Oplus_131072

ಮೂಕ ವೇದನೆ.

 

ಡಾ.ಎಂ.ಜಿ.ದೇಶಪಾಂಡೆ ಬೀದರ.

 

ಯಾಕ ಬರದೆ ಉಳಿದ ಕೆಂಚ. . ಮತ್ಯಾನರ ಮಾಡಕೊತಾನೋ ಛೇ ಛೇ ನಾನು ಹೀಗ ಅನಬ್ಯಾಡದಾಗಿತ್ತು. . . ಕಬ್ಬು ತಲೆಯ ಮೇಲೆ ಎತ್ತುಕೊಂಡು ಗುಂಡಪ್ಪನಲ್ಲಿಗೆ ತಂದು ಹಾಕುತ್ತ ಚೆನ್ನಿಯು ಯೋಚಿಸ ತೊಡಗಿದಳು

 

ಕೆಂಚನು ಬೇಗ ಬೇಗ ಕ್ರಷರನೊಳಗೆ ಕಬ್ಬು ಕೊಡತೊಡಗಿದ. ಒಂದೇ ಕಡೆ ಮಗ್ಗಲು ಕುಳಿತ ಪರಿಣಾಮಕ್ಕೆನ್ನೋ ಕಾಲು ಜುಂ ಎನಿಸಿದಂತಾಗಿ ಭಾರವೆನಿಸಿತ್ತು. ಅಂಥ ಅರ್ಧರಾತ್ರಿ ವೇಳೆಯ ಚಳಿಯಲ್ಲಿಯೂ ಮೈ ಮೇಲೆ ಬೆವರಿನ ಧಾರಾಕಾರವಾದ ಹನಿಗಳು ಸೋರಿ ಟೊಂಕಕ್ಕೆ ಕಟ್ಟಿದ್ದ ಧೋತರಕ್ಕೆಲ್ಲ ಯದ್ವಾ- ತದ್ವಾ ತೋಯ್ದು ಮೈಯೆಲ್ಲ ಇನ್ನಷ್ಟು ವಾಸನೆ ಬರುವಂತೆ ಆಗಿತ್ತು.

ರಾಚಯ್ಯ ಬೆಲ್ಲದ ಕಡಾಯಿ ಹತ್ತಿರ ಕುಳಿತು, ಬೇಗ ಬೇಗ ಕಬ್ಬಿನ ಹಾಲು ಕಡಾಯಿಗೆ ಸುರಿಯಲು ಹೇಳುತ್ತಿದ್ದ. ಕಬ್ಬಿನ ಸಿಪ್ಪೆ ಎಳೆದು ದೂರಕ್ಕೆ ಹರಡುತ್ತಿದ್ದ. ಸಿದ್ದನು ಕ್ರಷರನಿಂದ ಸುರಿಯುತ್ತಿದ್ದ ಕಬ್ಬಿನ ಹಾಲು ಪಡೆದು ಕಡಾಯಿಗೆ ಸುರುವುತಿದ್ದನು. ಕಡಾಯಿ ಕೆಳಗಿನ ಒಳಗೆ ಆಹಾರ ರೂಪದಲ್ಲಿ ಉರವಲು ಸಿಪ್ಪೆ ಚಲ್ಲುತ್ತಿದ್ದ ಈಶಪ್ಪನ ಕೆಲಸಕ್ಕೆ ಆಗಾಗ ಉರಿ, ಹೊಗೆಗಳು ಮನಬಂದಂತೆ ಹರಡಿ ವಾತಾವರಣ ಕಲುಷಿತ ಗೊಳಿಸುತ್ತಿತ್ತು. ನಿದ್ದೆ ಮಂಪರಿನಲ್ಲಿದ್ದ ಕೆಂಚನಿಗೆ ಏನೇನೋ ನೆನಪಾದವು. ಚಲನಚಿತ್ರದಂತೆ ಕಣ್ಣ ಮುಂದೆ ದೃಶ್ಯಗಳು ಸುಳಿಯ ತೊಡಗಿದವು.

* * * ******

ಅಂದು ತಾನು ಕ್ರಷರನ ಹತ್ತಿರ ಕುಳಿತು ಕಬ್ಬು ಕ್ರಷರ ಮಷಿನ್ ಬಾಯಿಗೆ ಕೊಡುತ್ತಿರುವ ಚೆನ್ನಿ ಆಗೊಮ್ಮೆ ಈಗೊಮ್ಮೆ ಕೆಂಚನನ್ನು ಕಾಣುತ್ತ ಕೈಗೆ ಬಂದ ಸಿಪ್ಪೆ ಎಳೆಯುತ್ತಾ ‘ಬೇಗ ಬೇಗ ಕೊಡು, ಯಾನ್ ಇಚಾರದಾಗ ಇದ್ದಿ’ ನುಡಿದಳು.

‘ನಂದ್ಯಾನಬಿ ಇಚಾರ ಇಲ್ಲ ನಂಗ್ಯಾನು ಹೆಂಡರ ಮಕ್ಕಳು ವಿಚಾರದಾಗ ಬಿಳ್ಳಾಕ!. . .’ ಕೆಂಚ ನುಡಿದಾಗ ‘ಹೆಂಡರ ಮಕ್ಕಳ ಇದ್ದವರಿಗೆ ಇಚಾರ ಇರ‍್ತಾವಾ ನೀವೊಬ್ಬ ಶ್ಯಾಣ್ಯಾ. !.’ ಪುನಃ ನಗುತ್ತಾ ಚೆನ್ನಿ ನುಡಿದಳು.

‘ಹೌದು ನಮಗ್ಯಾನ ಇಲ್ಲಿ ದುಡಿದು ಮನ್ಯಾಗ ಮಲಗೋದು ನಿಮ್ಮ ಹೆಂಗಸರಿಗೆ ಆ ಚಿಂತಿ ಇಚಾರ. . .’ ಚೆನ್ನಿಯ ಪರೀಕ್ಷಿಸುತ್ತಾ ಕೆಂಚ ನುಡಿದ.

‘ನಮಗ ಭೀ ಯ್ಯಾನು ಚಿಂತಿ, ಇಚಾರ ಇಲ್ಲ, ನಮಗೇನು ಗಂಡ ಅತ್ತಿ ಮಾಂವನ ಚಿಂತೀನಾ ?. .’ ಮುಗುಳು ನಗೆಯಿತ್ತು ಚೆನ್ನಿಯ ಮುಖದಲ್ಲಿ.

‘ಹೌದೌದು, ಗಂಡ ಬಂದ ಅಂದರ ಚಿಂತಿ, ಖಬರ್ ತೆಗಿತಾನ್. .’ ಕ್ರಷರಕ್ಕೆ ಇನ್ನೊಂದೆರಡು ಕಬ್ಬು ನೀಡಿ ನುಡಿದ ಕೆಂಚ.

*******

ಅದೊಮ್ಮೆ ಸಾಯಂಕಾಲ ಐದು ಗಂಟೆಯಾಗಿತ್ತು. ಬೇಗ ಬೇಗ ಕಬ್ಬು ಕಿತ್ತುವ ಕೆಲಸ ಮಾಡುತ್ತಿದ್ದ. ಐದು ಜನ ಆಳುಗಳಲ್ಲಿ ಚೆನ್ನಿಯು ಓರ್ವಳಾಗಿ ಕಬ್ಬುಗಳನ್ನು ಹೊತ್ತು ತಂದು ಕೆಂಚನ ಹತ್ತಿರಕ್ಕೆ ಹಾಕುತ್ತಿದ್ದಳು. ಕೆಂಚ ಕುಡಿಗೋಲಿನಿಂದ ಒಂದೊಂದೆ ಕಬ್ಬುಗಳನ್ನು ವಾಡಿಯಿಂದ ಸ್ವಚ್ಛಗೊಳಿಸಿ ಕಬ್ಬಿನ ಗುಂಪಿನಲ್ಲಿ ಚೆಲ್ಲಿ ಕ್ರಷರಕ್ಕೆ ಊಟ ತಯಾರುಗೊಳಿಸುತ್ತಿದ್ದ. ಚೆನ್ನಿ ಬಂದು ಕಬ್ಬು ಹಾಕುತ್ತಿದ್ದಾಗ, ಕೂಡಲೇ ಕೆಂಚನಿಗೆ ಕಬ್ಬು ಸ್ವಚ್ಛಗೊಳಿಸುತ್ತಿರುವ ಸಮಯದಲ್ಲಿ ಅವನ ಅಂಗೈಗೆ ಕುಡುಗೋಲು ಹತ್ತಿ ರಕ್ತ ಕೆಂಪಗೆ ಒಂದೇ ಸಮನೆ ಹರಿದು ಬಂತು. ಚೆನ್ನಿ ನೋಡುತ್ತಲೆ ಹೌಹಾರಿದಳು.

‘ಇದೇನು ಮಾಡಿಕ್ಕೊಂಡ್ಯೋ ಕೆಂಚ ಸ್ವಲ್ಪ ಧೀರ ಮಡಲಾಕ ಬರಲ್ದು. .! ಎನ್ನುತ್ತ ತನ್ನ ಸೀರೆಯ ಸೆರಗಿನ ತುದಿ ಹರಿದು ಕೆಂಚನ ಅಂಗೈಗೆ ಬಟ್ಟೆಯನ್ನು ಕಟ್ಟಿದ್ದಳು.

‘ಚೆನ್ನಿ ಇರಲಿ ಬಿಡು. . . ನೋಡು ಯ್ಯಾನು ಮಾಡ್ದಿ. . ?’

‘ನಾನೇನು ಮಾಡ್ದೆ. . .?’

‘ಹೊಸ ಸೀರೆನೆ ಹರ‍್ದಿಯಲ್ಲ ನೋಡು. . .?’

ಸ್ವಲ್ಪ ಸೀರೆ ಕಡೆ ನೋಡುಕೊಂಡು ಚೆನ್ನಿ
‘ಛೇ ಇರಲಿ ಬಿಡು ಯ್ಯಾನಾಯಿತು, ಈ ಸೀರೆ ಹರ್ದು ಕಟ್ಟಲ್ದರ್ ನಿನಗೆ ಇನ್ನಭೀ ನೆತ್ತರ ಬರ‍್ತಾನೇ ಇರ‍್ತಿತ್ತು. . .’ ನುಡಿದಳು. ಅಷ್ಟರಲ್ಲಿ ಚೆನ್ನಿಯ ತಾಯಿ ಸೂರ‍್ಯವ್ವಾ ಬಂದು ಚೆನ್ನಿ ಮತ್ತು ಕೆಂಚ ನಗೆಯಾಡುವುದನ್ನು ಕಂಡಳು.

“ಚೆನ್ನಿ ಯಾನ ಮಾಡ್ಲಾತ್ತಿದ್ದಿ ಇಲ್ಲಿ”!

‘ಯಾನ್ ಇಲ್ಲೆ ? ಈ ಕೆಂಚಗ ಕುಡುಗೋಲು ಹತ್ತಿ ನೆತ್ತರ ಸೊರ‍್ಲತ್ತಿತ್ತು. ಅದಕ್ಕ ನನ್ನ ಸೀರೆ ತುಣುಕು ಹರಿದು ಬಟ್ಟಿ ಕಟ್ಟಿನಿ. .’ ಚೆನ್ನಿಯ ಮಾತು ಕೇಳುತ್ತ ಸೂರೆವ್ವಾ ಸಮೀಪ ಬಂದಳು.

‘ಹ್ಯಾಂಗ ಮಗಾ ಕುಡುಗೋಲು ಹತ್ತಿ ರಕ್ತ ಸೊರ‍್ಲತ್ತಿತ್ತು. ಹಳ್ಳೂಗ ಮರಿ. . ನಿಮ್ಮಪ್ಪ, ಅವ್ವ, ಯಾರಿಲ್ಲ. . ಪರದೇಶಿ ಮಗ. . ಜತನ. . ಸೂರ‍್ಯವ್ವಾ ನುಡಿದಳು. ಪುನಃ ಚೆನ್ನಿ ಕಡೆ ತಿರುಗಿ ‘ಚೆಂದ ಮಾಡ್ದಿ ಮಗ ಸೀರೆ ಹರ‍್ದರಭೀ ಚಿಂತಿ ಇಲ್ಲ ಪಾಪ ಪೋರುಂದ ಕೈ ಹೋಯ್ತಿತಲ್ಲ’. ನುಡಿದು ಚೆನ್ನಿಯ ಕರೆದುಕೊಂಡು ನಡೆದಳು.

ಚೆನ್ನಿ ಪುನಃ ಕಬ್ಬಿನ ಹೊರೆ ತಂದು ಹಾಕಿದಾಗ ಕೆಂಚ ಚೆನ್ನಿಯ ಕಂಡು ‘ಚೆನ್ನಿ ನಿಮವ್ವ ಯ್ಯಾನಾದರೂ ಬೈಯ್ದಳೇನು ಮತ್ತ. . .?’ ನುಡಿದ.

‘ಇಲ್ಲ ನಮ್ಮವ್ವ ಇಂಥದಕ್ಕ ಯಾನಭಿ ಅಂಬಲ್ಲಳು. . .’

‘ಮತ್ತೆಂಥದಕ್ಕ ಅಂತಾಳು. . ?’ ಚೆನ್ನಿಯ ಮುಖ ಭಾವ ಪರಿಕ್ಷಿಸುತ್ತ ಮುಗುಳು ನಕ್ಕು ಕೆಂಚ ನುಡಿದ.

‘ಎಂತಾದಕ್ಕ ಭೀ ಇಲ್ಲ. .’ ಅವಳ ಮುಗುಳು ನಗೆಯೇ ಉತ್ತರವಾಗಿತ್ತು. ಕೊನೆಯ ಬಾರಿಗೆ ಕಬ್ಬು ತಂದು ಹಾಕುವಾಗ ಕುಡುಗೋಲು ತಕ್ಕೊಂಡು ವಾಡಿಯಿಂದ ಕಬ್ಬು ಬೇರ್ಪಡಿಸುತ್ತಿರುವ ಕೆಂಚನನ್ನು ಕಂಡು ಚೆನ್ನಿ ಸ್ವಲ್ಪ ನಟಿಸುತ್ತಾ. . . ‘ಹಳ್ಳಗ ಕೆಂಚ, ಈ ಸಲ ನೆತ್ತರ ಬಂದರ ನಾನು ನನ್ನ ಸೀರೆ ಸೆರಗು ಹರಿಯಲ್ಲ ನೋಡು?’ ನುಡಿದಳು.

‘ಯಾಕ ನನ್ನ ಕಡಿಂದ ನಿನ್ನ ಬಲ್ಲಿ ಒಂದು ತುಣುಕು ಬಟ್ಟೆ ಹಂಗ ಸೀರೆ ಅಂಚು ಸಿಗಲ್ದು. . .?’ ಕಬ್ಬು ಸ್ವಚ್ಛಗೊಳಿಸಿ ದೂರ ಬೀಸಾಡುತ್ತಾ ನುಡಿದ ಕೆಂಚ.

‘ಇಲ್ಲ ಊ್ಞಂ ಹ್ಞೂಂ ನಿನಗಾಗಿ ನನ್ನ ಹತ್ತಿರ ಪ್ರೀತಿಯೊಂದೇ ಸಿಗ್ತುದ. . .’ ಚೆನ್ನಿ ನುಡಿದು ಕೆಂಚನ ಕಡೆ ನೋಡದೆ ಸೂರೆವ್ವಾನೊಂದಿಗೆ ರಾಚಯ್ಯನಿಗೆ ಹೇಳಿ ಮನೆ ಕಡಿ ಹೆಜ್ಜೆ ಹಾಕಿದಳು.
ರಾಚಯ್ಯ “ಹೂಂ ಬೇಗ ಬೇಗ ಅಗ್ಲಿ. . . ಕಬ್ಬಿನ ರಸ ಕಡಾಯಿಗಿ ಹಾಕ್ರಿ. . ಏನೋ ಏನೋ ಘಮ್ಮಿಸುತ್ತೀರಿ ನೀವು. . . ನುಡಿಯುತ್ತಿದ್ದನು. ಆದರೂ ಕೆಂಚನ ಕಿವಿಯಲ್ಲಿ ಚೆನ್ನಿಯ ಮಾತುಗಳೇ ಓಡಾಡುತ್ತಿದ್ದವು.

******

ಚೆನ್ನಿಗೆ ಹದಿನೆಂಟು ವಯಸ್ಸು ಆಗಿರಬಹುದು. ಅವಳು ಸುಂದರವಾದ ಕನಸು ಕಾಣುತ್ತಿದ್ದಳು. ಇನ್ನೂ ತನಗಿಂತಲೂ ಹಿರಿಯವಳಾದ ಬಸ್ಸವ್ವನ ಮದುವೆಯಾಗದೇ ಚೆನ್ನಿಯ ಮದುವೆಯೂ ಮಾಡುವಂತಿಲ್ಲ. ಚೆನ್ನಿಯ ಪುಟ್ಟ ಪುಟ್ಟ ಕನಸುಗಳು, ಸೊಗಸಾದ ಬಯಕೆಗಳು, ತುಂಟು ನವಿರಾದ ಕಾಮನೆಗಳು ಸದಾ ಅವಳನ್ನು ಖುಷಿ ಕೊಡುವಂತೆ ಮಾಡಿವೆ. ಬಡತನ ಪರಿಸ್ಥಿತಿಯಲ್ಲಿ ಬೆಳೆದ ಚೆನ್ನಿಗೆ ಅವಳಿಗೆ ತುಸು ಕೋಪಗೈಯ್ದರೂ ತಾನೆಂದೂ ವಿಚಾರ ಮಾಡಲಾರಳು. ಚೆನ್ನಿ ಸಿಡುಕಿದಾಗಲೂ, ಕೋಪಿಸಿಕೊಂಡಾಗಲೂ, ಅವಳ ಅಪ್ಪ ಅವ್ವಂದಿರಿಗೆ ಸಿಟ್ಟಿಲ್ಲ.

ಇಂದು ಕೆಂಚನಿಗೆ ಆ ರೀತಿ ಉತ್ತರ ಕೊಟ್ಟ ಮೇಲೆ ಚೆನ್ನಿಗೆ ಮನಸಿನಲ್ಲಿ ಅನೇಕ ಮೋಹದ ತರಂಗಗಳೆದ್ದು ದೇಹವನ್ನು ರೋಮಾಂಚಗೊಳಿಸಿವೆ. ಮನೆಗೆ ಹೋದರೂ ಅವಳು ಕಣ್ಣ ಮುಂದೆ ಕೆಂಚನ ಮುದ್ದು ಮುದ್ದಾದ ಮುಖ, ದಷ್ಟಪುಷ್ಟ ದೇಹ ತುಂಬಿಕೊಂಡಿದೆ. ಎಲ್ಲಿಯೋ ಸ್ವರ್ಗದಲ್ಲಿ ವಿಹರಿಸುತ್ತಿರುವಂತಾದ ಆಕೆಗೆ ಪದೇ ಪದೇ ಆ ಮಾತುಗಳು.. ‘ಕೆಂಚನ ಅಂಗೈಗೆ ತಾನು ಸೆರಗು ಹರಿದು ಕಟ್ಟಿದ್ದು ಅವನು ಮುಗುಳು ನಗೆಯಿಂದ ತನ್ನನ್ನೇ ನೋಡಿದ್ದು..’ ಚೆನ್ನಿಯ ಕಣ್ಣ ಮುಂದೆ ಬಣ್ಣದ ಚಲನಚಿತ್ರದಂತೆ ಕಾಣ ತೊಡಗಿವೆ.

ತಾನು ಹೀಗೆ ಉತ್ತರ ಕೊಡಬಾರದಾಗಿತ್ತು. ಹೆಣ್ಣಾಗಿಯೂ ನಾನು ಇಂಥ ದೊಡ್ಡ ಸಾಹಸ ಮಾಡಿ ಮಾತಾಡಬಾರದಿತ್ತು. ತಾನು ಹೀಗೆ ‘ನಿನಗಾಗಿ ನನ್ನ ಹತ್ತಿರ. . ಪ್ರೀತಿ. . .’ ಛೀ ಛೀ ನಾನು ಹಾಗೆ ನುಡಿದ ಮೇಲೆ, ಕೆಂಚನು ಏನಾದರೂ ಅಪಾರ್ಥ ಕಲ್ಪಿಸಿಕೊಂಡರೆ ಅಥವಾ ಈ ವಿಷಯವನ್ನು ನಮ್ಮ ತಂದೆಯ ಮುಂದೆ ಹೇಳಿದರೆ ಅಥವಾ ಬೇರೆ ತನ್ನ ಗೆಳೆಯರ ಮುಂದೆ ಹೇಳಿಕೊಂಡರೆ ಹೌದು, ಹೌದೌದು ನಾನು ಆಗ ಆವೇಶದ ಭರದಲ್ಲಿ ನುಡಿದೆ. ಚೆನ್ನಿಗೆ ಊಟವೇ ರುಚಿಸದೇ ಇದ್ದ ಆಕೆ, ರಾತ್ರಿ ಮಧ್ಯಾಹ್ನದ ರೊಟ್ಟಿ ಚಟ್ನಿ ಸ್ವಲ್ಪ ಉಂಡು ಮಲಗಿದ್ದಳು. ಚೆನ್ನಿ ಈಗ ಮಲಗಿದ್ದಲ್ಲಿಯೇ ಬೇರೊಂದು ಕಡೆ ಮಗ್ಗಲು ಹೊರಳಿಸಿ ನಿಟ್ಟುಸಿರಿಟ್ಟಳು.

‘ಯಾಕೆ ಇನ್ನು ನಿದ್ದಿ ಬಂದಿಲೇನು?’ ಸೂರೆವ್ವಾ ಮಗಳನ್ನು ಕೇಳಿದಳು. ಬದಿಯಲ್ಲಿ ಅಕ್ಕ ಬಸವ್ವಾ ಗೊರಕೆ ಹಾಕಿ ನಿದ್ದೆ ಸವಿಯುತ್ತಿದ್ದಳು. ರಾಮಣ್ಣ ಅಪ್ಪನ ಹತ್ತಿರ ಚಪ್ಪರದಲ್ಲಿ ಮಲಗಿದ್ದ. ಜಗಲಿಯ ಮೇಲೆ ಮಿಣಿ ಮಿಣಿ ಚಿಮಣಿ ಉರಿದು ಸುತ್ತಲೂ ಕಪ್ಪನೆ ಹೊಗೆ ಉಗುಳಿ ವಾತಾವರಣವೆಲ್ಲ ಕಪ್ಪುಮಯ ಮಾಡುತ್ತಿತ್ತು.

‘ನೀ ಸುಮ್ಮೇ ಮಲಗು, ನನಗ ನಿದ್ದಿ ಬಂದಿಲ್ಲ’.

ಚೆನ್ನಿ ನುಡಿದು ಪುನಃ ಕನಸಿನ ಲೋಕದಲ್ಲಿ ತೇಲಿದಳು. ಮನಸಲ್ಲಿ ಅನೇಕ ವಿಚಾರದ ತರಂಗಗಳು ಸುಳಿಗಾಳಿ ಬೀಸಿದವು. ಹೋದ ವರ್ಷ ಗೌರಿಯ ಗತಿ ಏನಾಯಿತು ? ಆ ತುರುಕರ ಮೌಲಾನಾ ಮೇಲೆ ಮನಸ್ಸು ಮಾಡಿ, ಅವನ ಜತೆ ಹಲ್ಕಾಗಿರಿಗೆ ಇಳಿದು ಊರಾಗೆಲ್ಲಾ ಸುದ್ದಿ ಹತ್ತಿ ಅಕಿಗಿ ನನಗ ಯ್ಯಾನಭಿ ಸಂಬಂಧ ಇಲ್ಲ ಅಂದ ಮ್ಯಾಲ್ ಪಾಪ ಗೌರಿ ಏನು ಮಾಡಿದ್ದಳು? ಮೊದಲೇ ಆಕಿ ಬಸುರಾಗಿ ಊರ ಹೊರಗಿನ ಕೆರ‍್ಯಾಗ ಬಿದ್ದು ಸತ್ತು ಹೋದಳು. ಈಗ ಚೆನ್ನಿಯ ದೇಹ ಝಲ್ ಎಂದಿತ್ತು.

‘ಯವ್ವಾ. . ನಾನು ಏಕಿಗಿ. . ಹೊರಗೆ ಹೋಗ್ಲೆ’. ಎನ್ನುತ್ತ ಚೆನ್ನಿ ಎದ್ದಾಗ, ‘ನಾನು ಬರಲ್ಯಾನ ಮಗಾ. . .?’ ಸೂರ‍್ಯವ್ವಾ ನುಡಿದಳು. ಬ್ಯಾಡ, ನಾನೇ ಹೋಗಿ ಬರ‍್ತೆ. . . ನುಡಿದು ಬಾಗಿಲು ತೆರೆದು ಹೊರಗೆ ಬಂದಳು. ಈ ಸಲ ಛಪ್ಪರದಲ್ಲಿ ರಾಮಣ್ಣ,ಅಣ್ಣ,ಅಪ್ಪ ಹಾಯಾಗಿ ಮಲಗಿ ನಿದ್ದೆಯ ಗೊರಕೆ ಹೊಡೆಯುತ್ತಿದ್ದರು. ಹಗಲೆಲ್ಲ ದುಡಿದು ಈಗ ನಿದ್ದೆ, ಮೊರೆ ಹೋಗಿ ಆನಂದದ ನಿಟ್ಟುಸಿರು ಬಿಡುತ್ತಿದ್ದರು.

ಚೆನ್ನಿ ಹೊರಬಂದಾಗ ತಂಪನೆ ಛಳಿ ಕಿವಿಗೆ ಬಡಿದು ಆಹ್ಲಾದ ಕೊಡುತ್ತಿದ್ದರೂ ವಿಚಾರದ ತರಂಗಗಳ ಬಿಸಿಯಲ್ಲಿ ಆ ತಂಪು ಮಾಯವಾಗಿತ್ತು. ಆಕಾಶದಲ್ಲೆಡೆ ಹುಣ್ಣಿಮೆಯ ಬೆಳದಿಂಗಳಲ್ಲಿ ತುಣುಕು ತುಣುಕು ಮೋಡಗಳ ನಡುವೆ ಚಂದ್ರ ಚಲ್ಲಾಟ ಮಾಡುತ್ತ ನಡೆದಿದ್ದು ಚಂದ್ರನಿಗೆ ಮುಟ್ಟಾಟಕ್ಕೆ ಅಣಿಯಾಗುವಂತೆ ನಕ್ಷತ್ರಗಳೆಲ್ಲ ನಗುತ್ತಾ ಮಿನುಗುತ್ತಿದ್ದವು. ಎಲ್ಲ ಕಡೆಗೂ ನಿಶ್ಯಬ್ದ ವಾತಾವರಣವಿದ್ದರೂ ಆಗೊಮ್ಮೆ ಈಗೊಮ್ಮೆ ದೂರದಲ್ಲಿ ನಾಯಿಗಳು ಬೊಗುಳುವುದು ಮಾತ್ರ ಕೇಳಿ ಬರುತ್ತಿತ್ತು. ಕೊಟ್ಟಿಗಿಯಲ್ಲಿ ಒಂದು ಎಮ್ಮೆ ಒಂದು ಕೋಣ ಮೆಲ್ಕು ಆಡಿಸುತ್ತಾ ಕುಳಿತ್ತಿದ್ದವು.

‘”ಒಂದು ವೇಳೆ ತನ್ನನ್ನು ಮದುವೆಗೆ ಕೆಂಚ ಒಪ್ಪಿಕೊಂಡರೆ, ಹೌದು ಅವನಿಗ್ಯಾರುಂಟು? ತಂದೆ ತಾಯಿಯನ್ನು ಎಂದೋ ಕಳೆದುಕೊಂಡಿದ್ದ ಕೆಂಚ ಮುಪ್ಪಿನ ಸೋದರತ್ತೆ ಆರೈಕೆಯಲ್ಲಿ ಬೆಳೆದು ದೊಡ್ಡವನಾಗಿದ್ದ. ಹೋದ ವರುಷ ಸೋದರತ್ತೆಯನ್ನು ಕಳೆದುಕೊಂಡು ಅನಾಥನಾದ. ಆದರೂ ಕೆಂಚ ದಾರಿ ಬಿಟ್ಟಿಲ್ಲ. ಕೆಟ್ಟವರ ಸಂಗ ಮಾಡಿಲ್ಲ. ಇಸ್ಪೆಟ್ಟು ಆಡೋ ಚಟ ಇಲ್ಲ. ಅವನಂತಹವ ತನಗ ಗಂಡ ಆಗಿ ಬಂದರ ಛೇ ಛೇ ನಾನು ಏನಾದರ ಯೋಚ್ನೆ ಮಾಡುತ್ತಿರುವೆ, ಇನ್ನು ಅಕ್ಕನ ಮದಿ ಆಗಬೇಕು. ಹೋದ ವರ್ಷ ಮದಿ ಆಗೋದು ಪಸಂದ ಮಾಡಿದ್ದ ಆ ಪೋರ ಅಕ್ಕ ಕಪ್ಪು ಅಂತ ತಿರುಗಿ ಹೋಗಿದ್ದ. ಅಕ್ಕಗ ಎಲ್ಲಿ ತೋರಿಸಿದರೂ ಮದುವೆ ಆಗಲ್ದು. ಬಾಜು ಮನಿ ಲಿಂಗಣ್ಣ ಬಸಮ್ಮಳ ಜತಿ ಸಂಬಂಧ ಇಟ್ಟಾನು ಆಂತ ಜನ ಆಡ್ತಾರ. ಹಾಂಗಂತ ಒಂದಿನವೂ ಬಸಮ್ಮಳು ಲಿಂಗಣ್ಣ ಜತಿ ಮಾತನಾಡಿಲ್ಲ. ಒಂದು ವೇಳೆ ಹಾಂಗೆ ಮಾಡಬೇಕಾದರೆ ಲಿಂಗಣ್ಣಗಭಿ ಮದಿ ಆಗ್ಯಾದ, ಮಕ್ಕಳ ಆವ. ಅಂದರ ಅಕ್ಕ ಬಸಮ್ಮಾಳ ಮದಿ ಆಗೋದು ಹ್ಯಾಂಗ? ಒಂದು ವೇಳೆ ಅವಳ ಮದಿ ಇಲ್ಲ ಅಂದರ ನನ್ನ ಮದಿ? ಛೇ. . ? ನಾನು ಯಾನು ಇಚಾರ ಮಾಡಲಾತಿದ್ದೀನಿ. . ತನ್ನಲ್ಲೀ ತಾನು ಮುಗುಳು ನಗುತ್ತ ಚೆನ್ನಿ ಮನೆಯೊಳಗೆ ಹೊಗಿ ಮಲಗಿಕೊಂಡಳು. ಬಹಳ ಹೊತ್ತಿನ ನಂತರ ನಿದ್ರಾದೇವಿ ಅವಳಿಗೆ ಕರುಣೆ ನೀಡಿದಳು.

ಮರುದಿನ ರಾಚಯ್ಯನ ಕಬ್ಬಿನ ಹೊಲಕ್ಕೆ ಹೋಗಲು ಏನೋ ಒಂದು ರೀತಿಯ ಉಲ್ಲಾಸ, ಭಯ, ರೋಮಾಂಚನ ಚೆನ್ನಿಯ ಮನಸ್ಸಿನಲ್ಲಿ ಆಗುತ್ತಿತ್ತು. ಇವತ್ತು ಎಂದಿನ ಚೆನ್ನಿ ಆಗಿರದೆ ಏನೋ ಒಂದು ಅವ್ಯಕ್ತವಾದುದನ್ನು ಪಡೆಯುವಂತೆ ಹೊಲಕ್ಕೆ ನಡೆದಳು. ಹೊಲಕ್ಕೆ ಬಂದಾಗ ಈಗ ಇನ್ನೂ ಕೆಂಚ ಬಂದಿರಲಿಲ್ಲ. ಅತ್ತ ಕಣ್ಣು ಹಾಯಿಸಿದಳು. ಎಲ್ಲಿಯೂ ಕೆಂಚ ಕಂಡು ಬರದೆ ಮನಸ್ಸಲ್ಲೇನೋ ಮುಜುಗರ. ಯ್ಯಾನು ತಿಳಿದೇನೋ ಏನೋ. . . ದೇವರೆ ಇದೆಂಥ ಪರಿಸ್ಥಿತಿ ತಂದಿಟ್ಟಿ?!! ಮನದಲ್ಲಿಯೇ ನುಡಿದಳು ನಿಟ್ಟುಸಿರು ಬಿಟ್ಲು.

ಚೆನ್ನಿ. ಏ ಯ್ಯಾನು ಇಚಾರ ಮಾಡಲಾತ್ತಿದ್ದಿ, ರಾತ್ರಿಯಿಂದ ಹೀಗೆ ಮಾಡಲಾತಿದ್ದಿ ನಿಂಗ್ಯಾನು ದೆವ್ವ ಹಿಡಿದಿಲ್ಲ ಮತ್ತ. . .!’ ಸೂರ‍್ಯವ್ವಾ ನುಡಿದಾಗಲೇ ಚೆನ್ನಿಗೆ ಎಚ್ಚರವಾಗಿತ್ತು. ಕಬ್ಬು ಕೀಳಲು ಐದು ಜನರ ಗುಂಪಿನ ನಡುವೆ ಓರ್ವಳಾಗಿ ಮನಸ್ಸಿಲ್ಲದೆ ಮನಸ್ಸಿನಿಂದ ಬಸಮ್ಮ ಮತ್ತು ಸೂರ‍್ಯವ್ವರ ಜತೆ ಚೆನ್ನಿ ಹೆಜ್ಜೆ ಹಾಕಿದಳು.

ಕಬ್ಬು ತಂದು ಒಂದು ಕಡೆ ಗುಂಪು ಕಟ್ಟಿ ಹಾಕುತ್ತಿರುವಂತೆ ಗುಂಡಪ್ಪ ಬೀಸಾಡುತ್ತಿದ್ದ ಕಬ್ಬುಗಳನ್ನು ಪಡೆದುಕೊಂಡು ಒಂದೊಂದಾಗಿ ವಾಡಿಯಿಂದ ಸ್ವಚ್ಛಗೊಳಿಸಿ ಕ್ರಷರ ಹತ್ತಿರಕ್ಕೆ ಹಾಕತೊಡಗಿದನು.

‘ಯಾಕೆ ಮೊಮ್ಮ ಇವತ್ತು ಈ ಪಾಳಿ ನಿನಗ ಬಂದದ. . ?’ ಬೇಕೆಂತಲೇ ಚೆನ್ನಿ ನುಡಿದಳು.

‘ಯಾರಾದರೂ ಒಬ್ಬರ ಮಾಡ್ದರ ಆಯ್ತು ಎತ್ತಿಂದರ ಕೆಲಸ ಚಾಗಬೇಕು. ಯಾಕ ನಿನಗ್ಯಾಕ ಈ ಕುದಿ ಹತ್ತಿತ್ತು’. ಪುನಃ ಗುಂಡಪ್ಪ ನುಡಿದನು.

‘ಯಾಕಿಲ್ಲ. . .’ ಮಗುಳು ನಗೆ ತಂದುಕೊಂಡು ಚೆನ್ನಿ ನಕ್ಕಳು.

‘ಹ್ಞೂಂ ಆ ಭಾಡ್ಯಾಗ ಯ್ಯಾನೋ ಇವತ್ತು ಮೈಗೆ ಹುಶಾರಿಲ್ಲಂತ ಅದಕ್ಕೆ ಸ್ವಾಮಿ, ರಾಚಯ್ಯ ನಂಗ ಹಚ್ಯಾರ ಈ ಕೆಲಸ. .’ ಪುನಃ ಗುಂಡಪ್ಪ ನುಡಿದ.

‘ಯಾ ಭಾಡ್ಯಾಗ ಈರಾ ಮೊಮ್ಮ . .’
ಚೆನ್ನಿ‌ ಕುತೂಹಲದಿಂದ ಕೇಳಿದಳು.
‘ಅದೇ ಕೆಂಚಗ. . .’

‘ಕೆಂಚಗ. . .’ ಚೆನ್ನಿಯ ಬಾಯಿಂದ ಆಶ್ಚರ್ಯದ ಶಬ್ದ ಮೂಡಿಬಂತು. ಆದರೂ ಸಾವರಿಸಿಕೊಂಡು ಅವಳು ಬೇಗ ಬೇಗ ಕಬ್ಬು ಕಿತ್ತುವ ಸ್ಥಳಕ್ಕೆ ನಡೆದಳು. ಹಳ್ಳಿ ಊರಾಗಿನ ಜನ ‘ಹೋsss. . .’ ಎನ್ನುತ್ತ ಚಿಕ್ಕ ಚಿಕ್ಕ ಮಕ್ಕಳು ರಾಚಯ್ಯನವರ ಕಬ್ಬಿನ ಹೊಲಕ್ಕೆ ಬಂದು ಕಡಾಯಿ ಸುತ್ತುಗಟ್ಟಿದ್ದರು.

‘ಏ ದೂರ ಸರಿರೋ ಪಾರಗೊಳೇ. .’ಇಷ್ಟು ಹೊರೆ ಹೊತ್ರಾಳಿ ಯಾಕ ಬಂದರ‍್ಯೊ?’ ರಾಚಯ್ಯ ಸ್ವಾಮಿ ನುಡಿದರು.

ಹುಡುಗರಲ್ಲಿ ಹಿರಿಯವನಾದ ಮಲ್ಲೇಶ ಧೈರ‍್ಯ ಮಾಡಿ ‘ಸ್ವಾಮಿ, ನಮಗೆ ಬೆಲ್ಲದ ಹೂವಾ ಕೊಡ್ರಿ. . .’ ಎಂದು ಕೇಳಿದ.

‘ಸ್ವಲ್ಪ ನಿಂತು ಬರ‍್ರಿ. . . ಕೊಡತಿನಿ. . ಬೇಕೆಂದರ ಈಗ ಕಬ್ಬಿನ ಹಾಲು ಕುಡಿರಿ’ ರಾಚಯ್ಯನ ಮಾತಿಗೆ ಹುಡುಗರೆಲ್ಲ ‘ಹ್ಞೂಂ’ ಎಂದು ಗೋಣು ಆಡಿಸಿದವು.

‘’ಯಾಕ ಬರದೆ ಉಳಿದ ಕೆಂಚ. . ಮತ್ಯಾನರ ಮಾಡಕೊತಾನೋ ಛೇ ಛೇ ನಾನು ಹೀಗ ಅನಬ್ಯಾಡದಾಗಿತ್ತು. . . ಕಬ್ಬು ತಲೆಯ ಮೇಲೆ ಎತ್ತುಕೊಂಡು ಗುಂಡಪ್ಪನಲ್ಲಿಗೆ ತಂದು ಹಾಕುತ್ತ ಚೆನ್ನಿಯು ಯೋಚಿಸ ತೊಡಗಿದಳು. ಇವತ್ತು ಅವಳ ಕೈಗಳು ಯಂತ್ರದಂತೆ ದುಡಿಯ ತೊಡಗಿದವು. ಮನಸ್ಸು ನಿರಾಶವಾಗಿತ್ತು. ಕೆಂಚನಿಲ್ಲದ ಈ ಕಬ್ಬಿನ ಬೆಲ್ಲದ ಸಿಹಿ ವಾತಾವರಣವು ಕಹಿಯಾಗಿ ಕಂಡು ಬಂತು. ಒಮ್ಮೆ ಅನ್ನಬಾರದಾಗಿತ್ತೆಂದು ಯೋಚಿಸಿಕೊಂಡರೂ ಇನ್ನೊಮ್ಮೆ ಕೆಂಚ ಏನಾದರೂ ಮಾಡಿಕೊಂಡು ಸಾಯಬಹುದೇ. . ? ಎಂಬ ವಿಚಾರಲೋಕದಲ್ಲಿ ತೇಲಿ ಹೋದಳು. ಎಂದಿನಂತೆ ಬೆಳಗಾಯಿತು. ಇವತ್ತು ಆದರೂ ಅವಳ ಮುಖ ಸಪ್ಪೆಯಾಗಿತ್ತು. ಮೈ ಭಾರವಾಗಿತ್ತು. ಕಣ್ಣುಗಳು ನಿದ್ದೆಗಟ್ಟು ಕೆಂಪುಬಣ್ಣಕ್ಕೆ ತಿರುಗಿದ್ದವು. ಸೂರ‍್ಯ ಮೂಡಿದ ಬಹಳ ಹೊತ್ತಿನ ನಂತರ ಎದ್ದ ಚೆನ್ನಿ ಸಾವಕಾಶವಾಗಿ ನಡೆದಾಡುವುದು, ಏನೋ ಯೋಚಿಸುವುದು ಕಂಡು ಸೂರ‍್ಯವ್ವಾ “ಈ ಪೊಟ್ಟಿಗೆ ಯ್ಯಾನಾಯಿತು ಅಂತೀನಿ ಎರಡು ದಿನದಿಂದ ಮೈ ಮೇಲೆ ಹೋಷ್ ಇಲ್ದಾಂಗ ಇಚಾರದಲ್ಲಿ ಹಳ. .” ನುಡಿದಾಗ ‘ಇರಲಿ ಬಿಡು ಯೆವ್ವಾ ಸದಾ ಅವಳ ಬಗ್ಗೆನೇ ಯಾಕ ಚಿಂತಿ ಮಾಡ್ತಿ. . .’ ಬಸವ್ವಾ ನುಡಿದು ಸೂರೆವ್ವಾನ ವಿಚಾರ ಬದಲಿಸಿದಳು.

ಎಂದಿನಂತೆ ಹೊಲಕ್ಕೆ ಚೆನ್ನಿ ಸೂರ್ಯವ್ವಾ ಮತ್ತು ಬಸವ್ವಾರ ಜತೆ ಹೆಜ್ಜೆ ಹಾಕಿದಾಗ ಅವಳ ಚೈತನ್ಯವೆಲ್ಲ ಮಾಯವಾಗಿ ಭಾರವಾದ ವಸ್ತುವೊಂದು ಹೊತ್ತಂತೆ ನಡೆದಿದ್ದಳು ನಡೆದುಕೊಂಡು ಹೊಲಕ್ಕೆ ಬಂದಾಗ ಚೆನ್ನಿಯ ಕಣ್ಣುಗಳು ಅತ್ತಿತ್ತ ಸರಿದಿದ್ದವು. ಕೆಂಚ ಎಲ್ಲೂ ಕಂಡುಬರಲಿಲ್ಲ ಹೌದು ಕೆಂಚ ಮನಸ್ಸಿಗೆ ಏನಾದರೂ ಹಚ್ಚಿಕೊಂಡಿರುಬಹುದು. ಪುನಃ ಅತ್ತ ಇತ್ತ ಕಡಾಯಿ ಬೆಲ್ಲದವರಿಗೆ ಕಣ್ಣು ಹಾಯಿಸಿದಳು. ಕೂಡಲೇ ಅವಳ ಕಣ್ಣು ಖುಷಿಯಿಂದ ಮಿಂಚಿದವು. ದೂರದ ಬೆಲ್ಲದ ಕಡಾಯಿಗೆ ಉರುವಲು ನೀಡುತ್ತಿದ್ದ ಕೆಂಚ. ಅವಳ ಸಂತಸಕ್ಕೆ ಪಾರವೇ ಇರಲಿಲ್ಲ.

‘ಕೆಂಚ’ ಎನ್ನುತ್ತ ಗಾಣದ ಕಡಾಯಿ ಹತ್ತಿರ ಚೆನ್ನಿ ಬರುವುದು ಕಂಡ ರಾಚಯ್ಯನು ಯ್ಯಾನೇ ನೀವು ಯಾನರ ಕೆಲಸ ಗಿಲಸ ಮಾಡ್ತಿರೋ ಅಥವಾ ನಾವು ನಿಮಗೆ ಐವತ್ತು ರೂಪಾಯಿ ಇವರಿಗೆ ನೂರು ರೂಪಾಯಿ ಮತ್ತು ನಿಮಗ ಕಿಲೋ ಕಿಲೋ ಬೆಲ್ಲಕೊಟ್ಟು ನಮಗ ಕಾಲ ಬೀಳೋಯ್ಯಾಳಿ ಆಗ್ಯಾದ, ರಾತ್ರಿನಿದ್ದೆ ಇಲ್ಲ, ಹಗಲ ಊಟ ಇಲ್ಲ ಮತ್ತು ಇಲ್ಲಿ ನೀವು ಹಿಂಗ ಮಾಡ್ತಿರಿ.. .” ರಾಚಯ್ಯನ ಮಾತು ಕೆಂಚನಿಗೆ ಕೊಂಚ ಕೆಟ್ಟದೆನಿಸಿತ್ತು. ಚೆನ್ನಿ ಚಿಕ್ಕ ಮುಖ ಮಾಡಿ ಬೆನ್ನು ತಿರುಗಿಸಿ ಕಬ್ಬು ಕಿತ್ತುವ ಸ್ಥಳಕ್ಕೆ ನಡೆದಳು.

‘ನೋಡ್ರಿ ನಾವು ಕೆಲಸಕ್ಕೆ ಬಂದೀವಿ ಅಂದರ ಕೆಲಸ ಮಾಡ್ತೇವು ಆದರ ನೀವು ಹೀಗ ದಬಾಯಿಸೋದು ನಮಗ ಸರಿ ಕಾಣೊಲ್ದು’. ಕೆಂಚ ತುಸು ಸಿಡುಕಿನಿಂದ ಉರವಲು ಸಿಪ್ಪೆ ಕಡಾಯಿಯ ಒಲೆಗೆ ಹಾಕುತ್ತ ರಾಚಯ್ಯ ಸ್ವಾಮಿಯತ್ತ ನೋಡಿ ಕೆಂಚ ನುಡಿದನು.

‘ಆದ್ಸರಿ ಆದರ ಕೆಂಚ ನೋಡು ನಿನಗ ಎಲ್ಲ ಖುನಾ ಆದ, ನಾಕು ದಿನಾ ಆಯ್ತ ಇನ್ನು ಹದಿನೈದು ಕ್ವಿಂಟಲ್ ಬೆಲ್ಲಾ ಆಗಿಲ್ಲ. ನಾವು ಕ್ರಷರ ಖರೀದಿ, ಲೇಬರ್ ಖರೀದಿ, ಎಲ್ಲ ತಂದು ಕಬ್ಬು ಬೆಳೆಸಿ ಕಾರಖಾನಿ ನಡಸದರಾಗ ಏನ ಮಜಾ ಇಲ್ಲ. . .’ ನುಡಿದು ರಾಚಯ್ಯ ಸಿಡಿಮಿಡಿಗೊಳ್ಳುತ್ತಾ ಕ್ರಷರ ಕಡೆ ನಡೆಯ ತೊಡಗಿದನು.

ಈ ಸಲ ಕೆಂಚ ತಿರುಗಿ ದೂರಕ್ಕೆ ಹೊಗುತ್ತಿರುವ ಚೆನ್ನಿಯನ್ನೆ ಕಂಡ. ಅವಳು ಒಮ್ಮೆಯೂ ತಿರುಗಿ ನೋಡದೆ ಹಾಗೇ ಕಬ್ಬಿನ ಹೊಲದಲ್ಲಿ ನಡೆದು ಮರೆಯಾದಳು. ‘ಪಾಪ’ ಎಂದು ಕೊಳ್ಳುತ್ತಾ ಒಲೆಗೆ ಸಿಪ್ಪೆ ಹಾಕುತ್ತಾ ಪ್ರಜ್ವಿಲಿಸುತ್ತಿರುವ ಬೆಂಕಿಯನ್ನೆ ಕಂಡು “ಅಂಥವಳ ಕೈಹಿಡಿದವ ಪುಣ್ಯವಂತ”. ಅವಳು ಅವತ್ತಾಡಿದ ಮಾತು ನಿನಗಾಗಿ ‘ನನ್ನ ಹತ್ತಿರ ಪ್ರೀತಿಯೊಂದೇ ಸಿಗ್ತದೆ. . .’ ಎಷ್ಟೊಂದು ಪ್ರೀತಿ ತುಂಬಿತ್ತು ಆ ಮಾತಿನಲ್ಲಿ.

ಅವಳಂತಹ ಚೆಲುವೆಗೆ ನಾನು ಮದುವೆ ಆಗಲೇಬೇಕು. ಆದರ ಹೌದು ಅವರ ಮನ್ಯಾಗ ಇನ್ನು ಬಸವ್ವನ ಮದಿ ಆಗಿಲ್ಲ. ಅವಳ ಮದಿ ಆಗದೇ ಇವಳ ಮದಿ ಮಾಡಲ್ಲರು. ಆದರ ನಾನು ಅಕೀನ ಮದಿ ಆಗಲೇಬೇಕು. ಏನು ಮಾಡಬೇಕು ಏನೇನೋ ನೆನಪಿಸಿಕೊಂಡು ಮುಗುಳು ನಕ್ಕಿದ ಕೆಂಚ.

ಮತ್ತೊಂದು ದಿನ ಕೆಂಚ ಕಬ್ಬಿನ ಹೊಲದಲ್ಲಿ ಹೋಗಿ ಕಬ್ಬಿನವಾಡಿ ಕೀಳಿ ಬೇರ್ಪಡಿಸುತ್ತಿದ್ದನು. ಸುತ್ತಲೂ ಜನರು ಯಾರು ಕಾಣುತ್ತಿರಲಿಲ್ಲ. ಅಷ್ಟರಲ್ಲಿ ಯಾರೋ ನಡೆದುಕೊಂಡು ಬರುವಂತೆ ತೋರಿತ್ತು. ನೋಡುವಷ್ಟರಲ್ಲಿ ಚೆನ್ನಿ ಬರುತ್ತಿದ್ದಳು.

‘ಏನ ಚೆನ್ನಿ ನಿಮ್ಮ ಕಬ್ಬು ಕಿತ್ತುವ ಕೆಲಸ ಮುಗಿತೇ?’ ಮೆಲ್ಲಗೆ ಕೆಂಚ ನುಡಿದನು. ‘ಹೌದು ಆದರ ನಮ್ಮ ಕೆಲಸದ ಸುದ್ದಿ ನಿಮಗ್ಯಾಕೆ?’ ಚೆನ್ನಿ ಮುಖವುಬ್ಬಿಸಿದಳು.

‘ಚೆನ್ನಿ ನಿನಗೊಂದು ವಿಷಯ ಹೇಳ್ತಿನಿ. ನೀನು ಯಾನಭೀ ಸಿಟ್ಟು ಮಾಡಲ್ಲ ಅಂದರ್.’ ಕೆಂಚ ಚೆನ್ನಿಯ ಹಾವ ಭಾವ ಪರೀಕ್ಷಿಸುತ್ತ ನುಡಿದನು.

‘ಕೆಂಚ ನಾನು ಸಿಟ್ಟು ಮಾಡುವ್ಹಾಂಗ ನೀನು ಯಾನಭಿ ಹೇಳಲ್ಲಿ. ಹೇಳು ನಾನು ಯಾನು ತಿಳಿಕೊಳ್ಳೊಲ್ಲ?’ ಮುಗುಳು ನಗುತ್ತಾ ಚೆನ್ನಿ ನುಡಿದಳು. ಈ ಸಲ ಕೆಂಚ ಅವಳ ಹತ್ತಿರಕ್ಕೆ ನಡೆದು ಬಂದು ತನ್ನ ಒಳಗಿನ ಬನೇನ ಜೇಬಿನಿಂದ ಎರಡು ಪೊಟ್ಟಣಗಳು ಹೊರಗೆ ತೆಗೆದನು.

‘ಅವು ಏನು?’ ಪ್ರಶ್ನೆ ಹಾಕಿ ಚೆನ್ನಿ ನುಡಿದಳು.

‘ನಾನೆಲ್ಲಾ ಹೇಳ್ತಿನಿ’. ಕೆಂಚ ನುಡಿದು ಪೊಟ್ಟಗಳನ್ನು ಬಿಚ್ಚಿ ಅವುಗಳೊಳಗಿಂದ ಎರಡು ರವಿಕೆ ಬಟ್ಟೆಗಳು ಮತ್ತು ಕೆಲವು ಗಾಜಿನ ಬಳೆಗಳನ್ನು ಹೊರಗೆ ತೆಗೆದನು.

‘ಇವೇನು. . .?’ ಅರ್ಥವಾದರೂ ಸೋಗು ಹಾಕುವಂತೆ ಚೆನ್ನಿ ನುಡಿದಳು.
‘ಚೆನ್ನಿ ನನ್ನ ಬಾಳಿನಲ್ಲಿ ಯಾರೂ ಇಲ್ಲ. ನೀನು ಒಪ್ಪಿದರೆ ನನ್ನ ಸುಖದಲ್ಲಿ ದುಃಖದಲ್ಲಿ ನಿನ್ನನ್ನು ಬೆರೆಸಿಕೊಳ್ತಿನಿ’. ಚೆನ್ನಿಯ ಹಾವಭಾವ ವೀಕ್ಷೀಸುತ್ತಾ ನುಡಿದನು.

‘ಕೆಂಚ?’

‘ಹೌದು ಚೆನ್ನಿ. .’ ಇದಕ್ಕೆ ನೀನು ಒಲ್ಲೆ ಅಂತ ಹೇಳಬೇಡ. ‘ನನ್ನ ಆಣಿ ಆದ. . . ನಿನಗ ಎಂದಾದರೊಂದು ದಿನ ನಾನು ಹ್ಯಾಂಗಭಿ ಮದಿ ಆಗುವೆ. ‘ಅಂದರ’ ಚೆನ್ನಿಯ ಮಾತಿಗೆ ಈ ರವಿಕೆ, ಬಳಿ ಕುಡ್ತಾ ಇದ್ದಿನಿ ಇಂದಿನಿಂದಲೇ ನೀನು ನನ್ನವಳು. ದೀನನಾಗಿ ನುಡಿದನು ಕೆಂಚ.

ಈ ಸಲ ಚೆನ್ನಿಯ ಕಣ್ಣಲ್ಲಿ ನೀರಾಡಿದವು. ಇಂದು ತಾನೊಂದು ಅವ್ಯಕ್ತವಾದುದೊಂದು ಪಡೆದಂತೆ ಪ್ರಫುಲ್ಲಿತದೊಂಡಳು.

ಅವಳ ಶರೀರವೇಲ್ಲ ಎಂತಹದೋ ವಿಷಯ ಕೇಳಿ ರೋಮಾಂಚನ ಗೊಂಡಿತ್ತು. ಅದನ್ನು ತೋರಗೊಡದೆ ಅತ್ತೊಮ್ಮೆ ಇತ್ತೊಮ್ಮೆ ಕಂಡು ಕೆಂಚ ಪುನಃ ನುಡಿದನು.

“ಒಲ್ಲೆ ಎನ್ನ ಬೇಡ ಚೆನ್ನಿ. . .” ದೈನತೆಯಲ್ಲಿ ನುಡಿದನು.

ಕೆಂಚನಿಗೆ ‘ಒಲ್ಲೆ’ ಎನ್ನುವಳೋ ಎಂಬ ಭಯವಿತ್ತು. ಅವಳ ಇನ್ನು ಹತ್ತಿರಕ್ಕೆ ಹೋಗಿ “ಚೆನ್ನಿ ನೀನು ದಯವಿಟ್ಟು ಒಲ್ಲೆ ಎನ್ನಬೇಡ ದೈನ್ಯಭಾವದಲ್ಲಿ ಮತ್ತೊಮ್ಮೆ ನುಡಿದನು”. ಈ ಸಲ ಚೆನ್ನಿ ಮೌನವಾದಳು.

******
ಈ ಪ್ರಸಂಗ ನಡೆದನಂತರ ಕೆಂಚ ಮತ್ತು ಚೆನ್ನಿಯರು ಒಬ್ಬರನೊಬ್ಬರು ದಿನನಿತ್ಯ ಪ್ರೀತಿಯಿಂದ ಮಾತನಾಡುವುದು. ಮುಗುಳುನಗುವುದು, ಕದ್ದುನೋಡುವುದು ಮಾಡುತ್ತಿದ್ದರೂ ಸಹ ಇವೆಲ್ಲವೂ ಯಾರಿಗೂ ಅರ್ಥವಾಗುತ್ತಿರಲಿಲ್ಲ.

********

ಇನ್ನೂ ಕ್ರಷರ ನುರಿಯುವುದು ಮೂರು ದಿನ ಬಾಕಿ ಉಳಿದಿತ್ತು. ವಿಚಾರ ಲೋಕದಲ್ಲಿ ತೇಲಿಹೋದ ಕೆಂಚನು ಹೀಗೆ ಕಬ್ಬುಗಳನ್ನು ಕ್ರಷರದ ಬಾಯಿಗೆ ಕೊಡತೊಡಗಿದನು. ಕೂಡಲೇ ಕಿಟಾರನೇ ಕಿರುಚಿಕೊಂಡನು. ಆ ಸಪ್ಪಳಕ್ಕೆ ರಾಚಯ್ಯ ಮತ್ತು ಇತರ ಆಳುಗಳೆಲ್ಲಾ ಅಲ್ಲಿಗೆ ಓಡಿ ಬಂದರು. ಕಬ್ಬಿನ ಕ್ರಷರದಲ್ಲಿ ಕೆಂಚನ ಕೈ ಹೋಗಿತ್ತು. ಇದನ್ನು ಕಂಡಕೂಡಲೇ ವಿದ್ಯುತ್ ಆಫ್ ಮಾಡಲಾಯಿತು ಆದರೂ ಕ್ರಷರ ತಿರುಗತ್ತಿರುವ ರಭಸಕ್ಕೆ ಕೆಂಚನ ಕೈಯ್ಯು ಪೂರ್ತಿಯಾಗಿ ಕ್ರಷರ ಒಳಗೆಹೋಗಿದ ಪರಿಣಾಮ ಕೆಂಚ ಪೂರ್ತಿಯಾಗಿ ಮೂರ್ಛೆ ಹೋಗಿದ್ದನು. ಜನರೆಲ್ಲ ಸುತ್ತುವರಿಯಿತು. ಮೆಲ್ಲಗೆ ಎಚ್ಚರವಹಿಸಿ ಕೈ ಹೊರ ತೆಗೆದರು ಮತ್ತು ಕೂಡಲೇ ಡಾಕ್ಟರ್ ಹತ್ತಿರ ಕೆಂಚನನ್ನು ಕೊಂಡೊಯ್ದರು.

ಡಾಕ್ಟರರು ಕೆಂಚನನ್ನು ಪೂರ್ತಿಯಾಗಿ ಪರಶೀಲಿಸಿ ರಾಚಯ್ಯನಿಗೆ ಬದಿಗೆ ಕರೆದರು. ಸಾರಿ, ‘ನೀವು ಬಹಳ ತಡ ಮಾಡಿ ತಂದಿದ್ದೀರಿ ಇವನು ತೀರಿಕೊಂಡು ಆಗಲೇ ಎರಡು ಗಂಟೆಗಳಾದವು’. ಡಾಕ್ಟರರು ಹೇಳಿ ಒಳ ಹೋಗುತ್ತಿರುವಂತೆ ಜನಜಾತ್ರೆಯಾಗಿ ನರೆಯಿತು. ನೋಡು ನೋಡುತ್ತಿರುವಂತೆ ಪೋಲಿಸ್ ಬಂತು. ಅಲ್ಲಿ ಗುಂಪುಗಟ್ಟಿದ ಜನರ ಮಧ್ಯದಲ್ಲಿ ಜನರ ದುಃಖದ ಅಕ್ರಂದನ ಕೇಳಲಿ ಬರುತಿತ್ತು. ಚೆನ್ನಿಯು ಒಂದು ಕಡೆ ನಿಂತು ಜೋರಾಗಿ ಅಳುತ್ತಿದ್ದಳು. ಅಷ್ಟರಲ್ಲಿ ಸೂರ‍್ಯವ್ವಾ ಮಗಳನ್ನು ಕಂಡು ಹತ್ತಿರಕ್ಕೆ ಬರುತ್ತ ‘ನಡಿ ನಡಿ ನಿನ್ಯಾಕ ಅಷ್ಟುಬಡಕೊಂಡ ಅಳ್ಳತ್ತಿದ್ದಿ ಅಂವ ಏನು ನಿನ್ನ ಗಂಡನ ?’ ಎಂದು ಪ್ರಶ್ನಿಸಿ ಚೆನ್ನಿಯನ್ನು ಕರೆದುಕೊಂಡು ಮನೆಯತ್ತ ಹೆಜ್ಜೆ ಹಾಕಿದಳು.

ಈಗ ಚೆನ್ನಿಯ ಮುಗ್ಧ ಕನಸುಗಳು ಗಾಳಿ ಗೋಪುರವಾಗಿ ಹಾರಿ ಹೋಗಿದ್ದವು. ಅಲ್ಲಿ ಈಗಲೂ ಜನರ ಗುಂಪು ಚದುರಿಸಲು ಪೋಲಿಸರು ಪ್ರಯತ್ನಿಸುತ್ತಿದ್ದರು. ಚೆನ್ನಿಯ ಕಂಗಳ ತುಂಬ ಕೆಂಚನ ನೂರಾರು ರೂಪಗಳು ಬಂದು ನಿಂತಂತಾದವು.

ಡಾ.ಎಂ.ಜಿ.ದೇಶಪಾಂಡ
ಖ್ಯಾತ ಸಾಹಿತಿಗಳು. ಬೀದರ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *