Oplus_131072

ಒಂದು ಕತೆಯ ಹುಡುಗಿ (ಕಾವ್ಯ)

ಸುಮ್ಮನೆ ಕ್ಷಮಿಸಿ ಬಿಡಬೇಕು…
ಎಷ್ಟು ಸರಳ, ಸಲೀಸು ಈ ಮಾತು..
ನಿಜಕ್ಕೂ ಇದು ಸಾಧ್ಯವೇ… ಪ್ರಶ್ನೆ?
ಒಂದು ಸಂಬಂಧದ ಹುಟ್ಟು
ಅದೇಗೆ ನನ್ನೆದೆಯಲ್ಲಿ ಗೂಡು ಮಾಡಿ ನೆಲೆ ನಿಂತಿತ್ತು ಗೊತ್ತಿಲ್ಲ..
ಕೆಲ ಸಂಬಂಧಗಳಿಗೆ ಹೆಸರಿಲ್ಲ
ಅವು ಹಾಗೆ ಬಂದು ಉಳಿದುಬಿಡುತ್ತವೆ..
ಗೋಡೆಯ ಬಣ್ಣದಂತೆ, ಮಾಸದಂತೆ.
ಹೀಗೊಂದು ಹುಡುಗಿ ಕತೆಯಾಗಿ ಕಾಡುತ್ತಾಳೆಂದು ಗೊತ್ತಿರಲಿಲ್ಲ..
ಆಕೆ ರಾಶಿ ಅಂತ,

ಅವಳ ಹರವಿಬಿಟ್ಟ ಕೇಶವೇ ಹೇಳುತ್ತಿತ್ತು
ಆಕೆ ಕನಸುಗಳ ರಾಶಿ ಹೊತ್ತವಳೆಂದು..
ಬಿಚ್ಚು ಮನಸಿನ ಹುಚ್ಚು ಹುಡುಗಿ
ಬಂದ ದಿನದಿಂದ ಹತ್ತಿರವಾದ ಹುಡುಗಿ..
ಕೆಲವರಿಗೆ ಆಕೆ ಹಬ್ಬ, ಕೆಲವರಿಗಂತೂ ಮರುಭೂಮಿಯ ಅಮೆಜಾನ್ ಕಾಡು.
ನಂಗೆ ಮಾತ್ರ ಅವಳು ಮುದ್ದು ಕಂದ, ಕೂಸು (ರಾಶಿ)..

ಎಲ್ಲರನ್ನೂ, ಎಲ್ಲವನ್ನೂ ಸಲೀಸಾಗಿ ಅಪ್ಪಿ ಒಪ್ಪಿಕೊಳ್ಳದ ಆಕೆ
ನನ್ನ ಹಚ್ಚಿಕೊಂಡಿದ್ದು ಅಚ್ಚರಿ..
ನನ್ನ ಕ(ಸ)ವಿ ಮಾತು ಕಿವಿಯಾಗಿಸಿಗೊಂಡು ಕೇಳಿ
ತನ್ನ ಎದೆಬಗೆದು ಎಲ್ಲ ಮಾತುಗಳ ಉಣಬಡಿಸುತ್ತಿದ್ದ ಹುಡುಗಿ,
ಕಂದ (ರಾಶಿ)

ರೂಪದಲ್ಲಿ ಅಪ್ಪಟ ಸುಂದರಿ,
ಎಂಥವರನ್ನಾದರೂ ಹಿಡಿದು ನಿಲ್ಲಿಸುವ ಚೆಲುವು
ಕೆಲವೇ ಕೆಲವು ದಿನಗಳಲ್ಲಿ ನಾ
ಆಕೆಗೆ ಅಪ್ಪ, ಅಣ್ಣ, ಗೆಳೆಯನಂತೆ..
ಅಪ್ಪನಾಗಿ ಬಿಟ್ಟೆಯೆಂದರೆ ನೀವು ಒಪ್ಪಲೇಬೇಕು.
ದಿನಗಳು ಬಹುಬೇಗ ಉರುಳುತ್ತವೆ ಸುಖದ ದಿನಗಳಲ್ಲಿ ಅಂತೆ,
ದಿನಗಳು ಉರುಳಿದವು..
ಆಕೆ ಅದಾವುದೋ ಪ್ರೇಮಪಾಶದ ಬಲೆಗೆ ಬಿದ್ದ ಮೀನಿನಂತೆ ಬಳಲಿದಳು, ನೋವ ನುಂಗಿದಳು..
ಅದು ನನ್ನ ಅನುಭವಕ್ಕೆ ಬಂತು.
ಆತ ಮೋಸಗಾರ, ನನ್ನ ಮೋಸ ಮಾಡಿದ..
ಅವಳೇ ಅಳೆದು ಅನುಭವಿಸಿ ನನ್ನೆದುರಿಗೆ ಹೇಳಿದಳು.
ನಾ ತಿಳಿಹೇಳಿದೆ ಅವನ ಬಗ್ಗೆ,
ಆದರೆ ಅವಳು ಅವನ ಕಪಿಮುಷ್ಟಿಯಿಂದ ಹೊರಬರಲು ಹೆಣಗಿದಳು, ನರಳಿದಳು,
ಸಾವೊಂದೇ ಕೊನೆಯ ನೆಮ್ಮದಿಯೆಂದು ಕೂಡ ಭಾವಿಸಿದಳು..
ನಾನು ಮಾತ್ರ ಪರಿ ಪರಿ ಸಮಜಾಯಿಸಿದೆ,
ತುಸು ಸುಧಾರಿಸಿಕೊಂಡಳು, ಮತ್ತೆ ಆಕೆ ಮೊದಲಿನಂತಾದುದಕ್ಕೆ ನಾ ಖುಷಿಗೊಂಡೆ…
ನನ್ನ ಕಂದ (ರಾಶಿ)

ಕಾಲಕ್ಕೆ ನನ್ನ ಅವಳ ಸ್ನೇಹ ಬೇಕಿರಲಿಲ್ಲವೋ ಏನೋ…
ಆಕೆ ಇದ್ದಕ್ಕಿದ್ದಂತೆ ದೂರ ದೂರ.. ಬಹಳ ದೂರವಾದಂತಾದಳು.
ಅದೇಕೋ ಗೊತ್ತಿಲ್ಲ.. ಏಕೆ ಹೀಗೆ ತಿಳಿಯದಂತಾದೆ.
ಹಗಲು ರಾತ್ರಿ ನಿದ್ದೆಗೆಟ್ಟೆ, ಹುಡುಕಿದೆ
ನನ್ನದೇನಾದರೂ ತಪ್ಪಿದೆಯೇ ಎಂದೆಲ್ಲ..?

ಆಕೆ ಪ್ರೇಮಿಸಿದ ಹುಡುಗ ಮದುವೆಗೆ ಸಿದ್ಧನಂತೆ,
ನನ್ನಿಂದ ದೂರವಾಗಿ ಮಾತೇ ಬಿಟ್ಟವಳು ಮತ್ತೆ ಹತ್ತಿರವಾದಳು.
ಏಕೋ ಮನಸು ಮೊದಲಿನಂತಿಲ್ಲ..
ಅಳುಕುತ್ತದೆ, ಅಂಜುತ್ತದೆ, ಏಕೋ, ಏನೋ..!!
ಹರೆಯದ ಹುಡುಗಿ ತುಸು ಚಂಚಲೆ, ಮುಂಗೋಪಿ
ನನ್ನ ರಾಶಿ (ಕಂದ).

ಸಂಬಂಧ ಅನುಬಂಧಗಳು ಎದೆಯಾಳಕ್ಕಿಳಿಯಬಾರದಷ್ಟೇ..
ಹಚ್ಚಿಕೊಳ್ಳುವುದು.. ನೋವಿಗೆ ನಾನೇ ಮುಲಾಮು ಹುಡುಕಿದ್ದೇನೆ,
ಯಾವುದಕ್ಕೂ ಕ್ಷಮಿಸಿ ಬಿಡಿ..
ಆಕೆ ನನ್ನ ಕಂದ (ರಾಶಿ)

ಕ್ಷಮಿಸುವುದು ಕೂಡ ದೊಡ್ಡ ಗುಣವೇ.. ಏನಂತೀರಾ?
ದೊಡ್ಡ ನದಿಯ ಕಥೆಯ… ಓಘಕ್ಕೆ.. ಆಣೆಕಟ್ಟಿದ್ದಂತಲ್ಲವೇ..?
ಸುಮ್ಮನೆ ಕ್ಷಮಿಸಿ ಬಿಡುವುದು
ಕವಿತೆ ಬರೆಯುವುದು..!!

ಅಶೋಕ ಎಮ್. ಬಿ.
ಕವಿ/ಕಲಾವಿದರು
ಜವಾಹರ ನವೋದಯ ವಿದ್ಯಾಲಯ ಮುಡಿಪು ದಕ್ಷಿಣ ಕನ್ನಡ ಮೋ -9740675253

(ಆಧಾರ: ಸುಮ್ಮನೆ ಕ್ಷಮಿಸಿಬಿಡಬೇಕು (ಕಥೆ)
ಮಾರುತಿ ದಾಸಣ್ಣವರ್
ಕನ್ನಡ ಶಿಕ್ಷಕರು. ಜ.ನ.ವಿ.ಕೊಡಗು

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *