Oplus_131072

ಪುಟ್ಟ ಪೋರ.

ಶಾಲೆ ಮುಗಿಸಿ ಓಡಿ ಬಂದ
ಹಣ್ಣ ಪುಟ್ಟಿ ಹೊತ್ತು ತಂದ
ಆಟ ಮರೆತು ಊಟಕಾಗಿ
ದುಡಿಮೆ ಮಾಡಿ ತಿನ್ನಿ ಎಂದ..

ಪುಟ್ಟ ಕೈಲಿದೆ ಚಾಕು ನೋಡಿ
ದಿಟ್ಟತನದಲಿ ದುಡಿವ ಮೋದಿ
ಬಾಳ ಬಂಡಿಯನೆಳೆಯುತಿಹನು
ಕೈಯ ಚಾಚದೆ ಯಾರ ಬೇಡಿ..

ಚಿಕ್ಕ ವಯಸ್ಸಿನ ಪುಟ್ಟ ಪೋರ
ಚಿಂತೆ ಇಲ್ಲದೆ ಎಳೆವ ತೇರ
ಕಷ್ಟವಿದ್ದರು ನಗುತಲಿರುವನು
ಆಗದಿವನಿಗೆ ಬದುಕು ಭಾರ..

ಕೊರತೆ ಇಬ್ಬರು ಕೊರಗುತಿಲ್ಲ
ಬಡವನೆಂಬ ಗೊಡವೆ ಇಲ್ಲ
ನಿಷ್ಠೆಯಿಂದ ಬದುಕಲೀತ
ನೋಡುತ ನಿಂತರೆಲ್ಲ..

ಅಪ್ಪ ಅವ್ವನ ಮುದ್ದು ಮಗ
ತಂಗಿ ಕಾಯುವ ಅಣ್ಣನಿವನು
ನಿತ್ಯ ಕಾಯಕ ಮಾಡುವ
ಸತ್ಯ ಮಾರ್ಗದಿ ನಡೆಯುತಿಹನು..

ಮಾತು ಕೇಳಿ ನೇರ, ದಿಟ್ಟ
ತಿಂದನಂತಿದೆ ನೂರು ಪೆಟ್ಟ
ಬಡವನಲ್ಲ, ಸಿರಿಯು ಇವನು
ಬದುಕ ಪಾಠವ ಹೇಳಿಕೊಟ್ಟ..

ಎ ಆರ್ ಇಂದಿರಾ ಸಿದ್ದೇಶ್ .                       ದಾವಣಗೆರೆ

ಕವಯತ್ರಿ ಪರಿಚಯ:

ಎ.ಆರ್.ಇಂದಿರಾ ಸಿದ್ದೇಶ

‌‌   ಕವಯತ್ರಿ         ಎ.ಆರ್.‌           ‌ ಇಂದಿರಾ ಸಿದ್ದೇಶ’  ರವರು ದಾವಣಗೆರೆ ಜಿಲ್ಲೆಯ ಆನೆಕೊಂಡ ಗ್ರಾಮದವರು. ಇವರು ಎಂ.ಎ. ಬಿ.ಇಡಿ. ಪದವಿಧರರಾಗಿದ್ದು, 23 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡು ಸದ್ಯ ದಾವಣಗೆರೆ ಜಿಲ್ಲೆಯ ಜರೇಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ನೂರಾರು ಕವಿತೆಗಳನ್ನು ಬರೆದಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ವಿವಿಧ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

 

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *