Oplus_131072

ನಾಕು ತಂತಿ’ ಮೀಟಿದ ‘ಶಬ್ದ ಗಾರುಡಿಗ’ ವರಕವಿ ದ.ರಾ. ಬೇಂದ್ರೆ.

 

– ಜಿ.ಎಸ್.ಗಾಯತ್ರಿ. ಹರಿಹರ.

 

ಜನೆವರಿ 31ರಂದು  ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ವರಕವಿ ದ.ರಾ.ಬೇಂದ್ರೆಯವರ ಜನ್ಮದಿನದ ಪ್ರಯುಕ್ತವಾಗಿ ಈ ಲೇಖನ ಪ್ರಕಟಿಸಲಾಗಿದೆ- ಸಂ.

 

ಜೇನಿನಂತೆ ಮಧುರವಾಗಿರುವ, ಕಸ್ತೂರಿಯ ಕಂಪು ಸೂಸುವ, ಸ್ವಂತ ಹಾಗೂ ಸುಂದರ ಲಿಪಿಯುಳ್ಳ ನಮ್ಮ ಕನ್ನಡ ಭಾಷೆಯು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇಂಥ ಹೆಮ್ಮೆಯ ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಹೆಸರಾಂತ ಕವಿಗಳು, ಸಾಹಿತಿಗಳು ಅಪಾರವಾದ ಕೊಡುಗೆ ನೀಡಿದ್ದಾರೆ. ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ನಮ್ಮ ಕನ್ನಡ ಕವಿಗಳದು. ಹೀಗೆ ಕನ್ನಡದ ಹಿರಿಮೆಯನ್ನು ಬೆಳಗಿಸಿದ ಅಗ್ರಗಣ್ಯ ಕವಿಗಳಲ್ಲಿ ಡಾ. ದ.ರಾ. ಬೇಂದ್ರೆಯವರೂ ಒಬ್ಬರು. ಅವರ ಜನ್ಮದಿನದ ಪ್ರಯುಕ್ತ ಅವರನ್ನು ಸ್ಮರಿಸಿ ಗೌರವ ಸಮರ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಬೇಂದ್ರೆಯವರನ್ನು ಹತ್ತಿರದಿಂದ ನೋಡಿದ ನನಗೆ ಅವರ ವ್ಯಕ್ತಿತ್ವದ ಬಗ್ಗೆ ತಿಳಿಸಬೇಕೆನ್ನಿಸುತ್ತದೆ. 50 ವರ್ಷದ ಹಿಂದಿನ ಮಾತು. ನಮ್ಮ ತಂದೆಯವರು ಚನ್ನಗಿರಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾಗ ಶಾಲೆಯ ಕಾರ್ಯಕ್ರಮಗಳಿಗೆ ಕನ್ನಡದ ಕವಿಗಳನ್ನು, ಖ್ಯಾತ ಸಾಹಿತಿಗಳನ್ನು ಕರೆಸುತ್ತಿದ್ದರು. ಹಾಗೆಯೇ ಬೇಂದ್ರೆಯವರೂ ಶಾಲೆಯ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ತಮ್ಮ ಮಾತಿನ ಮೋಡಿಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದರು. ಬೇಂದ್ರೆಯವರು ತಮ್ಮ ಮನೆಗೆ ಬಂದವರನ್ನು ಹಾಗೆಯೇ ಕಳಿಸುತ್ತಿರಲಿಲ್ಲ. ಸ್ವಲ್ಪ ಸಕ್ಕರೆಯನ್ನಾದರೂ ಕೊಟ್ಟು ಕಳಿಸುತ್ತಿದ್ದರು. ನಾವು ನಮ್ಮ ತಂದೆ ತಾಯಿಯೊಂದಿಗೆ ಅವರ ಮನೆಗೆ ಹೋದಾಗ ನಮ್ಮೊಂದಿಗೆ ಆತ್ಮೀಯವಾಗಿ ಮಾತನಾಡಿದ್ದು, ನಾಗರ ಪಂಚಮಿಯ ಉಂಡೆಯನ್ನು ನಮಗೆ ತಿನ್ನಲು ಕೊಟ್ಟಿದ್ದು , ಅವರ ಕವನಗಳನ್ನು ನಮ್ಮ ತಾಯಿಯವರಿಂದ ಹಾಡಿಸಿದ್ದು ನನಗೆ ಇನ್ನೂ ನೆನಪಿದೆ. ಎಂಥಾ ಸೌಜನ್ಯದ ಮೂರ್ತಿ ಅವರು! ಅವರ ದರ್ಶನ ಭಾಗ್ಯ ಪಡೆದ ನಾವೇ ಧನ್ಯ.
ಕನ್ನಡಕ್ಕೆ ಎರಡನೇ ಜ್ಞಾನ ಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿಗೆ ಪಾತ್ರರಾದವರು ವರಕವಿ ದ.ರಾ.ಬೇಂದ್ರೆಯವರು.’ಅಂಬಿಕಾತನಯ ದತ್ತ’ ಎಂಬ ಕಾವ್ಯನಾಮದಿಂದ ಖ್ಯಾತರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು, ಅಮೋಘವಾದುದು. ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ,ಬಾನುಲಿ ಕೇಂದ್ರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಅವರು ಕನ್ನಡವಷ್ಟೇ ಅಲ್ಲದೆ ಮರಾಠಿ, ಇಂಗ್ಲಿಷ್ ಭಾಷೆಗಳಲ್ಲೂ ಸಾಹಿತ್ಯ ರಚನೆ ಮಾಡಿ ಸುಪ್ರಸಿದ್ಧರಾಗಿದ್ದಾರೆ.ಅವರ ಕವನಗಳು ಇಂದಿಗೂ ಪ್ರಸಿದ್ಧವಾಗಿದ್ದು, ಗಾಯಕ,ಗಾಯಕಿಯರ ಮಧುರ ಕಂಠದಲ್ಲಿ ಸುಶ್ರಾವ್ಯ ಸಂಗೀತವಾಗಿ ಹೊರಹೊಮ್ಮಿ ಮನಸಿಗೆ ಮುದ ನೀಡುತ್ತಿವೆ.
ಕನ್ನಡದ ಪ್ರಸಿದ್ಧ ಕವಿಗಳೂ, ಕಾದಂಬರಿಕಾರರೂ ಆಗಿದ್ದ ದ.ರಾ. ಬೇಂದ್ರೆಯವರು 1896 ನೇ ಜನವರಿ 31 ರಂದು ಧಾರವಾಡದ ವೈದಿಕ ಮನೆತನದಲ್ಲಿ ರಾಮಚಂದ್ರ ಬೇಂದ್ರೆ ಹಾಗೂ ಅಂಬವ್ವ ದಂಪತಿಗಳ ಪುತ್ರನಾಗಿ ಜನಿಸಿದರು. ತ್ರಿಮೂರ್ತಿ ಸ್ವರೂಪನಾದ ದತ್ತಾತ್ರೇಯನ ಜನ್ಮದಿನದಂದು ಹುಟ್ಟಿದ್ದರಿಂದ ಇವರಿಗೆ ‘ದತ್ತಾತ್ರೇಯ’ ಎಂದು ನಾಮಕರಣ ಮಾಡಿದರೆಂಬ ಮಾಹಿತಿ ಇದೆ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ಇವರ ಪೂರ್ವಿಕರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರು. ತಮ್ಮ ಹನ್ನೆರಡನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬೇಂದ್ರೆಯವರು ತಾಯಿಯ ರಕ್ಷಣೆಯಲ್ಲಿ ಬೆಳೆದರು. 1913 ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, 1918 ರಲ್ಲಿ ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಬಿ.ಎ. ಪದವಿ ಮುಗಿಸಿದರು. 1919 ರಲ್ಲಿ ಲಕ್ಷ್ಮೀಬಾಯಿಯವರೊಡನೆ ವಿವಾಹವಾದರು. 47 ವರ್ಷಗಳ ವೈವಾಹಿಕ ಜೀವನದ ನಂತರ 1966 ರಲ್ಲಿ ಅವರ ಪತ್ನಿ ಭಗವಂತನ ಪಾದಾರವಿಂದ ಸೇರಿದರು.
ಧಾರವಾಡದಲ್ಲಿ ತಾವು ಓದಿದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಬೇಂದ್ರೆಯವರು 1935 ರಲ್ಲಿ ಎಂ.ಎ. ಪದವಿ ಪಡೆದು ಪುಣೆ ಮತ್ತು ಸೊಲ್ಲಾಪುರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ತಮ್ಮ ನಿವೃತ್ತಿ ಜೀವನವನ್ನು ಧಾರವಾಡದಲ್ಲಿಯೇ ಕಳೆದು ಕೆಲಕಾಲ ‘ಜಯ ಕರ್ನಾಟಕ ‘ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. 1956 ರಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಸಲಹೆಗಾರರಾಗಿ ನೇಮಕವಾದರು.
ವಿದ್ಯಾರ್ಥಿ ದೆಸೆಯಲ್ಲೇ ಕಾವ್ಯ ರಚನೆಯ ಹವ್ಯಾಸವನ್ನು ಮೈಗೂಡಿಸಿಕೊಂಡು ಶ್ರೀ ಅರವಿಂದರು, ರವೀಂದ್ರ ನಾಥ ಠಾಗೋರ್ ಮುಂತಾದವರ ಪ್ರಭಾವಕ್ಕೆ ಒಳಗಾದರು. ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಕವಿ, ಸಾಹಿತಿಗಳಾಗಿ ಕನ್ನಡ ಸಾಹಿತ್ಯಕ್ಕೆ ಕಿರೀಟ ತೊಡಿಸಿದ ಹಿರಿಮೆ ಬೇಂದ್ರೆಯವರದು. ಅವರು ರಚಿಸಿದ ಗರಿ, ನಾದಲೀಲೆ, ನಾಕುತಂತಿ, ಸಖೀಗೀತ, ಮೇಘದೂತ, ಅರಳು ಮರಳು, ಉಯ್ಯಾಲೆ, ಗಂಗಾವತರಣ, ಸೂರ್ಯಪಾನ, ನಮನ, ಕಾಮ ಕಸ್ತೂರಿ, ಕೃಷ್ಣಾ ಕುಮಾರಿ ಮುಂತಾದ ಇಪ್ಪತ್ತೇಳು ಕವನ ಸಂಕಲನಗಳು ಪ್ರಕಟವಾಗಿದ್ದು ಅವೆಲ್ಲವೂ ಸಾಹಿತ್ಯದ ಮೆರುಗನ್ನು ಹೆಚ್ಚಿಸಿವೆ. ಅಲ್ಲದೆ ಅನೇಕ ನಾಟಕಗಳನ್ನು, ಅನುವಾದ ಗ್ರಂಥಗಳನ್ನು, ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ. ಬೇಂದ್ರೆಯವರ ವಿಮರ್ಶೆಗಳು ಹಾಗೂ ಲೇಖನಗಳು ಅವರ ‘ಸಾಹಿತ್ಯದ ವಿರಾಟ್ ಸ್ವರೂಪ ‘ ಗ್ರಂಥದಲ್ಲಿ ಕಾಣಸಿಗುತ್ತವೆ. ಅವರು ಅನುವಾದಿಸಿದ ಕೃತಿಗಳಲ್ಲಿ ಕಾಳಿದಾಸನ ಸಂಸ್ಕೃತ ‘ಮೇಘದೂತ’ ದ ಕನ್ನಡ ಅವತರಣಿಕೆ ಅತ್ಯಂತ ವಿಶಿಷ್ಟವಾದುದು.ಕನ್ನಡ ಭಾಷೆಗೆ ಇರುವ ಅಗಾಧ ಶಕ್ತಿಯನ್ನು ತಮ್ಮ ಕಾವ್ಯಗಳಲ್ಲಿ ಸಾಧಿಸಿ ತೋರಿಸಿದ ಕೀರ್ತಿ ಬೇಂದ್ರೆಯವರಿಗೆ ಸಲ್ಲುತ್ತದೆ. ತಮ್ಮ ಮಾತಿನ ಮಾಂತ್ರಿಕತೆಯಿಂದ ಮೋಡಿ ಮಾಡುವ ‘ಶಬ್ದ ಗಾರುಡಿಗ’ ನ ಜಾನಪದ ಸೊಗಡಿನಿಂದಾಗಿ ಅವರ ಕಾವ್ಯಗಳು ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಬೇಂದ್ರೆಯವರು ಅನೇಕ ಪ್ರಶಸ್ತಿ , ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 1943 ರಲ್ಲಿ ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1958 ರಲ್ಲಿ ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1965 ರಲ್ಲಿ ಮರಾಠಿಯ ‘ಸಂವಾದ’ ಕೃತಿಗೆ ಮಹಾರಾಷ್ಟ್ರದ ಪ್ರಖ್ಯಾತ ಕೇಳ್ಕರ್ ಪ್ರಶಸ್ತಿ, 1968 ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, 1973 ರಲ್ಲಿ ‘ನಾಕುತಂತಿ’ ಕವನ ಸಂಕಲನಕ್ಕೆ ಭಾರತದ ಅತ್ಯುನ್ನತ ಜ್ಞಾನ ಪೀಠ ಪ್ರಶಸ್ತಿ , ಕಾಶಿ ವಿದ್ಯಾಪೀಠ ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…. ಹೀಗೆ ಅವರು ಪಡೆದ ಪ್ರಶಸ್ತಿ ಪುರಸ್ಕಾರಗಳು ಅಗಣಿತ.
ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡರೂ ಧೃತಿಗೆಡದೆ ಎಲ್ಲವನ್ನೂ ಎದುರಿಸಿ ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂದು ಬದುಕನ್ನು ಪ್ರೀತಿಸುತ್ತಾ, ‘ರಸವೇ ಜನನ, ವಿರಸ ಮರಣ, ಸಮರಸವೇ ಜೀವನ’ ಎಂಬ ಸಂದೇಶ ಸಾರುವ ಮೂಲಕ ತಮ್ಮ ಜೀವನದುದ್ದಕ್ಕೂ ಹಾಗೆಯೇ ನಡೆದುಕೊಂಡ ಧೀಮಂತ ವ್ಯಕ್ತಿತ್ವವುಳ್ಳ ಬೇಂದ್ರೆಯವರು 1981 ಅಕ್ಟೋಬರ್ 26 ರಂದು ಮುಂಬಯಿಯಲ್ಲಿ ಇಹಲೋಕ ತ್ಯಜಿಸಿದರು. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮೇರು ವ್ಯಕ್ತಿತ್ವ, ಸರಳ, ಆದರ್ಶ ಜೀವನ, ಅವರು ಮಾಡಿದ ಸಾಹಿತ್ಯ ಸರಸ್ವತಿಯ ಸೇವೆ ಇಂದಿಗೂ , ಎಂದೆಂದಿಗೂ ಜೀವಂತವಾಗಿದ್ದು ಎಲ್ಲರಿಗೂ ಅನುಕರಣೀಯವಾಗಿವೆ.

– ಜಿ.ಎಸ್.ಗಾಯತ್ರಿ.
ಶಿಕ್ಷಕಿ
ಬಾಪೂಜಿ ಶಾಲೆ
ಹರಿಹರ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *