ಶೌರ್ಯ ಭೂಮಿ ಭೀಮಾ ಕೊರೆಗಾಂವ.
– ಸಿದ್ಧಾರ್ಥ ಟಿ ಮಿತ್ರಾ.
ಕೋರೆಗಾಂವ್ ಎಂಬ ಹೆಸರು ಮತ್ತೆ ಮತ್ತೆ ದೇಶದೆಲ್ಲೆಡೆ ಮುನ್ನೆಲೆಗೆ ಬರುತ್ತಿದೆ .ಭಾರತದ ಇತಿಹಾಸದಲ್ಲಿ ಹೆಸರಾದ ಕದನ ಭೂಮಿ ಇದು. ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳುಕು ಹಾಕಿಕೊಂಡಿರುವ ಸ್ವಾಭಿಮಾನಕ್ಕೆ ಹೆಸರುವಾಸಿಯಾದ ಸ್ಥಳವಿದು. ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರೊಂದಿಗೆ ಯುದ್ಧಕ್ಕೆ ಇಳಿದ ಬ್ರಿಟಿಷರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಪೇಶ್ವೆಗಳ ದುರಾಡಳಿತದ ಅಂತ್ಯಕ್ಕೆ ಕಾರಣವಾದ ಯುದ್ಧ ಇದು. ಮಹಾರಾಷ್ಟ್ರದಲ್ಲಿ ಬಹಳ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಲು ನೆರವಾದ ಸಂದರ್ಭ ಅದು.
ಐದುನೂರು ಸೈನಿಕರ ನೇತೃತ್ವ ವಹಿಸಿದ್ದು ವೀರಯೋಧ ಸಿದ್ಧನಾಕ್ ಮಹಾರ್. ನಿಮಗೆ ನಾವು ನೆರವು ನೀಡುತ್ತೇವೆ” ಎಂದು ಆತ ಮನವಿ ಮಾಡುತ್ತಾನೆ. ಆದರೆ ಆತನ ಮನವಿಯನ್ನು ಧಿಕ್ಕರಿಸಿದ ಪೇಶ್ವೆಗಳು, ಆ ಸೈನಿಕರನ್ನು ಅವಹೇಳನ ಮಾಡಿ. ಹೀಯಾಳಿಸಿ ನಿಮಗೆ ಯಾವುದೇ ಹಕ್ಕು ಸಿಗಲ್ಲ. ನಮ್ಮ ವಿರುದ್ಧ ಕಾದಾಡಿದರೂ ಅಷ್ಟೇ, ಬ್ರಿಟಿಷರ ವಿರುದ್ಧ ಹೋರಾಡಿದರೂ ಅಷ್ಟೇ ಎನ್ನುತ್ತಾರೆ.
ಆಗ ಯುದ್ಧ ಆರಂಭವಾಗುವುದು ಮಹರ್ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆ ಪಡೆ ಮಹರ್ ಸೈನಿಕರ ಎದುರು ಮಂಡಿಯೂರುತ್ತದೆ.
ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ. ಆ ಮಹಾರ್ ಸೈನಿಕರಿಗೆ ಬ್ರಿಟಿಷರು ಗೌರವ- ಸಮ್ಮಾನ ನೀಡುತ್ತಾರೆ. ಮಹಾರ್ ರೆಜಿಮೆಂಟ್ ಮತ್ತು ಬಾಂಬೆ ಸೈನ್ಯದ ಸಾಹಸದ ಬಗ್ಗೆ ಇಂದಿಗೂ ಸಹ ಹಲವು ದಂತಕಥೆಗಳೇ ಇವೆ. ಜನವರಿ 1ರ ಹೊಸ ವರ್ಷದ ದಿನ ಆತ್ಮಗೌರವ ಮತ್ತು ದಾಸ್ಯ ವಿಮೋಚನೆಗಾಗಿ ಈ ದೇಶದ ಶೋಷಿತ ವರ್ಗದ ವೀರ ಸೈನಿಕರ ಗುಂಪೊಂದು ಧ್ವನಿಯೆತ್ತಿದ ದಿನವೂ ಹೌದು. ಅಸ್ಪೃಶ್ಯತೆ ಕಂದಾಚಾರ, ಅನಾಚಾರ,ಆಚರಣೆಯನ್ನು ಮೆರೆಸುತ್ತಿದ್ದ ಪ್ರಭುತ್ವದ ವಿರುದ್ಧ ಸಿಡಿದೆದ್ದ ಗುಂಪೊಂದು, ಕಾದಾಡಿ ಗೆದ್ದು,ದೇಶದ ಚರಿತ್ರೆಯಲ್ಲಿ ಐತಿಹಾಸಿಕವಾದ ಹೊಸ ಅಧ್ಯಾಯವೊಂದನ್ನು ಬರೆದ ಸುದಿನವಿದು. ಮಹಾರಾಷ್ಟ್ರದ ಭೀಮಾ ನದಿಯ ತೀರದಲ್ಲಿ 1818 ಜನವರಿ 1ರಂದು ನಡೆದ ಈ ಸಂಘರ್ಷ ಚರಿತ್ರೆಯಲ್ಲಿ ‘ಕೋರೆಗಾಂವ್ ಯುದ್ಧ’ ಎಂದೇ ಪ್ರಸಿದ್ಧವಾಗಿದೆ.
1818ರಲ್ಲಿ ಕೋರೆಗಾಂವನ ಭೀಮಾ ನದಿಯ ದಡದ ಮೇಲೆ ಚಿತ್ಪಾವನ ಬ್ರಾಹ್ಮಣ ಸಮುದಾಯದ ಎರಡನೇ ಪೇಶ್ವೆ ಬಾಜೀರಾಯನ ಸೇನೆಯ ವಿರುದ್ಧ ಬ್ರಿಟಿಷ್ ಸೇನೆ ಯುದ್ಧ ನಡೆಸಿತ್ತು.
ಬ್ರಿಟಿಷ್ ಸೈನ್ಯದಲ್ಲಿ ಮಹಾರ್ ಸಮುದಾಯದ ಸೈನಿಕರೂ ಇದ್ದರು. 1818ರ ಜನವರಿ 1ರಂದು ಪೇಶ್ವೆ ಬಾಜೀರಾಯನ ಸೇನೆಯ ವಿರುದ್ಧ ಮಹಾರ್ ರೆಜಿಮೆಂಟ್ ಹೋರಾಡಿ ಬಾಜೀರಾಯನನ್ನು ಸೋಲಿಸಿತ್ತು.
ಇದು ಭೀಮಾ ಕೋರೆಗಾಂವ್ ಯುದ್ಧ ಎಂದು ಪ್ರಸಿದ್ಧಿ ಪಡೆದಿದೆ. ಇದನ್ನು ದಲಿತರ ಘನತೆಗಾಗಿ, ಆತ್ಮಗೌರವಕ್ಕಾಗಿ ನಡೆದ ಯುದ್ಧವೆಂದೇ ಇತಿಹಾಸದಲ್ಲಿ ಬಣ್ಣಿಸಲಾಗಿದೆ. ಐನೂರು ಮಂದಿ ದಲಿತ ಮಹಾರ್ ಸೈನಿಕರು ಅನ್ನ, ನೀರು ಹಾಗೂ ವಿಶ್ರಾಂತಿ ಇಲ್ಲದೆ ಇಪ್ಪತ್ತೆಂಟು ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರವಾಗಿ ಹನ್ನೆರಡು ಗಂಟೆಗಳ ಕಾಲ ಕಾದಾಡಿದ ಸ್ಮರಣೀಯ ಕದನ ಅದು. ಆ ಐನೂರು ಮಹಾರ್ ಸೈನಿಕರು ಇತಿಹಾಸವನ್ನೇ ಸೃಷ್ಟಿಸಿದರು.ಅಸ್ಪೃಶ್ಯತೆ ಆಚರಣೆಯ ವಿರುದ್ಧದ ಕಿಚ್ಚು ನಿರಂತರ ಶೋಷಣೆಯಿಂದ ನೊಂದಿದ್ದ ಮಹಾರ್ ಸಮುದಾಯದ ಪಾಲಿಗೆ ಆ ಯುದ್ಧ ಕೇವಲ ರಾಜ್ಯಗಳ ಮೇಲಿನ ಹಿಡಿತಕ್ಕಾಗಿ ನಡೆದದ್ದಷ್ಟೇ ಆಗಿರಲಿಲ್ಲ. ಅದು ಅಸ್ಪೃಶ್ಯತೆ ಆಚರಣೆಯ ಸಂಕೋಲೆಯಿಂದ ಬಿಡುಗಡೆಯ ಒಂದು ಕ್ರಾಂತಿಯಾಗಿತ್ತು.
ಬೃಹತ್ ಸೈನ್ಯದ ಎದುರು ಸಣ್ಣ ಸಂಖ್ಯೆಯ ಸೈನಿಕರು ಸಾಧಿಸಿದ ಅಪ್ರತಿಮ ಜಯ, ಹಾಗೂ ಅಸ್ಪೃಶ್ಯತೆ ವಿರುದ್ಧ ಸಾಧಿಸಿದ ದಿಗ್ವಿಜಯ ಆಗಿತ್ತು.ರಣಾಂಗಣದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವೆ ಸೈನಿಕರ ಜೊತೆ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು ಹುತಾತ್ಮರಾದ 22 ಅಸ್ಪೃಶ್ಯ ಯೋಧರ ನೆನಪಿಗಾಗಿ ಅಂದಿನ ಬ್ರಿಟಿಷ ಸರ್ಕಾರ 1921 ಮಾರ್ಚ್ 21ರ ಯುದ್ಧ ನಡೆದ ಸ್ಥಳದಲ್ಲಿ 65 ಅಡಿ ಎತ್ತರದ ಭವ್ಯ ವಿಜಯ ಸ್ತಂಭವನ್ನು ನಿರ್ಮಿಸಿ ಆ ಸ್ತಂಭದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದರು. ಆ ಭವ್ಯ ವಿಜಯ ಸ್ತಂಬಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಬ್ರಿಟಿಷರು 22 ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಹುತಾತ್ಮರಿಗೆ ರಾಜ ಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಿದರು. ಈ ವಿಜಯಸ್ತಂಬದ ಮೇಲೆ ಬ್ರಿಟಿಷರು “One of the proudest Truimphs of the British Army in the East” (ಪೂರ್ವ ಭಾರತದಲ್ಲಿ ಬ್ರಿಟಿಷ್ ಸೇನೆ ಸಾಧಿಸಿದ ಗೆಲುವುಗಳಲ್ಲಿ ಅತ್ಯಂತ ಹೆಮ್ಮೆಯ ವಿಜಯ) ಎಂದು ಸಹ ಕೆತ್ತಿಸಿದರು. ಶೋಷಣೆ ಎಂಬ ಅಸ್ಪೃಶ್ಯರ ಅಜ್ಞಾನದ ಮುಸುಕನ್ನು ಕೋರೆಗಾಂವ್ ಚರಿತ್ರೆ ಬಹುಮಟ್ಟಿಗೆ ಅಳಿಸಿತು.
ಎರಡನೇ ಬಾಜಿರಾಯನ ದುರಾಡಳಿತದ ಅವಧಿಯಲ್ಲಿ ಅಸ್ಪೃಶ್ಯತೆ ಆಚರಣೆ ತುತ್ತ ತುದಿ ತಲುಪಿತ್ತು. ಮನು ಸ್ಮೃತಿಯಲ್ಲಿ ಉಲ್ಲೇಖಿಸಿದ್ದ ಎಲ್ಲಾ ರೀತಿಯ ಆಚರಣೆಗಳು ಅಂದು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿದ್ದವು. ಸವರ್ಣೀಯರ ಮೇಲೆ ಅಸ್ಪೃಶ್ಯರ ನೆರಳು ಕೂಡ ಬೀಳುವಂತಿರಲಿಲ್ಲ. ಸೂರ್ಯ ನೆತ್ತಿ ಮೇಲೆ ಬಂದಾಗ ಅಷ್ಟೇ ಅವರು ಹೊರಗೆ ಬರಬೇಕಿತ್ತು. ತಾವು ನಡೆದುಕೊಂಡು ಹೋಗುವ ದಾರಿಯಲ್ಲಿ ಹೆಜ್ಜೆ ಗುರುತುಗಳು ಕಾಣದಂತೆ ಗುಡಿಸಿಕೊಂಡು ಹೋಗಲು ಸೊಂಟದ ಹಿಂಭಾಗಕ್ಕೆ ಪೊರಕೆ ಹಾಗೂ ಉಗುಳಲು ಕುತ್ತಿಗೆಗೆ ಒಂದು ಮಡಿಕೆ ಕಟ್ಟಿಕೊಂಡಿರಬೇಕಿತ್ತು. ಪೆಶ್ವೇಗಳ ದೌರ್ಜನ್ಯ ದಬ್ಬಾಳಿಕೆಗಳಿಂದ ರೋಸಿ ಹೋಗಿದ್ದ ಮಹಾರಾಷ್ಟ್ರದ ಅಸ್ಪೃಶ್ಯ ಯುವಕರು ಪೇಶ್ವೆಗಳ ವಿರುದ್ಧ ಯುದ್ಧ ಮಾಡಲು ಕೋರಿಕೊಂಡರು. ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಒದಗಿ ಬರುವ ಸುವರ್ಣ ಅವಕಾಶಕ್ಕಾಗಿ ಕಾಯುತ್ತಿದ್ದರು. ಪೇಶ್ವೆ ಎರಡನೆಯ ಬಾಜಿರಾಯನು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಸೋತು ಪುಣೆಯ ಅರ್ಧ ಭಾಗವನ್ನು ಬಿಟ್ಟು ಕೊಟ್ಟನು. ಆಗ ಮಹರ್ ವೀರ ನಾಯಕ ಸಿದ್ದನಾಕ ಪೇಶ್ವೆಗೆ ನಾವು ಮತ್ತು ನೀವು ಭಾರತ ದೇಶದವರು, ಬ್ರಿಟಿಷರು ಪರಿಕೀಯರು, ನಾವಿಬ್ಬರು ಕೂಡಿ ಅವರನ್ನು ಎದುರಿಸೋಣ ಆದರೆ ಯುದ್ಧ ಗೆದ್ದ ಮೇಲೆ ನೀವು ನಮ್ಮನ್ನು ಅಸ್ಪೃಶ್ಯರಂತೆ ಕಾಣದೆ ನಮಗೂ ಸಮಾನತೆ ನೀಡಬೇಕು ಎಂದು ಮಾತನಾಡಿದರು. ಪ್ರತ್ಯುತ್ತರವಾಗಿ ಎರಡನೇ ಬಾಜಿರಾಯನು, ‘ನೀವುಗಳು ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ ಮತ್ತು ನಿಮ್ಮ ಹೆಂಗಸರು ಇರುವುದೇ ನಮ್ಮನ್ನು ಸುಖ ಪಡಿಸಲಿಕ್ಕಾಗಿ ಎಂದು ನುಡಿದ ಪರಿಣಾಮವಾಗಿ ಗಾಯಗೊಂಡ ಹುಲಿಗಳಂತಾಗಿದ್ದ ಮಹರ್ ಪಡೆಯು ಸೇಡು ತೀರಿಸಿಕೊಳ್ಳಲು ಸಮಯ ಕಾಯ ತೊಡಗಿದರು.
1818ರಲ್ಲಿ. ಕೋರೇಗಾಂವ್ ಇಂದಿನ ಪುಣೆಯ ಬಳಿ ಇದೆ. ಭೀಮಾ ನದಿಯ ದಂಡೆಯ ಸಮೀಪ. ಬಾಂಬೆ ಲೈಟ್ ವೆಯಿಟ್ ಇನ್ಫೆಂಟ್ರಿ ಮೊದಲನೇ ರೆಜಿಮೆಂಟ್, ಎರಡನೇ ಬೆಟಾಲಿಯನ್ 500 ಮಹಾರ್ ಸೈನಿಕರು ಹಾಗೂ ಪೇಶ್ವೆಗಳ ಸಾವಿರ ಸಾವಿರ ಸಂಖ್ಯೆಯ ಸೈನಿಕರ ಮಧ್ಯೆ ಕದನ ನಡೆಯಿತು. ಪೇಶ್ವೆಗಳದ್ದು ಬ್ರಾಹ್ಮಣ ಸೈನಿಕರ ಹೆಚ್ಚಿನ 28,000 ಸಂಖ್ಯೆಯ ಸೈನ್ಯ. 500 ಮಂದಿ ಇದ್ದ ಅಸ್ಪೃಶ್ಯ ಸೈನಿಕರಿಗೆ ಅವರ ಮುಂದೆ ನಿಲ್ಲಲಾದರೂ ಸಾಧ್ಯವೇ ಎಂದು ಪ್ರಶ್ನೆ ಮೂಡಿಸುವಂತಹ ಸನ್ನಿವೇಶ. ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು 22 ಮಹರ್ ಸೈನಿಕರು ಹುತಾತ್ಮರಾಗುತ್ತಾರೆ. ಅಸ್ಪೃಶ್ಯತೆಯ ವಿರುದ್ಧ ಪ್ರಚಂಡ ಜಯ ಸಾಧಿಸಿ ಅಸ್ಪೃಶ್ಯ ಯೋಧರ ಪಡೆಯ ನಾಯಕನಾಗಿದ್ದ ಸಿದ್ಧನಾಕನು ಸಹ ವೀರ ಮರಣವನ್ನಪ್ಪುತ್ತಾನೆ. ಅಸ್ಪೃಶ್ಯ ಯೋಧರಿಗಿಂತ ಹೆಚ್ಚು ಇದ್ದ ಪೇಶ್ವೆಗಳ ರಣಹೇಡಿ ಸೈನ್ಯ ಸಿಂಹಗಳಂತಿದ್ದ ಅಸ್ಪೃಶ್ಯ ಸೈನಿಕರ ಮುಂದೆ ನಿಲ್ಲಲಾಗದೆ ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡತೊಡಗುತ್ತಾರೆ.
ಪೇಶ್ವೆಗಳದ್ದು ಬ್ರಾಹ್ಮಣ ಸೈನಿಕರೇ ಹೆಚ್ಚಿದ್ದ ಇಪ್ಪತ್ತೆಂಟು ಸಾವಿರ ಸಂಖ್ಯೆಯ ಸೈನ್ಯ ಐನೂರು ಮಂದಿಯಿದ್ದ ‘ಅಸ್ಪೃಶ್ಯ’ ಸೈನಿಕರಿಗೆ ಅವರ ಮುಂದೆ ನಿಲ್ಲಲಾದರೂ ಸಾಧ್ಯವೇ ಎಂದು ಪ್ರಶ್ನೆ ಮೂಡಿಸುವಂಥ ಸನ್ನಿವೇಶ. ಶಿರೂರಿನಿಂದ ಇಪ್ಪತ್ತೇಳು ಮೈಲಿ ಭೀಮಾ ಕೋರೆಗಾಂವ ವರೆಗೆ ನಡೆದುಕೊಂಡೇ ಬಂದ ಮಹಾರ್ ಸೈನಿಕರು. ಹನ್ನೆರಡು ಗಂಟೆಗಳ ಕಾಲ ರಣಭೂಮಿಯಲ್ಲಿ ಕಾದಾಡಿದರು. ಆ ಯುದ್ಧದಲ್ಲಿ ಪೇಶ್ವೆಗಳು ಬರಿ ಸೋತಿದ್ದಲ್ಲ. ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಉತ್ತರದಾಯಿತ್ವವೇ ಅಂತ್ಯವಾಗಿಸಿದರು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ. ಈ ಒಂದು ಯುದ್ಧದ ಸುವರ್ಣ ಇತಿಹಾಸವನ್ನು ಮುನ್ನಲೆಗೆ ತಂದ ಶ್ರೇಯಸ್ಸು, ಕಿರ್ತಿ ಗೌರವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಲಂಡನನ ಸ್ಕೂಲ್ ಆಫ್ ಎಕನಾಮಿಕ್ಸ್ ಬಾರ್ -ಏಟ್- ಲಾ ಅಲ್ಲಿ ವ್ಯಾಸಂಗ ಮಾಡುತ್ತಿರುವಾಗ ಸಂಶೋಧನೆ ಮಾಡುವ ಸಂದರ್ಭದಲ್ಲಿ ಬ್ರಿಟಿಷ್ ಭಾರತದ ಆಳ್ವಿಕೆಯಲ್ಲಿನ ಪ್ರಮುಖ ಐತಿಹಾಸಿಕ ಘಟನೆಗಳ ಕುರಿತು ಲಂಡನ್ ಮ್ಯೂಸಿಯಂ ಲೈಬ್ರರಿಯಲ್ಲಿನ ಮೂಲಾಧಾರಗಳನ್ನು ಅನ್ವೇಶಿಸುವ ಸನ್ನಿವೇಶದಲ್ಲಿ ಈ ಭೀಮ ಕೋರೇಗಾಂವ್ ಕಥನದ ಬಗ್ಗೆ ಮಾಹಿತಿ ಪಡೆದು ಈ ಮಾಹಿತಿಯನ್ನು ನಿರಂತರವಾಗಿ ಕೂಲಕುಂಶವಾಗಿ ಅಧ್ಯಯನಿಸಿ ನಂತರ ಭಾರತಕ್ಕೆ ಮರಳಿ ಬಂದು ಯುದ್ಧ ನಡೆದ ಸ್ಥಳವಾದ ಕೋರೇಗಾಂವ್ ಗೆ ಭೇಟಿ ನೀಡಿ ಭವ್ಯ ವಿಜಯ ಸ್ತಂಭವನ್ನು ವೀಕ್ಷಿಸಿ ಅಲ್ಲಿನ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಸ್ಥಳೀಯ ಮಾಹಿತಿಯನ್ನು ಸಂಗ್ರಹಿಸಿದ ನಂತರ ಕೋರೇಗಾಂವ್ ಕದನದ ಇತಿಹಾಸ ಹೊರಬರುತ್ತದೆ. ಅಂಬೇಡ್ಕರ್ ಅವರು ಕೋರೇಗಾಂವ್ ಸ್ಮಾರಕಕ್ಕೆ ಭೇಟಿ ನೀಡಿದಾಗಿನಿಂದ ಈ ಸ್ಥಳ ಶೋಷಿತ ಸಮುದಾಯಗಳ ಪಾಲಿಗೆ ವಿಜಯ ಯಾತ್ರಾಸ್ಥಳವಾಗಿದೆ. ಪ್ರತಿ ವರ್ಷ ಜನವರಿ ಒಂದನೇ ತಾರೀಖಿನಂದು ಲಕ್ಷಾಂತರ ಮಂದಿ ಕೋರೇಗಾಂವ್ ಗ್ರಾಮಕ್ಕೆ ಭೇಟಿ ನೀಡಿ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಾರೆ.
ಜೀವಿಸುವ ಅವಕಾಶವನ್ನು, ಸವಲತ್ತುಗಳನ್ನು ಕೊಡದ ಒಂದು ವರ್ಗದ ವಿರುದ್ಧ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಾಮ್ರಾಜ್ಯವನ್ನು ನೆಲೆಸಮ ಮಾಡಿದ್ದ ಇತಿಹಾಸವು ವಿಶ್ವದೆಲ್ಲೆಡೆ ಚಿರಪರಿಚಿತವಾಗಿದೆ . ಸ್ವಾತಂತ್ರ್ಯ,ಸಮಾನತೆ, ಭ್ರಾತೃತ್ವ ಪ್ರಜಾ ಸತ್ತಾತ್ಮಕ ಮತ್ತು ಸಾಮಾಜಿಕ ನ್ಯಾಯವನ್ನು ಅಳವಡಿಸಿಕೊಂಡ ಭಾರತದ ಸಂವಿಧಾನದ ಆಶಯಗಳಿಗೆ ಕೆಡುಕು ಉಂಟು ಮಾಡುತ್ತಾತ ಮನುವಾದಿಗಳು ತಳ ಸಮುದಾಯದ ಅಭಿವೃದ್ಧಿಯನ್ನು ಸಹಿಸುತ್ತಿಲ್ಲ. ಮೀಸಲಾತಿ ಕ್ರಮವನ್ನು ಅವೈಜ್ಞಾನಿಕವಾಗಿ ಖಂಡಿಸುತ್ತಿದ್ದಾರೆ, ಜಾತಿ ಧರ್ಮಗಳ ಮಧ್ಯೆ ಜಗಳ ಹುಟ್ಟಿಸಿ ಕುತಂತ್ರದಿಂದ ಮರಳಿ ಮನುಸ್ಮೃತಿ ಜಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಚಟುವಟಿಕೆಗಳನ್ನು ನೋಡಿದರೆ ಮತ್ತೊಂದು ಭೀಮ ಕೋರೇಗಾಂವ್ ಯುದ್ಧವೇ ನಡೆದರು ಅಚ್ಚರಿಪಡಬೇಕಾಗಿಲ್ಲ.
– ಸಿದ್ಧಾರ್ಥ ಟಿ ಮಿತ್ರಾ
ಯುವ ಬರಹಗಾರರು ಹಾಗೂ ಸಾಮಾಜಿಕ ಚಿಂತಕರು ತಾ ಹುಮನಾಬಾದ ಜಿ.ಬೀದರ
ಉತ್ತಮ ಲೇಖನ ಸರ್ ಇಂಥ ಲೇಖನಗಳು ಇಂದಿನ ಯುವ ಪೀಳಿಗೆಗೆ ಓದುವಂತೆ ಎಚ್ಚರಿಸಬೇಕಾಗಿದೆ.
XXpjDv svfIWo DKLBWr rhm