ವಿಶ್ವ ಮಾನವನ ದಿವ್ಯ ಸಂದೇಶ
– ಅಶ್ವಜೀತ ದಂಡಿನ ಬೀದರ
ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗೆ ಧರ್ಮದ ಅಫೀಮು ಹೆಚ್ಚಾಗಿದೆ. ಅನ್ಯಮತಿಯ ಕೋಮುಗಳ ಮಧ್ಯೆ ಧಾರ್ಮಿಕ ಕಲಹಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಜಾತೀಯತೆಯು ತನ್ನ ಸ್ವರೂಪವನ್ನು ಬದಲಿಸಿಕೊಂಡು ಮತ್ತಷ್ಟು ತೀವ್ರಗೊಳ್ಳುತ್ತಿರುವುದು ತುಂಬಾ ಆತಂಕದ ವಿಷಯ.! ದೇವಸ್ಥಾನದ ಕೋಲನ್ನುಮುಟ್ಟಿದಕ್ಕಾಗಿ ದಲಿತರಿಗೆ ಬಹಿಷ್ಕಾರ, ಸಾರ್ವಜನಿಕ ನಳಗಳಿಗೆ ನಿರ್ಬಂಧ, ಪಾತ್ರೆ ಮುಟ್ಟಿದಕ್ಕಾಗಿ ತಳಿತ, ಶವ ಸಂಸ್ಕಾರಕ್ಕೆ ಅಡ್ಡಿ, ಒಂದ ಎರಡ ಇಂತಹ ವಿಷಯಗಳು ದಿನನಿತ್ಯ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇವೆ.
ಈ ಭೂಮಂಡಲದ ಮೇಲೆ ಡಾಂಬಿಕತೆ ಮೂಢನಂಬಿಕೆಗಳಂತ ಮೌಡ್ಯದ ಕಂದಾಚಾರಗಳಿಗೆನು ಕಡಿಮೆ ಇಲ್ಲ. ವಿಶೇಷವಾಗಿ ನಮ್ಮ ಭಾರತದಲ್ಲಿ ಕಂಡುಬರುವಷ್ಟು ಮೌಡ್ಯದ ಕಂದಾಚಾರಗಳು ಪ್ರಪಂಚದ ಬೇರೆ ಯಾವ. ದೇಶದಲ್ಲಿಯೂ ಕಂಡು ಬರುವುದಿಲ್ಲ. ದೇವರು-ದೆವ್ವ ಸ್ವರ್ಗ-ನರಕ ಪಾಪ ಪುಣ್ಯಗಳಂತ ಕಾಲ್ಪನಿಕ ಕಥೆಗಳನ್ನು ಕಟ್ಟಿ ಮುಗ್ಧ ಜನರ ತಲೆಯಲ್ಲಿ ಭಯವನ್ನು ಹುಟ್ಟಿಸಿ ಹಣ ಸುಲಿಯುವ ಒಂದು ಪುರೋಹಿತ ವರ್ಗವು ನಮ್ಮ ದೇಶದಲ್ಲಿ ಮನೆ ಮಾಡಿದೆ. ವಿಶೇಷವಾಗಿ ವಿಶ್ವದಲ್ಲಿಯೇ ಎಲ್ಲೂ ಕಾಣದಂತ ಅಸ್ಪೃಶ್ಯತೆಯ ಪೆಂಡಬೋತವೂ ನಮ್ಮ ದೇಶದಲ್ಲಿ ಮನುಷ್ಯ ಮನುಷ್ಯರ ಮಧ್ಯೆ ಬಹುದೊಡ್ಡ ಕಂದಕವನ್ನೇ ಸೃಷ್ಟಿಸಿದೆ.
ಇಲ್ಲಿ ಅಸ್ಪೃಶ್ಯರನ್ನು ಮುಟ್ಟುವುದಿರಲಿ, ಅಸ್ಪೃಶ್ಯರ ನೆರಳು ತಾಕಿದರೆ ಮೈಲಿಗೆಯಾಗುತ್ತದೆ ಎಂಬುವಂತ ಬಲವಾದ ನಂಬಿಕೆ ನಮ್ಮ ದೇಶದ ಉಚ್ಚ ವರ್ಗದ ಸವರ್ಣೀಯ ಸನಾತನವಾದಿಗಳಲ್ಲಿ ಮನೆ ಮಾಡಿದೆ. ಇಂತಹ ಮಾನವ ವಿರೋಧಿ ಸಮಾಜ ವಿರೋಧಿ ಆಚರಣೆಗಳಿಂದಾಗಿ ಇಡೀ ವಿಶ್ವದ ಮುಂದೆ ಭಾರತವು ತಲೆತಗ್ಗಿಸುವಂತೆ ಆಗಿರುವುದು ಸುಳ್ಳಲ್ಲ.!
ಇಂತಹ ಮೌಡ್ಯಗಳ ವಿರೋಧ, ಡಾಂಬಿಕತೆಗಳ ವಿರುದ್ಧ, ಘಟಬದ್ರ ಹಿತಾಸಕ್ತಿಗಳ ವಿರುದ್ಧ, ಪುರೋಹಿತಶಾಹಿಗಳ ವಿರುದ್ಧ ಸಿಡಿದೆದ್ದು ಲೇಖನಿ ಎನ್ನುವ ಖಡ್ಗ ಹಿಡಿದು ಕಾವ್ಯ ಎನ್ನುವ ಸಮರ ಸಾರಿ ತಮ್ಮ ಪ್ರತಿಭಟನೆಯನ್ನು ಹೊರಹಾಕಿದವರಲ್ಲಿ ವಿಶ್ವಮಾನವ ಜಗದ ಕವಿ ಯುಗದ ಕವಿ ಎಂದೇ ಹೆಸರಾದ ರಸ ಋಷಿ ರಾಷ್ಟ್ರಕವಿ ಕುವೆಂಪು ಅವರು ಅಗ್ರಗಣ್ಯರಲ್ಲಿ ಒಬ್ಬರು.
ಈ ದೇಶದ ಇಂದಿನ ಈ ದುಸ್ಥಿತಿಗೆ ಪುರೋಹಿತರು ಸೃಷ್ಟಿಸಿದ ಧರ್ಮಶಾಸ್ತ್ರಗಳು ಧರ್ಮಗ್ರಂಥಗಳೆ ಮೂಲ ಕಾರಣ. ಈ ನೆಲದ ಬಹು ಸಂಖ್ಯಾತರಾದ ಶೂದ್ರ ಅಸ್ಪೃಶ್ಯರಿಗೆ ಸಾವಿರಾರು ನಿರ್ಬಂಧನೆಗಳನ್ನು ಹೇರಿ ವಿದ್ಯೆ, ಆಸ್ತಿ, ಅಧಿಕಾರಗಳನ್ನು ನಿಷೇಧಿಸಿರುವ ಇಂತಹ ಧಾರ್ಮಿಕ ಗ್ರಂಥಗಳಿಂದ ಈ ಸಮಾಜಕ್ಕೆ ಯಾವ ರೀತಿಯಿಂದಲೂ ಉಪಯೋಗವಿಲ್ಲ ಎಂಬುದನ್ನು ಮನಗಂಡ ಮಹಾಕವಿ ಕುವೆಂಪು ಅವರು; “ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನೂ ಮುಂದೆಯಾದರೂ ನೀವು ಆಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ, ಸಮಾಜವಾದವಾಗಲಿ, ಸಮಾನತಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ.” ಎಂದು ಹೇಳುವುದರ ಜೊತೆಗೆ “ಹಳೆಯ ಶಾಸ್ತ್ರ, ಬೂಸಲು ಧರ್ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್ಯ ಇವರನ್ನೆಲ್ಲಾ ಮುಲಾಜಿಲ್ಲದೆ ಧಿಕ್ಕರಿಸುವಂತಾಗಬೇಕು.” ಎಂದು ಕರೆ ನೀಡುತ್ತಾ….
“ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?
ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !”
ಎಂದು ಈ ಸಮಾಜವನ್ನು ಎಚ್ಚರಿಸಿದ್ದಾರೆ.
ಪ್ರಾಚೀನ ಕಾಲದಿಂದಲೂ ಧರ್ಮ ದೇವರನ್ನುವ ಸೋಗಿನಲಿ ರಕ್ತವನ್ನು ಹೀರಿ ಹೊಟ್ಟೆ ತುಂಬಿಸಿಕೊಳ್ಳುತ್ತಾ ‘ಗುಡಿಯಲಿ ಪೂಜಾರಿಯೆ ದಿಟ್ಟ ನಿವಾಸಿ, ದೇವರೆ ಪರದೇಶಿ’ ಎಂಬಂತೆ ಮಾಡಿದ ಸೊಗಲ್ಲಾಡಿಗಳನ್ನು ಕಂಡು ಮಹಾಕವಿ ಕುವೆಂಪು ಅವರು….
“ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು”
ಎಂದು ತಮ್ಮ ಬಂಡಾಯವನ್ನು ಹೊರ ಹಾಕುತ್ತಾ “ಗುಡಿಗಳಿವು ಪಾಪಿಗಳು ಭೋಗಿಗಳ ಗೂಡುಗಳು! ಪೂಜೆಯೆಂಬುದೊ ಧರ್ಮಬುದ್ಧಿಯನು ಜೋಗುಳದಿ ಮಲಗಿಸುವ ಕಾಳಮಂತ್ರವು.” ಎಂದ ಮಹಾಕವಿಗಳು
“ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು”
“ಎಷ್ಟು ದೇವರ ನೀನೆಷ್ಟು ನಂಬಿದರೇನೊಂ
ದಿಷ್ಟು ನೀ ನಂಬದಿರೆ ನಿನ್ನ ನೀನು”
ಎಂದು ವ್ಯಕ್ತಿಯಲ್ಲಿಯ ಆತ್ಮಶಕ್ತಿಯನ್ನು ಬಡಿದೆಬ್ಬಿಸುತ್ತಾ; ಈ ದೇವಾಲಯಗಳೆಲ್ಲ ಬ್ರಾಹ್ಮಣರು ಶೂದ್ರರಿಗೆ ಒಡ್ಡಿದ ಕೂಣಿಗಳು, ಬಲೆಗಳು! ಎಂದು ಸಾರಿ ಹೇಳಿದ್ದರು.
ಹರಕೆಯನ್ನುವ ಹೆಸರಿನಲ್ಲಿ ಮುಗ್ಧ ಪ್ರಾಣಿಗಳ ಬಲಿ ನೀಡುವುದು ಅನಾಗರಿಕತೆಯ ಲಕ್ಷಣವೆಂದ ಮಹಾಕವಿಗಳು “ದೇವರಿಗೆ ಕೋಳಿ ಕುರಿಗಳ ಬಲಿಯೂ ಬೇಡ, ವಜ್ರ ಕಿರೀಟಗಳೂ ಬೇಡವೇ ಬೇಡ.” ಎಂದು ತಿಳಿಸುತ್ತಾ “ಕೊಳಕಾದ ಗುಡಿಯಲ್ಲಿ ಈಶ್ವರನು ಪ್ರಕಾಶವಾಗನು, ದೆವ್ವ ದೇವರುಗಳಿಗೆ ಕಟ್ಟುವ ಕಾಣಿಕೆಯ ಹಣವನ್ನು ಎಣ್ಣೆ, ಸೀಗೆ, ಸಾಬೂನುಗಳಿಗೆ ಉಪಯೋಗಿಸಿದರೆ ಆತನು ನಮ್ಮನ್ನು ಇನ್ನೂ ಹೆಚ್ಚಾಗಿ ಒಲಿಯುತ್ತಾನೆ. ಏಕೆಂದರೆ, ಆತನಿಗೆ ಬೇಕಾದುದು ನಮ್ಮ ಹೃದಯದ ಸರಳ ಭಕ್ತಿ, ನಮ್ಮ ಕಬ್ಬಿಣದ ಪಿಠಾರಿಯ ದುಡ್ಡಲ್ಲ.” ಎಂದು ತಿಳಿಹೇಳಿದರು. ಧರ್ಮ, ದೇವರು ಮತ್ತು ದೆವ್ವದ ಪೂಜೆ ಇವುಗಳ ಹೆಸರಿನಲ್ಲಿ ನಾವು ಅನಾಹುತಗಳನ್ನು ಮಾಡುತ್ತಿದ್ದೇವೆ. ರೋಗ ಬಂದರೆ ಅದನ್ನು ಪರಿಹರಿಸಿಕೊಳ್ಳಲು ಔಷಧಿ ತೆಗೆದುಕೊಳ್ಳುವುದು ವೈಜ್ಞಾನಿಕ ವಿಧಾನ. ಅದನ್ನು ಬಿಟ್ಟು ಭೂತಗಳಿಗೂ ಪಿಶಾಚಿಗಳಿಗೂ ಮೊರೆಯಿಡುವುದು ಮೂರ್ಖತನ.! ಎಂದು ಅತ್ಯಂತ ವೈಜ್ಞಾನಿಕವಾಗಿ ಅರಿವು ಮೂಡಿಸಿದ್ದಾರೆ.
ಈ ನಮ್ಮ ಭಾರತ ದೇಶದಲ್ಲಿ ಸ್ವಾರ್ಥಿಗಳು ಸೃಷ್ಟಿಸಿದ ಲೆಕ್ಕವಿಲ್ಲದಷ್ಟು ಕಾಲ್ಪನಿಕ ದೇವರುಗಳಿವೆ. ಕೆಲವೊಂದಿಷ್ಟು ಐತಿಹಾಸಿಕ ವ್ಯಕ್ತಿಗಳನ್ನು ಕೂಡ ಆಸ್ತಿಕವಾದಿಗಳು ದೇವರ ಸ್ಥಾನಕ್ಕೆ ಏರಿಸಿ ಪೂಜಿಸುತ್ತಿದ್ದಾರೆ. ಪ್ರಪಂಚದ ಬೇರಿಯಲ್ಲಿಯೂ ಇಲ್ಲದಷ್ಟು ದೇವಾನುದೇವತೆಗಳು ನಮ್ಮ ಭಾರತದಲ್ಲಿ ಇವೆ ಎಂದು ಹೇಳುತ್ತಾರೆ.
ಕೋಟ್ಯಾನು ಕೋಟಿ ದೇವರುಗಳಿರುವ ಈ ನಮ್ಮ ದೇಶ ಯಾಕೆ ಇಷ್ಟೊಂದು ಹಿಂದುಳಿದಿದೆ? ನಮ್ಮ ದೇಶದಲ್ಲಿ ದೇವರನ್ನು ಪೂಜಿಸುವ ಮುಗ್ಧ ಜನರು ಯಾಕೆ ಇನ್ನೂ ಬಡವರಾಗಿದ್ದಾರೆ? ಎಂಬ ಪ್ರಶ್ನೆ ವಿಚಾರ ಮಾಡಿದಾಗ ಸಾಮಾನ್ಯವಾಗಿ ಮುಂದೆ ಬಂದು ನಿಲ್ಲುತ್ತದೆ. ಬಡವರ ಬಾಳನ್ನು ಸುಧಾರಿಸದ ಇಂತಹ ನೂರಾರು ದೇವರುಗಳನ್ನು ಧಿಕ್ಕರಿಸಿ ಮಹಾಕವಿ ಕುವೆಂಪು ಅವರು ತಾಯಿ ಭಾರತಿಯನ್ನೇ ಪೂಜಿಸಲು ಕರೆ ನೀಡುತ್ತಾ…
“ದೇವನೆಂಬುವನಾರು?
ಸೃಷ್ಟಿಯೆಂದರೆ ಏನು?
ಯೋಗಿಗಳ ಭ್ರಾಂತಿಯಿದೊ?
ಸತ್ಯದೊಳು ನೆಲಸಿಹುದೊ?
ನಂಬಿಕೆಯ ತತ್ವವಿದು ಮಿಥ್ಯೆಯಾಗಿರಬಾರದೇಕೆ?”
ಎನ್ನುತ್ತಾ ಆ ದೇವರ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಾರೆ.
ಸನಾತನ ಧರ್ಮದ ಕೊಳಕು ನೀತಿಗಳಾದ ವರ್ಣವ್ಯವಸ್ಥೆ, ಜಾತಿ ಪದ್ದತಿ, ಅಸ್ಪೃಶ್ಯತೆಯಂತ ಅನೀತಗಳು ಸಾವಿರಾರು ವರ್ಷಗಳಿಂದ ಈ ಸಮಾಜವನ್ನು ಜಡಗೊಳಿಸಿ ವಿಕರಸ್ಥಿತಿಗೆ ನೂಕಿರುವುದರ ವಿರುದ್ಧ ಮಹಾಕವಿ ಕುವೆಂಪು ಅವರು “ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡದಲ್ಲಿ ಭಸ್ಮೀಕೃತವಾಗಬೇಕು.” ಎಂದು ಕಿಡಿಕಾರಿದ್ದರು.
“ಹಿಂದೂ ಧರ್ಮದಲ್ಲಿ ಬೆಳಕೆಷ್ಟಿದೆಯೋ ಅದಕ್ಕಿಂತ ಇಮ್ಮಡಿಯಾಗಿ ವಿಚಾರದಲ್ಲಿ ಕೊಳಕಾಗಿದೆ.” ಎಂದು ನೇರವಾಗಿ ನುಡಿದ ಮಹಾಕವಿಗಳು “ವರ್ಣ ಜಾತಿ ವರ್ಗಗಳನ್ನು ಆ ದೇವರೇ ಸೃಷ್ಟಿ ಮಾಡಿದ್ದರು ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸ ಮಾಡಿ ಸಮಾಜ ಕ್ಷೇಮವನ್ನು ಸಾಧಿಸಬೇಕು.” ಎಂದು ಹೇಳುವ ಕವಿಗಳ ಮಾತಿನಲ್ಲಿ ಸಮಾಜ ಪರ ಕಾಳಜಿ ಎದ್ದು ಕಾಣಿಸುತ್ತದೆ.
ಮತದ ಅಮಲಿನಲ್ಲಿ ಸಿಲುಕಿ ಮಾನವೀಯತೆಯನ್ನು ಮರೆಯುತ್ತಿರುವ ಮಾನವರನ್ನು ಉದ್ದೇಶಿಸಿ ಮಹಾಕವಿ ಕುವೆಂಪು ಅವರು
“ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ.”
ಸಮ ಸಮಾಜಕ್ಕಾಗಿ ಸರ್ವೋದಯ ವಿಚಾರಗಳನ್ನು ಮಂಡಿಸಿದ್ದಾರೆ.
ಅಂದಶ್ರೆದೆ ಕಂದಾಚಾರಗಳಿಂದ ಹೊರಬರುವಂತೆ ಸಂದೇಶವನ್ನು ನೀಡುತ್ತಾ….
“ಹಳೆಮತದ ಕೊಳೆ ಎಲ್ಲ, ಹೊಸಮತಿಯಹೊಳೆಯಲ್ಲಿ ಕೊಚ್ಚಿ ಹೋಗಲಿ, ಬರಲಿ ವಿಜ್ಞಾನದ ಬುದ್ದಿ”
ಎಂದು ಹೊಸ ಸಮಾಜದ ದೃಷ್ಟಿಗೆ ನಾದಿ ಹಾಡಿದವರು ಮಹಾಕವಿ ಕುವೆಂಪು ಅವರು .
ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗೆ ಧರ್ಮದ ಅಫೀಮು ಹೆಚ್ಚಾಗಿದೆ. ಅನ್ಯಮತಿಯ ಕೋಮುಗಳ ಮಧ್ಯೆ ಧಾರ್ಮಿಕ ಕಲಹಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಜಾತೀಯತೆಯು ತನ್ನ ಸ್ವರೂಪವನ್ನು ಬದಲಿಸಿಕೊಂಡು ಮತ್ತಷ್ಟು ತೀವ್ರಗೊಳ್ಳುತ್ತಿರುವುದು ತುಂಬಾ ಆತಂಕದ ವಿಷಯ.! ದೇವಸ್ಥಾನದ ಕೋಲನ್ನುಮುಟ್ಟಿದಕ್ಕಾಗಿ ದಲಿತರಿಗೆ ಬಹಿಷ್ಕಾರ, ಸಾರ್ವಜನಿಕ ನಳಗಳಿಗೆ ನಿರ್ಬಂಧ, ಪಾತ್ರೆ ಮುಟ್ಟಿದಕ್ಕಾಗಿ ತಳಿತ, ಶವ ಸಂಸ್ಕಾರಕ್ಕೆ ಅಡ್ಡಿ, ಒಂದ ಎರಡ ಇಂತಹ ವಿಷಯಗಳು ದಿನನಿತ್ಯ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇವೆ.
ಇಂತಹ ಧಾರ್ಮಿಕತೆ ಮತ್ತು ಜಾತಿಯತೆಯ ಅಮಲು ಮಾನವ ಜನಾಂಗಕ್ಕೆ ಅತ್ಯಂತ ಅಪಾಯಕಾರಿ ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ವಿನಾಶ ತಪ್ಪಿದಲ್ಲ. ಇದನ್ನು ತಡೆಗಟ್ಟಲು ಮಾನವರೆಲ್ಲ ಮುಂದಾಗಬೇಕು. ಮಹಾಕವಿ ಕುವೆಂಪು ಅವರು ಸಾರಿ ಹೇಳಿದ ವಿಶ್ವ ಮಾನವ ಸಂದೇಶವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ, ನಡೆ-ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು. ಮತ ಧರ್ಮದ ವ್ಯಾಮೋಹ ತೊರೆದು ಪ್ರತಿಯೊಬ್ಬರೂ ಬುದ್ದನಂತೆ ಸ್ವಯಂ ಪ್ರಕಾಶಿತರಾಗಿ ವಿಶ್ವ ಮಾನವರಾಗಬೇಕು. “ಮತ ಮನುಜ ಮತವಾಗಬೇಕು, ಪಥ ವಿಶ್ವ ಪಥವಾಗಬೇಕು” ಮಹಾಕವಿ ಕುವೆಂಪು ಅವರು ತೋರಿದ ಮಾರ್ಗದಲ್ಲಿ ಮುನ್ನಡೆದು ಆರೋಗ್ಯಕರವಾದ ಸಮಾಜವನ್ನು ಸೃಷ್ಟಿ ಮಾಡಿ ನಾವೆಲ್ಲರೂ ಮನುಷ್ಯರಾಗಿ ಬಾಳಬೇಕು. ಪ್ರಬುದ್ಧ ಸಮಾಜಕ್ಕೆ ಮುನ್ನುಡಿ ಬರೆಯುವಂತಾಗಬೇಕು.
– ಅಶ್ವಜೀತ ದಂಡಿನ
ಮಾಳೆಗಾಂವ, ಬೀದರ