Oplus_131072

ಮೌಲ್ಯಗಳು ಮಾಯವಾದಾಗ…

ತಪ್ಪು ಮಾಡುವುದು ಸಹಜ. ಅದು ಮನುಷ್ಯನ ಸಹಜ ಗುಣ. ಅದನ್ನು ತಿದ್ದಿಕೊಂಡು ನಡೆಯುವುದು ಬಹು ದೊಡ್ಡ ಸವಾಲು. ಇಂದಿನ ಯುಗದಲ್ಲಿ ಒಳ್ಳೆಯತನಕ್ಕೆ ಬೆಲೆ ಇಲ್ಲ. ಎಂಬ ಮಾತು ಇದೆ. ಇದು ಅಕ್ಷರ ಸಹ ತಪ್ಪು. ಒಳ್ಳೆಯತನಕ್ಕೆ ಬೆಲೆ ಯಾವಾಗಲೂ ಇದ್ದೇ ಇದೆ. ಆದ್ದರಿಂದ ನಾನು ನಾವುಗಳಾದಾಗ ಅದಕ್ಕೊಂದು ಬೆಲೆ ಬರುತ್ತದೆ. ಇತ್ತೀಚಿಗೆ ಮನುಷ್ಯ ಮನುಷ್ಯತ್ವವನ್ನು ಕಳೆದುಕೊಂಡು ಬದುಕುತ್ತಿದ್ದಾನೆ. ಸತ್ಯ, ಪ್ರಾಮಾಣಿಕತೆ, ಅಸಲಿಯತ್ತಿಗೆ ಬೆಲೆ ಇಲ್ಲದಂತಾಗಿದೆ. ನಾಗರೀಕ ಸಮಾಜದಲ್ಲಿ ಇದ್ದದ್ದನ್ನು
ಇದ್ದ ಹಾಗೆ ಹೇಳಿದಾಗ ಸಿಟ್ಟು ಬರುತ್ತದೆ. ವಾಸ್ತವದ ಮಾಹಿತಿ ಕೊಟ್ಟಾಗ ಅಣಕ ಮಾಡುತ್ತಾರೆ. ಗಾಂಧೀಜಿ ಸುಳ್ಳು ಹೇಳಿದಾಗ ನಾನು ತಪ್ಪು ಮಾಡಿದ್ದೇನೆ ಎಂದು ಅವರ ತಂದೆಯ ಮುಂದೆ ಹೋಗಿ ಹೇಳಲು ಅಸಾಧ್ಯವಾದಾಗ, ಪತ್ರ ಬರೆದು ವಿಷಯ ತಿಳಿಸಿ ಸಾರ್ಥಕತೆಯನ್ನು ಪಡೆದು ಸತ್ಯ ಮಾತನಾಡುತ್ತಾ ಜಗತ್ತಿಗೆ ಮಹಾತ್ಮ ಎಂಬ ಬಿರುದನ್ನು ಪಡೆದು ಭಾರತದ ರಾಷ್ಟ್ರಪಿತ ಎಂಬ ಹೆಸರನ್ನು ಗಳಿಸುತ್ತಾರೆ. ಇದರ ತಾತ್ಪರ್ಯ ಇಷ್ಟೇ ಇದ್ದದ್ದನ್ನು ಇದ್ದ ಹಾಗೆ ಹೇಳಬಾರದು ಗೊತ್ತಿದ್ದು ಸುಮ್ಮನಿದ್ದು ಬಿಡಬೇಕು. ತಪ್ಪು ಮಾಡಿದರೂ ಅದು ಚೆನ್ನಾಗಿದೆ ಎಂದು ಹೇಳಬೇಕು ಎಂದರೆ ಹೇಗೆ ಸಾಧ್ಯ ? ಸಮಾಜದ ಅಂಕು ಡೊಂಕು ತಿದ್ದಲು ಯಾರು ಪ್ರಯತ್ನಿಸುತ್ತಿಲ್ಲ. ಇದು ಬಹಳ ದುರದೃಷ್ಟಕರ ಸಂಗತಿ. ಯಾವುದಾದರೇನು ? ತಪ್ಪು ತಪ್ಪೇ ಅಲ್ಲವೇ ? ನಾವು ಹೇಗಿತ್ತೋ ಹಾಗೆ ಹೇಳಿದರೆ ಅದು ಭೇದ _ಭಾವ ಎಂದು ಪರಿಗಣಿಸುತ್ತಾರೆ. ಗಂಟಲಲ್ಲಿ ನೀರು ಇಳಿಯದವಗೆ ಬಾಯೊಳಗೆ ಕಡುಬು ತುರುಕಿದಂತೆ ಇದೆ ಇಂದಿನ ತಪ್ಪು ಒಪ್ಪು.
ಜೀವನದಲ್ಲಿ ಇವೆಲ್ಲ ಸಾಮಾನ್ಯ ಮನುಷ್ಯ ಎರಡನ್ನೂ ಸಮ ಪ್ರಮಾಣದಲ್ಲಿ ತೂಗಿ ನೋಡಬೇಕು. ನಮ್ಮಿಂದ ತಪ್ಪಾದಾಗ ತಿದ್ದಿ ಹೇಳುವ ಜನರು ಇನ್ನೊಬ್ಬರದ್ದು ತಪ್ಪದಾಗ
ತಿದ್ದಿ ಹೇಳಬೇಕಲ್ಲವೇ ? ಅದನ್ನು ಬಿಟ್ಟು ನಮ್ಮದೇ ತಪ್ಪಿದೆ ಎಂದು ಭಾವಿಸುತ್ತಾರೆ. ವಾಸ್ತವತೆಯನ್ನು ಮರೆಯುತ್ತಾರೆ. ನಿಜಾಂಶ ಗೊತ್ತಿದ್ದರೂ ಸುಮ್ಮನಿರುತ್ತಾರೆ. ನಮ್ಮದೇನಾದರು ತಪ್ಪಾದರೆ ತಕ್ಷಣ ತಿಳಿಸುತ್ತಾರೆ ಸೋಲು ಗೆಲುವನ್ನು ತಪ್ಪು ಸರಿಯನ್ನು ತಿಳಿಸುವಾಗ ಪೂರ್ವಾಪರವಾದ ವಿಚಾರ ಮಾಡಬೇಕು. ಹಾಗಾದಾಗ ಮಾತ್ರ ಅದಕ್ಕೊಂದು ನ್ಯಾಯ ಸಿಗುತ್ತದೆ ಇಲ್ಲದಿದ್ದರೆ ಆಯಾ ವಿಚಾರಗಳಿಗೆ ಬೆಲೆ ಇಲ್ಲದಂತಾಗಿ ಮೌಲ್ಯಗಳು ಮೂಲೆ ಸೇರುತ್ತವೆ. ಹುಡುಕಿದರೂ ಸಿಗದಂತೆ ಆಗಿವೆ ಇಂದಿನ ಮನುಷ್ಯ ಮೌಲ್ಯಗಳನ್ನು ಬೆಳಸಿಕೊಂಡು ಸಾರ್ಥಕ ಬದುಕಿನ ಭರವಸೆಯ ನಾಗರೀಕನಾಗಲು ಪ್ರಯತ್ನಿಸಬೇಕು.                   ಅಲ್ಲವೇ ?

ಮಹೇಶ್ ಎಸ್ ಹೆಚ್
ಕೊಟ್ಟೂರು
ವಿಜಯನಗರ ಜಿಲ್ಲೆ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *