ಮನುಷ್ಯತ್ವ ಇಲ್ಲದವರು.
ಸಾಂಬಸದಾಶಿವನ ಹೆಸರಲ್ಲಿ
ಕುಂಭಮೇಳ ಪ್ರಯಾಗದಲ್ಲಿ
ದೂರದೂರಿನಿಂದ ಬಂದೆಯಿಲ್ಲಿ
ರುದ್ರಾಕ್ಷಿಸರ ಮಣಿಸರ ಮಾರಲು
ಸತ್ಯಂ ಶಿವಂ ಸುಂದರಂ ಸಾಧು
ವಿಶ್ವದ ಮೂಲೆಗಳಿಂದ ಸಂತ
ಮಹಂತರು ಅಘೋರಿಗಳು
ಎಲ್ಲ ಸೇರಿಹರಿಲ್ಲಿ ಧರ್ಮವುಳಿಸಲು
ನನಗೇ ಗೊತ್ತಿರದ ಸೌಂದರ್ಯ
ನನ್ನ ನೀಲಿ ಕಣ್ಣುಗಳು ಮಾಧ್ಯಮ
ಟಿ ವಿ ಅಂತರ್ ಜಾಲಗಳಲಿ ಸತತ
ಬಿತ್ತರಿಸಿ ನನ್ನೊಡನೆ ಸೆಲ್ಫಿ ತೆಗೆದು
ಮಾರಾಟಕ್ಕಿಟ್ಟರು ಈ ಹಲ್ಕಾ ಜನ
ನನ್ನಪ್ಪ ಅವ್ವನ ತುತ್ತು ಕೂಳಿಗೆ
ಕಲ್ಲು ಬಿತ್ತು ನಾ ಬಿಕ್ಕಿಬಿಕ್ಕಿ ಅತ್ತೆ
ಯಾಕೆ ಹೀಗೆ ಮಾಧ್ಯಮಗಳು
ಹೆಣ್ಣಿನ ಮುಗ್ಧ ಸೌಂದರ್ಯಕೆ
ಈ ರೀತಿ ಬೆಲೆ ಕಟ್ಟ ಬೇಕಾಯ್ತೆ
ನಾನೀಗ ಮನೆಯಲಿ ಬಂಧಿ ಥೂ
ಬುದ್ಧಿಗೇಡಿ ಮನುಷ್ಯತ್ವ ಇಲ್ಲದವರು
– ಅನ್ನಪೂರ್ಣ ಸಕ್ರೋಜಿ ಪುಣೆ.