ಮೊದಲ ಬಾರಿ
ಸರಳರೇಖೆಯ ಬೀದಿಗಳಿದ್ದರು
ಅಸ್ಪಷ್ಟ ಓಡಾಟಗಳು
ಒಲವ ಜನನದ ಸಾಲಾವಳಿ
ಕೂಡಿ ಬರಲಿಲ್ಲವೇನೋ
ಒಂಟಿತನದ ನೊಗವನೊತ್ತು
ಓಲಾಡುತಿತ್ತು ಬದುಕು …,
ಅಂದೊಮ್ಮೆ ಕೊನೆಯ ತಿರುವಿನಲಿ
ಅವಸರದಿ ನಡೆವಾಗ
ಅಪರೂಪಕೆಂಬಂತೆ ತಲೆಯೆತ್ತಲು
ಆ ಮೂಗುತಿ ಮತ್ತಾನಗೆ
ಅಕ್ಷಿಗಳ ತನ್ನೆಡೆಗೆ ಸೆಳೆದಿತ್ತು
ಮುಂದಿನೆಜ್ಜೆಯ ದಿಕ್ಕರಿಸಿ
ಹಿಂತಿರುಗಿ ನೋಡಿದ್ದೆ
ಮರೆಯಾಗುವವರೆಗೆ ದಿಟ್ಟಿಸಿ ..
ಮೊದಲಬಾರಿ -ಯಾರೆ ನೀ ಸುಕುಮಾರಿ …!
ಪರಿಪರಿಯಾಗಿ ಕಾಡಿದಳು
ಇರುಳೆಲ್ಲ ನಿದಿರೆಯನಟ್ಟಿ
ಹೊಸದೇನೊ ಭಾವನೆಯು ಮೊಳೆತು
ಮನದರಸಿ ಇವಳೆಂದು
ನಿಶ್ಚಯದಿ ಒಪ್ಪಿ
ಹೃದಯ ಗೀಚಲಾಗಲೇ
ಹಾಳೆಯನುಡುಕಿ ಪದವ ಕರೆದಿತ್ತು
ಬೆಳಗಿನಜಾವದವರೆಗೆ ಯೋಚಿಸಿ..
ಮೊದಲ ಬಾರಿ – ಓಲೈಕೆಯ ತಯಾರಿ ..!
ಬೇಗನೆದ್ದು ಸಿಂಗರಿಸಲು
ಕನ್ನಡಿಗೆ ಬಿಡುವಿರದ ಕೆಲಸ ನೀಡಿ
ಕುಡಿಮೀಸೆಗಾಕಾರ ಕೊಟ್ಟು
ನಿಮಿಷಕೊಂದು ಬಟ್ಟೆಯ ತೊಡುತ
ಏನೇನೋ ಕನವರಿಸಿ
ಹಲವು ನಿಲುವುಗಳನಭ್ಯಸಿಸಿ
ಓಡಿದ್ದೆ ಕಾತುರದಿ ಹೊರಗೆ ..
ಮೊದಲ ಬಾರಿ -ಕಾಯಲು ದಾರಿ..!
ಹಾಲು ಬಿಳಿಯೊಂಬಣ್ಣದ
ರೇಶಿಮೆಯ ಬೊಂಬೆ
ಬಳುಕಿ ವೈಯಾರದಿ
ಮೆರವಣಿಗೆ ಬರುವಾಗ
ಕೂದಲು ತಂಗಾಳಿಗಾರಿ
ಹುಣ್ಣಿಮೆಯಲೊಳೆವ ಶಶಿಯಂತ
ಮೊಗವನಷ್ಟು ಸನಿಹದಿ ಕಂಡು
ಮೂಕ ಶಿಲೆಯಾಗಿ ನಿಂತೆ ..
ಮೊದಲಬಾರಿ -ಮಾತಿಗೆದರಿ..!
ಎನ್ನೊಳಗಿನಂಜಿಕೆಯ ನಂಬಿ
ನಿಗ್ರಹಿಸುತ ದೂರ ಉಳಿದೆ
ಪ್ರತೀಸಲವೂ ಹೀಗೆಯೆ
ಅಮಾಯಕನಂತೆ ನಟಿಸಿ
ತಿಳಿ ಹೇಳಬಾರದಿತ್ತೆ ನೀನಾದರು
ಅಕ್ಷತೆಯನಿಡಿದು ಹರಸುವಾಗ
ತೋರಿಸಲು ದುಃಖವೇನಿದೆ
ಮತ್ತೊಮ್ಮೆ ನಯನಗಳ ಮಿಲನವಷ್ಟೆ
ಮೊದಲಬಾರಿ -ಏನಲ್ಲವಲ್ಲ …
ಬಹುಶಃ ಕಡೆಯ ಬಾರಿ…!
–ಮನು ಪುರ.
ಕವಿ ಪರಿಚಯ:

ಮನು ಪುರ ‘ ಎಂಬ ಕಾವ್ಯ ನಾಮದಿಂದ ಕವಿತೆಗಳನ್ನು ಬರೆಯುತ್ತಿರುವ ಮನೋಜ್ ಕುಮಾರ ರವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ‘ಪುರ’ ಎಂಬ ಊರಿನವರು. ಸದ್ಯ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೊಗ್ರಿಮಕ್ಕಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿ ದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ 300ಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ ಶ್ರೀಮಂತ ಸಂತ, ಶೋಷಿತಳ ಸ್ವಗತ, ಪಾಪದ ಮೂಟೆ, ಹಾಸಿಗೆ ಖಾಲಿ ಇದೆ, ಕಂಬನಿಯ ಹೆರಿಗೆ ಪ್ರಮುಖವಾಗಿವೆ.