ಶ್ರೀ ಸಿದ್ದೇಶ್ವರ ಸ್ವಾಮಿಗಳು
– ವೀಣಾ ಹೇಮಂತ್ ಗೌಡ ಪಾಟೀಲ್
ನುಡಿದಂತೆ ನಡೆದ ಸಂತ, ವಿರಳಾತಿವಿರಳ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿ ಸರಳತೆ ಮತ್ತು ಆದರ್ಶ ಗಳನ್ನು ಬದುಕಿದ ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳು ನಿಜದ ಅರ್ಥದಲ್ಲಿ ಯೋಗಿಗಳು. ಇಂದಿನ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬವೊಂದರಲ್ಲಿ ಓಗಪ್ಪ ಗೌಡ ಬಿರಾದಾರ್ ಮತ್ತು ಸಂಗವ್ವ ದಂಪತಿಗಳ ಪುತ್ರನಾಗಿ ಜನಿಸಿದ ಸಿದ್ದಗೊಂಡಪ್ಪ ಅವರದ್ದು ಐವರು ಸೋದರ ಸೋದರಿಯರನ್ನು ಹೊಂದಿದ್ದ ಜಮೀನ್ದಾರ ಕುಟುಂಬ. ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನ ಶಾಲೆಯಲ್ಲಿ ಪೂರೈಸಿದ ಬಾಲಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿಜಯಪುರದ ಜ್ಞಾನ ಯೋಗಾಶ್ರಮಕ್ಕೆ ಬಂದು ದಾಖಲಾದನು.
ಬಾಲಕನ ಸನ್ನಡತೆ, ಓದಿನಲ್ಲಿನ ಅಪಾರ ಆಸಕ್ತಿ, ನಡೆ-ನುಡಿಗಳಲ್ಲಿನ ಸ್ಪಷ್ಟತೆಯನ್ನು ಗುರುತಿಸಿದ ಜ್ಞಾನಯೋ ಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿಯವರ ನೆಚ್ಚಿನ ಶಿಷ್ಯನಾಗಿ ಉಳಿದನು. ಬೇರೆಲ್ಲ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಆಧ್ಯಾತ್ಮ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಹಿಂದೂ ಧರ್ಮ ಗ್ರಂಥಗಳನ್ನು ಅತ್ಯಂತ ಆಳವಾಗಿ ಅಭ್ಯಸಿಸಿದ ಸಿದ್ಧಗೊಂಡಪ್ಪ ಯೋಗ ಮತ್ತು ಧ್ಯಾನಗಳಲ್ಲಿ ಯೂ ಕೂಡ ವಿಶೇಷ ಆಸಕ್ತಿ ಹೊಂದಿದ್ದರು. ಇದು ಪತಂಜಲಿಯ ಯೋಗ ಸೂತ್ರಗಳ ಆಳವಾದ ಅಧ್ಯಯನಕ್ಕೆ ಎಡೆ ಮಾಡಿಕೊಟ್ಟಿತು.
ವಿಜಯಪುರದಲ್ಲಿ ಪದವಿಯನ್ನು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ ಮುಂದೆ ಜ್ಞಾನ ಯೋಗಾಶ್ರಮದ ಅಧ್ಯಕ್ಷತೆಯನ್ನು ವಹಿಸಿ ಮಲ್ಲಿಕಾರ್ಜುನ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಅವರು ಪ್ರಾರಂಭಿಸಿದ್ದ ನೂರಾರು ವಿದ್ಯಾಸಂಸ್ಥೆಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಸಿದ್ದಗೊಂಡಪ್ಪನವರು ಆರಂಭಿಸಿದರು. ಮುಂದೆ ತಮ್ಮ ಗುರುಗಳ ಸಲಹೆಯ ಮೇರೆಗೆ ಸಿದ್ದೇಶ್ವರರಾಗಿ ಜ್ಞಾನ ಯೋಗಾಶ್ರಮದ ಜ್ಞಾನ ಯೋಗಿಗಳಾಗಿ ಪ್ರವಚನ ನೀಡಲಾರಂಭಿಸಿದರು. ನಿಜದ ಅರ್ಥದಲ್ಲಿ ಜ್ಞಾನಮಾರ್ಗದ ಸ್ವಾಮಿತ್ವವನ್ನು ಪಡೆದು ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳಾದರು.
” ಅಕ್ಷರವನ್ನು ಕಲಿತ ವ್ಯಕ್ತಿ ಭ್ರಷ್ಟನಾಗಬಹುದು,ಆದರೆ ಸಂಸ್ಕಾರವನ್ನು ಕಲಿತ ವ್ಯಕ್ತಿ ಎಂದೂ ಭ್ರಷ್ಟನಾಗಲಾರ” ಎಂದು ಸಿದ್ದೇಶ್ವರ ಸ್ವಾಮೀಜಿಯವರು ನಂಬಿದ್ದರು.
ಸತ್ಯದ ಸಾಧಕನಾಗಿರುವ ಮನುಷ್ಯ ಜಗತ್ತಿನ ಸರ್ವ ಚರಾಚರಗಳಲ್ಲಿಯೂ ಪ್ರೀತಿಯನ್ನು ಕಾಣಬೇಕು ಎಂಬುದು ಅವರ ಅಂಬೋಣವಾಗಿತ್ತು. ನಿಮ್ಮ ಬದುಕಿಗೆ ನೀವೇ ಶಿಲ್ಪಿಗಳು, ಕಲ್ಲುಗಳಿಂದ ಗೋಡೆಯನ್ನು ಕಟ್ಟುತ್ತೀರೋ ಅಥವಾ ಸೇತುವೆಯನ್ನು ನಿರ್ಮಿಸುತ್ತಿರೋ ಅದು ನಿಮಗೆ ಬಿಟ್ಟಿದ್ದು ಎಂದು ಯುವ ಜನತೆಗೆ ಅವರು ತಿಳಿ ಹೇಳುತ್ತಿದ್ದರು. ಭಾರತದ ಎಲ್ಲ ಮಹಾನ್ ಗ್ರಂಥಗಳನ್ನು ಅಧ್ಯಯನ ಮಾಡಿದ ಸಿದ್ದೇಶ್ವರರು ಭಾರತದಾದ್ಯಂತ ಪ್ರವಾಸ ಮಾಡಿ ಕೋಶ ಓದುವಿಕೆ ಮತ್ತು ದೇಶ ಸುತ್ತುವಿಕೆಯ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ತಮ್ಮ ಚಿಂತನೆಗಳನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ಉಪನ್ಯಾಸಗಳ ಮೂಲಕ ಜನರಿಗೆ ತಲುಪಿಸಿದರು. ಸಿದ್ದೇಶ್ವರ ಸ್ವಾಮಿಗಳು ಪ್ರತಿಪಾದಿಸುವ ವಿಷಯಗಳು ಹದಿಹರೆಯದವರಿಂದ ಹಿಡಿದು ಮುಪ್ಪಿನ ಮುದುಕರವರೆಗೆ ಎಲ್ಲರಲ್ಲೂ ಚಿಂತನೆಗೊಳಪಡಿಸಿ ಬದಲಾವಣೆ ತರುವಲ್ಲಿ ಯಶಸ್ವಿಯಾದವು.
ಭಾರತೀಯ ತತ್ವಶಾಸ್ತ್ರವನ್ನಷ್ಟೇ ಅಲ್ಲ ಪಾಶ್ಚಾತ್ಯ ತತ್ವಶಾಸ್ತ್ರ, ದರ್ಶನಗಳನ್ನು ಓದಿ ಹೃದ್ಗತ ಮಾಡಿಕೊಂಡ ಸಿದ್ದೇಶ್ವರ ಸ್ವಾಮೀಜಿಯವರದು ಹೂವಿನಂತಹ ಮನ. ಜ್ಞಾನ ಯೋಗಾಶ್ರಮದ ಮೂಲಕ ಬದುಕಿನ ಹಲವು ಭಾವಗಳ ಕುರಿತು, ಹೇಗೆ ಬದುಕಬೇಕು ಎಂಬುದರ ಕುರಿತು ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ವಚನ, ಉಪನಿಷತ್ತು, ಗೀತೆಗಳ ಮೂಲಕ ಸಂದೇಶ ಸಾರಿದವರು. ತಮ್ಮ ಪ್ರವಚನಗಳಲ್ಲಿ ಮಾನವೀಯ ಪ್ರೇಮ, ಸತ್ಯ, ನಿಷ್ಠೆ, ಕಾಯಕ, ಕರ್ತವ್ಯಗಳ ಕುರಿತು ನಯವಾಗಿ ತಿಳಿ ಹೇಳಿದ ತಾಯಿ ಮನದ ಗುರು ಸಿದ್ದೇಶ್ವರ ಸ್ವಾಮಿಗಳಾಗಿದ್ದರು.
ಅತ್ಯಂತ ಸರಳವಾದ ನಿಸ್ಪ್ರಹತೆಯ ನಡೆಯನ್ನು ಹೊಂದಿದ ಅವರು ಆಧುನಿಕ ಬಸವಣ್ಣ ಎಂದರೆ ತಪ್ಪಿಲ್ಲ… ನುಡಿದಂತೆ ನಡೆದ ಮತ್ತು ನಡೆದಂತೆ ನುಡಿದ ಮಹಾಮಹಿಮ ಸಿದ್ದೇಶ್ವರ ಸ್ವಾಮಿಗಳು. ಹಾವು ವಾಸಿಸುವ ಕೋಣೆಯ ಕಸವನ್ನು ತಾವೇ ಗುಡಿಸಿಕೊಳ್ಳುತ್ತಿದ್ದ ಅತ್ಯಂತ ಸರಳ ಜೀವಿ ಸಿದ್ದೇಶ್ವರ ಸ್ವಾಮೀಜಿಯವರು ಅತ್ಯಂತ ಸಾತ್ವಿಕವಾದ ಮತ್ತು ಮಿತವಾದ ಆಹಾರ ಸೇವನೆಗೆ ಆದ್ಯತೆ ನೀಡಿದ್ದು ತಮ್ಮ ಬದುಕಿನುದ್ದಕ್ಕೂ ಅದನ್ನು ಪಾಲಿಸಿಕೊಂಡು ಬಂದರು.ಜೇಬುಗಳೇ ಇಲ್ಲದ ಒಂದು ಜೊತೆ ಬಟ್ಟೆ, ಕನ್ನಡಕ, ಹವಾಯಿ ಚಪ್ಪಲಿಗಳು ಮಾತ್ರ ಅವರ ಆಸ್ತಿ. ಎಷ್ಟೋ ಬಾರಿ ಅವರು ತಮ್ಮ ಹರಿದ ಬಟ್ಟೆಗಳನ್ನು ಸೂಜಿ ದಾರದ ಸಹಾಯದಿಂದ ತಾವೇ ಹೊಲಿದು ಮರುಬಳಕೆ ಮಾಡುತ್ತಿದ್ದರು.
ಯಾವುದೇ ಲೌಕಿಕ ಅಧಿಕಾರ, ಪ್ರಶಸ್ತಿ ಪುರಸ್ಕಾರಗಳನ್ನು ಆಶಿಸದ ಸಿದ್ದೇಶ್ವರ ಸ್ವಾಮಿಗಳು ವಿಶ್ವವಿದ್ಯಾಲಯ ಕೊಡ ಮಾಡುವ ಗೌರವ ಡಾಕ್ಟರೇಟ್ ಮತ್ತು ರಾಷ್ಟ್ರದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿಗಳನ್ನು ಸನ್ಯಾಸಿಗಳಿಗೆ ಯಾವುದೇ ಆಡಂಬರಗಳು ಬೇಡ ಎಂದು ಅತ್ಯಂತ ನಯವಾಗಿ ತಿರಸ್ಕರಿಸಿದರು. ತಮ್ಮ ಭಕ್ತನೋರ್ವ ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದಾಗ ಅದರಲ್ಲಿ ಒಂದು ಸುತ್ತು ಹಾಕಿ ಆತನ ಅಪೇಕ್ಷೆಯನ್ನು ಪುರಸ್ಕರಿಸಿದ ಸಿದ್ದೇಶ್ವರ ಸ್ವಾಮಿಗಳು ಉಡುಗೊರೆಯನ್ನು ಅಷ್ಟೇ ನಯವಾಗಿ ತಿರಸ್ಕರಿಸಿ ತಮ್ಮ ಸರಳತೆಯನ್ನು ಮೆರೆದರು. ಮತೀಯ ನಂಬಿಕೆಗಳನ್ನು ಮೀರಿ ಎಲ್ಲಾ ಧರ್ಮಗಳಲ್ಲಿಯೂ ಸಮಾನ ಗೌರವವನ್ನು ಹೊಂದಿದ್ದ ಸಿದ್ದೇಶ್ವರ ಸ್ವಾಮಿಗಳು ಎಲ್ಲಾ ಧರ್ಮಗಳ ಸಾರವು ಒಂದೇ, ಅದು ಮಾನವೀಯತೆ ಎಂದು ಪ್ರತಿಪಾದಿಸಿದ್ದರು. ಎಲ್ಲ ಧರ್ಮದ ಭಕ್ತ ಗಣವನ್ನು ಹೊಂದಿದ್ದ ಸಿದ್ದೇಶ್ವರರು ಜಾತಿ, ಮತ, ಧರ್ಮ, ಪಂಥಗಳನ್ನು ಮೀರಿದ ಮಹಾ ಮಾನವತಾವಾದಿಯಾಗಿದ್ದರು. ಯಾವುದೇ ಹೇಳಿಕೆಗಳನ್ನು, ವಿಷಯಗಳನ್ನು ವೈಭವೀಕರಿಸದೆ ಅತ್ಯಂತ ಸರಳವಾಗಿ ಶಾಂತವಾಗಿ ವಿಚಾರಗಳ ಮೂಲಕ ತಮ್ಮ ಭಕ್ತರಿಗೆ ಉಣ ಬಡಿಸಿ ಅವುಗಳ ಸಾರಾಸಾರವನ್ನು ಚಿಂತನೆಗೊಳಪಡಿಸಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ತಮ್ಮ ಭಕ್ತರಿಗೆ ಸಿದ್ದೇಶ್ವರ ಸ್ವಾಮೀಜಿಯವರು ಸಲಹೆ ನೀಡುತ್ತಿದ್ದರು.
ಕರ್ಮ, ಭಕ್ತಿ, ಜ್ಞಾನ ಮತ್ತು ಯೋಗ ಸಿದ್ದಾಂತಗಳಲ್ಲಿ ನಂಬಿಕೆ ಇರಿಸಿದ್ದ ಅವರು ನುಡಿದಂತೆ ನಡೆದು ತೋರಿದರು. ತನ್ನ ಭಕ್ತರ ಮೇಲೆ ಅನನ್ಯ ಪ್ರೇಮದ ವರ್ಷಧಾರೆ ಹರಿಸಿದ, ಭಕ್ತರ ಮನದ ಅಂಧಕಾರವನ್ನು ಸತ್ಯದ ಪ್ರಕಾಶದಿಂದ ಹೊಡೆದೋಡಿಸಿದ ಸಿದ್ದೇಶ್ವರ ಮಹಾಸ್ವಾಮಿಗಳು ಭಾರತ ದೇಶದ ನೆಲದಲ್ಲಿ ನಡೆದಾಡಿದ ಸಂತ ಮಹಾನುಭಾವ ಮತ್ತು ದಿವ್ಯ ಚೇತನವಾಗಿ ಸ್ವಯಂ ಪ್ರಕಾಶದಿಂದ ಕಂಗೊಳಿಸಿದವರು. ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆಗಳ ಬಗ್ಗೆ ಕೇವಲ ಬೋಧನೆ ಮಾಡದೆ ನುಡಿದಂತೆ ನಡೆದ ನಡೆದಾಡುವ ದೇವರಾದವರು ಸಿದ್ದೇಶ್ವರ ಮಹಾಸ್ವಾಮಿಗಳು. ವಯೋ ಸಹಜ ನಿಶ್ಯಕ್ತಿಯಿಂದ ಬಳಲಿದ ಅವರು ಯಾವುದೇ ರೀತಿಯ ಔಷಧೀಯ ಚಿಕಿತ್ಸೆಗೆ ಒಪ್ಪದೇ ಸಹಜವಾದ ಸಾವನ್ನು ಎದುರುಗೊಳ್ಳುವ ಅಪೇಕ್ಷೆಯನ್ನು ಹೊಂದಿದ್ದರು. ಖುದ್ದು ದೇಶದ ಪ್ರಧಾನಿಯೇ ಅವರಿಗೆ ಕರೆ ಮಾಡಿ ಚಿಕಿತ್ಸೆಗೆ ಮನವೊಲಿಸಲು ಪ್ರಯತ್ನಿಸಿದಾಗಲೂ ಅತ್ಯಂತ ವಿನಮ್ರವಾಗಿ ಅದನ್ನು ತಿರಸ್ಕರಿಸಿದ ಸಿದ್ದೇಶ್ವರ ಸ್ವಾಮಿಗಳು ತಮ್ಮ ಮರಣದ ನಂತರ ತಮಗೆ ದಹನ ಕ್ರಿಯೆಯ ಮೂಲಕ ಅಂತ್ಯ ಸಂಸ್ಕಾರವನ್ನು ಮಾಡಬೇಕು ಎಂದು ಆಶಿಸಿದರು,ಅಂತೆಯೇ ಮರದ ಮೇಲೆ ಕುಳಿತ ಹಕ್ಕಿ ರೆಕ್ಕೆ ಬಿಚ್ಚಿ ಹಾರಿ ಹೋದಷ್ಟೇ ಸರಳವಾಗಿ ಬಯಲಲ್ಲಿ ಬಯಲಾದವರು. ಸರಳ ಅಂತ್ಯಸಂಸ್ಕಾರ ಬಯಸಿ ಸಮಾಧಿಯನ್ನಾಗಲಿ ಗದ್ದುಗೆಯನ್ನಾಗಲಿ ಮಾಡಬಾರದೆಂದು ಪ್ರೀತಿಯಿಂದ ತಾಕಿತು ಮಾಡಿ ನಮ್ಮೆಲ್ಲರಿಗೂ ಸತ್ಯ ಜ್ಞಾನದ ಬೆಳಕನ್ನು ನೀಡಿ ಈ ಲೋಕದಿಂದ ನಿರ್ಗಮಿಸಿದರು. ಸಿದ್ದೇಶ್ವರ ಸ್ವಾಮಿಗಳ ಭೌತಿಕ ದೇಹ ನಮ್ಮನ್ನು ಅಗಲಿರಬಹುದು ಆದರೆ ಅವರು ಕೊಟ್ಟ ಜ್ಞಾನದ ಆಧ್ಯಾತ್ಮಿಕ ಬೆಳಕು ನಮ್ಮನ್ನು ಸದಾ ಕಾಯಲಿ ಎಂದು ಆಶಿಸುವ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.