ಸ್ವಾಭಿಮಾನದ ವಿಜಯ ಭೀಮಾ ಕೋರೆಗಾಂವ.
– ಅಶ್ವಜೀತ ದಂಡಿನ ಬೀದರ.
ವಿಶ್ವಜ್ಞಾನಿ ಯುಗ ಪುರುಷ ಸಂವಿಧಾನ ಶಿಲ್ಪಿ ಡಾ.ಬಾಬಾಸಹೇಬ ಅಂಬೇಡ್ಕರ ಅವರು ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ , ಅಲ್ಲಿನ ಗ್ರಂಥಾಲಯಗಳಲ್ಲಿ ದಿನತಪ್ಪದೆ ಇತಿಹಾಸಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದುತ್ತಿದ್ದರು. ಆಗ ಅವರಿಗೆ, ಇತಿಹಾಸದ ಕಾಲಗರ್ಭದಲ್ಲಿ ಹುದುಗಿಹೋದ ಕ್ರಿ.ಶ 1818 ಜನವರಿ 1 ರಂದು ಭೀಮಾ ನದಿಯ ದಂಡೆಯ ಮೇಲೆ ಕೇವಲ ಐನೂರು ಜನ ಮಹಾರ್ ಸೈನಿಕರು, ಬಾಜಿರಾವ ಪೇಶ್ವೆಯ ಮೂವತ್ತು ಸಾವಿರ ಸೈನಿಕರ ಜೊತೆಗೆ ಮಾನವೀಯತೆಯ ಮೌಲ್ಯವನ್ನು ಪಡೆದುಕೊಳ್ಳಲು ಹೋರಾಡಿದ ಐತಿಹಾಸಿಕ ಕೋರೆಗಾಂವ ಯುದ್ಧದ ಬಗ್ಗೆ ತಿಳಿದು ಬರುತ್ತದೆ.
ಅಂದಿನಿಂದ ಬಾಬಾಸಾಹೇಬರು ಪ್ರತಿವರ್ಷ ಜನವರಿ 1 ರಂದು ಎಂತಹದೇ ಮಹತ್ವದ ಕೆಲಸವಿದ್ದರೂ ಬಿಟ್ಟುಕೊಟ್ಟು, ತಮ್ಮ ಕುಟುಂಬದ ಸಮೇತ ಭೀಮಾ ಕೋರೆಗಾಂವಕ್ಕೆ ಹೋಗಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುತ್ತಿದ್ದರು. ಈ ಭೀಮಾ ಕೋರೆಗಾಂವ ಮಹಾ ಯುದ್ಧದ ಬಗ್ಗೆ ಮಾತನಾಡುವ ಮೊದಲು ಅದರ ಹಿನ್ನೆಲೆ ಇತಿಹಾಸ ತಿಳಿಯುವುದು ಉತ್ತಮ.
ಕ್ರಿ.ಶ 1674 ರಲ್ಲಿ ಛತ್ರಪತಿ ಶಿವಾಜಿಯು ಸ್ಥಾಪಿಸಿದ ಮರಾಠ ಸಾಮ್ರಾಜ್ಯದ ಅಧಿಕಾರವು ಕಾಲಾಂತರದಲ್ಲಿ ಪೇಶ್ವೆಗಳಡೆ ಒಲಿಯಿತು. ಶ್ರೀಮಂತ ಎರಡನೇ ಬಾಜಿರಾವ್ ಪೇಶ್ವೆಯ ಅಧಿಕಾರದಲ್ಲಿ ಕ್ರಿ.ಪೂ 185 ರಲ್ಲಿ ಪುಷ್ಯಮಿತ್ರ ಸುಂಗನ ಆಸ್ಥಾನದ ಪಂಡಿತನಾದ ಸುಮತಿ ಭಾರ್ಗವವನ್ನು ಬರೆದ ಮನಸ್ಪೃತಿಯ ಅತಿ ಕಠೋರವಾದ ಕಾಯ್ದೆಗಳನ್ನು ಜಾರಿಗೊಳಿಸಿ ಶೂದ್ರ ಅಸ್ಪೃಶ್ಯರ ಬಾಳನ್ನು ನರಕಯಾತನೆ ಗೊಳಿಸಿದನು.
ಈ ಮನುಸ್ಮೃತಿ ಎನ್ನುವ ನೀಚ ಕಾಯ್ದೆಯಿಂದಾಗಿ ಪೇಶ್ವೆಯ ಕಾಲದಲ್ಲಿ ಅಸ್ಪೃಶ್ಯರನ್ನು ನಾಯಿ ಬೆಕ್ಕುಗಳಿಗಿಂತ ನೀಚವಾಗಿ ಕಾಣಲಾಗುತ್ತಿತ್ತು. ಇರುವೆಗಳಿಗೆ ಪ್ರದೇಶಿಕ ಸಕ್ಕರೆ ಹಾಕುತ್ತಿದ್ದರೆ ವಿನಃ ಮನುಷ್ಯರೇ ಆಗಿದ್ದ ಅಸ್ಪೃಶ್ಯ ಜನರನ್ನು ಒಂದೊಂದು ಸಲ ನೀರು ಬೇಡುವಂತೆ ಹೊಡೆಯುವ ಉಚ್ಚವರ್ಗದ ಜನ ಪೇಶ್ವಾ ಕಾಲದಲ್ಲಿದ್ದರು.
ಈ ಪೇಶ್ವೆಯ ಆಡಳಿತದಲ್ಲಿ ಅಸ್ಪೃಶ್ಯರು ಸದಾ ಭಯದಲ್ಲಿಯೇ ಬದುಕುವಂತ ವಾತಾವರಣ ಸೃಷ್ಟಿಯಾಗಿತ್ತು. ಇವರು ಊರ ಹೊರಗಡೆಯೇ ವಹಿಸಬೇಕಾಗಿತ್ತು. ಇವರಿಗೆ ಬೆಳಿಗ್ಗೆ ಮತ್ತು ಸಾಯಂಕಾಲದ ವೇಳೆಯಲ್ಲಿ ಊರ ಒಳಗಡೆ ಪ್ರವೇಶವಿರಲಿಲ್ಲ. ಮಧ್ಯಾಹ್ನದ ಸುಡುವ ಬಿಸಿಲಿನಲ್ಲಿ ಮಾತ್ರ ಭಿಕ್ಷೆ ಬೇಡಲು ಊರ ಒಳಗಡೆ ಬರಬೇಕಾಗಿತ್ತು. ಕಾರಣ ಇವರ ನೆರಳು ಉಚ್ಚ ವರ್ಗದ ಹಿಂದೂ ಜನರ ಮೇಲೆ ಬಿದ್ದರೆ ಮೈಲಿಗೆಯಾಗುತ್ತದೆ ಎನ್ನುವ ನಂಬಿಕೆ ಇತ್ತು. ಇವರು ಊರ ಒಳಗೆ ಬರುವಾಗ ಸೊಂಟಕ್ಕೆ ಒಂದು ಬಾರೆಯ ಪದ್ದಿ ಕಸಬರಿಕೆಯಂತೆ ಕಟ್ಟಿಕೊಂಡು, ಇವರು ನಡೆದು ಬಂದ ಹೆಜ್ಜೆ ಗುರುತುಗಳು ಇವರೇ ಗೂಡಿಸಿಕೊಂಡು ಹೋಗಬೇಕಾಗಿತ್ತು. ಕಾರಣ ಅಸ್ಪೃಶ್ಯರ ಹೆಜ್ಜೆಗುರುತುಗಳು ಉಚ್ಚ ವರ್ಗದ ಹಿಂದೂಗಳು ತುಳಿದರೆ ಮೈಲಿಗೆಯಾಗುತ್ತದೆ ಎನ್ನುವ ಬಲವಾದ ಧಾರ್ಮಿಕ ನಂಬಿಕೆ, ಉಚ್ಚ ವರ್ಗದ ಜನರಲ್ಲಿ ಮನೆ ಮಾಡಿತ್ತು.
ಆಕಸ್ಮಾತ್ ಅಸ್ಪೃಶ್ಯನೊಬ್ಬ ದಾರಿಯಲ್ಲಿ ಉಗಿದರೆ ಅ ಉಗುಳನ್ನು ಹಿಂದೂ ಒಬ್ಬ ತುಳಿದು ಆತ ಮೈಲಿಗೆ ಆಗುವುದನ್ನು ತಪ್ಪಿಸಲು ಅಸ್ಪೃಶ್ಯರಾದವರು ತನ್ನ ಕೊರಳಿಗೆ ಒಂದು ಮಣ್ಣಿನ ಮಡಿಕೆ ಕಟ್ಟಿಕೊಂಡು ಉಗಿಯಾಬೇಕಾದ ಸಂದರ್ಭದಲ್ಲಿ ಅ ಮಣ್ಣಿನ ಮಡಿಕೆಯಲ್ಲಿಯೇ ಉಗಿಯಬೇಕಾಗಿತ್ತು. ಊರ ಒಳಗೆ ಬರುವ ಸಂದರ್ಭದಲ್ಲಿ ಕೈಯಲ್ಲಿ ಒಂದು ಗೆಜ್ಜೆಯ ಕೋಲು, ಒಡೆದ ಮಣ್ಣಿನ ಪಾತ್ರೆ ಹಾಗೂ ಕೊರಳಿಗೆ ಮತ್ತು ಕೈಕಾಲುಗಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಊರ ಒಳಗೆ ಬಂದು ಭಿಕ್ಷೆಯ ರೂಪದಲ್ಲಿ ಹಳಸಿದ ಅನ್ನ ತೆಗೆದುಕೊಂಡು ಹೋಗಿ ತಿನ್ನುವಂತ ಕೆಟ್ಟ ಪರಿಸ್ಥಿತಿ ಪೇಶ್ವೆಗಳ ಕಾಲದಲ್ಲಿ ಅಸ್ಪೃಶ್ಯತೆ ಜನರದಾಗಿತ್ತು.
ಮತ್ತೊಂದು ಕಡೆ ಬ್ರಿಟಿಷರ ಪ್ರಭಾವ ಬೆಳೆಯತೊಡಗಿತ್ತು. ಬ್ರಿಟಿಷರ ಆಡಳಿತದಲ್ಲಿ ಪ್ರಜೆಗಳೆಲ್ಲರನ್ನು ಒಂದೇ ರೀತಿಯಿಂದ ಕಾಣಲಾಗುತ್ತಿತ್ತು. ಬ್ರಿಟಿಷರಲ್ಲಿ ಜಾತಿಯತೆ ಇರಲಿಲ್ಲ. ಉಚ್ಚ ಮತ್ತು ನೀಚ ವರ್ಗದವರಿಗೆ ಸಮಾನವಾದ ಒಂದೇ ತರಹದ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ ಪೇಶ್ವೆಗಳ ಆಡಳಿತದಲ್ಲಿ ಇದಕ್ಕೆ ವಿರುದ್ಧವಾದ ಕಾಯ್ದೆಗಳಿದವು. ಉಚ್ಚವರ್ಗದ ವ್ಯಕ್ತಿ ತಪ್ಪು ಮಾಡಿದರೆ ಆತನಿಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಲಾಗುತ್ತಿತ್ತು. ಅದೇ ತಪ್ಪನ್ನು ಶೂದ್ರ ಅಸ್ಪೃಶ್ಯರು ಮಾಡಿದರೆ ಅವರಿಗೆ ಹೆಚ್ಚು ಪ್ರಮಾಣದ ಘನ ಘೋರವಾದ ಶಿಕ್ಷೆ ವಿಧಿಸಲಾಗುತ್ತಿತ್ತು.
ಬ್ರಿಟಿಷರ ಈ ಸಮಾನತೆಯ ಆಡಳಿತ ದೌರ್ಜನ್ಯ ಎಸಗುವ ಮನುಸ್ಮೃತಿ ಪರಿಪಾಲಕರಾದ ಸಂಪ್ರದಾಯಸ್ಥ ವಾದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇದರಿಂದಾಗಿ ಬ್ರಿಟಿಷ್ ಮತ್ತು ಸಂಪ್ರದಾಯಸ್ಥ ವಾದಿಗಳ ಮಧ್ಯೆ ವೈಮನಸ್ಸು ಪ್ರಾರಂಭವಾಗಿ , ಬ್ರಿಟಿಷ್ ಮತ್ತು ಸಂಪ್ರದಾಯಸ್ಥ ದೇಸಿ ಅರಸರ ಮಧ್ಯೆ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹಿಂದೆಯೂ ಇದೇ ಕಾರಣವಿದೆ.
ಕ್ರಿ.ಶ. 1817ರ ಸಂದರ್ಭದಲ್ಲಿ ಬ್ರಿಟಿಷ್ ಮತ್ತು ಪೇಶ್ವೆಗಳ ಮಧ್ಯೆ ಇಂತದೇ ವಿಷಯದಿಂದಾಗಿ ದ್ವೇಷ ವಿಕೋಪಕೇರಿ ಬ್ರಿಟಿಷರು ಮತ್ತು ಪೇಶ್ವೆಗಳು ಪರಸ್ಪರ ಶತ್ರುಗಳಾದರು. ಇವರಿಬ್ಬರ ಮಧ್ಯೆ ಯಾವಾಗ ಯುದ್ಧ ಸಂಭವಿಸಬಹುದೆಂದು ಹೇಳಲಾಗುತ್ತಿರಲಿಲ್ಲ.
ಪರಸ್ಪರ ಹೋರಾಡಲು ಇವರಿಬ್ಬರಿಗೂ ಶಕ್ತಿಶಾಲಿಯಾದ ಸೈನ್ಯದ ಅವಶ್ಯಕತೆ ಇತ್ತು. ಅಸ್ಪೃಶ್ಯರ ಧೈರ್ಯ ಮತ್ತು ಪ್ರಾಮಾಣಿಕತೆ ಬಗ್ಗೆ ಚೆನ್ನಾಗಿಯೇ ಅರಿತ ಬ್ರಿಟಿಷರು ಸೈನ್ಯದೊಳಗೆ ಅತಿ ಹೆಚ್ಚು ಪ್ರಮಾಣದಲ್ಲಿ ಅಸ್ಪೃಶ್ಯ ಸೈನಿಕರನ್ನು ಸೇರಿಸಿಕೊಂಡಿದ್ದರು. ಇವರ ಶೌರ್ಯದಿಂದಲೇ ಪೇಶ್ವೆಯನ್ನು ಸೋಲಿಸಿ, ಭಾರತದಲ್ಲಿ ತಮ್ಮ ಆಡಳಿತವನ್ನು ಬಲಪಡಿಸುವ ಭರವಸೆಯನ್ನು ಹೊಂದಿದರು.
ಇಂಗ್ಲಿಷರ ಇಂತಹ ತಂತ್ರಗಾರಿಕೆಯು ಅನೇಕ ಜನ ಅಸ್ಪೃಶ್ಯ ಸೈನಿಕರ ಗಮನಕ್ಕೆ ಬಂದಿತ್ತು. ನಾವೇ ನಮ್ಮ ಹಿಂದೂ ಬಂಧುಗಳ ಎದುರಿಗೆ ಬ್ರಿಟಿಷರ ಜೊತೆ ನಿಂತು ಯುದ್ಧಮಾಡಿ ನಮ್ಮವರ ಪ್ರಾಣ ನಾವೇ ತೆಗೆಯಬೇಕಲ್ಲ! ಇಂತಹ ಪರಿಸ್ಥಿತಿಯಲ್ಲಿ ನಾವು ನಮ್ಮವರ ಜೊತೆಗಿದ್ದು ನಮ್ಮವರನ್ನು ರಕ್ಷಿಸಬೇಕೆಂಬ ಕಳವಳ ಉಂಟಾಗಿ, ಕೆಲವು ಜನ ಮಹಾರ್ ಸೈನಿಕರು ಹಾಗೂ ಪ್ರಮುಖ ಸೇನಾಧಿಪತಿಯಾದ ಸಿದ್ದನಾಕರು ತಮ್ಮ ಮಾನೋಭಿಲಾಷೆಯನ್ನು ಪೇಶ್ವೆಯ ಸೇನಾಪತಿ ಬಾಪೂ ಗೋಖಲೆ ಮತ್ತು ಇತರ ಪ್ರಮುಖರ ಮೂಲಕ ಬಾಜಿರಾವ್ ಪೇಶ್ವೆ ತಿಳಿಸಿದರು. ಆದರೆ ಆ ಕಡೆಯಿಂದ ಸರಿಯಾದ ಉತ್ತರ ಬಾರದೆಯಿದ್ದ ಕಾರಣ ಸಿದ್ಧನಾಕ ಮತ್ತು ಮಕಲನಾಕ ಪೇಶ್ವೆಯನ್ನು ಪ್ರತ್ಯೇಕ ಬೇಟಿಮಾಡಲು ಹೊರಡುತ್ತಾರೆ.
ಮಹಾರ ಸೇನಾಪತಿ ಸಿದ್ದನಾಕ ಮತ್ತು ಮಕಲನಾಕ ಶ್ರೀಮಂತ ಬಾಜಿರಾವ್ ಪೇಶ್ವೆಯನ್ನು ಕಂಡಕೂಡಲೆ ‘ಜೋಹಾರ್ ಮಾಯ್ ಬಾಪ್’ ಎಂದು ವಂದನೆ ಸಲ್ಲಿಸಿದರು. ಆಗ ಪೇಶ್ವೆಯು ಮುಖದಲ್ಲಿ ಭವ್ಯ ತಿರಸ್ಕಾರ ತುಂಬಿಕೊಂಡು: “ಈ ಅಸ್ಪೃಶ್ಯ ನೀಚ ಕುಲದವರನ್ನು ಒಳಗೆ ಬಿಟ್ಟವರಿಗೆ ತಕ್ಷಣ ಗಲ್ಲಿಗೇರಿಸಿ” ಎಂದು ರಾಜಾಜ್ಞೆ ಹೊರಡಿಸಿ, ಭೇಟಿಗೆ ಅವಕಾಶ ಮಾಡಿಕೊಟ್ಟ ಬಾಪೂ ಗೋಖಲೆಯನ್ನು ಬಾಯಿಗೆ ಬಂದಂತೆ ಬೈದನು. ಆದರು ಮಹಾರ ಸೇನಾಪತಿ ಸಿದ್ದನಾಕ ಮತ್ತು ಮಕಲನಾಕ ತಾಳ್ಮೆಯಿಂದ ನಿಂತು ಬಂದ ವಿಚಾರ ತಿಳಿಸುತ್ತ “ನಾವು ಮಹಾರ ಸೈನಿಕರು ನಿಮ್ಮ ಜೊತೆಗಿದ್ದು ಬ್ರಿಟಿಷರೊಂದಿಗೆ ಹೋರಾಡಿ ಅವರನ್ನು ಶಾಶ್ವತವಾಗಿ ಭಾರತದಿಂದ ಹೊರಗಟ್ಟಿ ಬಿಡುತ್ತೇವೆ ಹಾಗಾದರೆ ತಮ್ಮ ರಾಜ್ಯದಲ್ಲಿ ತಮ್ಮ ಸೈನ್ಯದಲ್ಲಿ ನಮ್ಮ ಸ್ಥಾನ ಎನಿಸುವುದು” ಎಂದು ಕೇಳಿದರು.
ಆಗ ಪೇಶ್ವೆಯು “ನಿಮ್ಮಂತಹ ನೀಚ ಕುಲದ ಮಹಾರರಿಗೆ ಒಂದು ಧೂಳಿನ ಕಣದಷ್ಟು ಸ್ಥಾನ ಈ ಪೇಶ್ವಾ ಶಾಹಿಯಲ್ಲಿ ಸಿಗಲಾರದು. ನಿಮ್ಮ ಸ್ಥಾನ ಈಗೇನಿದೆಯೋ ಅದೇ ಶಾಶ್ವತವಾಗಿರುತ್ತದೆ. ನಾವು ಧರ್ಮದ ವಿರುದ್ಧ ಎಂದಿಗೂ ನಡೆದುಕೊಳ್ಳುವುದಿಲ್ಲ. ಹಿಂದೂ ಧರ್ಮದ ಚಾತುರ್ವರ್ಣ ಪದ್ಧತಿಯಂತೆ ಮತ್ತು ಸ್ಪೃತಿಗಳಾನ್ನುಸಾರ ಮಹಾರರಿಗೆ(ಅಸ್ಪೃಶ್ಯರಿಗೆ) ಹೇಗೆ ನಡೆಸಿಕೊಳ್ಳಬೇಕೆಂದಿದೆಯೋ ಹಾಗೆಯೇ ನಿಮ್ಮನ್ನು ನಡೆಸಿಕೊಳ್ಳಲಾಗುತ್ತದೆ. ನಮ್ಮ ರಾಜ್ಯದಲ್ಲಿ ಮನುಸ್ಮೃತಿಯ ಪ್ರಕಾರವೇ ನ್ಯಾಯ ನಿರ್ಣಯ ಮಾಡಲಾಗುವುದು. ಧರ್ಮದ ವಿರುದ್ಧ ಹೋದರೆ ಮೊದಲು ನಾವು ನಿಮ್ಮೊಂದಿಗೆ ಯುದ್ಧ ಮಾಡಬೇಕಾಗುತ್ತದೆ.” ಎಂದು ಪೇಶ್ವೆಯು ಕ್ರೋಧದಿಂದ ನೋಡಿದನು.
ಇದಕ್ಕೆ ಸಿದ್ದನಾಕನ್ನು ಪ್ರತ್ಯುತ್ತರಿಸುತ್ತ: “ನಮ್ಮಂತ ಬಡವರರೊಂದಿಗೆ ಯುದ್ಧದ ಮಾತನಾಡಬೇಡಿ. ನಮ್ಮೊಂದಿಗೆ ಯುದ್ಧದ ಮಾತನಾಡುವುದೆಂದರೆ, ಮೇಕೆಯೇ ಸಿಂಹಕ್ಕೆ ಆಹ್ವಾನ ನೀಡಿದಂತೆ. ಈ ಮಣ್ಣಿನ ಅನ್ನದ ಋಣದ ಅರಿವು ನಮಗೂ ಇದೆ. ನಮದೇ ಭೂಮಿಯ ಮಕ್ಕಳ ಜೊತೆ ಹೋರಾಡುವುದು ನಮಗೂ ಸರಿಯೆನಿಸುವುದಿಲ್ಲ. ಆದರೆ ನ್ಯಾಯಕ್ಕಾಗಿ ನಮ್ಮ ಹಕ್ಕಿಗಾಗಿ ಯುದ್ಧ ಮಾಡುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ.” ಎಂದು ಸಿದ್ದನಾಕನ್ನು ಬಾಜಿರಾವನಿಗೆ ನೇರವಾಗಿ ಹೇಳಿ ಹೊರನಡೆದನು. ಆತ ನಿಂತ ನೆಲ ಗೋಮೂತ್ರ ಸಿಂಪಡಿಸಿ ಸುದ್ಧ ಗೊಳಿಸಿದರು.
ಪೇಶ್ವೆಯನ್ನು ಭೇಟಿಮಾಡಿ ಬಂದ ಸಿದ್ದನಾಕನ್ನು ಅಲ್ಲಿ ನಡೆದ ಅವಮಾನದ ಸಂಪೂರ್ಣ ಮಾಹಿತಿ ತನ್ನ ಬಾಂಧವರಿಗೆ ತಿಳಿಸಿದನು. ಸಾವಿರಾರು ನಿರ್ಬಂಧನೆಗಳಿಂದ ರೋಷಿಹೋದ ಮಹಾರರು ಮೊದಲು ಅಸ್ಪೃಶ್ಯರ ಸ್ಥಿತಿಗತಿ ಹೇಗಿತ್ತೋ ಹಾಗೆಯೇ ಇರುವುದಾದರೆ ಪೇಶ್ವೆ ಕಡೆಗಿದ್ದು ಹೋರಾಡುವುದರಿಂದ ನಮ್ಮ ಮೇಲೆ ನಾವೇ ಬಂಧನ ಹೇರಿಕೊಂಡ ಹಾಗೆ. ಈ ಅಸಮಾನತೆ ಮೇಲು-ಕೀಳುಗಳಿಂದ ತುಂಬಿ ಕೊಳೆತು ನಾರುತ್ತಿರುವ ಪೇಶ್ವೆ ಅಧಿಕಾರ ಕೊನೆಗೊಳಿಸಲೇಬೇಕು ಎಂದು ಶಪಥ ಮಾಡಿ ಬ್ರಿಟಿಷರ ಜೊತೆ ಸೇರಿ ಯುದ್ಧ ಮಾಡಲು ನಿರ್ಧರಿಸಿದರು.
ಸೇನಾಪತಿ ಸಿದ್ಧನಾಕನು ತಮ್ಮವಿಚಾರವನ್ನು ಬ್ರಿಟಿಷರಿಗೆ ತಿಳಿಸಿ ತಮ್ಮ ಸ್ಥಾನಮಾನದ ಬಗ್ಗೆ ಕೇಳಿದಾಗ, ಬ್ರಿಟಿಷರು ಗೆದ್ದ ಅರ್ಧರಾಜ್ಯವನ್ನು ನೀಡುವುದಾಗಿ ಹೇಳಿದರು. ಆಗ ಸೇನಾಪತಿ ಸಿದ್ಧನಾಕನು “ನಮಗೆ ರಾಜ್ಯ ಬೇಡ ನಮ್ಮ ಜನಗಳಿಗಾಗಿ ಬೋರ್ಡಿಂಗ್ ಶಾಲೆಗಳು ತೆರೆದು ವಿದ್ಯಾ ನೀಡಬೇಕು.” ಎಂಬ ಪ್ರಸ್ತಾವನೆ ಇಟ್ಟನು. ಇದಕ್ಕೆ ಬ್ರಿಟಿಷರು ಒಪ್ಪಿಗೆ ಸೂಚಿಸಿದರು.
ಕ್ರಿ.ಶ 1817 ಡಿಸೆಂಬರ್ 31 ರಂದು ಶ್ರೀಮಂತ ಬಾಜಿರಾವ್ ಪೇಶ್ವೆಯು ಬ್ರಿಟಿಷರ ಅಧೀನದಲ್ಲಿದ್ದ ಪುಣೆ ನಗರವನ್ನು ವಶಪಡಿಸಿಕೊಳ್ಳಲು, ಸುಮಾರು ಮೂವತ್ತು ಸಾವಿರ ಸೈನಿಕರೊಂದಿಗೆ ಬರುತ್ತಿರುವ ವಿಷಯ ಪುಣೆಯಲ್ಲಿದ ಬ್ರಿಟಿಷ ಅಧಿಕಾರಿ ಕರ್ನಲ್ ಬರ್ಟನನ ಗಮನಕ್ಕೆ ಬರುತ್ತದೆ. ಅತ ತಕ್ಷಣ ಶಿರೂರಿನಲ್ಲಿದ ಬ್ರಿಟಿಷರ ಕೆಂದ್ರ ಕಛೇರಿಗೆ ಪತ್ರ ಬರೆದು ಸೈನ್ಯ ಕಳಿಸಲು ತಿಳಿಸುತ್ತಾನೆ. ಪತ್ರ ತಲುಪಿದ ಕೂಡಲೇ ಶಿರೂರಿನಿಂದ ಕ್ಯಾಪ್ಟನ್ ಸ್ಪಂಟನ್ ಹಾಗೂ ಐನೂರು ಜನ ಮಹರ್ ಸೈನಿಕರು ಕ್ರಿ.ಶ 1817 ಡಿಸೆಂಬರ್ 31 ರಂದು ರಾತ್ರಿ 8:30 ಘಂಟೆಗೆ ಕೊರೆಯುವ ಚಳಿಯಲ್ಲಿಯೇ ಕೋರೆಗಾಂವನತ ಹೊರಡುತ್ತಾರೆ.
ಡಿಸೆಂಬರ್ 31ರ ರಾತ್ರಿ ಹೊರಟ ಮಹಾರ್ ಸೈನ್ಯವು ಸತತ 27ಕಿ.ಮೀ.ಗಳು ನಡೆದು ಮಾರನೆಯ ದಿನ ಕ್ರಿ.ಶ 1818 ಜನೆವರಿ 1 ರಂದು ಕೋರೇಗಾಂವಗೆ ಬಂದು ತಲುಪುತ್ತಾರೆ. ಅಲ್ಲಿ ಪೇಶ್ವೆಯ ಮೂವತ್ತು ಸಾವಿರ ಸೈನಿಕರು ಮಹಾರ್ ಸೈನಿಕರಿಗೆ ಎದುರಾಗಿ ಎರಡು ಸೈನ್ಯಗಳ ಮದ್ಯೆ ಯುದ್ಧದ ಕಿಡಿ ಹೊತ್ತುತ್ತದೆ.
ಹೆಜ್ಜೆ ಹೆಜ್ಜೆಗೂ ಅವಮಾನ ಅಪಮಾನಗಳು ಸಹಿಸುತ ಬಂದ ಮಹಾರರಿಗೆ(ಅಸ್ಪೃಶ್ಯರಿಗೆ) ಜಾತಿಬೇಧ ತಿರಸ್ಕಾರಗಳನ್ನು ಸಹಿಸುವ ಸಹನಶೀಲತೆ ಸತ್ತುಹೋಗಿರುತ್ತದೆ. ಜೀವನಪೂರ್ತಿ ನಮ್ಮನ್ನು ಕಷ್ಟದಲ್ಲಿಯೇ ಬದುಕುವಂತೆ ನಿರ್ಬಂಧನೆಗಳು ಹೇರಿದ ಈ ಪೇಶ್ವೆ ಆಡಳಿತವನ್ನು ನಾಶಗೊಳಿಸಲ್ಲೆಬೇಕು. ನಮ್ಮ ಮೇಲೆ ಆದ ಅನ್ಯಾಯದ ಪ್ರತೀಕಾರ ತೀರಿಸಿಕೊಳ್ಳುವ ಕಾಲ ಕೂಡಿ ಬಂದಿದೆ. ಸ್ವಾಭಿಮಾನಕ್ಕಾಗಿ ಈ ಯುದ್ಧ ನಾವು ಗೆಲ್ಲಲೇಬೇಕು. ಎಂದು ವೀರವೇಶದಿಂದ ಬೆಳಗ್ಗೆ 9:00 ಘಂಟೆಯಿಂದ ರಾತ್ರಿ 9:00 ಘಂಟೆಯ ತನಕ ಸತತವಾಗಿ 12:00 ಘಂಟೆಗಳ ಕಾಲ ಯಾವುದೇ ವಿಶ್ರಾಂತಿ-ಆಯಾಸವಿಲ್ಲದೆ, ಆಹಾರ-ನೀರಿನ ಪರಿವೆಯಿಲ್ಲದೆ ಹೋರಾಡಿ, ಪೇಶ್ವೆಯ ಸುಮಾರು ಮೂವತ್ತು ಸಾವಿರ ಸೈನ್ಯವನ್ನು ಕೇವಲ ಐನೂರು ಜನ ಮಹಾರ್ ವೀರ ಸೈನಿಕರು ಹಿಮ್ಮೆಟ್ಟಿಸಿ ಯುದ್ಧದಲ್ಲಿ ಜಯಗಳಿಸುತ್ತಾರೆ.
ಈ ಯುದ್ಧದಲ್ಲಿ ವೀರವೇಶದಿಂದ ಹೋರಾಡಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ನೆನಪಿಗಾಗಿ ಬ್ರಿಟಿಷ ರಾಣಿಯ ಆದೇಶದಂತೆ ಕ್ರಿ.ಶ 1821 ಮಾರ್ಚ್ 26 ರಂದು 75 ಅಡಿ ಎತ್ತರದ ಸುಂದರವಾದ ಕರಿಕಲ್ಲಿನಿಂದ ಮಹಾರ್ ವಿಜಯಸ್ತಂಬ ನಿರ್ಮಿಸಲಾಗಿದೆ. ಇದರ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ 22 ಮಹಾರ್ ಸೈನಿಕರ ಹೆಸರುಗಳು ಕೆತ್ತಿಸಲಾಗಿದೆ. ಇಂದಿಗೂ ಈ ಸ್ಮಾರಕ ಸ್ವಾಭಿಮಾನದ ಸಂಕೇತವಾಗಿ ರಾರಾಜಿಸುತ್ತಿದೆ. ಸತ್ತ ಪ್ರಜೆಗಳಲ್ಲಿನ ಸ್ವಾಭಿಮಾನ ಬಡಿದೆಬ್ಬಿಸುತ್ತಿದೆ.
– ಅಶ್ವಜೀತ ದಂಡಿನ.
ಯುವ ಬರಹಗಾರರು, ಬೀದರ.