ್ಯನ ಕಾಲಿಗೆ ಬಲವಾಗಿ ತಾಕಿದ್ದರಿಂದ ರೋಷದಿಂದ ಬಲ ತೊಡೆಯ ಮಾಂಸ ಕಡಿದು ಬಿಟ್ಟಿತ್ತು. ಲಿಂಗಯ್ಯ ಆ ಕ್ಷಣ ಆಸ್ಪತ್ರೆ ಸೇರಿದ. ಊರಲ್ಲಿ ಲಿಂಗಯ್ಯನ ತಂದೆ ಮತ್ತವನ ಕಡೆಯವರು ನಮ್ಮನೆಗೆ ಬಂದು ಮಲ್ಯನನ್ನು ಹೊಡೆದು ಹಾಕುತ್ತೇವೆ ನಮ್ಮಗನ ತೊಡೆಯ ಮಾಂಸ ಹರಿದಿದೆ.” ಅಂತ ಅಂಗಳದಲ್ಲಿ ನಿಂತು ಬೈಯತೊಡಗಿದರು. ಆಗ ಅಮ್ಮಾ, ನನ್ನ ಮುಖ ದುರುಗುಟ್ಟಿ
“ನಿನಗ ಆವಾಗ್ಲೇ ಹೇಳಿದ್ದೆ. ದರಿದ್ರ ನಾಯಿಗೆ ಮನೆಗೆ ತರಬೇಡಂತ ನೋಡಿದ್ಯಾ ? ಈಗದರ ರಾದ್ಧಾಂತ” ಅಂತ ಬೈಯತೊಡಗಿದಳು.
“ಮತ್ತೆ ನಮ್ ಮಲ್ಯಾಗೆ ಅವನ್ಯಾಕ ಕಲ್ಲಿಂದ ಹೊಡಿಬೇಕು ? ಹೊಡೆದ್ರೆ ಅದು ಸುಮ್ಮನೆ ಬಿಡ್ತದಾ?” ಅಂತ ನಾನು ಎದುರುತ್ತರಿಸಿದೆ. ಆಗ ಅಪ್ಪ ಬಂದ. ನನಗೆ ಮಲ್ಯಗೆ ಬೆಂಬಲಿಗನಾದಂತೆ ಫಿರ್ಯಾದಿ ತಂಡದವರಿಗೆ ಬೈಯ್ದು ಜಾಗ ಖಾಲಿ ಮಾಡಿಸಿದ.ಭೀಮಯ್ಯನ ಕಡೆಯವರು ಹೋದ ನಂತರ ಮಲ್ಯನಿಂದ ಆದ ಅನಾಹುತಕೆ ನಾನೇ ತಪ್ಪಿತಸ್ಥರೆನ್ನುವಂತೆ ಅಪ್ಪ ನನಗೆ ಎಂದೂ ಬೈಯದವರು ಸಾಕಷ್ಟು ಬೈದರು. ಅವರ ಬೈಗಳಿಂದ ಬೇಸತ್ತ ನಾನು ಮಲ್ಯನ ಮೇಲೆ ದಂಡೆತ್ತಿ ಕೋಪದಿಂದ ಮನೆಯೊಳಗೆ ಹಾಕಿ ಬೆತ್ತದಿಂದ ಭಾರಿಸಿದೆ. ಮಲ್ಯ ಪ್ರತಿಭಟಿಸದೆ ನನ್ನೆಲ್ಲ ಹೊಡೆತಗಳು ಸಹಿಸಿಕೊಂಡು ಕಣ್ಣೀರು ಹಾಕುತ್ತಿದ್ದ. ನಾನು ಕೋಪದಲ್ಲಿ
“ನೀನು ಬೆಳಗಾಗುವುದರೊಳಗಾಗಿ ಈ ಮನೆ ಬಿಟ್ಟು ಹೋದ್ರೆ ಸರಿ. ಇಲ್ಲಾಂದ್ರೆ ನಾನೆ ಈ ಮನೆ ಬಿಟ್ಟು ಹೋಗುತ್ತೇನೆ.” ಅಂತ ಹೇಳಿ ಊಟ ಮಾಡದೆ ಮಲ್ಯನಿಗೂ ತಿನ್ನಲು ಕೊಡದೆ ಮಲಗಿಕೊಂಡೆ.
ಮುಂಜಾನೆ ಎಂದಿನಂತೆ ಎದ್ದು ದನಗಳು ಬಿಟ್ಟುಕೊಂಡು ಮೇಯಿಸಲು ಗುಡ್ಡಕ್ಕೆ ನಡೆದೆ. ಮಲ್ಯ ಎಲ್ಲಿಯೂ ಕಾಣಲಿಲ್ಲ. ಅಪ್ಪ ಅಮ್ಮ ಅಣ್ಣಂದಿರು ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
“ನಾನು ರಾತ್ರಿ ಮಲ್ಯನಿಗೆ ಹೊಡೆಯಬಾರದಾಗಿತ್ತು. ನಾನು ತಪ್ಪ ಮಾಡ್ದೆ. ಕುನ್ನಿಯಾಗಿದ್ದಾಗ ಇದೆ ಕೈಯಿಂದ ನೀರು ಹಾಕಿ, ಹಾಲು ಹಾಕಿ, ಸಾಕಿ ಸಲುಹಿ ದೊಡ್ಡದಾಗಿ ಮಾಡಿದೆ. ಈಗ ಇದೆ ಕೈಯಿಂದ ಎಂಥ ಅನಾಚಾರ ಮಾಡಿಬಿಟ್ಟೇ ? ರಾತ್ರಿ ಸಿಟ್ಟಿನಲ್ಲಿ ಮನೆಬಿಟ್ಟು ಹೋಗು ಅಂತ ಹೇಳಿದ್ರೆ ಮನೆ, ನನ್ನ, ಗೌರಿನಾ ಬಿಟು ಹೋಗೋದೆ ? ಛೇ! ಛೇ! ಎಲ್ಲರಿಗೂ ಬೇಡವಾಗಿದ ಮಲ್ಯ ನನ್ನ ಮಾತಿಗೆ ನೊಂದುಕೊಂಡನೆ ? ನಾನೆಂತ ಪಾಪಿ! ನನಗೆ ಆ ದೇವರು ಕ್ಷೇಮಿಸೋದಿಲ್ಲ. ಓ! ದೇವರೇ! ನನ್ ಮಲ್ಯನಿಗೆ ಬರಲು ಹೇಳು. ತಂದೆ ಬರಲು ಹೇಳು” ಅಂತ ಕಲ್ಲು ಬಂಡೆಯ ಮೇಲೆ ಕುಳಿತು ನನ್ನನ್ನೆ ನಾನು ಹಳಿದುಕೊಂಡು ದುಃಖಿಸಿದೆ.
ಮಲ್ಯನಿಲ್ಲದ ಆ ದಿನದ ಸೂರ್ಯ ಬೇಗ ಮುಳಗುತ್ತಿರಲಿಲ್ಲ. ಅವನಿಲ್ಲದ ಖಂಕುರೊಟ್ಟಿ, ಪುಡಿಕಾರ್ ಯಾವುದು ರುಚಿಸುತ್ತಿರಲಿಲ್ಲ. ಒಮ್ಮೆ ಗೌರಿ ಹಸುವಿನ ಮುಖ ನೋಡಿದೆ. ಅವಳ ಕಣ್ಣುಗಳಲ್ಲಿ ಮಲ್ಯನಿಲ್ಲದ ನಿರಾಸೆಯ ಭಾವ ಎದ್ದು ತೋರಿತ್ತು. ಮಲ್ಯ! ಅಂತ ಕೂಗಿದರೆ ಎಲ್ಲಿಂದಲೋ ಓಡಿ ಬರುವವ ಈಗೆಲ್ಲಿ ಹೋದ ? ಅವನಿಗಾಗಿ ಹೇಗೋ ಒಂದು ದಿನ ಕಾದೆ. ಬರದೆ ಹೋದಾಗ ದಿಗಿಲುಗೊಂಡು ಹುಡುಕಾಡುವ ತವಕ ಹೆಚ್ಚಾಗಿ ಮರುದಿನದ ನಸುಕಿನಲ್ಲಿ ಮನೆಯಲ್ಲಿ ಯಾರಿಗೂ ಕಾಣದಂತೆ ಎದ್ದು ಪಕ್ಕದ ರಾಜೇಶ್ವರ, ಲಿಂಗದಳ್ಳಿಯ ಕಡೆಗೆ ಬೆಳಗಾಗುವುದರೊ ಳಗಾಗಿ ಹೋಗಿ ಅಲ್ಲಿನ ಜನರಿಗೆ ಇಂಥಹ ಬಣ್ಣ. ಇಂಥಹ ಕೂದಲಿನ ನಾಯಿ ಬಂದಿತ್ತೇ ?ಬಹಳ ಸಮಯದ ನಂತರ ಒಬ್ಬ ಹೇಳಿದ.
“ಓಹೋ! ಅದು ನಿಮ್ಮನೆ ನಾಯಿನಾ?” ಎಂದು ಕೇಳುತ್ತಿದ್ದಾಗ ನಾನವರ ಮಾತು ಅರ್ಧಕ್ಕೆ ತಡೆದು
“ಹೌದು ಗೋಡ್ರೆ” ಅದೆಲ್ಲಿದೆ ಹೇಳ್ರಿ! ನಾನದಕ್ಕೆ ನೋಡಬೇಕು” ಅಂತ ಆತುರದಿಂದ ಹೇಳಿದಾಗ
“ಬಾ ತೋರಸ್ತೀನಿ” ಅಂತ ಅವರ ಕಬ್ಬಿನ ತೋಟಕ್ಕೆ ಕರೆದೊಯ್ದ. ನನ್ನ ಮಲ್ಯನಿಗೆ ಕಬ್ಬಿನ ತೋಟದಲ್ಲಿ ಕಟ್ಟಿ ಹಾಕಿದ್ದಾರೆಂದು ನಾನು ಊಹಿಸಿದೆ.
” ಎಲ್ಲಿ ಗೋಡ್ರೆ! ನನ್ ಮಲ್ಯ” ಅಂತ ಪ್ರೀತಿಯಿಂದ ಮತ್ತೇ ಕೇಳಿದೆ.
“ಅಗೋ! ಅಲ್ಲಿ” ಅಂತ ಕಬ್ಬಿನ ತೋಟದ ಬದುವಿನಲ್ಲಿ ಮಲಗಿರುವ ನಾಯಿ ಕಡೆಗೆ ಬೆರಳು ಮಾಡಿ ತೋರಿಸಿದ. ನಾನು ಸಂತೋಷದಿಂದ
“ಏ ಕಳ್ಳ! ನನ್ ಬಿಟ್ಟು ಹಾಯಾಗಿ ತೋಟದಲ್ಲಿ ಮಲಗಿದ್ದಿಯಾ? ಏಳೂ ! ನಾ ನಿನ್ನಣ್ಣ ಬಂದಿದ್ದೀನಿ” ಅಂತ ಅದರ ಪಕ್ಕಕ್ಕೆ ಹೋದೆ.
ಮಲ್ಯ ನನ್ನ ಮಾತಿಗೆ ಕಿವಿಗೊಡದಂತೆ ಶಾಶ್ವತ ಕಿವುಡನಾಗಿ ಮಲಗಿದ್ದ. ನಾನು ಅಳು ಮೊರೆಯಿಂದ ಆ ಹೊಲದ ಮಾಲಿಕನ ಮಾರಿ ನೋಡಿದೆ. ಆತ ನನ್ನನ್ನು ಕುರಿತು
” ನೋಡ ತಮ್ಮಾ! ನಾವು! ರಾತ್ರಿ ನರಿಗಳ ಕಾಟ ತಪ್ಪಿಸಲಿಕ್ಕೆಂದು ಕಬ್ಬಿನ ತೋಟದ ಬದುವಿನ ನಾಲ್ಕು ಮೂಲಿಗೆ ಒಂದೊಂದು ಮಡಿಕೆಯಲ್ಲಿ ದನದ ಮಾಂಸ ಇಟ್ಟು ಅದರ ಮೇಲೆ ತೊಗರಿ ಎಣ್ಣಿ(ಕೀಟ ನಾಶಕ) ಸಿಂಪಡಿಸಿ ಹೋಗಿದ್ದೇವು. ದುರಾದೃಷ್ಟ ನರಿಗಳು ತಿನ್ನದೆ, ನಿನ್ನ ನಾಯಿ ಬಂದು ತಿಂದಿದೆ. ಇದರಲ್ಲಿ ನಮ್ಮದೇನು ತಪ್ಪಿಲ್ಲ” ಎಂದು ತಾನು ಮಾಡಿದ್ದು ಘನಕಾರ್ಯ ಎನ್ನುವಂತೆ ಹೇಳತೊಡಗಿದ.
ನನ್ನ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯತೊಡಗಿದವು. ಮಲ್ಯ ಕೊನೆಯ ಘಳಿಗೆಯಲ್ಲಿ ನನ್ ನೋಡಬೇಕೆಂದು ಆಸೆ ಪಟ್ಟನೋ ಏನೋ ? ಕಣ್ಣು ತೆರೆದೆ ಜೀವ ಬಿಟ್ಟಿದ್ದ. ಮುಖದ ಮೇಲೆ ಕೊನೆಯ ಸ್ಪೃಶ್ಯ ಎನ್ನುವಂತೆ ಕೈಯಾಡಿಸಿ ಕಣ್ಣು ಮುಚ್ಚಿದೆ.
ಅದೇ ವರ್ಷ ನನ್ನ ತಾಯಿ ಬಹುದಿನಗಳಿಂದ ಅಕ್ಕ ತಂಗಿಯರಿಲ್ಲದ ನಮ್ಮ ಬದುಕಿಗೆ ಒಬ್ಬ ತಂಗಿಯನ್ನು ಜನ್ಮಕೊಡುವ ಕನಸ್ಸನ್ನು ಹೊತ್ತುಕೊಂಡು ಕೊನೆಯದಾಗಿ ಒಬ್ಬ ತಮ್ಮನನ್ನು ಜನ್ಮ ನೀಡಿದಳು. ಆ ತಮ್ಮನಿಗೆ ನಾನು ಅಮ್ಮಳಿಗೆ ಹೇಳಿ ‘ಮಲ್ಲಿಕಾರ್ಜುನ’ ಅಂತ ಹೆಸರಿಡಲು ಒತ್ತಾಯಿಸಿದೆ. ಮತ್ತೇ ಇದು ನಮ್ಮ ಮನೆಯ ಆರಾಧ್ಯ ದೇವ ಶ್ರೀಶೈಲ್ ಮಲ್ಲಿಕಾರ್ಜುನನ ಹೆಸರು ಕೂಡ ಅಂತ ಹೇಳಿ ಒಪ್ಪಿಸಿದೆ. ಈಗ ಎಲ್ಲರೂ ಅದೇ ಹೆಸರಿನಿಂದ ಕರೆಯುತ್ತಿದ್ದಾರೆ. ನಾನು ನನ್ನ ಪ್ರೀತಿಯ ತಮ್ಮನಿಗೆ ಆ ಹೆಸರಿನಿಂದ ಕರೆದಾಗೊಮ್ಮೆ ಆ ‘ಮಲ್ಯ’ ಸದಾ ನೆನಪಾಗುತ್ತಾನೆ.ಹಾಗಾದರೆ ಮಲ್ಯ ನನಗೆ ಮೋಸ ಮಾಡಿರುವುದಾದರರೂ ಏನು ?
–ಮಚ್ಚೇಂದ್ರ ಪಿ.ಅಣಕಲ್.